ಅಂತರ್ಜಲ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ: ಒಂದು ತಿಂಗಳಲ್ಲಿ 1.15 ಮೀ. ನೀರಿನ ಮಟ್ಟ ಕುಸಿತ: ಬೋರ್‌ವೆಲ್‌ಗಳಲ್ಲಿ ಬರಿದಾದ ನೀರು: ರೈತ ಕಂಗಾಲು

ದೊಡ್ಡಬಳ್ಳಾಪುರದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೆ ಹೆಚ್ಚುತ್ತಿದೆ‌. ಈ ಹಿನ್ನೆಲೆ ತೀವ್ರ ಜಲಕ್ಷಾಮದ ಕಾರ್ಮೋಡ ಆವರಿಸಿದಂತಿದೆ‌. ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬೇಸಿಗೆಯ ತಾಪಮಾನ ಅಂತರ್ಜಲದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ.

ಕೆಲ ರೈತರು ನೀರಾವರಿಯನ್ನೇ ನಂಬಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದಿರುತ್ತಾರೆ. ಆದರೆ, ಬೇಸಿಗೆ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳೆಲ್ಲಾ ಬರಿದಾಗುತ್ತಿದ್ದು, ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತಿದೆ.

ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ರೈತರು ತಮ್ಮ ತೋಟಗಳಲ್ಲಿ ಕೊರೆಸಿರುವ ಸುಮಾರು 5-6 ಬೋರ್‌ವೆಲ್‌ಗಳು ಬರಿದಾಗಿವೆ. ಬೆಳೆಗಳಿಗೆ ನೀರು ಇಲ್ಲದೇ ಬೆಳೆಗಳು ಒಣಗುತ್ತಿವೆ. ಈ ಹಿನ್ನೆಲೆ ಬೆಳೆಗಳಿಗೆ ನೀರು ಹಾಯಿಸಲಾಗದೆ ಬೆಳೆ ಸಹಿತ ತೋಟಗಳನ್ನೇ ಉಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಯನ್ನೇ ನಂಬಿರುವ ರೈತರು ಸಾಕಷ್ಟು ಸಂಕಷ್ಟಕ್ಕೊಳಗಾಗುತ್ತಿದ್ದಾರೆ.

ರೈತರು ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ಮುಂದಾಗುತ್ತಿದ್ದಾರೆ. ಇನ್ನೂ ಕೆಲವರು ಬೇಸಿಗೆಯಲ್ಲಿ ಬೆಳೆಗಳ ಸಹವಾಸವೇ ಬೇಡ ಎಂದು ಇಟ್ಟಿದ್ದ ಬೆಳೆಗಳನ್ನು ನೀರಿಲ್ಲದೇ ಫಸಲು ಬರುವ ಮೊದಲೇ ನಾಶ ಮಾಡುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

10 ಎಕರೆಯಲ್ಲಿ 6 ಎಕರೆ ಅಡಿಕೆ, 2 ಎಕರೆ ರೇಷ್ಮೆ, 2 ಎಕರೆ ಸುಗಂಧರಾಜ, ಮಿಕ್ಕುಳಿದ ಭೂಮಿಯಲ್ಲಿ ರಾಗಿ ಬೆಳೆದಿದ್ದೇವು. ಇದೀಗ ಬೋರ್‌ವೆಲ್‌ನಲ್ಲಿ ಬರುತ್ತಿದ್ದ ನೀರು ನಿಂತು ಹೋಗಿದೆ. ಫಸಲಿಗೆ ಬಂದಿದ್ದ ಬೆಳೆ ಬಾಡುತ್ತಿದೆ. ಇದರಿಂದ ನಮಗೆ ಲಕ್ಷಾಂತರ ರೂ. ನಷ್ಟವಾಗಿದೆ. ಇದನ್ನು ಸರ್ಕಾರ ಮನಗಂಡು ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೊಟ್ಟಿಗೆಮಾಚೇನಹಳ್ಳಿ ರೈತ ಲಕ್ಷ್ಮಿ ನಾರಾಯಣಪ್ಪ ಮನವಿ ಮಾಡಿದರು.

ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳ ವೇಳೆಗೆ ಅಂತರ್ಜಲ ಮತ್ತಷ್ಟು ಕುಸಿತ ಕಂಡಿದ್ದು, ಬೇಸಿಗೆ ಬಿಸಿಲ ತಾಪ ಏರಿಕೆಯಾದರೆ ಮತ್ತಷ್ಟು ಇಳಕೆಯಾಗುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ

ರಾಜ್ಯದಲ್ಲಿಯೇ ಬೇಸಿಗೆ ತಾಪ ಏರಿಕೆಯಾಗುತ್ತಿದೆ. ಅದರಂತೆ ಗ್ರಾಮಾಂತರ ಜಿಲ್ಲೆಯಲ್ಲೂ ಇದರ ಎಫೆಕ್ಟ್ ಗೆ ಅಂತರ್ಜಲದ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ದೇವನಹಳ್ಳಿಯಲ್ಲಿ 0.46ಮೀ, ದೊಡ್ಡಬಳ್ಳಾಪುರದಲ್ಲಿ 0.55ಮೀ, ಹೊಸಕೋಟೆಯಲ್ಲಿ 1.81ಮೀ, ನೆಲಮಂಗಲದಲ್ಲಿ 0.31ಮೀ. ಕುಸಿತ ಕಂಡಿದ್ದು, ಒಟ್ಟು ಜಿಲ್ಲೆಯಲ್ಲಿ 0.78ಮೀ ಅಂತರ್ಜಲ ಮಟ್ಟ ಕುಸಿತ ಕಂಡುಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಂತರ್ಜಲ ಮಟ್ಟ ಕಾಪಾಡಿಕೊಳ್ಳಲು ಅಟಲ್ ಭೂಜಲ ಯೋಜನೆಯ ಮೂಲಕ ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗಿದೆ.

ಆದರೆ ಜಿಲ್ಲೆಯಲ್ಲಿ ಮಳೆ ಕೊಯ್ಲು ಪದ್ದತಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಇದರಿಂದ ಮಳೆಕೊಯ್ಲು ಪದ್ದತಿ ಅಳವಡಿಕೆಯ ಮೂಲಕ ನೀರಿನ ಸಂರಕ್ಷಣೆಗೆ ಒತ್ತು ನೀಡುವ ಕೆಲಸವಾಗಬೇಕಿದೆ. ಇನ್ನೂ ಕೆರೆಗಳು ಕೂಡ ಬಹುತೇಕ ಖಾಲಿಯಾಗಿದ್ದು, ಅಂತರ್ಜಲದ ಮೇಲೆ ಪರಿಣಾಮ ಬೀರಿದೆ.

ಅಂತರ್ಜಲದಲ್ಲಿ ವ್ಯತ್ಯಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳ ವೇಳೆಗೆ ಅಂತರ್ಜಲ ಮಟ್ಟ ಮತ್ತಷ್ಟು ಕುಸಿತ ಕಂಡಿದೆ. ನೀರಿನ ಬಳಕೆಯೂ ಹೆಚ್ಚಾದ ಹಿನ್ನಲೆ ಬೋರ್‌ವೆಲ್‌ಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಇದರಿಂದ ಅಂತರ್ಜಲ ಮಟ್ಟದ ಇಳಿಕೆ ಕಂಡುಬಂದಿದೆ. ಅದರಲ್ಲೂ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಕ್ರಮವಾಗಿ 1.89ಮೀ ಮತ್ತು 1.98 ಮೀ. ಅಂತರ್ಜಲ ಮಟ್ಟ ಇಳಿಕೆಯಾಗಿದೆ. ಇನ್ನೂ ದೇವನಹಳ್ಳಿಯಲ್ಲಿ 0.73 ಮೀ ನಷ್ಟು ಕಡಿಮೆಯಾಗಿದ್ದರೆ, ನೆಲಮಂಗಲದಲ್ಲಿ 0.02ಮೀ. ನಷ್ಟು ಮಾತ್ರ ಕಡಿಮೆಯಾಗಿದ್ದು, ಒಟ್ಟು 1.15ಮೀ. ನಷ್ಟು ಅಂತರ್ಜಲ ಕುಸಿತವಾಗಿದೆ. ಇನ್ನೂ ಎರಡು ತಿಂಗಳ ಕಾಲ ಮಳೆಯಾಗದಿದ್ದರೆ ಮತ್ತಷ್ಟು ನೀರಿನ ಪ್ರಮಾಣದಲ್ಲಿ ಕುಸಿತವಾಗಿದೆ.

ಅಂತರ್ಜಲದ ವಿವರ (ನೆಲಮಟ್ಟದಿಂದ ಮೀಟರ್‌ನಲ್ಲಿ)

ತಾಲೂಕು      ಫೆ.2026     ಮಾ.2026

ದೇವನಹಳ್ಳಿ      20.18       20.91

ದೊಡ್ಡಬಳ್ಳಾಪುರ   22.00       23.89

ಹೊಸಕೋಟೆ     16.29        18.27

ನೆಲಮಂಗಲ     36.98     37.00

ಸರಾಸರಿ        23.87        24.77

ಮಳೆನೀರಿನ ಕೊಯ್ಲಿಗಿಲ್ಲ ಆದ್ಯತೆ

ಜಿಲ್ಲೆಯಲ್ಲಿ ಸದ್ಯ 700 ರಿಂದ 1200 ಅಡಿಗಳಷ್ಟರಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನ ಅಭಾವ ಕೂಡ ಕಾಡುತ್ತದೆ. ಆದರೆ ಜಿಲ್ಲೆಯಲ್ಲಿ ಮಳೆನೀರಿ ಕೊಯ್ಲು ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಬೇಕಿದೆ. ಕೈಗಾರಿಕೆಗಳಿಗೆ ಎನ್‌ಒಸಿ ಪಡೆಯಲು ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ದತಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಉಳಿದಂತೆ ಸರಕಾರಿ ಕಚೇರಿಗಳಲ್ಲಿ, ಅರ್ಪಾಟ್ಮೆಂಟ್‌ಗಳು, ಮನೆಗಳಲಿ, ರೈತರ ಜಮೀನುಗಳಲ್ಲಿ ಮಳೆ ನೀರಿನ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ಬೋರ್‌ವೆಲ್‌ಗಳನ್ನು ಕೊರೆಸಿ ಲಾಭಕ್ಕಾಗಿ ಮಾತ್ರ ಕೆಲಸವಾಗುತ್ತಿದ್ದು, ನೀರಿನ ಸಂರಕ್ಷಣೆಯ ಬಗ್ಗೆ ಮಾತ್ರ ಯಾರು ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಅಂತರ್ಜಲದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತೆ ಮಾಡಿದ್ದು, ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ.

ಪುನರ್ ಬಳಕೆಗಿಲ್ಲ ಆದ್ಯತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ ಅನೇಕ ಕಡೆಗಳಲ್ಲಿ ಅವಕಾಶವಿದ್ದರೂ ಕೂಡ ನೀರಿನ ಪುನರ್‌ಬಳಕೆಯಾಗುತ್ತಿಲ್ಲ. ಕೈಗಾರಿಕೆಗಳಲ್ಲಿ ಮಾತ್ರ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಉಳಿದಂತೆ ಈ ಕೆಲಸವಾಗಿಲ್ಲ.ಈಗಾಗಲೇ ಜಿಲ್ಲೆಯ ಕೆರೆಗಳು ಖಾಲಿಯಾಗಿದ್ದು, ಮುಂಗಾರಿಗೆ ನೀರು ತುಂಬಿಕೊಳ್ಳಲು ಕೂಡ ಕೆರೆಗಳ ಅಭಿವೃದ್ದಿ ಮಾಡಲು ಯಾರು ಮುಂದಾಗದೇ ಇರುವುದು ವಿಪರ್ಯಾಸ.

Ramesh Babu

Journalist

Recent Posts

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

4 hours ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

4 hours ago

ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಮಹಿಳೆಯರು, ಮಗು ಬಲಿ

ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು…

10 hours ago

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

3 days ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

3 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

3 days ago