Categories: ಲೇಖನ

ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ…..

ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ……..
— ಮಹಾತ್ಮಾ ಗಾಂಧಿ.

ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ತಾಣಗಳು ಅತ್ಯುತ್ತಮ ವೇದಿಕೆಗಳನ್ನು ಒದಗಿಸಿಕೊಡುತ್ತಿವೆ. ಕೋವಿಡ್ ಸಮಯದಲ್ಲಿ ಜನರ ಬಳಿ ತುಸು ಹೆಚ್ಚೇ ಸಮಯ ಉಳಿಯುತ್ತಿದೆ. ಮನೆಯಲ್ಲಿಯೇ ಕುಳಿತು ಸಾಕಷ್ಟು ಅಭಿಪ್ರಾಯ ಹಂಚಿಕೊಳ್ಳುವ ಅವಕಾಶಗಳೂ ಇವೆ.

ಆದರೆ ಬಹುಮುಖ್ಯವಾಗಿ ವಿನಯ ಮತ್ತು ಸಭ್ಯತೆ ಮಾಯವಾಗುತ್ತಿದೆ. ಅಧ್ಯಯನ ಚಿಂತನೆ ವಾಕ್ ಚಾತುರ್ಯ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ. ಆದರೆ ವಿನಯದೊಳಗೆ ಪ್ರೀತಿ ಮತ್ತು ಮಾನವೀಯತೆ ಮಾತ್ರ ಕೊರತೆಯಾಗದಿರಲಿ.

ಏಕವಚನ ಪ್ರಯೋಗಗಳು, ನಿಂದನೆಗಳು, ಅಹಂಕಾರದ ಮಾತುಗಳು, ಅವಮಾನಕರ ಪದ ಪ್ರಯೋಗ ಎಲ್ಲವೂ ಅತಿಹೆಚ್ಚು ಬಳಸಲ್ಪಡುತ್ತಿದೆ.

ವಿಷಯ ಯಾವುದೇ ಇರಲಿ ಯಾರೊಂದಿಗೆ ಚರ್ಚಿಸುತ್ತಿರುವಿರಿ ಎಂಬ ಪ್ರಜ್ಞೆ ಇದೆಯೇ ? ನಮ್ಮದೇ ದೇಶದ, ನಮ್ಮದೇ ರಾಜ್ಯದ, ನಮ್ಮದೇ ಭಾಷೆಯ, ನಮ್ಮದೇ ಸಮಾಜದ ಜನರೊಂದಿಗೆ ಅಲ್ಲವೇ ನಮ್ಮ ಬಹುತೇಕ ಮಾತುಕತೆ ನಡೆಯುವುದು. ಆದರೂ ಆಜನ್ಮ ಶತೃವಿನಂತೆ ಮಾತುಕತೆಗಳು ಬೇಕೆ ? ಇದರಿಂದ ನಾವು ಸಾಧಿಸುವುದಾದರೂ ಏನನ್ನು ?

ಚರ್ಚೆಯಲ್ಲಿ ಗೆಲುವೇ ನಿಮ್ಮ ಉದ್ದೇಶವಾದರೆ ದಯವಿಟ್ಟು ವಕೀಲ ವೃತ್ತಿಯನ್ನು ಪ್ರಾರಂಭಿಸಿ. ಆದರೆ ಸಾಮಾಜಿಕ ಜಾಲತಾಣಗಳ ಚರ್ಚೆಗಳ ಉದ್ದೇಶ ಅರಿವಿನ ಗುಣಮಟ್ಟ ಹೆಚ್ಚಿಸಿಕೊಳ್ಳುವುದು, ಅನೇಕ ವಿಷಯಗಳ ಬಗ್ಗೆ ಉತ್ತಮ ಸಾರ್ವಜನಿಕ ಅಭಿಪ್ರಾಯ ರೂಪಿಸಿಕೊಳ್ಳುವುದು, ಒಬ್ಬ ದೇಶದ ನಾಗರಿಕರಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸಲು ಬೇಕಾದ ಪ್ರಬುದ್ಧತೆ ಗಳಿಸುವುದು ಮುಂತಾದ ನಾನಾ ಉಪಯೋಗಗಳನ್ನು ಪಡೆಯುವುದು.

ಪಕ್ಷಗಳ ವಕ್ತಾರರೋ, ಸಿದ್ದಾಂತಗಳ ತೀವ್ರ ಮೂಲಭೂತವಾದಿಗಳೋ ನಾಚುವಂತೆ ಸಾಮಾನ್ಯ ಸ್ನೇಹಿತ ಅಥವಾ ಪರಿಚಿತ ವರ್ಗ ಸಹ ಯಾವುದೇ ಜವಾಬ್ದಾರಿ ಸ್ಥಾನದಲ್ಲಿ ಇರದಿದ್ದರೂ ಮೈಮೇಲೆ ದೆವ್ವ ಬಂದವರಂತೆ ಕೂಗಾಡುವುದು ನಿಜಕ್ಕೂ ನಮ್ಮ ಸಾಂಸ್ಕೃತಿಕ ಅವಹೇಳನ. ವ್ಯಕ್ತಿತ್ವದ ಪೊಳ್ಳುತನ.

ಸಾಮಾನ್ಯವಾಗಿ ಸತ್ಯ ಮತ್ತು ವಾಸ್ತವಿಕತೆಗೆ ಸಂಖ್ಯೆಗಳ ದೃಷ್ಟಿಯಲ್ಲಿ ಜನಪ್ರಿಯತೆ ಕಡಿಮೆ. ಸುಳ್ಳು ಮತ್ತು ಭ್ರಮೆಗಳೇ ಹೆಚ್ಚು ಜನಪ್ರಿಯತೆ ಗಳಿಸುತ್ತವೆ. ಈ ಸಾಮಾಜಿಕ ಜಾಲತಾಣಗಳ ಚರ್ಚೆಗಳು ಇವುಗಳನ್ನು ಮೀರಿ ಬೆಳೆಯಬೇಕಾಗಿತ್ತು. ಆದರೆ ವಿನಯವಿಲ್ಲದೆ ಪ್ರೀತಿ ಗೌರವ ಸಭ್ಯತೆಗಳಿಲ್ಲದೆ ದ್ವೇಷ ಅಸೂಯೆ ಸಣ್ಣತನಗಳ ಕಾರಣದಿಂದಾಗಿ ಇಂದು ಅವು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ.

ಚರ್ಚೆಗಳೆಂದರೆ ಮೊದಲೆಲ್ಲಾ ಕೇವಲ ವಿದ್ವಾಂಸರು – ಪಂಡಿತರು – ಜ್ಞಾನಿಗಳು – ವಿಷಯ ಪರಿಣಿತರು ಮುಂತಾದ ಕೆಲವೇ ಜನರು ಸಭೆ ಸಮಾರಂಭಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಅಥವಾ ವಿಚಾರ ಸಂಕಿರಣಗಳಲ್ಲಿ ಮಾತ್ರ ಮಾಡುವ ವಿಷಯವಾಗಿತ್ತು. ಕೆಲವು ವಿಷಯಗಳಲ್ಲಿ ಸಾಮಾನ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಾದರೂ ಅದು ಸ್ಥಳೀಯ ಸ್ನೇಹ ಸಂಬಂಧಗಳ ವ್ಯಾಪ್ತಿ ಮೀರುತ್ತಿರಲಿಲ್ಲ.

ಸಂತೆ – ಅಂಗಡಿ – ಬಸ್ ನಿಲ್ದಾಣ – ಮದುವೆ ಮುಂತಾದ ಸ್ಥಳಗಳಿಗೆ ಸೀಮಿತವಾಗಿತ್ತು. ಆದರೆ ಈ Social media ಗಳ ಉಗಮದೊಂದಿಗೆ ಬಹುತೇಕ ಎಲ್ಲಾ ಸಾಮಾನ್ಯ ಜನರೂ ತಮ್ಮ ಅಭಿಪ್ರಾಯಗಳನ್ನು ಎಲ್ಲ ವಿಷಯಗಳ ಬಗ್ಗೆಯೂ ಸಾರ್ವಜನಿಕವಾಗಿ ಮತ್ತು ವಿಶಾಲ ವ್ಯಾಪ್ತಿಯಲ್ಲಿ ವ್ಯಕ್ತಪಡಿಸುವ ಅವಕಾಶ – ವೇದಿಕೆ ಮತ್ತು ಸ್ವಾತಂತ್ರ್ಯ ದೊರೆಯಿತು. ಇದು ಅತ್ಯಂತ ಸಂತೋಷದ ಮತ್ತು ಸ್ವಾಗತಾರ್ಹ ಬೆಳವಣಿಗೆ.

ಆದರೆ ಚರ್ಚೆಗಳ ರೀತಿ – ನೀತಿ – ಗುಣಮಟ್ಟ – ಪ್ರಬುದ್ದತೆ ಯಾವ ಮಟ್ಟದಲ್ಲಿದೆ ಎಂಬ ಪ್ರಶ್ನೆ ಬಹಳವಾಗಿ ಕಾಡುತ್ತಿದೆ.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಗಳನ್ನು ಗಮನಿಸಿದಾಗ ಈ ಪ್ರಶ್ನೆ ಉದ್ಭವವಾಗುತ್ತಿದೆ.

ವಿಷಯಗಳನ್ನು ಯಾವ ದೃಷ್ಟಿಕೋನದಿಂದ – ಯಾವ ಆಧಾರದಲ್ಲಿ ಗ್ರಹಿಸುತ್ತಾರೆ ಮತ್ತು ಯಾವ ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬುದೇ ಗೊಂದಲವಾಗಿದೆ.
ಪ್ರತಿಯೊಬ್ಬರಿಗೂ ಅವರವರದೇ ಆದ ಅಭಿಪ್ರಾಯ ಇರುತ್ತದೆ ಎಂಬುದು ನಿಜವಾದರೂ ಒಟ್ಟು ವ್ಯವಸ್ಥೆಯ ದೃಷ್ಟಿಯಿಂದ ಸತ್ಯ ಮತ್ತು ವಾಸ್ತವವನ್ನು ಹುಡುಕಿ ಅದನ್ನು ಅಳವಡಿಸಿಕೊಳ್ಳಲು ಒಂದು ತಕ್ಷಣದ ಸ್ಪಷ್ಟ ಚಿಂತನೆ ಅವಶ್ಯವಲ್ಲವೇ ?

ಉದಾಹರಣೆಗೆ, ಜಾತಿ ವ್ಯವಸ್ಥೆಯನ್ನು ಹೇಗೆ ನೋಡುವುದು ? ಸೃಷ್ಟಿಯ ಮೂಲದಿಂದ ನೋಡಿದರೆ ಒಂದು ರೀತಿ, ಧರ್ಮದ ಆಧಾರದಲ್ಲಿ ನೋಡಿದರೆ ಮತ್ತೊಂದು ರೀತಿ, ಕಾನೂನಿನ ಪ್ರಕಾರ ನೋಡಿದರೆ ಇನ್ನೊಂದು ರೀತಿ, ಸಮಾಜದ ನೀತಿ ನಡವಳಿಕೆಯಲ್ಲಿ ಮಗದೊಂದು ರೀತಿ ಕಾಣುತ್ತದೆ. ಚರ್ಚೆಯಲ್ಲಿ ಭಾಗವಹಿಸುವವರು ಇದರಲ್ಲಿ ಒಂದು ದೃಷ್ಟಿಕೋನದಿಂದ ವಾದಿಸುತ್ತಾರೆ. ಮುಖ್ಯವಾಗಿ ಕೆಳವರ್ಗದವರು ಜಾತಿಯ ಅಸಮಾನತೆಯನ್ನು ಹೇಳಿದರೆ ಮೇಲ್ವರ್ಗದವರು ಜಾತಿಯ ಶ್ರೇಷ್ಠತೆಯನ್ನು ಹೇಳುತ್ತಾರೆ. ಸಾಮಾನ್ಯರು ವೈಯಕ್ತಿಕ ಅನುಭವಗಳನ್ನು ದಾಖಲಿಸುತ್ತಾರೆ. ಹಾಗಾದರೆ ಸತ್ಯ ಯಾವುದು ಮತ್ತು ಚರ್ಚೆ ಹೇಗೆ ಮಾಡಬೇಕು. ಎಲ್ಲಕ್ಕೂ ಒಂದಷ್ಟು ಒಳ್ಳೆಯ ಮತ್ತು ಕೆಟ್ಟ ಅಂಶಗಳು ಇದ್ದೇ ಇರುತ್ತವೆ ಮತ್ತು ಅದು ವ್ಯಕ್ತಿಯ ಮಾತು ಅಥವಾ ಅಕ್ಷರದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಆದರೆ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ನಾಗರಿಕ ಸಮಾಜದ ಲಕ್ಷಣಗಳ ಆಧಾರದ ಮೇಲೆ ಜಾತಿ ವ್ಯವಸ್ಥೆ ಅತ್ಯಂತ ಅಮಾನವೀಯ ಎಂಬುದು ಈ ಕ್ಷಣದ ವಾಸ್ತವ.

ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಮಿತಿಗಳನ್ನು ಅರಿತುಕೊಳ್ಳದೆ, ವಿಷಯಗಳ ಆಳಕ್ಕೆ ಹೋಗದೆ, ಸಮಗ್ರ ದೃಷ್ಟಿಕೋನದಿಂದ ಅದನ್ನು ವಿಮರ್ಶಿಸದೆ ಅವಕಾಶವಿದೆ ಮತ್ತು ವೇದಿಕೆ ಇದೆ ಎಂಬ ಒಂದೇ ಕಾರಣಕ್ಕೆ ಇದೇ ಸತ್ಯ ಎನ್ನುವಷ್ಟು ಖಚಿತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಭ್ರಮೆಗೆ ಒಳಗಾಗಿದ್ದಾರೆ.

ಇತಿಹಾಸವಿರಬಹುದು – ದೇಶದ ಆರ್ಥಿಕ ಸುಧಾರಣೆ ಇರಬಹುದು – ವಿದೇಶಾಂಗ ನೀತಿ ಇರಬಹುದು – ದೇವರು ಧರ್ಮಗಳ ವಿಚಾರವಿರಬಹುದು ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ವಿವೇಚನಾರಹಿತವಾಗಿ ಪ್ರತಿಕ್ರಿಯಿಸುವುದು ಕಂಡು ಬರುತ್ತಿದೆ. ಇದು ತಂತ್ರಜ್ಞಾನದ ವಿಕಾಸದ ಹಂತದಲ್ಲಿ ಬದಲಾವಣೆ ಆಗುವಾಗ ಸಹಜ ಕ್ರಿಯೆ ಎಂದು ಭಾವಿಸಬಹುದಾದರೂ ನಾವೆಲ್ಲರೂ ಇನ್ನು ಮುಂದೆ ಇನ್ನಷ್ಟು ಎಚ್ಚರಿಕೆ ಮತ್ತು ಪ್ರಜ್ಞಾಪೂರ್ವಕವಾಗಿ ಮಹಾತ್ಮರ ವಿನಯ ಎಂಬ ನಿಜ ಅರ್ಥದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಕಲೆಯನ್ನು ಬೆಳೆಸಿಕೊಳ್ಳೋಣ ಎಂದು ಆಶಿಸುತ್ತಾ….

ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,

ನಿಮ್ಮ ಮನದಾಳದಲ್ಲಿ ಅದ್ಬುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,

ನಿಮ್ಮ ಬರಹಗಳಲ್ಲಿ ಅತ್ಯುತ್ತಮ ಪದ ಲಾಲಿತ್ಯ, ಭಾಷೆಯ ಸೊಗಡು, ಸಾಹಿತ್ಯ ನಲಿದಾಡುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ,

ನಿಮ್ಮ ಪ್ರತಿಭೆ ಯಾವ ಪ್ರಕಾರದ ಕಲೆಯಲ್ಲಾದರೂ ಅರಳುತ್ತಿರಲಿ
ಸತ್ಯದ ಹುಡುಕಾಟ ನಿರಂತರವಾಗಿರಲಿ,

ನಿಮ್ಮ ಜ್ಞಾನದ ಮಟ್ಟ ತುಂಬಿ ಹರಿಯುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ‌…….

ಏಕೆಂದರೆ,
ಸತ್ಯ ಮಾತ್ರವೇ ಸೃಷ್ಟಿಯ , ಸಮಾಜದ ತಳಹದಿ,
ಸತ್ಯವೆಂಬುದೇ ಇದೆಲ್ಲದರ ಪ್ರತ್ಯಕ್ಷ ಪರೋಕ್ಷ ಶಕ್ತಿ,

ಸತ್ಯದ ಅಗ್ನಿ ಪರೀಕ್ಷೆಯಲ್ಲಿ ಇವು ಗೆದ್ದು ಬಂದಾಗ ಮಾತ್ರವೇ ಈ ಎಲ್ಲಾ ಸಾಧನೆಗಳಿಗೆ ಅರ್ಥ ಸಿಗುವುದು.

ನಿಮ್ಮ ಆತ್ಮಾವಲೋಕನದ ಮೂಲವೂ ಸತ್ಯವೇ ಆಗಿರಲಿ,

ಸತ್ಯದ ಹುಡುಕಾಟದ ವಿಫಲತೆಯೇ ಇಂದಿನ ಸಮಾಜದ ಬಹುತೇಕ
ಸಮಸ್ಯೆಗಳ ಮೂಲ.

ಅದು ರಾಜಕೀಯವಾಗಿರಲಿ, ಆಡಳಿತವಾಗಿರಲಿ, ಧಾರ್ಮಿಕವಾಗಿರಲಿ.

ಸುಳ್ಳಿನ ಬುದ್ಧಿವಂತಿಕೆಯ ಪ್ರದರ್ಶನ ಹೆಚ್ಚಾಗಿ ಆಚರಣೆಗೆ ಬಂದು
ಮನುಷ್ಯನ ಅಸ್ತಿತ್ವವೇ ಅನುಮಾನಕ್ಕೆ ಒಳಗಾಗಿದೆ.

ಆತನ ವ್ಯಕ್ತಿತ್ವದ
ವಿಶ್ವಾಸಾರ್ಹತೆಯೇ ಪ್ರಶ್ನಾರ್ಥಕವಾಗಿದೆ.

ಇಡೀ ಸಮಾಜ ವಾಸ್ತವಿಕ ಸತ್ಯ ಒಪ್ಪಿಕೊಂಡು ಮುಂದುವರೆದಲ್ಲಿ ,
ಖಂಡಿತವಾಗಿಯೂ ಈಗ ನಮ್ಮನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು
ತನ್ನಿಂದ ತಾನೇ ಮಾಯವಾಗುತ್ತವೆ.

ಎಲ್ಲರೂ ಸತ್ಯ ಹರಿಶ್ಚಂದ್ರರಂತೆ ಆಗದಿದ್ದರೂ
ಕನಿಷ್ಠ
ಅನವಶ್ಯಕ ಮತ್ತು ಅಪಾಯಕಾರಿ ಸುಳ್ಳುಗಳಿಂದ ದೂರವಿದ್ದರೂ ಸಾಕು,

ಅದೇ ನಮ್ಮ ವ್ಯಕ್ತಿತ್ವ ಉತ್ತಮಗೊಳ್ಳಲು ಮತ್ತು ಸಾಕಷ್ಟು ನೆಮ್ಮದಿಯ,
ಬದುಕಿಗೆ ಸಹಕಾರಿಯಾಗುತ್ತದೆ.

ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ.

ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

ಸಾರ್ವಕಾಲಿಕ ಸತ್ಯ, ತಾತ್ಕಾಲಿಕ ಸತ್ಯ, ಘಟನೆಯ ಸತ್ಯ,
ಸಾಂದರ್ಭಿಕ ಸತ್ಯ, ಅರಿವಿನ ಸತ್ಯ, ಊಹಾತ್ಮಕ ಸತ್ಯ, ವ್ಯಾವಹಾರಿಕ ಸತ್ಯ, ಭಕ್ತಿ ಭಾವಗಳ ಸತ್ಯ, ವೈಚಾರಿಕ ಸತ್ಯ, ಈ ಕ್ಷಣದ ಸತ್ಯ, ವಾಸ್ತವಿಕ ಸತ್ಯ…… ಹೀಗೆ ಸತ್ಯವೂ ಒಂದಷ್ಟು ರೂಪದಲ್ಲಿ ಸಿಗುತ್ತದೆ. ಸಮಗ್ರ ಚಿಂತನೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಟ ಪ್ರಥಮ್

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ನಟ ಪ್ರಥಮ್…

51 minutes ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ ಜಾಮೀನು ಮಂಜೂರು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ, ದೊಡ್ಡಬಳ್ಳಾಪುರ ಪ್ರಧಾನ ಸಿವಿಲ್ ನ್ಯಾಯಾಲಯದ ವತಿಯಿಂದ ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ…

1 hour ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಆರೋಪಿಗಳಾದ ಯಶಸ್ವಿನಿ, ಬೇಕರಿ ರಘು ದೊಡ್ಡಬಳ್ಳಾಪುರ ಕೋರ್ಟ್ ಗೆ ಶರಣು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು…

6 hours ago

ನಮ್ಮ ನಿಷ್ಠೆ ಪ್ರಕೃತಿಯೆಡೆಗೆ ಇರಲಿ……..

ನಮ್ಮ ನಿಷ್ಠೆ ಪ್ರಕೃತಿಗೆ....... ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ...... ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು.......…

9 hours ago

ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ಸಿಎಂ ಸಭೆ: ಸಭೆಯ ಪ್ರಮುಖಾಂಶಗಳು ಇಲ್ಲಿವೆ ಓದಿ…

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ನಡೆಸಿದ ಸಭೆಯಲ್ಲಿ…

20 hours ago

ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರಾಗಿ ಪುಷ್ಪಲತಾ ಆಯ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಗ್ರಾಮದ ಪುಷ್ಪಲತಾ ಸೋಮಶೇಖರ್ ರವರನ್ನು ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರನ್ನಾಗಿ…

1 day ago