ಮುಂಗಾರು ಮಳೆ ಕೊರತೆ, ಭೂಗರ್ಭದ ನೀರಿಗೆ ಭಾರೀ ಹೊಡೆತ: ಜಲಬಿಕ್ಕಟ್ಟಿನ ಮುನ್ಸೂಚನೆ

ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅಂತರ್ಜಲ ಮರುಪೂರಣಗೊಂಡು ನೀರಿನ ಮಟ್ಟ ಏರಿಕೆಯಾಗಬೇಕಾದರೆ, ಈ ಬಾರಿ ಮುಂಗಾರು ಅವಧಿಯಲ್ಲೇ ಅಂತರ್ಜಲ ಮತ್ತಷ್ಟು ಆಳಕ್ಕೆ ಇಳಿದಿರುವುದು ಜಿಲ್ಲೆಗೆ ಎಚ್ಚರಿಕೆಯ ಗಂಟೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ, ಕುಡಿಯುವ ನೀರು, ಪಶುಸಂಗೋಪನೆ ಹಾಗೂ ಕೈಗಾರಿಕಾ ವಲಯಕ್ಕೂ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಕೊಳವೆಬಾವಿಗಳ ನೀರಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ರೈತರು ಬೆಳೆಗಳಿಗೆ ನೀರುಣಿಸಲು ಪರದಾಡುತ್ತಿದ್ದು, ಕೆಲವು ಕಡೆ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳೂ ನೀರಿನ ಕೊರತೆಯಿಂದ ಒಣಗುವ ಹಂತ ತಲುಪಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆಯ ಮೇಲೂ ಇದರ ಪರಿಣಾಮ ಗೋಚರಿಸುತ್ತಿದೆ.

ಕಳೆದ ವರ್ಷಕ್ಕಿಂತ 2.25 ಮೀಟರ್ ಕುಸಿತ

ಜಿಲ್ಲೆಯ ಅಂತರ್ಜಲ ಅಧ್ಯಯನದ ಪ್ರಕಾರ ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಜೂನ್ ವೇಳೆಗೆ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 2.25 ಮೀಟರ್ ಕುಸಿದಿದೆ. 2025ರ ಜೂನ್‌ನಲ್ಲಿ 24.49 ಮೀಟರ್ ಆಳದಲ್ಲಿ ಲಭ್ಯವಿದ್ದ ಅಂತರ್ಜಲ, 2026ರ ಜೂನ್‌ನಲ್ಲಿ 26.74 ಮೀಟರ್ ಆಳಕ್ಕೆ ಇಳಿದಿದೆ. ಅಂದರೆ ನೀರು ಪಡೆಯಲು ಇನ್ನಷ್ಟು ಆಳಕ್ಕೆ ಕೊಳವೆಬಾವಿ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ನೆಲಮಂಗಲ ತಾಲೂಕಿನಲ್ಲಿ ಅತ್ಯಧಿಕ 4.70 ಮೀಟರ್, ಹೊಸಕೋಟೆಯಲ್ಲಿ 2.55 ಮೀಟರ್, ದೇವನಹಳ್ಳಿಯಲ್ಲಿ 1.27 ಮೀಟರ್ ಹಾಗೂ ದೊಡ್ಡಬಳ್ಳಾಪುರದಲ್ಲಿ 0.46 ಮೀಟರ್ ಅಂತರ್ಜಲ ಕುಸಿತ ದಾಖಲಾಗಿದೆ.

ಮೇಗಿಂತ ಜೂನ್‌ನಲ್ಲೇ ಹೆಚ್ಚು ಕುಸಿತ

ಸಾಮಾನ್ಯವಾಗಿ ಮೇ ತಿಂಗಳು ಬೇಸಿಗೆಯ ತೀವ್ರ ಅವಧಿಯಾಗಿದ್ದು, ಜೂನ್ ವೇಳೆಗೆ ಮುಂಗಾರು ಆರಂಭವಾದ ನಂತರ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಾಣಬೇಕಾಗುತ್ತದೆ. ಆದರೆ ಈ ಬಾರಿ ಚಿತ್ರಣ ಸಂಪೂರ್ಣ ವಿಭಿನ್ನವಾಗಿದೆ.

2026ರ ಮೇ ತಿಂಗಳಲ್ಲಿ ದೊಡ್ಡಬಳ್ಳಾಪುರದಲ್ಲಿ 24.78 ಮೀಟರ್ ಇದ್ದ ಅಂತರ್ಜಲ ಜೂನ್‌ನಲ್ಲಿ 24.61 ಮೀಟರ್ ಆಗಿದ್ದು ಅಲ್ಪ ಪ್ರಮಾಣದ ಸುಧಾರಣೆ ಕಂಡಿದೆ. ಆದರೆ ದೇವನಹಳ್ಳಿ 22.82 ಮೀಟರ್‌ನಿಂದ 22.88 ಮೀಟರ್‌ಗೆ, ಹೊಸಕೋಟೆ 18.65 ಮೀಟರ್‌ನಿಂದ 19.29 ಮೀಟರ್‌ಗೆ ಹಾಗೂ ನೆಲಮಂಗಲ 39.31 ಮೀಟರ್‌ನಿಂದ 40.18 ಮೀಟರ್‌ಗೆ ಕುಸಿದಿದೆ. ಜಿಲ್ಲೆಯ ಸರಾಸರಿಯಾಗಿ ಒಂದು ತಿಂಗಳಲ್ಲೇ 0.35 ಮೀಟರ್ ಅಂತರ್ಜಲ ಇಳಿಕೆಯಾಗಿದೆ.

101 ಗ್ರಾಮ ಪಂಚಾಯಿತಿಗಳಲ್ಲಿ ನಿರಂತರ ನಿಗಾ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವನ್ನು ಅಳೆಯಲು ಅಧ್ಯಯನ ಕೊಳವೆಬಾವಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ತಿಂಗಳು ಈ ಕೊಳವೆಬಾವಿಗಳ ಮೂಲಕ ನೀರಿನ ಮಟ್ಟವನ್ನು ಪರಿಶೀಲಿಸಲಾಗುತ್ತಿದೆ.

ಜೂನ್ ತಿಂಗಳ ವೀಕ್ಷಣೆಯಲ್ಲಿ ಶೇ.67ರಷ್ಟು ಅಧ್ಯಯನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತ ದಾಖಲಾಗಿದೆ. ಜುಲೈ ತಿಂಗಳಲ್ಲಿಯೂ ಸಮರ್ಪಕ ಮಳೆಯಾಗದಿದ್ದರೆ ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ಚಿತ್ರಣ

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನೆಲಮಂಗಲದಲ್ಲಿ ಅಂತರ್ಜಲವೇ ಅತ್ಯಂತ ಆಳದಲ್ಲಿದ್ದು, ಸರಾಸರಿ 40.18 ಮೀಟರ್ ಕೆಳಗೆ ನೀರು ಲಭ್ಯವಾಗುತ್ತಿದೆ. ಹೊಸಕೋಟೆಯಲ್ಲಿ 19.29 ಮೀಟರ್ ಆಳದಲ್ಲೇ ನೀರು ದೊರೆಯುತ್ತಿರುವುದರಿಂದ ಜಿಲ್ಲೆಯಲ್ಲಿ ತುಸು ಉತ್ತಮ ಸ್ಥಿತಿಯಲ್ಲಿದೆ.

ಕೆಲವು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಏರಿಕೆಯೂ ದಾಖಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿ 1.64 ಮೀಟರ್ ಏರಿಕೆ ಕಂಡಿದ್ದರೆ, ಹೊಸಕೋಟೆಯ ಒಂದು ಅಧ್ಯಯನ ಕೊಳವೆಬಾವಿಯಲ್ಲಿ 0.07 ಮೀಟರ್ ಏರಿಕೆಯಾಗಿದೆ. ಆದರೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪ್ರದೇಶದಲ್ಲಿ 1.24 ಮೀಟರ್ ಕುಸಿತ ದಾಖಲಾಗಿದ್ದು ಆತಂಕ ಹೆಚ್ಚಿಸಿದೆ.

ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ

ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಈಗಾಗಲೇ ನೀರಾವರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದಾರೆ. ಆದರೆ ಅಂತರ್ಜಲ ಕುಸಿಯುತ್ತಿರುವುದರಿಂದ ಅನೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ತೋಟಗಾರಿಕಾ ಬೆಳೆಗಳು, ತರಕಾರಿ, ಹೂ ಬೆಳೆ ಹಾಗೂ ಮೇವು ಬೆಳೆಗಳಿಗೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

ಕೃಷಿ ಮಾತ್ರವಲ್ಲದೆ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಮೇಲೂ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ.

ಜಲಸಂರಕ್ಷಣೆಗೆ ಈಗಲೇ ಕ್ರಮ ಅಗತ್ಯ

ತಜ್ಞರ ಅಭಿಪ್ರಾಯದಂತೆ ಅಂತರ್ಜಲ ಮಟ್ಟವನ್ನು ಸ್ಥಿರಗೊಳಿಸಲು ಮಳೆ ನೀರನ್ನು ಭೂಮಿಯೊಳಗೆ ಇಳಿಸುವ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆ, ಸರ್ಕಾರಿ ಕಟ್ಟಡ ಹಾಗೂ ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದು, ಕೆರೆ-ಕಟ್ಟೆಗಳ ಪುನಶ್ಚೇತನ, ಕೊಳವೆಬಾವಿಗಳ ರೀಚಾರ್ಜ್, ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಗೆ ಉತ್ತೇಜನ ನೀಡುವುದು ಕಾಲದ ಅಗತ್ಯವಾಗಿದೆ.

ನೀರಿನ ಮಿತ ಬಳಕೆ ಮತ್ತು ಜಲಮೂಲಗಳ ಸಮರ್ಪಕ ನಿರ್ವಹಣೆಯಿಂದ ಮಾತ್ರ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಬಿಕ್ಕಟ್ಟನ್ನು ತಗ್ಗಿಸಲು ಸಾಧ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಸಲಹೆಗಳು

ಮಳೆ ನೀರಿನ ಸಂಗ್ರಹ ಹಾಗೂ ಕೊಯ್ಲು ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಬೇಕು.

ಕೆರೆ, ಕಟ್ಟೆ ಹಾಗೂ ಜಲಮೂಲಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು.

ಕೊಳವೆಬಾವಿಗಳ ರೀಚಾರ್ಜ್ ಕಾಮಗಾರಿಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕು.

ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ವಿಸ್ತರಿಸಬೇಕು.

ನೀರಿನ ಮಿತ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.

ಮುಂಗಾರು ವ್ಯತ್ಯಯದಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಮಳೆ ಕೊರತೆ ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಕೊಳವೆಬಾವಿಗಳ ರೀಚಾರ್ಜ್‌ಗೆ ಆದ್ಯತೆ ನೀಡಿ, ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸಿದರೆ ಮಾತ್ರ ಅಂತರ್ಜಲವನ್ನು ಸಂರಕ್ಷಿಸಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಪಲ್ಲವಿ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಕೆರೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಹೆಜ್ಜಾಜಿ ಕೆರೆಯೂ ಸಂಪೂರ್ಣ ಬತ್ತಿಹೋಗಿದೆ. ಆ ಕೆರೆಯಲ್ಲಿ ನೀರಿದ್ದರೆ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಉತ್ತಮವಾಗಿರುತ್ತಿತ್ತು. ಇದೀಗ ನೀರಿನ ಅಭಾವದಿಂದ ಬಾಳೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಸಂಕಷ್ಟಕ್ಕೀಡಾಗಿವೆ. ಜಾನುವಾರುಗಳಿಗೆ ಮೇವು ಬೆಳೆಸಲು ಹಾಗೂ ಕುಡಿಯಲು ಬೇಕಾದ ನೀರೂ ಸಿಗದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಕೂಡಲೇ ಶಾಶ್ವತ ನೀರಾವರಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಮಧುರನಹೊಸಹಳ್ಳಿ ಯುವ ರೈತ ಮುಕುಂದ ಕೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!