
ಆಹಾರ ಸಚಿವ ಹಾಗೂ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪನವರ ಜಿಲ್ಲೆಯಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಅಕ್ಕಿ, ರಾಗಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ 208 ಕ್ವಿಂಟಾಲ್ ಅಕ್ಕಿ, 8 ಕ್ವಿಂಟಾಲ್ ರಾಗಿಯನ್ನು ಆಹಾರ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಪ್ರಿಯದರ್ಶಿನಿ ಬಡಾವಣೆಯ ಗೋಡೌನ್ ನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 208 ಕ್ವಿಂಟಾಲ್ ಪಡಿತರ ಅಕ್ಕಿ, ರಾಗಿಯನ್ನು ವಶಪಡಸಿಕೊಳ್ಳಾಲಾಗಿದೆ.

ಎಪಿಎಂಸಿ ಎದುರಿನ ಪಾಲನಜೋಗಿಹಳ್ಳಿ ಗ್ರಾಮದ 1ನೇ ಕ್ರಾಸ್ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಗೋಡೌನ್ ನಲ್ಲಿ ಕಾನೂನು ಬಾಹಿರವಾಗಿ ರಾಗಿ ಮತ್ತು ಅಕ್ಕಿಯನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು.
ಅಂಗಡಿ ಮಾಲೀಕ ಹರೀಶ್ ಎಂಬುವವರು ಬಡವರಿಗೆ ನೀಡಬೇಕಾಗದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಲಾಭಮಾಡಿಕೊಳ್ಳುವ ಉದ್ದೇಶದಿಂದ ಸರ್ಕಾರಕ್ಕೆ ದೋಖಾ ಮಾಡಲಾಗಿರುತ್ತದೆ ಎಂದು ಆಹಾರ ಇಲಾಖೆಯವರು ದೂರು ನೀಡಿದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಅಕ್ಕಿ ಮತ್ತು ರಾಗಿಯ ಅಕ್ರಮ ಸಂಗ್ರಹದ ಕುರಿತು ಆಹಾರ ಇಲಾಖೆಯ ಶಿರಸ್ತೆದಾರ್ ವರದಿ ನೀಡಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದು ಪೊಲೀಸರು ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಇಂತಹ ಸೋರಿಕೆಗೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕಲಾಗುವುದು ಎಂದು ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ ತಿಳಿಸಿದ್ದಾರೆ..