
“ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ, 2025” ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮಹತ್ವಾಕಾಂಕ್ಷಿ ಯೋಜನೆವಾಗಿದೆ. VBG RAM G ಯೋಜನೆಯ ಮೂಲಕ ಗುಣಮಟ್ಟದ ಹಾಗೂ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದ್ದು, ಕೂಲಿಕಾರರ ಕೂಲಿ ಮೊತ್ತವನ್ನು 370 ರಿಂದ 382 ಹೆಚ್ಚಿಸಲಾಗಿದೆ. ಅರ್ಹರು ಸದುಪಯೋಗ ಪಡಿದುಕೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವರಾಜಯ್ಯ ರವರು ಕರೆ ನೀಡಿದರು.
ತಾಲ್ಲೂಕಿನ ತೀರ್ಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ “ಮಾರಮ್ಮನ ಗುಡಿ ಕಟ್ಟೆ ಸಮಗ್ರ ಅಭಿವೃದ್ಧಿ” ಕಾಮಗಾರಿಯನ್ನು ಆರಂಭಿಸುವ ಮೂಲಕ ಅದೇ ಸ್ಥಳದಲ್ಲಿ ತಾಲ್ಲೂಕಿನ ಅಧಿಕಾರಿ ವೃಂದದವರು ಹಾಗೂ ವಿಬಿ-ಜಿ ರಾಮ್ ಜಿ ನೌಕರರು ಕೂಲಿಕಾರರೊಂದಿಗೆ ಶ್ರಮದಾನ ಮಾಡುವ ಮೂಲಕ ಯೋಜನೆಗೆ ಅದ್ಬುತ ಚಾಲನೆ ನೀಡಲಾಗಿದೆ.
ನಂತರ ಸಹಾಯಕ ನಿರ್ದೇಶಕರು (ಗ್ರಾ,ಉ) ಇಂದ್ರೇಶ್ ರವರು ಮಾತನಾಡುತ್ತಾ, ಸಾರ್ವಜನಿಕರಿಗೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ವಿಬಿ-ಜಿ ರಾಮ್ ಜಿ ಯೋಜನೆ ಜುಲೈ 01 ರಿಂದ ಇಡೀ ದೇಶದಾದ್ಯಂತ ಚಾಲನೆ ನೀಡಲಾಗಿದೆ. ನಾವು ನಮ್ಮ ಕೂಲಿಕಾರರೊಂದಿಗೆ ಶ್ರಮದಾನ ಮಾಡುವ ಮೂಲಕ ಒಂದು ಉತ್ತಮ ಘಳಿಗೆ ಸೃಷ್ಟಿಸಿದ್ದೇವೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಕೂಲಿಕಾರರೊಂದಿಗೆ ಯೋಜನೆಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಗಿದೆ. ತಾಲ್ಲೂಕು ಪಂಚಾಯತ್ ಅಧಿಕಾರಿ ವರ್ಗದವರು ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯ ಸಿಬ್ಬಂದಿಗಳು ಕೂಲಿಕಾರಯೊಂದಿಗೆ ಶ್ರಮದಾನ ಮಾಡುವ ಮೂಲಕ ಒಂದು ಅರ್ಥಪೂರ್ಣ ಚಾಲನೆ ನೀಡಲಾಗಿದೆ ಎಂದರು.
ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಜೊತೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪ್ರತಿಯೊಬ್ಬ ಅರ್ಹ ಕುಟುಂಬವೂ ಯೋಜನೆಯ ಸೌಲಭ್ಯಗಳನ್ನು ಪಡೆದು ಉದ್ಯೋಗದ ಜೊತೆಗೆ ಗ್ರಾಮಾಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.
ಈ ವೇಳೆ ವ್ಯವಸ್ಥಾಪಕರಾದ ಬಸವರಾಜು ರವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ್, ಬಾಬು ಶ್ರೀನಿವಾಸ್, ಮಂಜುನಾಥ್, ಲಕ್ಷ್ಮೀಬಾಯಿ, ಉಮೇಶ್, ತಾಂತ್ರಿಕ ಸಂಯೋಜಕರಾದ ಶ್ರೀಕಾಂತ್, ನಾಗರಾಜು, mis ಸಂಯೋಜಕರಾದ ಸರಸ್ವತಿ, ತಾಂತ್ರಿಕ ಸಹಾಯಕರಾದ ವರುಣ್, ಮಲ್ಲಿಕಾರ್ಜುನ್, ಪ್ರಕಾಶ್, ಹೊನ್ನೇಶ್, ಬಿಫ್ಟಿಫ್ ಗಳು, ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು , ತೀರ್ಥಪುರ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕೂಲಿಕಾರರು ಹಾಜರಿದ್ದರು.