ಖಾಸಗಿ ಟೆಂಡರ್ ದಾರರ ಬೇಜವಾಬ್ದಾರಿ: ಕುಡಿಯಲು ನೀರಿಲ್ಲದೇ ಜನ ಪರದಾಟ

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿ ಬಿಸವನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಂಚಾಯಿತಿಯಿಂದ ನಿರ್ವಹಣೆ ಮಾಡದೇ ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ನೀಡಿರುತ್ತಾರೆ. ಇದರ ಪರಿಣಾಮ ಖಾಸಗಿ ಟೆಂಡರ್ ದಾರರು ನೀಡಿರುವ ಕಾರ್ಡುಗಳನ್ನು ಒಂದು ತಿಂಗಳಿಂದ  ರೀಚಾಜ್೯ ಮಾಡದೇ ಇರುವ ಪರಿಣಾಮ ಬಿಸವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಖಾಸಗಿಯವರು ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುತ್ತಿದ್ದಾರೆ. ಖಾಸಗಿ ಟೆಂಡರ್ ದಾರರು ನೀಡಿರುವ ಕಾರ್ಡುಗಳನ್ನು ಒಂದು ತಿಂಗಳಿಂದ ರೀಚಾಜ್೯ ಮಾಡದೇ ಇರುವ ಪರಿಣಾಮ ಕಳೆದ ಒಂದು ತಿಂಗಳಿಂದ ಕುಡಿಯಲು ನೀರಿಲ್ಲದೇ ಜನ ಪರಿತಪಿಸುತ್ತಿದ್ದಾರೆ. ವಾರಕ್ಕೊಮ್ಮೆ ರೀಚಾರ್ಜ್ ಮಾಡಬೇಕು, ಆದರೆ ತಿಂಗಳಾದರೂ ರೀಚಾರ್ಜ್ ಮಾಡುತ್ತಿಲ್ಲ. ಕಾಯಿನ್ ಹಾಕಿ ನೀರು ಪಡೆಯಲು ಆಗುತ್ತಿಲ್ಲ. ಈ ಕುರಿತು ಪ.ಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ಆಡಳಿತಾಧಿಕಾರಿಗಳ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಂಡಿಲ್ಲ. ಚುನಾವಣೆ ಪೂರ್ವದಲ್ಲಿ ನೀರಿನ ಘಟಕದಲ್ಲಿ ಏನೂ ಸಮಸ್ಯೆ ಇರಲಿಲ್ಲ. ಒಂದು ವೇಳೆ ಸಮಸ್ಯೆ ಕಂಡುಬಂದಿದ್ದರೆ ಕೂಡಲೇ ಸರಿಪಡಿಸುತ್ತಿದ್ದರು. ಆದರೆ ಚುನಾವಣೆ ಮುಗಿದ ನಂತರ ನಮ್ಮ ಸಮಸ್ಯೆ ಕೇಳೋರಿಲ್ಲ. ಮುಖ್ಯಾಧಿಕಾರಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆ ಬಗೆಹರಿಸದೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಕೇಳಿ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ನಮ್ಮ ಊರಿನ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡಲು ಖಾಸಗಿಯವರಿಗೆ ಟೆಂಡರ್ ನೀಡದೇ, ಪಟ್ಟಣ ಪಂಚಾಯಿತಿಯವರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಂದೆರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯಿತಿ ಎದುರು ಧರಣಿ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಸಿದರು.. ಜೊತೆಗೆ ರಿಚಾರ್ಜ್ ಮಾಡುವವರೆಗೂ ಪರ್ಯಾಯವಾಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು..

Leave a Reply

Your email address will not be published. Required fields are marked *

error: Content is protected !!