Categories: ಲೇಖನ

ಪರೀಕ್ಷಾ ಅಕ್ರಮಗಳು……

ನೀಟ್ ಪ್ರವೇಶ ಪರೀಕ್ಷೆ….

ಆಡಳಿತಗಾರ ರಾಜಕಾರಣಿಗಳ ಸಂಪೂರ್ಣ ವೈಫಲ್ಯ,
ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ,
ಪೋಷಕರ ಅತಿಯಾದ ದುರಾಸೆ,
ವಿದ್ಯಾರ್ಥಿಗಳ ನಿರ್ಲಜ್ಜತೆ ಮತ್ತು ಸೋಮಾರಿತನ ಹಾಗೂ ಅಡ್ಡದಾರಿ ಹುಡುಕುವ ಮನೋಭಾವ,
ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ದುಷ್ಪರಿಣಾಮ ಒಟ್ಟಾರೆ ವ್ಯವಸ್ಥೆಯ ಬಗ್ಗೆ ಅಸಹ್ಯ ಉಂಟುಮಾಡಿದೆ……

ಪರೀಕ್ಷಾ ಅಕ್ರಮಗಳು……

ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ……

ಶೈಕ್ಷಣಿಕ ವ್ಯವಸ್ಥೆಯ ಆಧಾರ ಸ್ತಂಭವಾದ ಶಿಕ್ಷಕರು ನಾಚಿಕೆ ಪಟ್ಟು ಕೊಳ್ಳಬೇಕಾದ, ಯುಧ್ದೋಪಾದಿಯಲ್ಲಿ, ಮಿಲಿಟರಿ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಪರೀಕ್ಷೆ ನಡೆಸುವ ಅಪನಂಬಿಕೆಯ ದುರಂತ ವ್ಯವಸ್ಥೆಯಲ್ಲಿ ನಾವು ನೀವು…..

ಭಾರತ ಈ ಕ್ಷಣದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ, ವಿಶ್ವಗುರು ಪಟ್ಟಕ್ಕೆ ಮುನ್ನಡೆಯುತ್ತಿದೆ ಎಂದು ಏನೇ ಹೇಳಿದರು ಸಹ ಆಂತರಿಕವಾಗಿ ಶೈಕ್ಷಣಿಕವಾಗಿಯೇ ಆಗಿರಲಿ, ಉದ್ಯೋಗಕ್ಕಾಗಿಯೇ ಆಗಿರಲಿ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಂಪೂರ್ಣ ವಿಫಲವಾಗಿದೆ ಅಥವಾ ನಿರಾಶದಾಯಕವಾಗಿದೆ ಅಥವಾ ಜನರ ನಂಬಿಕೆ ಕಳೆದುಕೊಂಡು ಅನುಮಾನ ಹುಟ್ಟಿಸುತ್ತಿದೆ ಅಥವಾ ಭ್ರಮನಿರಸನವಾಗಿದೆ…….

ಉದ್ಯೋಗಕ್ಕಾಗಿಯೋ, ಕಾಲೇಜು ಪ್ರವೇಶಕ್ಕಾಗಿಯೋ, ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿಯೋ ನಡೆಯುವ ಪ್ರತಿ ಪರೀಕ್ಷೆಯಲ್ಲೂ, ಭಿನ್ನ – ಭಿನ್ನವಾಗಿ, ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ, ಕಲ್ಪಿಸಲು ಅಸಾಧ್ಯವಾದ ರೂಪದಲ್ಲಿ, ದೊಡ್ಡ ಮಟ್ಟದ ಅಧಿಕಾರಿಗಳು, ರಾಜಕಾರಣಿಗಳು, ಅದರ ಫಲಾನುಭವಿಗಳು ಎಲ್ಲರೂ ಸೇರಿ ಬೇರೆ ಬೇರೆ ರೀತಿ ವಂಚಿಸುತ್ತಿದ್ದಾರೆ…….

ಅಧಿಕೃತ ಮಾಹಿತಿಯ ಪ್ರಕಾರ ಕಳೆದು ಹತ್ತು ವರ್ಷಗಳಲ್ಲಿ ಇಡೀ ದೇಶದಲ್ಲಿ 90 ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ ಮತ್ತು ಪುನಃ ಪರೀಕ್ಷೆ ನಡೆಸಲಾಗಿದೆ. ಅಂದರೆ ಬಹಳ ಹಿಂದೆ ಅಪರೂಪವಾಗುತ್ತಿದ್ದ ಪರೀಕ್ಷಾ ಆಕ್ರಮಗಳು ಇದೀಗ ಸಹಜವಾಗುತ್ತಿದೆ. ಇದು ಕೇವಲ ಅಧಿಕೃತ ಅಂಕಿ ಅಂಶಗಳು ಮಾತ್ರ. ನಮ್ಮ ಅನುಭವದ ಪ್ರಕಾರ ಹೇಳುವುದಾದರೆ ಅನಧಿಕೃತವಾಗಿ ಇದಕ್ಕಿಂತ ಹತ್ತುಪಟ್ಟು ಅವ್ಯವಹಾರಗಳು ಕಣ್ಣಿಗೆ ಕಾಣದಂತೆ ವ್ಯಾಪಕವಾಗಿ ನಡೆಯುತ್ತಿದೆ……

ಅಂದರೆ ನಮ್ಮ ವ್ಯವಸ್ಥೆಯ ನಿಜವಾದ ಆಧಾರ ಸ್ಥಂಭಗಳ ಆಯ್ಕೆಯೇ ಈ ರೀತಿ ಮೂಲದಲ್ಲಿಯೇ ಭ್ರಷ್ಟಗೊಂಡಿರುವಾಗ ಇನ್ನು ಆಡಳಿತಾತ್ಮಕ, ರಾಜಕೀಯ ಸುಧಾರಣೆಯ ಮಾತುಗಳಿಗೆ ಯಾವ ಅರ್ಥವಿದೆ. ಶ್ರಮಪಟ್ಟು ಕೆಲಸ ಮಾಡುವ ವ್ಯಕ್ತಿಗಳಿಗೆ ಒಂದು ವ್ಯವಸ್ಥೆಯಲ್ಲಿ ಸರಿಯಾದ ಸ್ಥಾನಮಾನ, ಸಾಮಾಜಿಕ ನ್ಯಾಯ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿದ್ದರೆ ಆ ಇಡೀ ವ್ಯವಸ್ಥೆ ನಿಧಾನವಾಗಿ ಕುಸಿಯ ತೊಡಗುತ್ತದೆ. ಈಗ ಆಗಿರುವುದು ಅದೇ……

ದೊಡ್ಡ ಮಟ್ಟದ ಅಧಿಕಾರಿಗಳೇ ಆಗಿರಲಿ, ಡಾಕ್ಟರ್, ಇಂಜಿನಿಯರ್, ಲೆಕ್ಚರರ್, ವಿಜ್ಞಾನಿಗಳಂತ ದೊಡ್ಡ ವೃತ್ತಿಪರರೇ ಆಗಿರಲಿ ಎಲ್ಲರೂ ಸಹ ಈ ರೀತಿಯ ಭ್ರಷ್ಟ ವ್ಯವಸ್ಥೆಯಲ್ಲಿ ರೂಪಗೊಂಡಿದ್ದೇಯಾದರೆ ಮಕ್ಕಳ ಮುಂದಿನ ಭವಿಷ್ಯವೇನು. ಇದಕ್ಕೆ ಮತ್ತೊಂದು ಕಂಠಕಪ್ರಾಯವಾಗಿ ಸೃಷ್ಟಿಯಾಗಿರುವುದು ಕೋಚಿಂಗ್ ಸೆಂಟರ್ ಗಳೆಂಬ ಕೆಲವು ಧನದಾಹಿ ಅಕಾಡೆಮಿಗಳು. ಇವು ಒಂದು ತರಬೇತಿಯ ಕೇಂದ್ರವಾಗಿ ಮಾತ್ರ ಉಳಿದಿಲ್ಲ. ಮಕ್ಕಳನ್ನು ಅಂಕಗಳಿಗೆ ಸಿದ್ಧತೆಗೊಳಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ……

ರಾಜಸ್ಥಾನ ರಾಜ್ಯದ ಕೋಟಾದ ಈ ರೀತಿಯ ತರಬೇತಿ ಕೇಂದ್ರಗಳಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳು ಇದಕ್ಕೆ ಒಂದು ಜೀವಂತ ನಿದರ್ಶನ. ಏನನ್ನೂ ಸಾಧಿಸದೆ ಎಲ್ಲವನ್ನು ಸಾಧಿಸಿದಂತೆ ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಇಡೀ ದೇಶ ಮೌಲ್ಯಗಳ ಕುರಿತು ಚಿಂತಿಸಬೇಕಾಗುತ್ತದೆ. ಮೌಲ್ಯಗಳನ್ನು ಹೊರತುಪಡಿಸಿದ ಯಾವುದೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಎಷ್ಟೇ ಸಮಿತಿಗಳನ್ನು ರಚಿಸಿ, ಯಾರು ಎಷ್ಟೇ ವರದಿಗಳನ್ನು ಕೊಟ್ಟರು ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳು ಮತ್ತು ಹೆಚ್ಚಾಗುತ್ತಿರುವ ಹಣ, ಅಧಿಕಾರ ಕೇಂದ್ರೀಕೃತ ಮಾನವನ ವಿಕೃತ ಸ್ವಭಾವಗಳು, ಅನಿವಾರ್ಯತೆಗಳು ಅಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುತ್ತಿದೆ…….

ಕಾನೂನುಗಳು ಚಾಪೆಯಂತೆ ಇದ್ದರೆ ಈ ಭ್ರಷ್ಟ ಅಪರಾಧಿಗಳು ಅದನ್ನು ಮೀರಿ ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ದೇಶದಾದ್ಯಂತ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ದೊಡ್ಡಮಟ್ಟದ ಪ್ರತಿಭಟನೆ ನಡೆಸುವಾಗ ನಿಜಕ್ಕೂ ಮನಸ್ಸು ವಿಹ್ಲವಗೊಂಡಿದೆ. ಇನ್ನೂ ಈ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಎಳೆ ವಯಸ್ಸಿನ ವಿದ್ಯಾರ್ಥಿಗಳು, ನ್ಯಾಯಕ್ಕಾಗಿ ಪ್ರತಿಭಟಿಸುವ ದುಸ್ಥಿತಿ ಮತ್ತು ತಾವೇ ಅದರ ಒಂದು ಭಾಗವಾಗುವ ವಿಚಿತ್ರ ಪರಿಸ್ಥಿತಿ ನಮ್ಮಲ್ಲಿದೆ….

ಮೊದಲೇ ಹೇಳಿದಂತೆ ಇದಕ್ಕೆ ದಿಢೀರನೆ ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಮಸ್ಯೆ ಅಷ್ಟು ಸುಲಭವಾಗಿ ಪರಿಹಾರವಾಗುವುದಿಲ್ಲ‌. ಅಕ್ರಮಗಳ ರೂಪ ಬೇರೆಯಾಗಬಹುದು, ಆದರೆ ಬೇರೆ ಒಳದಾರಿಗಳ ಮುಖಾಂತರ ಅವರು ನುಸುಳುತ್ತಲೇ ಇರುತ್ತಾರೆ. ಆದ್ದರಿಂದ ಸಮಾಜದಲ್ಲಿ ನೈತಿಕ ಮೌಲ್ಯಗಳ ಪುನರ್ ಸ್ಥಾಪನೆ ಒಂದೇ ಇದಕ್ಕಿರುವ ಏಕೈಕ ಪರ್ಯಾಯ ಮಾರ್ಗ‌….

ಕೆಟ್ಟ ಹಣ, ಕೆಟ್ಟ ಅಧಿಕಾರ, ಕೆಟ್ಟ ಮಾರ್ಗಗಳನ್ನು ಕನಿಷ್ಠ ಯುವ ಜನತೆಯಾದರೂ ತಿರಸ್ಕರಿಸುವಂತಹ ಮನೋಭಾವವನ್ನು ಸೃಷ್ಠಿಸಬೇಕಿದೆ‌…….

ಇದು ಕಷ್ಟವಾದರೂ ಅಸಾಧ್ಯವಲ್ಲ. ಮಕ್ಕಳು ಬಿಳಿಯ ಹಾಳೆ ಇದ್ದಂತೆ. ಅದರ ಮೇಲೆ ಅತ್ಯುತ್ತಮ ಆದರ್ಶಗಳನ್ನು ಮೂಡಿಸುವ ಕೆಲಸ ಹಿರಿಯರದು. ಆ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ, ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಅಡಿಪಾಯ ಈಗಿನಿಂದಲೇ ಪ್ರಾರಂಭವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್‌. ಕೆ

Ramesh Babu

Journalist

Recent Posts

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

3 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

4 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

5 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

9 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

15 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago