Categories: ಲೇಖನ

ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ

ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ……..

……ಒಂದು ಟ್ವೀಟ್…

ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ  ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ.

ಅಕ್ಷರ ಕಲಿಕೆ ಎಂಬುದು ಅಡುಗೆ ಮಾಡುವ, ಹೊಲಿಗೆ ಮಾಡುವ, ವಾಹನ ಚಾಲನೆ ಮಾಡುವ, ಮನೆ ಕಟ್ಟುವ, ಭೇಟೆಯಾಡುವ ರೀತಿಯ ಒಂದು ಕೌಶಲವೇ ಹೊರತು ಅದು ಎಲ್ಲವನ್ನೂ ಒಳಗೊಂಡ ವಿಶೇಷ ಅತಿಮಾನುಷ ಶಕ್ತಿಯೇನು ಅಲ್ಲ.

ಅಕ್ಷರ ಕಲಿಯದೆಯೂ ವ್ಯಕ್ತಿತ್ವವಿದೆ, ಜ್ಞಾನವಿದೆ, ನಾಗರೀಕತೆಯಿದೆ ಬದುಕಿದೆ, ಹಾಗೆಯೇ ಅಕ್ಷರ ಕಲಿತೂ ಅಜ಼್ಞಾನವಿದೆ, ಮೋಸವಿದೆ, ಅಮಾನವೀಯತೆಯಿದೆ, ಅನಾಗರಿಕತೆ ಇದೆ……

ಅಕ್ಷರಸ್ಥರ ಈಗಿನ ಮೋಸ ವಂಚನೆ ದುಷ್ಟತನ ಭ್ರಷ್ಟಾಚಾರ ಜಾತಿವಾದ ಶೋಷಣೆ ಅಪನಂಬಿಕೆ ಎಲ್ಲವನ್ನೂ ಗಮನಿಸಿದಾಗ ಅನಕ್ಷರಸ್ಥರ ಕೈ ಬಾಯಿ ಮೆದುಳು ಮನಸ್ಸು ಹೃದಯ ನಾಲಿಗೆ ನಂಬಿಕೆ ವ್ಯವಹಾರ ಆ ಮುಗ್ಧತೆ ಮತ್ತು ಆ ಶುದ್ಧತೆಯ ಮಹತ್ವ ನಮಗೆ ಅರಿವಾಗುತ್ತದೆ….

ನ್ಯಾಯಾಂಗ ಕಾರ್ಯಾಂಗ ಶಾಸಕಾಂಗ ಪತ್ರಿಕಾರಂಗ ಧರ್ಮಾಂಗ ಶಿಕ್ಷಕರು ಪೋಲೀಸರು ವಕೀಲರು ಎಲ್ಲವನ್ನೂ ಬಹುತೇಕ ಅಕ್ಷರಸ್ಥರೇ ನಿರ್ವಹಿಸುವಾಗಲೂ ಇಡೀ ವ್ಯವಸ್ಥೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ. ಎಲ್ಲಾ ಸ್ವಾತಂತ್ರ್ಯ ಇರುವಾಗಲು ಮನಸ್ಸುಗಳು ಗುಲಾಮಿತನದತ್ತ ಅಥವಾ ಜೀತ ಪದ್ಧತಿಯತ್ತ ಸಾಗುತ್ತಿವೆ…..

ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು, ಧರ್ಮಾಂಧರು,  ಜಾತಿವಾದಿಗಳು, ವಂಶಾಡಳಿತದ ಒಂದೇ ಕುಟುಂಬದವರು, ಜೈಲಿನ ಕಂಬಿ ಎಣಿಸಿದವರು, ಗಡೀಪಾರಾದವರು ಹೀಗೆ ನೀಚಾತಿನೀಚರನ್ನು ಗುಪ್ತ ಮತದಾನದ ಮೂಲಕ ನಮ್ಮ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡುವವರು ಸಹ ಬಹುತೇಕ ಅಕ್ಷರಸ್ಥರೇ ಎಂಬುದನ್ನು ಹೇಗೆ ಮರೆಯುವುದು.

ಅನಕ್ಷರಸ್ಥರ ಕ್ರೌರ್ಯ ಮತ್ತು ತಪ್ಪುಗಳು ಅವರ ಅಜ್ಞಾನದಿಂದ, ತಪ್ಪು ತಿಳಿವಳಿಕೆಯಿಂದ, ಸಂಪರ್ಕದ ಕೊರತೆಯಿಂದ, ಸಹಜ ಸಂಪ್ರದಾಯಗಳ ಒತ್ತಡದಿಂದ ಘಟಿಸಿದರೆ ಅಕ್ಷರಸ್ಥರ ಕ್ರಿಮಿನಲ್ ಚಟುವಟಿಕೆಗಳು ಉದ್ದೇಶಪೂರ್ವಕವಾಗಿ, ಅತಿ ಸ್ವಾರ್ಥದಿಂದ ಅರಿವಿನ ಅಂಚಿನಲ್ಲಿಯೇ ಸಂಭವಿಸುತ್ತವೆ.

ಪೋಲೀಸ್ ಸ್ಟೇಷನ್ ಅಥವಾ ನ್ಯಾಯಾಲಯದಲ್ಲಿ ದಾಖಲಾಗಿರುವ ಶೇಕಡಾ 90% ರಷ್ಟು ಮೊಕದ್ದಮೆಗಳಲ್ಲಿ ವಾದಿ ಅಥವಾ ಪ್ರತಿವಾದಿಗಳು ಅಕ್ಷರಸ್ಥ ವಂಚಕರೇ ಆಗಿರುತ್ತಾರೆ. ದುರುದ್ದೇಶವೇ ಅದರ ಮೂಲ ಕಾರಣವಾಗಿರುತ್ತದೆ.

ಹೆಬ್ಬೆಟ್ಟು ಅಥವಾ ಅನಕ್ಷರಸ್ಥ ಎಂದು ಮೂದಲಿಸಿದರೆ ಅಕ್ಷರ ಸಂಶೋಧನೆಯ ಹಿಂದಿನ, ಅಕ್ಷರ ಕಲಿಯದ ಇಂದಿನ ಇಡೀ ಜನಾಂಗ ಅಥವಾ ಸಮುದಾಯಗಳನ್ನೇ ಅಗೌರವಿಸಿದಂತೆ ಆಗುತ್ತದೆ.

ಅನಕ್ಷರಸ್ಥರಿಗೆ ಮಾಹಿತಿಯ ಕೊರತೆ ಇರಬಹುದು ಅಥವಾ ತಂತ್ರಜ್ಞಾನದ ಕೊರತೆ ಇರಬಹುದು. ಆದರೆ ಮಾನವೀಯತೆಯ ಕೊರತೆ ಇರುವುದಿಲ್ಲ. ಜ್ಞಾನದ ಕೊರತೆ ಇರುವುದಿಲ್ಲ. ಭತ್ತ ರಾಗಿ ಜೋಳ ಹಣ್ಣು ತರಕಾರಿ ಬೇಳೆಕಾಳುಗಳು ಹೈನುಗಾರಿಕೆ ಕೌಟುಂಬಿಕ ವ್ಯವಸ್ಥೆ ಗೌರವ ಅಭಿಮಾನ ಭಕ್ತಿ ಧೈರ್ಯ ಎಲ್ಲವೂ, ಎಲ್ಲಾ ರೀತಿಯ ಅನುಭಾವಿಕ ವಿಜ್ಞಾನಿಗಳು ರೂಪಗೊಂಡಿದ್ದೇ ಅನಕ್ಷರಸ್ಥರಿಂದ.

ಹಾಗೆಂದು ಅನಕ್ಷರತೆಯನ್ನು ಬೆಂಬಲಿಸುತ್ತಿಲ್ಲ. ಈಗಿನ ಕಾಲಕ್ಕೆ ಎಲ್ಲರೂ ಅಕ್ಷರಸ್ಥರು  ಆಗಲೇ ಬೇಕು. ಅದಕ್ಕೆ ಸಂಪೂರ್ಣ ಬೆಂಬಲವಿದೆ. ಆದರೆ ಅನಕ್ಷರಸ್ಥರು ದಡ್ಡರು – ಮೂರ್ಖರು, ವಿವೇಚನೆ ಇಲ್ಲದವರು ಎಂಬ ಟೀಕೆ ದುರಹಂಕಾರದ ಮಾತಾಗುತ್ತದೆ.

ಪ್ರಕೃತಿಯ ಸಹಜ ಬದುಕು ಅಕ್ಷರಗಳ ಮೇಲೆ ನಿಂತಿಲ್ಲ. ಅದು ಅನಿವಾರ್ಯವೂ ಅಲ್ಲ. ಬದುಕು ನಿಂತಿರುವುದು ಜೀವಪರ ನಿಲುವಿನ ಮೇಲೆ ಮತ್ತು ಮಾನವೀಯ ಧರ್ಮದ ಮೇಲೆ ಮಾತ್ರ.

ಇಂದಿನ ಆಧುನಿಕ ಸಮಾಜಕ್ಕೆ ಅತಿ ಅವಶ್ಯಕವಾಗಿ ಬೇಕಾಗಿರುವುದು ಬುದ್ದಿವಂತರಿಗಿಂತ ಹೆಚ್ಚಾಗಿ ಹೃದಯವಂತರು……..

ಏಕೆಂದರೆ,

” ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ ” ಸ್ವಾಮಿ ವಿವೇಕಾನಂದ…….

 

ಜೊತೆಗೆ ಹೃದಯ ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ…..

ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ ಮಾತು……

ನೀವು ಯಾವುದೇ ಕ್ಷೇತ್ರದಲ್ಲಿರಲಿ, ಎಷ್ಟೇ ಪ್ರತಿಭಾವಂತರಾಗಿರಿ ನಿಮ್ಮ ಹೃದಯ ವಿಶಾಲ ಮತ್ತು ಶುದ್ದವಾಗಿಲ್ಲದಿದ್ದರೆ ನೀವು ಎಷ್ಟೇ ಜನಪ್ರಿಯರಾಗಿರಿ, ಎಷ್ಟೇ ಶ್ರೀಮಂತರಾಗಿರಿ, ಎಷ್ಟೇ ದೊಡ್ಡ ಹುದ್ದೆಯಲ್ಲಿರಿ ನಿಮ್ಮ ಜ್ಞಾನ ಒಂದು ಮಿತಿಗೆ ಒಳಪಟ್ಟಿರುತ್ತದೆ. ಆ ಜ್ಞಾನ ಕೃತಕವಾಗಿರುತ್ತದೆಯೇ ಹೊರತು ಸಹಜವಾಗಿರುವುದಿಲ್ಲ. ಅದನ್ನು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗದೆ ಇರಬಹುದು. ಆದರೆ ನಿಜವಾದ ಪ್ರಜ್ಞಾವಂತ ಖಂಡಿತ ಗ್ರಹಿಸಬಲ್ಲ…..

ಸಾಹಿತ್ಯ ಸಂಗೀತ ನೃತ್ಯ ಕಲೆ ವಿಜ್ಞಾನ ಯಾವುದೇ ಇರಲಿ ಸಂಕುಚಿತ ಮತ್ತು ಅಶುದ್ಧ ಮನೋಭಾವದ ವ್ಯಕ್ತಿಗಳ ಮನಸ್ಸು ಜ್ಞಾನದ ನೆಲೆಯಾಗಲು‌ ಸಾಧ್ಯವಿಲ್ಲ. ಅದು ತೋರಿಕೆಯ ಒಣ ಪ್ರದರ್ಶನ ಮಾತ್ರ.

ಉದಾಹರಣೆಗೆ ಸಾಹಿತ್ಯ ಕ್ಷೇತ್ರದ ಬಗ್ಗೆ ಹೇಳುವುದಾದರೆ,…….

ಸಾಹಿತ್ಯವೆಂಬ ಸಾಗರದಲ್ಲಿ ಈಜಾಡುತ್ತಾ,

ಅಕ್ಷರಗಳನ್ನು – ಭಾವನೆಗಳನ್ನು ಅರಿಯುತ್ತಾ,

ಓದುತ್ತಾ – ಬರೆಯುತ್ತಾ – ಗ್ರಹಿಸುತ್ತಾ,

ಅನುಭವದಲ್ಲಿ ಮೂಡಿದ ಕೆಲವೇ ಹನಿಗಳಂತ ಒಂದು ಅನಿಸಿಕೆ ಯುವ ಸಾಹಿತ್ಯದ ಬರಹಗಾರರಿಗಾಗಿ…….

ವಿದ್ಯೆಗೆ ವಿನಯವೇ ಭೂಷಣ. ಅಕ್ಷರಗಳಲ್ಲ……

ಮನದ ಸಹಜ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಾಗ, ಒಂದಷ್ಟು ಗಟ್ಟಿಯಾದ ಸಾಹಿತ್ಯ ಸೃಷ್ಟಿಯಾಗುತ್ತದೆ. ಅಕ್ಷರಗಳಲ್ಲಿಯೇ ಭಾವನೆಗಳನ್ನು ಕಲ್ಪಿಸಿಕೊಂಡು ಮೂಡಿಸಿದಾಗ, ಕೃತಕವಾದ ಬಾಲಿಶ ಸಾಹಿತ್ಯ ರಚನೆಯಾಗುವ ಸಾಧ್ಯತೆಯಿದೆ.

ಇವುಗಳ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇದು ಗೋಚರಿಸುತ್ತದೆ. ಬರಹಗಾರರು ಅರಿಯಬೇಕಾದ ಬಹುಮುಖ್ಯ ಅಂಶವಿದು.

ಸಾಹಿತ್ಯದ ಬಗ್ಗೆ ಮಾತನಾಡುವಾಗ ಗಟ್ಟಿ ಸಾಹಿತ್ಯ – ಜನಪ್ರಿಯ ಸಾಹಿತ್ಯ – ಜೊಳ್ಳು ಸಾಹಿತ್ಯ ಎಂದು ಗುರುತಿಸುವುದು ಇದೇ ದೃಷ್ಟಿಕೋನದಲ್ಲಿ.

ಸಿನಿಮಾಗಳಲ್ಲಿ ಬಳಸಲ್ಪಡುವ ಬಹುತೇಕ ಸಾಹಿತ್ಯ ( ಕೆಲವೊಂದು ಹೊರತು ಪಡಿಸಿ), ಸಂಗೀತ ಸಂಯೋಜನೆಯ ನಂತರ ಅದರ ಭಾವನೆಗಳಿಗೆ ತಕ್ಕಂತೆ ಅಕ್ಷರ ಜೋಡಿಸುವುದು, ಕೆಲವು ಭಾವಗೀತೆಗಳು, ಒಂದಷ್ಟು ಜನ ಕ್ರೇಜಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು, ಯಾರೋ ಎಲ್ಲೋ ಬರೆದ ಅಥವಾ ಎಂದೋ ಓದಿದ ಸಾಹಿತ್ಯವನ್ನು ಬರೆಯುವ ಕಲಿಯುವ ಆಸೆಯಿಂದ ವಾಕ್ಯ ರಚಿಸುವುದು. ಬರೆಯುವಾಗಲೇ ಮಹತ್ವಾಕಾಂಕ್ಷೆಯ ಮತ್ತು ಪ್ರಶಸ್ತಿ ಸನ್ಮಾನಗಳ ಗುಂಗಿನಲ್ಲಿ ಬರೆಯುವುದು, ಇತರರ ಮೆಚ್ಚುಗೆಗಾಗಿ ಅಕ್ಷರಗಳನ್ನು ಮೂಡಿಸುವುದು  ಮುಂತಾದವು ಅಕ್ಷರದಿಂದ ಭಾವನೆಗಳನ್ನು ಮೂಡಿಸುವ ಸಾಹಿತ್ಯಕ್ಕೆ ಉದಾಹರಣೆಗಳು.

ಅದೇ ರೀತಿ ಕೆಲವರ ಸಾಹಿತ್ಯ, ಭಾವನೆಗಳಿಗೆ ಅಕ್ಷರ ರೂಪ ಕೊಡುವುದಕ್ಕೆ ಉದಾಹರಣೆಗಳು. ಅವರುಗಳು ತಮ್ಮ ಬದುಕಿನ ಅನುಭವದ – ಅರಿವಿನ – ಗ್ರಹಿಕೆಯ ವಿಷಯಗಳನ್ನು ಅಂತರಾಳದ ಭಾವನೆಗಳಿಗೆ ಅಕ್ಷರದ ರೂಪ ನೀಡುತ್ತಾರೆ.

ಅದು ನಿಜವಾದ ಸಾಹಿತ್ಯಾಸಕ್ತರಿಗೆ ಗಾಢವಾದ ಅನುಭವ ನೀಡುತ್ತದೆ. ಅವರ ಚಿಂತನೆಗಳಲ್ಲಿ, ನಿರೂಪಣೆಯಲ್ಲಿ, ವಿಷಯಗಳಲ್ಲಿ, ಸಾಹಿತ್ಯದ ಪ್ರಕಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ಅನುಭವ ಸಾಹಿತ್ಯ ಅದಾಗಿರುತ್ತದೆ.

ಕೆಲಮೊಮ್ಮೆ ಅಪರೂಪಕ್ಕೆ ಇದಕ್ಕೆ ವಿರುಧ್ಧವಾದ ರೀತಿಯ ರಚನೆಗಳೂ ಸೃಷ್ಟಿಯಾಗಬಹುದು. ಅಂದರೆ ಭಾವನೆಗಳಲ್ಲಿ ಅತ್ಯುತ್ತಮ ಗಾಢತೆ ಇದ್ದರೂ ಅಕ್ಷರಗಳಲ್ಲಿ ಅವು ಪೇಲವವಾಗಿ ಮೂಡಬಹುದು ಹಾಗೆಯೇ ಅಕ್ಷರಗಳಿಂದಲೇ ಅತ್ಯುತ್ತಮ ಎನ್ನುವ ಭಾವನೆಗಳ ಸಾಹಿತ್ಯವೂ ರಚನೆಯಾಗಬಹುದು. ಕೆಲವು ಸಿನಿಮಾ ಹಾಡುಗಳಲ್ಲಿ ಇದು ಕಂಡುಬರುತ್ತದೆ.

ಆದರೆ ಇದು ಅತಿ ವಿರಳ. ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ.

ಇದೊಂದು ಸಣ್ಣ ಮತ್ತು ಸರಳ ಅನಿಸಿಕೆ ಅಷ್ಟೆ. ಸಾಹಿತ್ಯದ ಆಳದಲ್ಲಿ ಅಗಾಧ ನಿಗೂಡತೆ ಮತ್ತು ಕ್ರಿಯಾತ್ಮಕತೆ ಅಡಗಿದೆ. ಅದನ್ನು ಇಷ್ಟೇ ಎಂದು ಭಾವನೆಗಳಲ್ಲಿ – ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯ.

” ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆ.( ಮಾತನಾಡುವವರಿಗೆ) ಆ ಭಾಷೆಯಲ್ಲಿಯೇ ಮತ್ತೊಬ್ಬರ ಆತ್ಮವನ್ನೂ ಪ್ರವೇಶಿಸಬಹುದು. ಆ ಆತ್ಮದೊಂದಿಗೆ ಬೆರೆತು ಸಂವಾದವನ್ನೂ ನಡೆಸಬಹುದು. ಆ ಸಂವಾದದಲ್ಲಿ ಆತ್ಮದ ಐಕ್ಯವಾಗಬಹುದು. ಹಾಗೇ ಆತ್ಮಮಿಲನವಾದ ಸಂಬಂಧಗಳನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ.

ಇದು ಅಕ್ಷರಗಳಲ್ಲಿ ಮೂಡಿದ ಭಾವನೆಯಲ್ಲ, ಒಡಲಾಳದ ಭಾವನೆಗಳಿಗೆ ನೀಡಿದ ಅಕ್ಷರ ರೂಪ.

ಸಂಕುಚಿತ ಮನೋಭಾವದ ಅಸಭ್ಯತೆ, ಕುಹುಕ, ವ್ಯಂಗ್ಯ ಎಲ್ಲವೂ ಹೇಳುವವನ ಯೋಗ್ಯತೆಯನ್ನು ತೋರಿಸುತ್ತದೆಯೇ ಹೊರತು ಕೇಳಿಸಿಕೊಂಡವನ ಯೋಗ್ಯತೆಯನ್ನಲ್ಲ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ……

ಒಟ್ಟಿನಲ್ಲಿ ಯಾವುದೇ ಕ್ಷೇತ್ರದ ಜ್ಞಾನದ ಮೂಲ ಹೃದಯ ವೈಶಾಲ್ಯತೆ ಮತ್ತು ಶುದ್ಧತೆ ಎಂಬುದು ವಾಸ್ತವ ಸತ್ಯ. ಇದು ಎಲ್ಲರ ಮನದ ಮೂಲೆಯಲ್ಲಿ ಸದಾ ನೆನಪಾಗಿರಲಿ ಎಂದು ಆಶಿಸುತ್ತಾ…….

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ.

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ: ಬೈಕ್ ಸವಾರ ದುರ್ಮರಣ

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಮೇ.12ರ ರಾತ್ರಿ…

1 hour ago

‘ಪಬ್ಲಿಕ್ ಮಿರ್ಚಿ’ ವರದಿ ಫಲಶೃತಿ: ಕೊನೆಗೂ ಹೊಸಹಳ್ಳಿ ರಸ್ತೆಗೆ ಡಾಂಬರ್ ಭಾಗ್ಯ – ಜನರಲ್ಲಿ ಸಂತಸ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು–ಆರೂಢಿ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುಂಡಮಗೆರೆ–ಹೊಸಹಳ್ಳಿ ರಸ್ತೆಗೆ ಕೊನೆಗೂ ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ…

2 hours ago

ಐದು ದಶಕಗಳಿಂದ ಗುಡಿಸಲಲ್ಲೇ ಬದುಕು: ಮೂಲಭೂತ ಸೌಲಭ್ಯಕ್ಕಾಗಿ ಹಕ್ಕಿಪಿಕ್ಕಿ ಕುಟುಂಬಗಳ ನರಳಾಟ

ದೊಡ್ಡಬಳ್ಳಾಪುರ: ಸರ್ಕಾರ ಆಶ್ರಯ ಯೋಜನೆ ಮೂಲಕ ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಘೋಷಣೆ ಮಾಡುತ್ತಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ…

8 hours ago

ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆಗೆ ಅನುಮೋದನೆ

ರಾಜ್ಯ ಸರ್ಕಾರವು ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ…

22 hours ago

ದಾದಿಯರು ರೋಗಿಗಳ ಪಾಲಿನ ಆಶಾ ಕಿರಣ- ಸಿಎಂಒ ಡಾ.ರಮೇಶ್

ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವು…

1 day ago

ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಹಾಗೂ ಚಿಕ್ಕಬಾಣಾವರ ಪೊಲೀಸರು ಜಂಟಿ ಕಾರ್ಯಾಚರಣೆ…

1 day ago