ಐದು ದಶಕಗಳಿಂದ ಗುಡಿಸಲಲ್ಲೇ ಬದುಕು: ಮೂಲಭೂತ ಸೌಲಭ್ಯಕ್ಕಾಗಿ ಹಕ್ಕಿಪಿಕ್ಕಿ ಕುಟುಂಬಗಳ ನರಳಾಟ

ದೊಡ್ಡಬಳ್ಳಾಪುರ: ಸರ್ಕಾರ ಆಶ್ರಯ ಯೋಜನೆ ಮೂಲಕ ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಘೋಷಣೆ ಮಾಡುತ್ತಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಪಾಳ್ಯ ಗ್ರಾಮದಲ್ಲಿ ಇಂದಿಗೂ ನಲವತ್ತಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಿನಲ್ಲೇ ಜೀವನ ಸಾಗಿಸುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಚನ್ನದೇವಿ ಅಗ್ರಹಾರ ಗ್ರಾಮ ಪಂಚಾಯಿತಿಯಿಂದ ಕೇವಲ ನೂರು ಮೀಟರ್ ದೂರದಲ್ಲೇ ಸುಮಾರು 40ಕ್ಕೂ ಹೆಚ್ಚು ಗುಡಿಸಲುಗಳು ನಿರ್ಮಾಣವಾಗಿದ್ದು, ಇಲ್ಲಿ ನೂರಕ್ಕೂ ಹೆಚ್ಚು ಮಂದಿ ವಾಸವಿದ್ದೇವೆ. ಬಹುತೇಕ ಹಕ್ಕಿಪಿಕ್ಕಿ ಜನಾಂಗದ ಕುಟುಂಬಗಳು ಕಳೆದ ಐದು ದಶಕಗಳಿಂದ ಸರ್ಕಾರಿ ಗುಂಡುತೋಪು ಪ್ರದೇಶದಲ್ಲಿ ನೆಲೆಸಿದ್ದರೂ, ನಮಗೆ ಇದುವರೆಗೆ ಸಮರ್ಪಕ ಸರ್ಕಾರಿ ಸೌಲಭ್ಯಗಳು ದೊರೆತಿಲ್ಲ ಎಂದು ಗುಡಿಸಲು ನಿವಾಸಿ ನಾಗಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಡಿಸಲಿನಲ್ಲಿ ವಾಸಿಸುವ ಹಲವರಿಗೆ ಇನ್ನೂ ಪಿಂಚಣಿ ಸೌಲಭ್ಯ ಸಿಕ್ಕಿಲ್ಲ. ಕೆಲವರಿಗೆ ಆಧಾರ್ ಕಾರ್ಡ್ ಇಲ್ಲದ ಪರಿಸ್ಥಿತಿಯಿದ್ದು, ಇಲ್ಲಿ ಜನಿಸಿದ ಅನೇಕ ಮಕ್ಕಳಿಗೆ ಜನನ ಪ್ರಮಾಣ ಪತ್ರವೇ ಇಲ್ಲ. ಮತದಾನದ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಬಂದು ಮತದಾರರ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಾರೆ ಹೊರತು ಬೇರೆ ಯಾವುದೇ ದಾಖಲೆ ಅಥವಾ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಕಾಂತಲಕ್ಷ್ಮೀ ಮಾತನಾಡಿ, ಮದುರೆ ಕೆರೆಯ ಅಂಚಿನಲ್ಲಿ ಈ ಗುಡಿಸಲುಗಳು ನಿರ್ಮಾಣವಾಗಿರುವುದರಿಂದ ಮಳೆಗಾಲದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುವ ಭೀತಿ ಇದ್ದು, ಕೆರೆ ಕೋಡಿ ಹೊಡೆದರೆ ಸಂಪೂರ್ಣ ಗುಡಿಸಲುಗಳು ನೀರಿನಲ್ಲಿ ಕೊಚ್ಚಿ ಹೋಗುವ ಆತಂಕದಲ್ಲಿ ಜನ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾತ್ರಿ ವೇಳೆಯಲ್ಲಿ ಮಕ್ಕಳಿಗೆ ಓದಲು ಸಮರ್ಪಕ ವಿದ್ಯುತ್ ವ್ಯವಸ್ಥೆಯಿಲ್ಲದ ಕಾರಣ ಬೀದಿ ದೀಪದ ಕೆಳಗೆ ಕುಳಿತು ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ, ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಜಾಗವಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

“ನಾವು ಸಾಯೋದರ ಒಳಗೆ ಒಂದು ಮನೆ ಕಟ್ಟಿಕೊಡಿ” ಎಂದು ವಯೋವೃದ್ಧರು ಸರ್ಕಾರದ ಮುಂದೆ ಮನವಿ ಮಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಹಕ್ಕಿಪಿಕ್ಕಿ ಸಮುದಾಯಕ್ಕೆ ಜಾಗ ನೀಡುವ ವಿಚಾರದಲ್ಲಿ ಪಂಚಾಯಿತಿಯ ಕೆಲ ಸದಸ್ಯರು ನಿರಾಸಕ್ತಿ ತೋರುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

ಈ ಸ್ಥಳಕ್ಕೆ ಕಳೆದ ವರ್ಷ ಮಕ್ಕಳ ಆಯೋಗದ ಅಧ್ಯಕ್ಷರು ಸಹ ಭೇಟಿ ನೀಡಿದ್ದರು. ನಂತರ 2026ರ ಜನವರಿ 2ರಂದು ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದರು. ಇಲ್ಲಿನ ನಿವಾಸಿಗಳಿಗೆ ಸಲ್ಲಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ, ಅಧಿಕಾರಿಗಳು ಇದೂವರೆಗೆ ಯಾವುದೇ ಸೌಕರ್ಯಗಳನ್ನು ಒದಗಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ದಾಖಲೆಗಳಿದ್ದರೆ ಆಯೋಶ್ರಯ ಯೋಜನೆಗೆ ಅನುಕೂಲವಾಗುತ್ತವೆ. ಆದರೆ, ಆ ದಾಖಲೆಗಳನ್ನು ಮಾಡಿಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಅಸ್ಪೃಶ್ಯತೆಯನ್ನು ಜೀವಂತವಾಗಿ ಇಡಲು ಯತ್ನ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಚಿದಾನಂದ ಆರೋಪಿಸಿದರು..

ಬೆಂಗಳೂರು ನಗರದ ಕೂಗಳತೆ ದೂರದಲ್ಲೇ ಇಂತಹ ದುಸ್ಥಿತಿ ಮುಂದುವರಿದಿರುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಕಪ್ಪು ಚುಕ್ಕಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಈ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Ramesh Babu

Journalist

Recent Posts

‘ಫೊರೆನ್ಸಿಕ್ ತನಿಖೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ಮುಂಚೂಣಿ ಸ್ಥಾನ’-ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಇಂದು ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್ ಕಚೇರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು. ಈ…

11 hours ago

ಜೂ. 28 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವು ಜೂನ್ 28 ರಿಂದ ಜುಲೈ 01 ರವರೆಗೆ ನಡೆಯಲಿದ್ದು, ಈ…

15 hours ago

24 ಗಂಟೆಯೊಳಗೆ ಸರಗಳ್ಳರ ಬಂಧನ: ₹2.96 ಲಕ್ಷ ಮೌಲ್ಯದ ಮಾಲು ವಶ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಇಬ್ಬರು…

16 hours ago

ದೊಡ್ಡಬೆಲವಂಗಲ ಠಾಣೆ ಇನ್ಸ್‌ಪೆಕ್ಟರ್ ಕಲ್ಲಪ್ಪ ಎಸ್. ಖರತ್‌ಗೆ ಡಿಜಿ-ಐಜಿಪಿ ಪ್ರಶಂಸನಾ ಪದಕ

ದೊಡ್ಡಬಳ್ಳಾಪುರ: ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ 2025-26ನೇ ಸಾಲಿನ ಡಿಜಿ-ಐಜಿಪಿ ಪ್ರಶಂಸನಾ…

18 hours ago

ಕೆಐಎಎಲ್ ನಲ್ಲಿ ಸರಣಿ ಕಳ್ಳಸಾಗಣೆ ಪ್ರಕರಣಗಳು ಪತ್ತೆ: ₹4.33 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು, ಚಿನ್ನ ವಶ

ದೇವನಹಳ್ಳಿ: ಕೆಂಪೇಗೌಡರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಕೆಲ ದಿನಗಳಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಮಾದಕ ವಸ್ತುಗಳು…

18 hours ago

ಯುವತಿಯ ಕುರಿತು ಅಪಪ್ರಚಾರದ ದ್ವೇಷ: ರೌಡಿ ಶೀಟರ್ ಖಲೀಮ್‌ನ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಕುಟುಂಬದ ಬಗ್ಗೆ ಅವಹೇಳನ ಆರೋಪ: 7 ಮಂದಿಯ ತಂಡದ ಸಂಚು, 5 ಆರೋಪಿಗಳ ಬಂಧನ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೌಡಿ ಶೀಟರ್ ಖಲೀಮ್ (35)…

22 hours ago