ಬೈಕ್ ಕಳ್ಳತನ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು; ಲಕ್ಷಾಂತರ ಮೌಲ್ಯದ 42 ದ್ವಿಚಕ್ರ ವಾಹನ ವಶ

ವಿಜಯಪುರ (ದೇವನಹಳ್ಳಿ): ಮನೆಗಳ ಮುಂಭಾಗ ಹಾಗೂ ಸಾರ್ವಜನಿಕ ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿ, ಆತನಿಂದ ಸುಮಾರು ₹20 ಲಕ್ಷ ಮೌಲ್ಯದ 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಖಲೀಲ್ ಅಹ್ಮದ್ (46) ವಿಜಯಪುರ ಟೌನ್‌ನ ಮಂಡಿಬಲೆ ರಸ್ತೆಯ ಇಸ್ಲಾಂನಗರ ನಿವಾಸಿಯಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ್ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಕಳವಾಗಿದ್ದ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಲೀಲ್ ಹಿಂದೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದನು. ಜೀವನ ನಿರ್ವಹಣೆಯ ಸಂಕಷ್ಟದಿಂದ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ವಾಹನ ಕಳ್ಳತನದ ದಂಧೆಗೆ ಇಳಿದಿದ್ದ ಎಂದು ಹೇಳಿದರು.

ಒಂದೇ ಮಾದರಿಯ ಬೈಕ್‌ಗಳೇ ಗುರಿ

ಆರೋಪಿ ಸುಮಾರು 20 ರಿಂದ 25 ವಿವಿಧ ಕೀಗಳನ್ನು ಬಳಸಿಕೊಂಡು ಯಾರಿಗೂ ಅನುಮಾನ ಬಾರದಂತೆ ವಾಹನ ಕಳವು ಮಾಡುತ್ತಿದ್ದ. ಹೆಚ್ಚಾಗಿ ಮೈಲೇಜ್ ನೀಡುವ ಹಿರೋ ಸ್ಪ್ಲೆಂಡರ್ ಪ್ರೋ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆತ, ಅವುಗಳನ್ನು ಕೇವಲ ₹2,000 ರಿಂದ ₹2,500ಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕಳವು ಮಾಡಿದ ವಾಹನಗಳನ್ನು ಖರೀದಿಸುತ್ತಿದ್ದ ಕೆಲ ದಲ್ಲಾಳಿಗಳ ಪಾತ್ರವೂ ಬೆಳಕಿಗೆ ಬಂದಿದ್ದು, ಅವರನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ದೂರು ಆಧರಿಸಿ ಕಾರ್ಯಾಚರಣೆ

ಜೂನ್ 16ರಂದು ಪಿ. ಮುನಿಕೃಷ್ಣ ಎಂಬುವರು ವಿಜಯಪುರ ಬಸ್ ನಿಲ್ದಾಣದ ಸಮೀಪ ತಮ್ಮ ಹಿರೋ ಸ್ಪ್ಲೆಂಡರ್ ಪ್ರೋ ಬೈಕ್ ನಿಲ್ಲಿಸಿ ಯಲಹಂಕಕ್ಕೆ ತೆರಳಿದ್ದರು. ಸಂಜೆ ವಾಪಸ್ಸು ಬಂದಾಗ ಬೈಕ್ ಕಳುವಾಗಿರುವುದು ಕಂಡುಬಂದಿದ್ದು, ಜೂನ್ 18ರಂದು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಬೆನ್ನತ್ತಿದ ಪೊಲೀಸರು ವಿಶೇಷ ತಂಡ ರಚಿಸಿ ಜೂನ್ 19ರಂದು ಖಲೀಲ್ ಅಹ್ಮದ್‌ನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿಯೊಂದಿಗೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದರು.

ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕಳವು

ವಿಚಾರಣೆ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ, ಹೊಸಕೋಟೆ, ಸೂಲಿಬೆಲೆ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ, ಶಿಡ್ಲಘಟ್ಟ, ಎಚ್.ಕ್ರಾಸ್ ಹಾಗೂ ಕೋಲಾರ ಜಿಲ್ಲೆಯ ಮಾಸ್ತಿ ಮತ್ತು ಮಾಲೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು 42 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾಲೀಕರಿಗೆ ವಾಹನ ಹಸ್ತಾಂತರ

ನ್ಯಾಯಾಲಯದ ಅನುಮತಿಯಂತೆ ದಾಖಲೆ ಪರಿಶೀಲನೆ ನಡೆಸಿ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ವಿಜಯಪುರ ಠಾಣೆಯ ವೃತ್ತ ನಿರೀಕ್ಷಕ ಲಕ್ಷ್ಮಿನಾರಾಯಣ ನೇತೃತ್ವದ ತಂಡಕ್ಕೆ ಪ್ರಶಂಸನೀಯ ಪತ್ರ ಹಾಗೂ ಬಹುಮಾನ ನೀಡಲಾಗುವುದು ಎಂದು ಎಸ್‌ಪಿ ಚಂದ್ರಕಾಂತ್ ಹೇಳಿದರು.

ವಾಹನ ಸವಾರರಿಗೆ ಎಚ್ಚರಿಕೆ

ವಾಹನ ಸವಾರರು ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲ್ಲಿಸುವಾಗ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಪರಿಚಿತ ಸ್ಥಳಗಳಲ್ಲಿ ವಾಹನದ ಚಕ್ರಕ್ಕೆ ಲಾಕ್ ಹಾಕುವುದು, ಅಗತ್ಯ ದಾಖಲೆಗಳನ್ನು ಹೊಂದಿರುವುದು ಹಾಗೂ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಎಸ್‌ಪಿ ಸಲಹೆ ನೀಡಿದರು.

ವಾಹನ ಮರಳಿ ಸಿಕ್ಕ ಸಂತಸ

ನನ್ನ ದ್ವಿಚಕ್ರ ವಾಹನ ಚಿಂತಾಮಣಿಯಲ್ಲಿ ಕಳುವಾಗಿತ್ತು. ಈಗ ಅದು ಮರಳಿ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಆರೋಪಿಯನ್ನು ಪತ್ತೆಹಚ್ಚಿ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ವಾಹನ ಮಾಲೀಕ ವೆಂಕಟನರಸಿಂಹಪ್ಪ ತಿಳಿಸಿದ್ದಾರೆ.

Ramesh Babu

Journalist

Recent Posts

ರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.…

6 hours ago

ಶಾಲೆ, ಅಂಗನವಾಡಿ ಮುಂಭಾಗವೇ ಕಸದ ರಾಶಿ; ದುರ್ವಾಸನೆಯ ನಡುವೆ ಪಾಠ ಕೇಳುವ ಮಕ್ಕಳು ಪಾಲನಜೋಗಿಹಳ್ಳಿ ಪ್ರವೇಶ ದ್ವಾರದಲ್ಲೇ ತ್ಯಾಜ್ಯ ರಾಶಿ – ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಗ್ರಾಮ ಪ್ರವೇಶ…

8 hours ago

ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ವಾಹನ ಡಿಕ್ಕಿ: ಚಾಲಕ ಸಾವು

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಬೈಪಾಸ್‌ನ ಕೆಂಪೇಗೌಡ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ಸರಕು ಸಾಗಣೆ…

8 hours ago

ಸೆಲೆಬ್ರಿಟಿ…………….

ಸೆಲೆಬ್ರಿಟಿ................ ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,…

21 hours ago

ಎಲ್-ನಿನೋ ಪರಿಣಾಮ, ಮಳೆಯ ಕೊರತೆ, ತಾಪಮಾನದ ಏರಿಕೆ, ಒಣ ಹವಾಮಾನ ಹೆಚ್ಚಳ ಸಾಧ್ಯತೆ: ತೋಟಗಾರಿಕಾ ಬೆಳೆಗಳ ರಕ್ಷಣೆಗೆ ಇರಲಿ ಆದ್ಯತೆ

ಎಲ್-ನಿನೋ ಪರಿಣಾಮದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ, ತಾಪಮಾನದ ಏರಿಕೆ ಹಾಗೂ ಒಣ ಹವಾಮಾನ ಹೆಚ್ಚಾಗುವ ಸಾಧ್ಯತೆ ಇರುವ…

21 hours ago

ರೋಗಿಗಳೊಂದಿಗೆ ದುರ್ವರ್ತನೆ ಆರೋಪ: ಕೊನಘಟ್ಟ ಸರ್ಕಾರಿ ಆಸ್ಪತ್ರೆ ವೈದ್ಯೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಫರ್ಹಾನಾ ಅವರ ವಿರುದ್ಧ ರೋಗಿಗಳೊಂದಿಗೆ ಸೂಕ್ತವಾಗಿ ವರ್ತಿಸುತ್ತಿಲ್ಲ…

1 day ago