Categories: ಲೇಖನ

ಸಾರ್ವಜನಿಕರ ಹಣ ಹಗಲು ದರೋಡೆ….

ಇದು ಲಂಚವಲ್ಲ, ಭ್ರಷ್ಟಾಚಾರವಲ್ಲ,ಅದಕ್ಕಿಂತ ದೊಡ್ಡ ಶಬ್ದಗಳಲ್ಲಿ ವರ್ಣಿಸಬೇಕೆಂದರೆ ಕಳ್ಳತನ ಮತ್ತು ಹಗಲು ದರೋಡೆ……..

ಕರ್ನಾಟಕ ಸರ್ಕಾರದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸುಮಾರು 95 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಸುತ್ತ ಈಗಾಗಲೇ ಎಸ್ ಐ ಟಿ‌ ತನಿಖೆ ಪ್ರಾರಂಭವಾಗಿದೆ. ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಒಂದಿಬ್ಬರು ಅಧಿಕಾರಿಗಳು ತಲೆ ತಪ್ಪಿಸಿಕೊಂಡಿದ್ದಾರೆ, ಮತ್ತೆ ಕೆಲವರ ಬಂಧನವಾಗಿದೆ. ಮಾನ್ಯ ಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಿದ್ದಾರೆ…..

ತೀರಾ ತೀರಾ ಗಂಭೀರ ಪ್ರಕರಣವಿದು. ಸರ್ಕಾರದ ಖಜಾನೆಯ ತೆರಿಗೆ ಹಣವನ್ನು ಅತ್ಯಂತ ಜವಾಬ್ದಾರಿಯಿಂದ ಕಾಪಾಡಿ, ಅದನ್ನು ಉಪಯೋಗಿಸಬೇಕಾದ ಜನರೇ ಒಂದು ಸ್ವಲ್ಪವೂ ಭಯ ಆತಂಕವಿಲ್ಲದೆ, ನೇರವಾಗಿಯೇ ಹಣವನ್ನು ಯಾರು ಯಾರಿಗೋ ವರ್ಗಾವಣೆ ಮಾಡಿದ್ದಾರೆಂದರೆ, ಇವರುಗಳಿಗೆ ಕಾನೂನಿನ ಬಗ್ಗೆ, ಧರ್ಮದ ಬಗ್ಗೆ, ದೇವರ ಬಗ್ಗೆ ಯಾವುದೇ ನಂಬಿಕೆಯು ಇಲ್ಲ, ಆತ್ಮಸಾಕ್ಷಿಯೂ ಇಲ್ಲ. ಸಿಕ್ಕಷ್ಟು ಹಣ ದೋಚುವುದಷ್ಟೇ ಇವರ ಮನೋಭಾವ. ಇದರಲ್ಲಿ ಯಾರ ತಪ್ಪಿದೆಯೋ, ಯಾರ್ಯಾರ ಎಷ್ಟೆಷ್ಟು ಅಕ್ರಮಗಳಿವೆಯೋ ಗೊತ್ತಿಲ್ಲ. ಆದರೆ ಅಕ್ರಮ ನಡೆದಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ……

ನಾವುಗಳು ಎಷ್ಟೊಂದು ಕಷ್ಟಪಟ್ಟು ಒಂದೊಂದು ರೂಪಾಯಿಯನ್ನು ಕೂಡಿಟ್ಟು ನಮ್ಮ ಅತ್ಯವಶ್ಯಕ ವಸ್ತುಗಳನ್ನು ಕೊಂಡುಕೊಳ್ಳುವಾಗ, ಆ ಮೂಲಕ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿ ನಮ್ಮ ರಕ್ಷಣೆಗೆ ಸರ್ಕಾರವಿರುತ್ತದೆ, ನಮ್ಮ ಹಣವನ್ನು ಒಳ್ಳೆಯ ಮಾರ್ಗದಲ್ಲಿ ಖರ್ಚು ಮಾಡುತ್ತದೆ ಎಂಬ ಭರವಸೆಯೊಂದಿಗೆ ನಾವಿದ್ದರೇ, ಈ ದುಷ್ಟರು ನೇರವಾಗಿಯೇ ದರೋಡೆ ಮಾಡಿದರೆ ನಮ್ಮ ಗತಿ ಏನು ?….

ಈ ಹಗರಣ ತುಂಬಾ ಪ್ರಾಮುಖ್ಯ ಪಡೆಯುವುದು ಏಕೆಂದರೆ ಇದು ಯಾವುದೋ ಕೆಲಸಕ್ಕಾಗಿ ಪಡೆದ ಲಂಚವಲ್ಲ ಅಥವಾ ಇನ್ಯಾವುದೋ ಕಾಮಗಾರಿಗಾಗಿ ಬಿಲ್ ಸಮೇತ ಪಾವತಿಸಬೇಕಾದ ಹಣವು ಅಲ್ಲ. ನನಗಿರುವ ಮಾಹಿತಿಯ ಪ್ರಕಾರ ಉದ್ದೇಶಪೂರ್ವಕವಾಗಿಯೇ ಯಾರೋ ಈ ಹಣವನ್ನು ಲಪಟಾಯಿಸಲು ಕೃತಕವಾಗಿ ಸೃಷ್ಟಿಯಾದ ದಾಖಲೆಗಳ ಮುಖಾಂತರ ಹಣ ವರ್ಗಾವಣೆಯಾಗಿದೆ. ಇದು ಬಯಲಾದ ಒಂದು ಘಟನೆ ಮಾತ್ರ. ಈ ರೀತಿ ಆ ವ್ಯಕ್ತಿಗಳು ಮಾಡಿದ್ದಾರೆಂದರೆ ಅವರಿಗೆ ಈ ರೀತಿಯ ಚಟುವಟಿಕೆಗಳ ಹಿನ್ನೆಲೆ ಇರಲೇಬೇಕು, ಇವರು ಹಿಂದೆಯೂ ಸಹ ಬೇರೆ ಬೇರೆ ಇಲಾಖೆಗಳಲ್ಲಿ ಈ ರೀತಿಯ ಅಥವಾ ಇದೇ ರೂಪದ ಬೇರೆ ರೀತಿಯ ವಂಚನೆಗಳಲ್ಲಿ ಭಾಗಿಯಾಗಿರಬಹುದು ಅಥವಾ ಇನ್ನು ಹಲವಾರು ಜನ ಇದೇ ರೀತಿ ಸರ್ಕಾರಿ ಹಣದ ಲೂಟಿ ಮಾಡುತ್ತಿರುತ್ತಾರೆ ಎಂದರ್ಥ…

ಸರ್ಕಾರಗಳು ತಮ್ಮ ಕೆಲಸದ ಒತ್ತಡದಿಂದಾಗಿ ಇಡೀ ವ್ಯವಸ್ಥೆಯನ್ನು ನಿಭಾಯಿಸುವುದು ಕಷ್ಟ ಎಂದು ಕೆಲವು ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಒಂದಷ್ಟು ನಿಗಮಗಳನ್ನು ಸ್ಥಾಪಿಸಿ, ಅದಕ್ಕೆ ಹಣಕಾಸಿನ ಸೌಲಭ್ಯ ಒದಗಿಸಿ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಬೇಗ ಅಭಿವೃದ್ಧಿ ಹೊಂದಲಿ ಎಂದು ನಿಗಮ ಸ್ಥಾಪಿಸಿದರೆ ಈ ದುರಾತ್ಮರು ಅಷ್ಟು ದೊಡ್ಡ ಮೊತ್ತವನ್ನು ದರೋಡೆ ಮಾಡಿದರೆ ವ್ಯವಸ್ಥೆಯ ಗತಿ ಏನು…….

ಎಷ್ಟೊಂದು ಬಡತನ, ಎಷ್ಟೊಂದು ಅಸಹಾಯಕತೆ, ಎಷ್ಟೊಂದು ನೋವುಗಳು, ಬಿಸಿಲಿಗೆ ಫ್ಯಾನು ಎಸಿ ಇಲ್ಲ, ಮಳೆಗೆ ಸರಿಯಾದ ಸೂರಿಲ್ಲ, ಚಳಿಗೆ ಸರಿಯಾದ ಹೊದಿಕೆ ಇಲ್ಲ, ಎಷ್ಟೋ ಜನ ಕೂಲಿಯನ್ನು ಮಾಡಿದರೆ, ಅನೇಕರು ಹೊಟ್ಟೆಪಾಡಿಗಾಗಿ ದೇಹವನ್ನೇ ಮಾರಿಕೊಳ್ಳುವ ಪರಿಸ್ಥಿತಿ ಇದೆ. ಎಷ್ಟೋ ಮಕ್ಕಳು ಈಗಲೂ ಶಾಲಾ ಫೀಸು ಕಟ್ಟಲು ಒದ್ದಾಡುತ್ತಿದ್ದಾರೆ, ಎಷ್ಟೋ ಹಿರಿಯರು ಹಣದ ಕೊರತೆಯಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ತೆರಿಗೆದಾರರ ಕೋಟಿ ಕೋಟಿ ಹಣ ಹೀಗೆ ದರೋಡೆಯಾದರೆ ಅದಕ್ಕೆ ನಾವು ಸಾಕ್ಷಿಯಾಗಿರುವುದು ಇನ್ನೂ ದುರಂತ……

ಸರ್ಕಾರದಲ್ಲಿ ಲೆಕ್ಕಪರಿಶೋಧನಾ ಇಲಾಖೆ (ಆಡಿಟಿಂಗ್ ಡಿಪಾರ್ಟ್ಮೆಂಟ್ ) ಎಂಬ ಇಲಾಖೆ ಇದೆ. ಯಾವುದೇ ರೀತಿಯ ಹಣ ದುರುಪಯೋಗವಾಗುವುದನ್ನು ಅದು ಹುಡುಕಿ, ಬಯಲಿಗೆಳೆದು ಕ್ರಮಬದ್ಧಗೊಳಿಸಲು ಇರುವ ಇಲಾಖೆ. ಆದರೆ ಅದು ಹೇಗಾಗಿದೆ ಎಂದರೆ ಮೊದಲಿಗೆ ಪೋಸ್ಟ್ ಮಾರ್ಟಂ, ನಂತರ ಶವ ಮೆರವಣಿಗೆ, ತದನಂತರ ಶವಸಂಸ್ಕಾರ ಈ ರೀತಿ ಎಲ್ಲವೂ ಮುಗಿದ ನಂತರ ಆ ಇಲಾಖೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ಈ ಲೆಕ್ಕ ಪರಿಶೋಧನೆ ಇಲಾಖೆಯನ್ನು ಮತ್ತೆ ಪುನರ್ ರಚಿಸಿ ಪ್ರಾರಂಭ, ಮಧ್ಯಮಾವಧಿ ಮತ್ತು ಕಾರ್ಯ ನಂತರ ಆಡಿಟಿಂಗ್ ಎಂದು ಮೂರು ರೀತಿಯಲ್ಲಿ ಆಡಿಟಿಂಗ್ ಮಾಡಬೇಕಾಗುತ್ತದೆ. ಆಗಲಾದರೂ ಈ ರೀತಿಯ ದರೋಡೆಗಳು ನಡೆಯುವುದು ಸ್ವಲ್ಪ ದಿನದ ಮಟ್ಟಿಗೆ ಕಡಿಮೆಯಾಗಬಹುದು. ಏಕೆಂದರೆ ಮುಂದೆ ಇದರಲ್ಲಿಯೂ ಲೋಪದೋಷಗಳನ್ನು ಕಂಡುಹಿಡಿದು ಅದನ್ನು ದುರುಪಯೋಗಸಿಕೊಳ್ಳುವ ಮನಸ್ಥಿತಿ ನಮ್ಮ ರಾಜಕಾರಣಿ ಮತ್ತು ಅಧಿಕಾರಿಗಳದ್ದು…..

ಏನೇ ಆಗಲಿ ಇಷ್ಟೊಂದು ಬಹಿರಂಗ ಸರ್ಕಾರಿ ದರೋಡೆಗಳನ್ನು ಸಹಿಸಬಾರದು. ಇದಕ್ಕಾಗಿ ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯ ಅವಶ್ಯಕತೆ ಇದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕಾಕ್ರೋಚ್ ಜನತಾ ಪಾರ್ಟಿ……

ಕಾಕ್ರೋಚ್ ಜನತಾ ಪಾರ್ಟಿ...... ಸಾಮಾಜಿಕ ಜಾಲತಾಣದ ಹೊಸ ರಾಜಕೀಯ ಚಳುವಳಿ ಎಂದು ಕಳೆದ ಐದಾರು ವಾರಗಳಿಂದ ಇಡೀ ದೇಶದಾದ್ಯಂತ ಬಹುದೊಡ್ಡ…

2 hours ago

ಬಿಸವನಹಳ್ಳಿಯಲ್ಲಿ ಅದ್ವಿತಾ ಜನ್ಮದಿನ ಅರ್ಥಪೂರ್ಣ ಆಚರಣೆ

ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಪೋಷಕತ್ವದಲ್ಲಿ, ಕೇಶವ ಮತ್ತು ಸುಷ್ಮಾ ದಂಪತಿಯ ಪುತ್ರಿ ಅದ್ವಿತಾ ಅವರ ಜನ್ಮದಿನವನ್ನು ಬಿಸವನಹಳ್ಳಿ…

21 hours ago

ಕಾರಿಗೆ ಅಡ್ಡ ಬಂದ ನಾಯಿ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ದೊಡ್ಡಬಳ್ಳಾಪುರ: ಹಿಂದೂಪುರ–ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ದಿಢೀರನೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ…

24 hours ago

ಅನುಭವ, ಹಿರಿತನಕ್ಕೆ ತಕ್ಕಂತೆ ಸಚಿವ ಸ್ಥಾನ ನೀಡಿ- ಮನು.ಆರ್.ವಿ ಒತ್ತಾಯ

ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ…

1 day ago

ಜೂ..7ರಂದು ‘ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ- ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಗಿರೀಶ್ ಕೆ

ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ…

2 days ago

ಜೂ. 20 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಂಭ- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಯನ್ನು…

2 days ago