ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

 

ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು ಮೃತಪಟ್ಟಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಘಟನೆಯಿಂದ ಕೋಳಿಫಾರ್ಮ್ ಮಾಲೀಕ ಹಾಗೂ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

ಸೋಮಶೆಟ್ಟಿಹಳ್ಳಿ ಗ್ರಾಮದ ಕೆಂಪೇಗೌಡ ಅವರಿಗೆ ಸೇರಿದ ಕೋಳಿಫಾರ್ಮ್‌ನಲ್ಲಿ ಘಟನೆ ನಡೆದಿದೆ. ಕೆಂಪೇಗೌಡ ಅವರು ಸುಮಾರು 10 ಸಾವಿರಕ್ಕೂ ಅಧಿಕ ಕೋಳಿಮರಿಗಳನ್ನು ಸಾಕುತ್ತಿದ್ದು, ಎಂದಿನಂತೆ ಶನಿವಾರ ರಾತ್ರಿ ಕೋಳಿಫಾರ್ಮ್‌ನಲ್ಲಿ ಕೋಳಿಗಳನ್ನು ಇರಿಸಿದ್ದರು.

ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಚಿರತೆ ಕೋಳಿಫಾರ್ಮ್‌ಗೆ ನುಗ್ಗಿ ಕೋಳಿಮರಿಗಳ ಮೇಲೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆ ಕೋಳಿಫಾರ್ಮ್‌ಗೆ ಬಂದ ಮಾಲೀಕರಿಗೆ ನೂರಾರು ಕೋಳಿಮರಿಗಳು ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಒಟ್ಟು 950ಕ್ಕೂ ಅಧಿಕ ಕೋಳಿಮರಿಗಳು ಮೃತಪಟ್ಟಿದ್ದು, ರೈತ ಕೆಂಪೇಗೌಡ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಚಿರತೆ ಹಾಗೂ ಅದರ ಮರಿಗಳು ಸೇರಿ ದಾಳಿ ನಡೆಸಿರುವ ಸಾಧ್ಯತೆಯನ್ನೂ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಸಮೀಪದ ಕೋಳೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಿಂದ ಚಿರತೆಗಳು ಗ್ರಾಮಕ್ಕೆ ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಅರಣ್ಯ ಇಲಾಖೆ ಪರಿಶೀಲನೆ

ಘಟನೆ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟಿರುವ ಕೋಳಿಮರಿಗಳನ್ನು ಹಾಗೂ ಕೋಳಿಫಾರ್ಮ್‌ನ ಪರಿಸ್ಥಿತಿಯನ್ನು ಪರಿಶೀಲಿಸಿ, ಚಿರತೆ ದಾಳಿಯಾಗಿರುವ ಸಾಧ್ಯತೆ ಸೇರಿದಂತೆ ಇತರ ಕಾರಣಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ದಾಳಿ ನಡೆಸಿದ ವನ್ಯಜೀವಿಯ ಚಲನವಲನ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಗ್ರಾಮಸ್ಥರಲ್ಲಿ ಆತಂಕ

ಸೋಮಶೆಟ್ಟಿಹಳ್ಳಿ ಸುತ್ತಮುತ್ತ ಚಿರತೆಗಳ ಓಡಾಟದ ಬಗ್ಗೆ ಈ ಹಿಂದೆಯೂ ಆತಂಕ ವ್ಯಕ್ತವಾಗಿತ್ತು ಎನ್ನಲಾಗಿದ್ದು, ಇದೀಗ ಕೋಳಿಫಾರ್ಮ್‌ಗೆ ದಾಳಿ ನಡೆದಿರುವುದು ಗ್ರಾಮಸ್ಥರ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ರಾತ್ರಿ ವೇಳೆ ಗ್ರಾಮ ಹೊರವಲಯ ಹಾಗೂ ಜಮೀನುಗಳತ್ತ ತೆರಳುವಾಗ ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರು ಪರಸ್ಪರ ಸೂಚನೆ ನೀಡುತ್ತಿದ್ದಾರೆ.

ಚಿರತೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿ, ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೋಳಿಫಾರ್ಮ್ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!