Categories: ಲೇಖನ

ಹಸಿವಿನ ಔಷಧಿ ಮತ್ತು ಮತದಾನ…..

ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ……
ಒಬ್ಬ ಬಾಲಕ ಡಾಕ್ಟರ್ ಬಳಿ ” ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ ” ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತಾರೆ…..

ಡಾಕ್ಟರ್ ಅಷ್ಟೇ ಏಕೆ ಮಾನವೀಯ ಕಾಳಜಿಯ ಪ್ರತಿಯೊಬ್ಬರ ಮನಕಲಕುವ ದೃಶ್ಯವಿದು. ಗಾಳಿ ನೀರಿನ ನಂತರ ಅತ್ಯವಶ್ಯಕ ಅಂಶ ಆಹಾರ.

ಆತ ರಾಜನಾಗಿರಲಿ, ಯೋಗಿಯಾಗಿರಲಿ, ಭಿಕ್ಷುಕನಾಗಿರಲಿ, ಕಳ್ಳನೋ, ಸುಳ್ಳನೋ ಊಟ ಮಾತ್ರ ಬೇಕೇ ಬೇಕು.

ಸುಡಾನ್, ಇಥೋಪಿಯಾ, ಸಿರಿಯಾ ಇತ್ಯಾದಿ ಗಲಭೆಗ್ರಸ್ತ, ಅತ್ಯಂತ ಹಿಂದುಳಿದ, ಆಡಳಿತ ವ್ಯವಸ್ಥೆ ಕುಸಿದು ಬಿದ್ದಿರುವ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ಊಹಿಸಿಕೊಳ್ಳಬಹುದು. ಅದು ವಿಷಾದಕರ. ಆದರೆ ಭಾರತದಂತಹ ಅತ್ಯಂತ ಸಂಪದ್ಭರಿತ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವ ದೇಶದಲ್ಲಿ ಈ ಸ್ಥಿತಿ ಮುಂದುವರೆದಿರುವುದು ನಿಜಕ್ಕೂ ನಾಚಿಕೆಗೇಡು.

ಹೌದು, ಈಗಿನ ನಗರ ಕೇಂದ್ರೀತ 1990 ರ ನಂತರ ಹುಟ್ಟಿದ ಬಹುತೇಕ ಯುವಜನತೆಗೆ ಹಸಿವಿನ ಅನುಭವ ಅಷ್ಟಾಗಿ ಕಾಡಿರುವುದಿಲ್ಲ. ಆದರೆ ಈ ಕ್ಷಣಕ್ಕೂ ದಿನನಿತ್ಯದ ಊಟಕ್ಕಾಗಿ ಪರಿತಪ್ಪಿಸುತ್ತಿರುವ ಲಕ್ಷಾಂತರ ಕುಟುಂಬಗಳು ನಮ್ಮ ಸಮಾಜದಲ್ಲಿ ನಮ್ಮ ನಡುವೆಯೇ ವಾಸಿಸುತ್ತಿವೆ.

ಇನ್ನೊಂದು ವಿಷಯ ಗಮನವಿರಲಿ. ಅವರು ಕಷ್ಟ ಪಡುತ್ತಿರುವುದು ಪೌಷ್ಟಿಕ ಆಹಾರಕ್ಕಾಗಿ ಅಲ್ಲ. ಹೊಟ್ಟೆ ತುಂಬಿಸಿ ಕೊಳ್ಳಲು ಸಿಕ್ಕ ಸಿಕ್ಕ ಆಹಾರ ತಿನ್ನಲು. ಅನ್ನ,ಮುದ್ದೆ, ರೊಟ್ಟಿಗಾಗಿ. ಅವರಿಗೆ ನಿಮ್ಮ ಸಂವಿಧಾನ, , SMART CITY, FDI, GLOBAL LEADER, BULLET TRAIN, ಆಧ್ಯಾತ್ಮ , 4G, 5G ಏನೂ ಗೊತ್ತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ.

ಆದರೆ ಅಂತಹ ಜನರ ಒಳಿತಿಗಾಗಿ ಸರ್ಕಾರಗಳು ಕೋಟ್ಯಾಂತರ ಹಣ ಖರ್ಚುಮಾಡುತ್ತಿವೆ. ನನ್ನ ಅಂದಾಜಿನ ಪ್ರಕಾರ ಅಷ್ಟು ಹಣ ನಿಜವಾಗಿ ಆ ಜನರಿಗೆ ತಲುಪಿದ್ದಿದ್ದರೆ ಅವರೂ ಇಷ್ಟು ಹೊತ್ತಿಗೆ ನಮ್ಮ ನಿಮ್ಮಂತೆ 5G ಗಳೊಂದಿಗೆ FACEBOOK , WATSAPP ಗಳಲ್ಲಿ ಸಂತೋಷ ದಿಂದ CHATTING ಮಾಡಿಕೊಂಡಿರುತ್ತಿದ್ದರು.

ಹಾಗಾದರೆ ನಾವು ದಾರಿ ತಪ್ಪಿದ್ದು ಎಲ್ಲಿ.?

ಮುಖ್ಯವಾಗಿ ಆಡಳಿತ ಮತ್ತು ಅಧಿಕಾರ ಶಾಹಿಯ ನಿರ್ಲಜ್ಜ ಭ್ರಷ್ಟತನ ಜೊತೆಗೆ ನಮ್ಮ ನಿಮ್ಮೆಲ್ಲರ ಸ್ವಾರ್ಥ, ಉಢಾಪೆ ವರ್ತನೆ.

ನನ್ನನ್ನೂ ಸೇರಿದಂತೆ ನಾವೆಲ್ಲಾ ವ್ಯವಸ್ಥೆಯನ್ನು ಬಹಳಷ್ಟು ಟೀಕಿಸುತ್ತೇವೆ. ಹಾಗೆಯೇ ಏನೂ ಮಾಡಲಾಗದ ಅಸಹಾಯಕತೆಯನ್ನೂ ವ್ಯಕ್ತಪಡಿಸುತ್ತೇವೆ.ಇದಕ್ಕೂ ಕಾರಣವಿದೆ.

ಇಡೀ ಸಮಾಜ ಹಣ ಅಧಿಕಾರವೆಂಬ ಭ್ರಮೆಯ ಹಿಂದೆ ಬಿದ್ದು “ಹೇಗೋ ನಡೆಯುತ್ತದೆ “ಎಂಬ ಉದಾಸೀನತೆಗೆ ಬಲಿಬಿದ್ದು ಶೇಕಡ 95% ರಷ್ಟು ಜನರು ಅದನ್ನೇ ಪಾಲಿಸುತ್ತಿದ್ದಾರೆ.

ಮತದಾನ ಪವಿತ್ರ ಕರ್ತವ್ಯ ಎಂಬ ಭ್ರಮೆಯ ಸುತ್ತಾ…………

” ಪ್ರಜಾಪ್ರಭುತ್ವ ಉಳಿಯುವುದು ಮತದಾರನ ಮತದಾನದಿಂದ ಅಲ್ಲ, ಅವರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ದಕ್ಷತೆ ಹಾಗು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ”
ಹೌದು ಮತದಾನ ಚುನಾವಣಾ ಪ್ರಕ್ರಿಯೆಯ ಒಂದು ಮುಖ್ಯ ಭಾಗ ಎಂಬುದು ನಿಜ. ಮತದಾರರು ತಮ್ಮ ಪ್ರತಿನಿಧಿಯನ್ನು ತಮ್ಮ ಮತದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೇ ಆಯ್ಕೆಯಾದರು ಅವರು ಅವರ ಇಷ್ಟದಂತೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಮತ್ತು ಆಯ್ಕೆಯಾದ ವ್ಯಕ್ತಿಗೆ ಆ ಕ್ಷೇತ್ರವನ್ನು ಗುತ್ತಿಗೆ ನೀಡಿದಂತೆ ಆಗುವುದಿಲ್ಲ. ಆತನು ಸಹ ಸಂವಿಧಾನಾತ್ಮಕ ನಿಯಮಾವಳಿಗಳ ಪ್ರಕಾರವೇ ಆಡಳಿತ ನಡೆಸಬೇಕು…

ಭಾರತದಲ್ಲಿ ಇರುವುದು ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ. ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಒಂದು ವೇಳೆ ಚುನಾವಣೆಯಲ್ಲಿ A or B or C or D……. ಯಾರೇ ಆಯ್ಕೆಯಾಗಲಿ ನೀತಿ ನಿಯಮಗಳಿಗೆ ಹೊರತಾಗಿ ಅಂತಹ ದೊಡ್ಡ ವ್ಯತ್ಯಾಸ ಆಗಬಾರದು. ಕಾನೂನಿನ ಅಡಿಯಲ್ಲಿಯೇ ಎಲ್ಲರೂ ಕಾರ್ಯನಿರ್ವಹಿಸಬೇಕು.

ಆದರೆ ವಾಸ್ತವದ ಚಿತ್ರಣವೇ ಬೇರೆ. ಇಲ್ಲಿ ಆಯ್ಕೆಯಾದವರನ್ನು ಭ್ರಷ್ಟರು ಅಥವಾ ಪ್ರಾಮಾಣಿಕರು ಎಂದು ವಿಂಗಡಿಸಲಾಗುತ್ತದೆ. ಬಹುತೇಕರು ಭ್ರಷ್ಟರು ಮತ್ತು ಕೆಲವೇ ಬೆರಳೆಣಿಕೆಯಷ್ಟು ಪ್ರಾಮಾಣಿಕರು ಇದ್ದಾರೆ ಎಂದು ಹೇಳಲಾಗುತ್ತದೆ.

ಹಾಗಾದರೆ ಒಬ್ಬ ಜನ ಪ್ರತಿನಿಧಿ ಭ್ರಷ್ಟ ಎಂದು ಹೇಳಿದ ನಂತರವೂ ಆತ ಹೇಗೆ ಇನ್ನೂ ಕಾರ್ಯನಿರ್ವಹಿಸುತ್ತಾನೆ ಎಂಬ ಪ್ರಶ್ನೆ ಏಳುತ್ತದೆ. ಭ್ರಷ್ಟರು ಅವರು ಯಾವ ಪಕ್ಷದವರೇ ಆಗಿರಲಿ ಭ್ರಷ್ಟಾಚಾರ ಮಾಡಿದ ಮೇಲೆ ಜೈಲಿಗೆ ಹೋಗಬೇಕಲ್ಲವೇ……

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಗೆದ್ದ ಅಭ್ಯರ್ಥಿಯ ಅಭಿಮಾನಿಗಳು ಅಥವಾ ಆಯಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ‌ ಸಂಭ್ರಮಿಸುವುದನ್ನು ನೋಡಿದಾಗ ಭ್ರಷ್ಟಾಚಾರದ ಮೂಲ ಬೇರುಗಳನ್ನು ಗುರುತಿಸಬಹುದು. ಗೆದ್ದ ವ್ಯಕ್ತಿ ನಮ್ಮ ಸ್ನೇಹಿತರೋ ಪರಿಚಿತರೋ ಆಗಿದ್ದರೆ ಆತ ನಮಗೆ ಲಾಭ ಮಾಡಿ ಕೊಡುತ್ತಾನೆ ಮತ್ತು ಆತನೂ ಲಾಭ ಮಾಡಿಕೊಳ್ಳುತ್ತಾನೆ ಎಂಬುದು ಬಹಿರಂಗ ಸತ್ಯವಾಗಿರುವಾಗ ಪ್ರಜಾಪ್ರಭುತ್ವ ಮತ್ತು ಕಾನೂನು ಒಂದು ರೀತಿಯ ಅಣಕು ವ್ಯವಸ್ಥೆ ಎಂದೆನಿಸುತ್ತದೆ.

ಕಳ್ಳನೊಬ್ಬ ದರೋಡೆ ಮಾಡಲು ಸನ್ಯಾಸಿಯ ವೇಷ ಧರಿಸುವುದು, ಅದು ತಿಳಿದಿದ್ದರು ಮನೆಯ ಒಡೆಯ ಅವನಿಗೆ ಮಂಗಳಾರತಿ ಮಾಡಿ ಮನೆಗೆ ಸ್ವಾಗತಿಸುವುದು, ಕಳ್ಳ ಕಳ್ಳತನದ ಹಣವನ್ನು ನಮಗೆ ನೀಡಿತ್ತಾನೆ ಎಂದು ಮನೆ ಒಡೆಯ ನಿರೀಕ್ಷಿಸುವುದು, ನಂತರ ಕಳ್ಳ ಸ್ವಲ್ಪ ಹಣ ಕೊಟ್ಟಂತೆ ಮಾಡಿ ಕೊನೆಗೆ ಇಡೀ ಮನೆಯನ್ನು ದೋಚಿಕೊಂಡು ಹೋಗುವುದು, ಇದು ಅರ್ಥವಾದ ಮೇಲೆ ಮನೆಯ ಒಡೆಯ ಬಾಯಿ ಬಾಯಿ ಬಡಿದುಕೊಂಡು ರೋಧಿಸುವುದು ಎಲ್ಲವೂ ಒಂದು ನಾಟಕದಂತೆ ಕಾಣುತ್ತಿದೆ. ನಾವು ನೀವು ಈ ನಾಟಕದ ಪ್ರೇಕ್ಷಕರು……

ಯಾರದೋ ಸುಖಕ್ಕೆ, ಸಾಧನೆಗೆ, ಯಶಸ್ಸಿಗೆ ಇಡೀ ಮತದಾರರು ಮತದಾನ ಪವಿತ್ರ, ಅದು ನಮ್ಮ ಕರ್ತವ್ಯ, ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದೇ ಮತದಾನದ ಮೂಲಕ ಎಂಬ ಭ್ರಮೆಗೆ ಒಳಗಾಗಿ ಮತದಾನ ಮಾಡುವುದು ಕೊನೆಗೆ ಭ್ರಷ್ಟ ವ್ಯವಸ್ಥೆಯಲ್ಲಿ ಸಿಕ್ಕಿ ನರಳುವುದು. ಗೆದ್ದ ವ್ಯಕ್ತಿ ಖಾಜಾನೆ ಲೂಟಿ ಮಾಡಲು ಮತದಾರರೇ ಸ್ವಾಗತ ಕೋರಿ ಪಟಾಕಿ ಸಿಡಿಸುವುದು, ಎಂತಹ ವಿಪರ್ಯಾಸ.

ಗೆಳೆಯ ಗೆಳತಿಯರೆ,
ದಯವಿಟ್ಟು ಅರ್ಥಮಾಡಿಕೊಳ್ಳಿ, ಜನ ಪ್ರತಿನಿಧಿ ಎಂಬುವವನು ಒಡೆಯನಲ್ಲ ಒಬ್ಬ ಸೇವಕ. ಗೆಲುವು ಸಾಧನೆಯಲ್ಲ ಅದು ಜವಾಬ್ದಾರಿ ಮತ್ತು ಕರ್ತವ್ಯ. ಇಡೀ ಕ್ಷೇತ್ರದ ಜನ ಒಟ್ಟಾಗಿ ಯಾವುದೇ ಕೆಲಸ ಅಥವಾ ತೀರ್ಮಾನ ಮಾಡುವುದು ಕಷ್ಟ ಮತ್ತು ಸಮಯ ವ್ಯರ್ಥ ಎಂಬ ಕಾರಣಕ್ಕಾಗಿ ಚುನಾವಣೆಯ ಮುಖಾಂತರ ಕೇವಲ ಒಬ್ಬನನ್ನು ನಮ್ಮ ಪ್ರತಿನಿಧಿಯಾಗಿ ಕಳುಹಿಸುತ್ತೇವೆ ಅಷ್ಟೇ.
ಆತನೂ ಸಹ ತನಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸಲು‌ ಸಾಧ್ಯವಿಲ್ಲ. ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಇಷ್ಟು ಸರಳ ವಿಷಯ ಅರಿಯದೆ ಚುನಾವಣೆ ಎಂಬುದು ಒಂದು ದೊಡ್ಡ ಯುದ್ಧ, ಗೆಲುವು ಒಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ನಮ್ಮನ್ನು ವಂಚಿಸಲಾಗುತ್ತಿದೆ. ಬಡತನ, ಮೌಡ್ಯ, ಶಾಲೆಗೆ ಫೀಜು ಕಟ್ಟಲು ಆಗದ ಒದ್ದಾಟ, ಅಸಹಾಯಕತೆ, ಅಪೌಷ್ಟಿಕತೆಯಿಂದ ಬಹಳಷ್ಟು ಜನ ನರಳುತ್ತಾ ಜೀವ ಬಿಡುತ್ತಿರುವಾಗ ಅದರ ನಿವಾರಣೆಗೆ ಶ್ರಮಿಸದೆ, ನಾಚಿಕೆ ಇಲ್ಲದೆ ಚುನಾವಣೆ ಗೆದ್ದ ಅಭ್ಯರ್ಥಿ ಪರವಾಗಿ ಪಟಾಕಿ ಹೊಡೆಯುವ ಮನೋಭಾವ ಅತ್ಯಂತ ಹೇಯ.

ಈಗಲಾದರೂ ಎಚ್ಚೆತ್ತುಕೊಳ್ಳಿ. ಕನಿಷ್ಠ ಒಂದು ಒಳ್ಳೆಯ ಸಾಮೂಹಿಕ ಪ್ರಜ್ಞೆ ಬೆಳೆಸಿಕೊಂಡು ನೀವೇ ಈ ಪಕ್ಷಗಳು ಹೇರುವ ಭ್ರಷ್ಟ ಅಭ್ಯರ್ಥಿಗಳನ್ನು ‌ತಿರಸ್ಕರಿಸಿ ನಿಮ್ಮದೇ ಕ್ಷೇತ್ರದ ಒಬ್ಬ ಸ್ಥಳೀಯ ದಕ್ಷ ಪ್ರಾಮಾಣಿಕ ವ್ಯಕಿಯನ್ನು ಗುರುತಿಸಿ ಆತನನ್ನು ಪ್ರತಿನಿಧಿಯಾಗಿ ಆರಿಸಿಕೊಳ್ಳಿ. ಆಗಲಾದರು ಕನಿಷ್ಠ ಮಟ್ಟದ ಬದಲಾವಣೆ ಆಗಬಹುದು.
ಸಂವಿಧಾನದ ಮೂಲ ಆಶಯದ ಹತ್ತಿರಕ್ಕೆ ಹೋಗಬಹುದು. ಪ್ರಾಮಾಣಿಕರಿಗೆ ಚುನಾವಣೆಯಲ್ಲಿ ಜಯ ಸಿಕ್ಕರೆ ಮುಂದೆ ಇದೇ ಎಲ್ಲಾ ಕಡೆಯು ಹರಡಿ ಒಳ್ಳೆಯ ಭ್ರಷ್ಟಾಚಾರ ರಹಿತ ಆಡಳಿತ ಸಿಗಬಹುದು.
ದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ಒಮ್ಮೆ ಯೋಚಿಸಿ ನೋಡಿ…………..

ಚಿಂತನೆ, ಬದಲಾವಣೆ ಮಾಡುವ ಮನಸ್ಸುಗಳು ಅತಿ ಕಡಿಮೆ ಹಾಗು ಒಗ್ಗಟ್ಟಾಗುವುದಿಲ್ಲ. ಒಂದು ವೇಳೆ ಮತ ಹಾಕುವ ಜನರು ಅದೃಷ್ಟವಶಾತ್ ಒಂದಾಗಿ ವಿವೇಚನೆಯಿಂದ ವರ್ತಿಸಿದ್ದೇ ಆದರೆ ಈ ರೀತಿಯ ನೋವಿನ ಚಿತ್ರಗಳನ್ನು ನೀವು ಎಂದೆಂದಿಗೂ ಭಾರತದಲ್ಲಿ ನೋಡುವ ಸಾಧ್ಯತೆಯೇ ಇಲ್ಲ. ಹೆಣ ಸಾಗಿಸಲು ವಾಹನ ಸಿಗದಿರುವ ಸ್ಥಿತಿ ಬರುವುದೇ ಇಲ್ಲ.

ನಾವು ಬದುಕಿರುವ ಸಂದರ್ಭದಲ್ಲಿಯೇ ಹಸಿವು ಮುಕ್ತ ರಾಷ್ಟ್ರ ನಮ್ಮದಾಗಲಿ.

ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಪರಿವರ್ತನೆ ಆದಲ್ಲಿ ಮಾತ್ರ ಇದು ಸಾಧ್ಯ. ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬೆಳೆ ವಿಮೆ ಮಾಡಿಸಲು ಆ.14 ಕೊನೆಯ ದಿನ: ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿ- ಸಚಿವ ಕೆ.ಎಚ್ ಮುನಿಯಪ್ಪ

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇಕಡ 33 ರಷ್ಟು ಮಳೆ ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ…

2 hours ago

ಬರದ ನಡುವೆಯೂ ರಾಗಿ ರೈತರಿಗೆ ಆಸರೆ: ಫಸಲ್ ಬಿಮಾ ಪ್ರೀಮಿಯಂ ಭರಿಸುವುದಾಗಿ ಶಾಸಕ ಧೀರಜ್ ಮುನಿರಾಜ್ ಘೋಷಣೆ

ದೊಡ್ಡಬಳ್ಳಾಪುರ: ಸಮರ್ಪಕ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ದೊಡ್ಡಬಳ್ಳಾಪುರ ಕ್ಷೇತ್ರದ ರೈತರಿಗೆ ನೆರವಾಗುವ ಉದ್ದೇಶದಿಂದ, ಕ್ಷೇತ್ರದ ಪ್ರಮುಖ ಬೆಳೆಯಾದ…

4 hours ago

ಕೋಳಿ ವಿಚಾರದ ಜಗಳಕ್ಕೆ ಹೊಸ ಟ್ವಿಸ್ಟ್: ಎರಡೂ ಕಡೆಯಿಂದ ಹಲ್ಲೆ ಆರೋಪ, ಆಸ್ಪತ್ರೆಯಲ್ಲೂ ಗಲಾಟೆ

ಗೌರಿಬಿದನೂರು: ಕೋಳಿ ವಿಚಾರವಾಗಿ ಆರಂಭವಾದ ನೆರೆಹೊರೆಯವರ ನಡುವಿನ ಜಗಳ ಗಂಭೀರ ಸ್ವರೂಪ ಪಡೆದು, ಸಾರ್ವಜನಿಕ ಆಸ್ಪತ್ರೆಯೊಳಗೂ ಗಲಾಟೆ ನಡೆದ ಘಟನೆ…

6 hours ago

” ಕ್ಷಮೆ” ಎಂಬ ಭಾವದ ಸುತ್ತ……

ಕನ್ನಡದ ಖ್ಯಾತ, ಪ್ರತಿಭಾವಂತ ಚಲನಚಿತ್ರ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತನಾಗ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೆಹಲಿಯ…

14 hours ago

ವೃದ್ಧ ದಂಪತಿ ಆತ್ನಹತ್ಯೆಗೆ ಯತ್ನ: ಪತಿ ಶಿವಪ್ಪ ಸಾವು

ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಗ್ರಾಮದ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಶಿವಪ್ಪ(76) ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ…

24 hours ago

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಯತ್ನ

ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಚಿನ್ನಾಭರಣ ದರೋಡೆಗೆ…

1 day ago