ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷರಾಗಿ ಜಿ.ಲಕ್ಷ್ಮಿಪತಿ ಆಯ್ಕೆ

ದೊಡ್ಡಬಳ್ಳಾಪುರ: ಸಮಾಜ ಸೇವೆಯೇ ಲಯನ್ಸ್ ಕ್ಲಬ್‌ನ ಮೂಲ ಧ್ಯೇಯವಾಗಿದ್ದು, ನಿರಂತರವಾಗಿ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು. ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಪಿಎಂಸಿಸಿ ಬಿ.ಎಸ್. ರಾಜಶೇಖರಯ್ಯ ಹೇಳಿದರು.

ತಾಲೂಕಿನ ಕೊನಘಟ್ಟ ಗ್ರಾಮದ ಮಹಾಲಕ್ಷ್ಮಿ ಫ್ಯೂಯೆಲ್ ಸ್ಟೇಷನ್ ಸಮೀಪ ನಡೆದ ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ ಸಮಾರಂಭದಲ್ಲಿ ಅವರು ಮಾತನಾಡಿ, ಜನರ ಸೇವೆಗೆ ಸದಾ ಸನ್ನದ್ಧರಾಗಿರಬೇಕು. ಲಯನ್ಸ್ ಕ್ಲಬ್‌ನಂತಹ ಸಂಘಟನೆಗಳ ಮೂಲಕ ಸೇವೆ ಸಲ್ಲಿಸುವುದು ಸಮಾಜಕ್ಕೆ ಮಾದರಿಯಾಗಲಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷ ಜಿ. ಲಕ್ಷ್ಮಿಪತಿ ಮಾತನಾಡಿ, ಕ್ಲಬ್ ವತಿಯಿಂದ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.

ಕೊನಘಟ್ಟ ಲಯನ್ಸ್ ಕ್ಲಬ್ ಸ್ಥಾಪನೆಯಾಗಿ ಒಂದು ವರ್ಷ ಪೂರ್ಣಗೊಂಡು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನೇ ಮರುನೇಮಕ ಮಾಡಲಾಗಿದೆ. ಕ್ಲಬ್‌ನಲ್ಲಿ ಉತ್ತಮ ತಂಡವಿದ್ದು, ಲಯನ್ಸ್ ಕ್ಲಬ್‌ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ 2,000 ಮಕ್ಕಳಿಗೆ ಭಾರತ ಸೇವಾದಳದ ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸುವ ಯೋಜನೆ ರೂಪಿಸಲಾಗಿದ್ದು, ಅದರ ಅಂಗವಾಗಿ ಬಡ ಕುಟುಂಬಗಳಿಗೆ ಸಾಂಕೇತಿಕವಾಗಿ ಹೊದಿಕೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಬ್‌ನ ಜಿಲ್ಲಾ ಆಡಳಿತಗಾರ ಎಂ.ಆರ್. ಶ್ರೀನಿವಾಸ್, ಆರ್. ರವಿಚಂದ್ರನ್, ಜೆ.ಆರ್. ರಾಕೇಶ್, ಡಾ. ಎಂ. ಶ್ರೀನಿವಾಸ್ ರೆಡ್ಡಿ, ಕೆ.ಆರ್. ರವಿಕಿರಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ಹೂಗುಚ್ಛ ನೀಡಿ ಅಭಿನಂದಿಸಿ ಶುಭ ಹಾರೈಸಲಾಯಿತು.

Leave a Reply

Your email address will not be published. Required fields are marked *

error: Content is protected !!