Categories: ಲೇಖನ

ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು…

ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು……….

ತರಲೆಗಳಿಗೆ ಟೈಂಪಾಸ್ ಮಾಡುವ ಜಾಗ,…..

ಪಡ್ಡೆಗಳಿಗೆ ಚಾಟಿಂಗ್ ಸೆಂಟರ್‌,……..

ಯುವಕರಿಗೆ ಸ್ನೇಹ ಬೆಳೆಸುವ ಸ್ಥಳ,………..

ಉತ್ಸಾಹಿಗಳಿಗೆ ಗುಂಪುಗಳನ್ನು ಸೇರುವ ಜಾಗ,……..

ಭಾವನಾತ್ಮಕ ಜೀವಿಗಳಿಗೆ ಅನಿಸಿಕೆ – ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ,…….

ಕವಿ ಹೃದಯಿಗಳಿಗೆ ಕಾವ್ಯ ರಚಿಸುವ – ಪ್ರಕಟಿಸುವ ಸ್ಥಳ,………..

ಪ್ರೇಮಿಗಳಿಗೆ ತಮ್ಮ ಪ್ರೀತಿಯ ಸಂಭ್ರಮ ಹೇಳಿಕೊಳ್ಳುವ ಜಾಗ,………..

ಬರಹಗಾರರಿಗೆ ತಮ್ಮತನ ವ್ಯಕ್ತಪಡಿಸುವ ವೇದಿಕೆ,………

ವಿಚಾರವಾದಿಗಳಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಕೇಂದ್ರ,……….

ಸಂಪ್ರದಾಯವಾದಿಗಳಿಗೆ ತಮ್ಮ ಸಂಸ್ಕೃತಿ ಪ್ರಚಾರ ಮಾಡುವ ಜಾಗ,……..

ಗೃಹಿಣಿಯರಿಗೆ ತಮ್ಮ ಆಂತರ್ಯ ಹೇಳಿಕೊಳ್ಳುವ ಪ್ರಶಸ್ತ ಸ್ಥಳ,………

ನಿವೃತ್ತರಿಗೆ ತಮ್ಮ ನೆನಪು – ಅನುಭವ ಹಂಚಿಕೊಳ್ಳುವ ವೇದಿಕೆ,………

ನಿರುದ್ಯೋಗಿಗಳಿಗೆ ಹೊಸ ಸ್ನೇಹ – ಹೊಸ ಅವಕಾಶ ಸೃಷ್ಟಿಸುವ ಜಾಗ,……

ಜಗಳಗಂಟರಿಗೆ ಜಗಳವಾಡುವ ವಿಶಾಲ ಸುರಕ್ಷಿತ ಸ್ಥಳ,……

ಅಸೂಯಪರರಿಗೆ ತಮ್ಮ ಹೊಟ್ಟೆ ಕಿಚ್ಚು ತೋಡಿಕೊಳ್ಳುವ ವೇದಿಕೆ,……..

ಸಹೃದಯದವರಿಗೆ ಅದ್ಭುತ ಅನುಭವ ಮಂಟಪ,…….

ಅವಕಾಶ ವಂಚಿತರಿಗೆ ಸುವರ್ಣಾವಕಾಶದ ಹೆಬ್ಬಾಗಿಲು,……..

ಆಸಕ್ತರಿಗೆ ಮಾಹಿತಿಗಳ ಕಣಜ,………

ಹಳೆಯ ಸ್ನೇಹಿತರಿಗೆ ಮತ್ತೊಮ್ಮೆ ಬೆಸುಗೆಯ ಸಂಪರ್ಕದ ಕೊಂಡಿ,…..

ಕೆಲವರಿಗೆ ವಿಕೃತ ಮನಸ್ಥಿತಿಯ ಅನಾವರಣ ಕೇಂದ್ರ,……..

ಹಲವರಿಗೆ ತಮ್ಮ ಅಸ್ತಿತ್ವ ಇಲ್ಲಿದೆ ಎಂಬ ಕನಿಷ್ಠ ಸಮಾಧಾನದ ವೇದಿಕೆ,…….

ಒಂದೇ – ಎರಡೇ, ಸಾವಿರಾರು, ಲಕ್ಷಾಂತರ, ಭಾವಗಳ ಅವಿಭಕ್ತ ಕುಟುಂಬ,……

ಕೋಟ್ಯಾಂತರ ಅಭಿಪ್ರಾಯ, ಭಿನ್ನಾಭಿಪ್ರಾಯಗಳ ವೇದಿಕೆ,…….

ಪರಿಚಿತ, ಅಪರಿಚಿತ, ಹತ್ತಿರದ, ದೂರದ ಸಂಬಂಧಗಳ ಬೆಸುಗೆ,…..

ಒಂಟಿ ಜೀವಿಗಳಿಗೆ ಅದ್ಬುತ ಜೊತೆಗಾರ,……..

ಗೆಳೆಯ – ಗೆಳತಿಯರೇ,
ಇದನ್ನು ಇನ್ನೊಂದಿಷ್ಟು ಸಹ್ಯವಾಗಿಸೋಣ,
ಆತ್ಮೀಯವಾಗಿಸೋಣ,…..

ಚಿಂತಕರ ಚಾವಡಿಯಾಗಿಸೋಣ,
ಅನುಭವ ಮಂಟಪವಾಗಿಸೋಣ,……

ದ್ವೇಷ, ಅಸೂಯೆ, ತಿಕ್ಕಲುತನ, ಸಿನಿಕತನ, ಉಢಾಪೆ, ಕಡಿಮೆಮಾಡಿ,
ಪ್ರೀತಿ, ವಿಶ್ವಾಸ, ಗೆಳೆತನ, ಒಳ್ಳೆಯತನಗಳ ಸುಖೀ ಕುಟುಂಬವಾಗಿಸೋಣ,……

ಏಕೆಂದರೆ,

ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಲು ಸಾಮಾಜಿಕ ಜಾಲತಾಣ ಅತ್ಯುತ್ತಮ ವೇದಿಕೆಯಾಗಿದೆ.
ಫೇಸ್‌ಬುಕ್, ವಾಟ್ಸ್ ಆಪ್, ಟ್ವಿಟರ್, ಎಕ್ಸ್, ಶೇರ್ ಚಾಟ್, ಇನ್ಸ್ಟಾಗ್ರಾಮ್, ಮೆಸೆಂಜರ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್, ಗೂಗಲ್ ಮೀಟ್, ಜೂಮ್ ಮೀಟಿಂಗ್, ಯೂಟ್ಯೂಬ್ ಇತ್ಯಾದಿ ಇತ್ಯಾದಿಗಳು…..

ಸಾಮಾನ್ಯ ಜನರ ಧ್ವನಿಗೆ ವೇದಿಕೆಯೇ ಇಲ್ಲದಿದ್ದ, ಕೇವಲ ಕೆಲವೇ ವರ್ಗದ ಸ್ವತ್ತಾಗಿದ್ದ, ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ವೇದಿಕೆಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲತಾಣಗಳು ಸಮೂಹ ಸಂಪರ್ಕ ಕ್ರಾಂತಿಯನ್ನೇ ಮಾಡುತ್ತಿವೆ. ಎಲ್ಲಾ ರೀತಿಯಲ್ಲೂ ಅಂದರೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಗ್ರಾಮೀಣ, ಲಿಂಗಾಧಾರಿತ ಮುಂತಾದ ಅತ್ಯಂತ ಕೆಳಮಟ್ಟದ ಜನರಿಗೂ ಇಂದು ವಿಶ್ವಮಟ್ಟದ ವೇದಿಕೆಗಳನ್ನು ಸಾಮಾಜಿಕ ಜಾಲತಾಣಗಳು ಕಲ್ಪಿಸುತ್ತಿವೆ. ಇದನ್ನು ಅತ್ಯಂತ ಪರಿಣಾಮಕಾರಿಯಾಗಿ, ಮಾನವ ಜನಾಂಗದ ಸುಸ್ಥಿರ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ಪ್ರತಿ ಮನುಷ್ಯನಿಗೂ ಇರುವ ಮೆದುಳಿನ ಗ್ರಹಿಸುವ ಸಾಮರ್ಥ್ಯ ಒಂದು ವಿಷಯವಾಗಿ ಮನಸ್ಸಿನಲ್ಲಿ ಮೂಡಿ ಭಾವತರಂಗಗಳಾಗಿ ಧ್ವನಿಪಟ್ಟಿಗೆಯಲ್ಲಿ ಮೂಡಿ ಬಾಯಿಯ ಮೂಲಕ ಭಾಷೆಯ ರೂಪದಲ್ಲಿ ಹೊರಹೊಮ್ಮುತ್ತದೆ. ಅದು ಪ್ರತಿ ವ್ಯಕ್ತಿಯ ಸ್ವಂತಿಕೆಯಾಗಿರುತ್ತದೆ.

ಇದೆಲ್ಲದರ ನಂತರ ಅತಿಮುಖ್ಯವಾಗಿ ಇಲ್ಲಿ ಅಧ್ಯಯನ, ಚಿಂತನೆ, ಮಾನವೀಯ ಮೌಲ್ಯಗಳು, ಅದರಿಂದ ಸಿಗುವ ಮಾಹಿತಿ ಜ್ಞಾನ, ಅದನ್ನು ವ್ಯಕ್ತಪಡಿಸುವ ರೀತಿ ನೀತಿಗಳು, ನೈತಿಕತೆ, ಕಾನೂನು, ಜೀವಪರ ನಿಲುವು ಎಲ್ಲದರ ಅರಿವು ಇರಬೇಕಾಗುತ್ತದೆ. ಆಗ ಮಾತ್ರ ಈ ವೇದಿಕೆಗಳು ಮಾನವನ ಮತ್ತಷ್ಟು ವಿಕಾಸಕ್ಕೆ ಕಾರಣವಾಗುತ್ತದೆ. ಇಲ್ಲದಿದ್ದರೆ ಇದನ್ನು ಬೇಜವಾಬ್ದಾರಿಯಿಂದ, ಸ್ವಾರ್ಥದಿಂದ, ಅಜ್ಞಾನದಿಂದ ಉಪಯೋಗಿಸಿದರೆ ಸಮಾಜದ ಮತ್ತಷ್ಟು ಅಧೋಗತಿ ಖಚಿತ.

ಆದ್ದರಿಂದ ಚರ್ಚೆಗಳ ಬಗ್ಗೆಯೇ ಚರ್ಚಿಸುವ ಸಮಯ ಬಂದಿದೆ……,

ಚರ್ಚೆಗಳು ವಾಗ್ಯುದ್ಧಗಳೇ,
ಪ್ರತಿಭಾ ಪ್ರದರ್ಶನಗಳೇ,
ಸಮರ್ಥನೆಗಳೇ,
ಜಗಳಗಳೇ,
ಭಾವನೆಗಳೇ,
ವಿಷಯ ವಿನಿಮಯಗಳೇ,
ಚರ್ಚೆಗಳ ಕೊನೆ ಮನಸ್ತಾಪವೇ,
ಹೊಡೆದಾಟಗಳೇ, ಗುಂಪುಗಾರಿಕೆಗಳೇ
ರಾಜಕೀಯವೇ….

ದಿನನಿತ್ಯದ ಸಾಮಾಜಿಕ ಜಾಲತಾಣಗಳ ಚರ್ಚೆಗಳನ್ನು ಗಮನಿಸಿದಾಗ ಹೀಗೆ ಅನಿಸುತ್ತದೆ.

ನಮ್ಮ ಜ್ಞಾನದ ಮಿತಿಯಲ್ಲಿ, ಆತ್ಮಸಾಕ್ಷಿಗೆ ಅನುಗುಣವಾಗಿ ವಿಷಯದ ಗೊಂದಲಗಳಿಗೆ, ಅಥವಾ ವಿಚಾರ ವಿನಿಮಯಗಳಿಗೆ ಚರ್ಚೆ ವೇದಿಕೆಯಾಗಿರಬೇಕು,
ಕಲಿಕೆ, ತಿಳಿವಳಿಕೆ, ಸತ್ಯದ ದರ್ಶನಕ್ಕೆ ಪ್ರಯತ್ನಿಸುವುದು ಚರ್ಚೆಯ ಬಹುದೊಡ್ಡ ಆಶಯವಾಗಿರಬೇಕು.
ಭಿನ್ನಾಭಿಪ್ರಾಯಗಳ ನಿವಾರಣೆ, ಗುರಿ – ಮಾರ್ಗಗಳ ಸಮಾಲೋಚನೆ, ಸಹಬಾಳ್ವೆ, ಸಹಕಾರದ ಹಿತವೂ ಕೂಡ ಚರ್ಚೆಯ ಮುಖ್ಯ ಅಂಶವಾಗಿರಬೇಕು.

ಚರ್ಚೆಯ ಕೊನೆಯು ಕನಿಷ್ಟಪಕ್ಷ ನಗುವಿನಿಂದ ಮುಗಿದು ಆತ್ಮ, ಮನಸ್ಸುಗಳ ಮಿಲನವಾಗುವಂತಿರಬೇಕು,

ಒಂದಷ್ಟು ಭಿನ್ನಾಭಿಪ್ರಾಯ ಇದ್ದರೂ ಕೂಡ ಪ್ರೀತಿ, ವಿಶ್ವಾಸಗಳೇ ಮೇಲುಗ್ಯೆ ಪಡೆಯುವಂತಿರಬೇಕು,

ಆದರೆ ಆಗುತ್ತಿರುವುದೇನು ?

ಬಾಯಿಬುಡುಕತನ, ಭಾಗವಹಿಸುವವರ ಅಜ್ಞಾನ ಪ್ರದರ್ಶನ, ಜೋರು ಧ್ವನಿ, ಕೋಪತಾಪಗಳ ಕೂಗಾಟ, ಹಿಡನ್ ಅಜೆಂಡಾ, ನಮ್ಮದೇ ಸರಿ ಎಂಬ ಭಂಡತನ, ಕೊನೆಗೆ ಏನೂ ಅರ್ಥವಾಗದ ಗೊಂದಲ. ಚರ್ಚೆಗಳು ಎಲ್ಲಾ ಮಿತಿಗಳನ್ನು ದಾಟುತ್ತಿವೆ. ಉಪಯೋಗಿಸುವ ಭಾಷೆ, ಅಹಂಕಾರ, ಅಲ್ಪ ಜ್ಞಾನ, ಸಣ್ಣತನಗಳು ರಾರಾಜಿಸುತ್ತಿವೆ,

ಒಳ್ಳೆಯದು ಇಲ್ಲವೆಂದಲ್ಲ,
ಅದೂ ಬಹಳಷ್ಟಿದೆ. ಆದರೆ ತಿದ್ದಿಕೊಳ್ಳುವುದು ಸಾಕಷ್ಟಿದೆ.

ನಿಜವಾದ ಚರ್ಚೆಗಳು,
ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವಂತಿರಬೇಕು,
ನಮ್ಮ ಜ್ಞಾನ ದಾಹವನ್ನು ತೀರಿಸುವಂತಿರಬೇಕು,
ನಮ್ಮ ಮನೋಭಾವ ವಿಶಾಲಗೊಳಿಸುವಂತಿರಬೇಕು ,
ನಮ್ಮ ಮನಸ್ಸಿಗೆ ಮುದ ನೀಡುವಂತಿರಬೇಕು,
ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವಂತಿರಬೇಕು,
ನಮ್ಮ ಗೊಂದಲಗಳಿಗೆ ಪರಿಹಾರ ಸಿಗುವಂತಿರಬೇಕು,
ನಮಗೆ ಕನಿಷ್ಠ ನೆಮ್ಮದಿಯನ್ನಾದರೂ ನೀಡುವಂತಿರಬೇಕು,

ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಎಚ್ಚರಗೊಳ್ಳೋಣ.

ಅತ್ಯುತ್ಸಾಹದಿಂದ ಭಾಗವಹಿಸುವುದು, ಬಹುಬೇಗ ತುಂಬಾ ನಿರೀಕ್ಷಿಸುವುದು, ನಿರಾಶರಾಗುವುದು, ಇದರಿಂದ ವಿಮುಖರಾಗುವುದು, ಸಿನಿಕತನ ಪ್ರದರ್ಶಿಸುವುದರ ಬಗ್ಗೆ ಎಚ್ಚರಿಕೆ ವಹಿಸೋಣ.

ತಾಳ್ಮೆಯೇ ಪ್ರಬುದ್ದತೆಯ ಮೂಲ ಬೇರು.
ಅಧ್ಯಯನ ಮತ್ತು ಚಿಂತನೆ ಅದರ ಕಾಂಡಗಳು,
ಭಾಷೆ ಅದರ ಎಲೆಗಳು,
ಜ್ಞಾನವೇ ಅದರ ನಿಜವಾದ ಫಲ.

ಇದರಿಂದ ನಮ್ಮ ಮಾನಸಿಕ ಆಂತರಿಕ ವ್ಯಕ್ತಿತ್ವಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳೋಣ.

ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ: ಎಕರೆಗೆ ತಿಂಗಳಿಗೆ ಒಂದು ಬ್ಯಾಗ್ ವಿತರಣೆ

ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ…

48 minutes ago

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

11 hours ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

13 hours ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

17 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

19 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

22 hours ago