Categories: ಲೇಖನ

ಮೂರನೇ ಮ‌ಹಾಯುದ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ……?

ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗೆ ಅದಕ್ಕೆ ತಾಳೆಯಾಗುತ್ತದೆ ಜೊತೆಗೆ ಕೆಲವು ಸನ್ನಿವೇಶಗಳು ಸಂಪೂರ್ಣ ಭಿನ್ನವೂ ಆಗಿದೆ…….

ಎರಡೂ ಮಹಾ ಯುದ್ಧಗಳ ಕೇಂದ್ರ ಬಿಂದು ಯೂರೋಪ್ ಖಂಡವೇ ಆದರೂ ಜೊತೆಗೆ ಎರಡೂ ಮಹಾ ಯುದ್ಧಗಳ ಕೊನೆಯ ಹಂತದಲ್ಲಿ ಅಮೆರಿಕ ಪ್ರವೇಶ ಮಾಡಿರುವುದು, ತದನಂತರ ಅನಾಹುತಗಳಾದ ಮೇಲೆ ಯುದ್ಧ ಕೆಲವು ಒಪ್ಪಂದಗಳೊಂದಿಗೆ ಮುಕ್ತಾಯವಾಗಿದೆ……

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿಯೇ ಅಮೆರಿಕ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಿ, ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ವಿಶ್ವ ನಾಯಕತ್ವದ ಸ್ಥಾನವನ್ನು ನಿಭಾಯಿಸಿದೆ ಮತ್ತು ಉಳಿಸಿಕೊಂಡಿದೆ. ಅದಕ್ಕಾಗಿ ಎಲ್ಲಾ ರೀತಿಯ ತಂತ್ರ, ಕುತಂತ್ರ, ಚಾಣಕ್ಯ ನೀತಿ, ಸಾಮರ್ಥ್ಯ, ಬುದ್ದಿವಂತಿಕೆ, ಧೈರ್ಯ ಬಳಸಿದೆ…..

ಆದರೆ ಈ ಬಾರಿ ಅಮೆರಿಕ ಪ್ರಾರಂಭಿಕ ಹಂತದಲ್ಲಿಯೇ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಯುದ್ಧ ಪ್ರವೇಶಿಸಿದೆ. ಏನಾಗಬಹುದು ಮುಂದೆ ಎಂಬ ಕುತೂಹಲಕ್ಕೆ, ಏನಿಲ್ಲ ಯುದ್ಧ ಇನ್ನೊಂದಿಷ್ಟು ತೀವ್ರತೆ ಪಡೆದು, ಇನ್ನೊಂದಷ್ಟು ಜೀವ ಹಾನಿಗಳಾಗಿ, ಇನ್ನೊಂದಷ್ಟು ಭೂಮಿ, ಪರಿಸರ, ಆರ್ಥಿಕತೆ ನಾಶವಾದ ನಂತರ ಎಲ್ಲರೂ ಸೇರಿ ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ ಅಷ್ಟೇ ಎನ್ನುವ ಸಾಮಾನ್ಯ ಉತ್ತರ ಹೇಳಬಹುದು…….

ಕನಿಷ್ಠ ಎರಡು ಮಹಾಯುದ್ಧಗಳ ಅನುಭವದ ಆಧಾರದ ಮೇಲೆ ಮುಂದೆ ಎಲ್ಲಾ ಅನಾಹುತಗಳಾದ ನಂತರ ಒಪ್ಪಂದ ಮಾಡಿಕೊಂಡು ಯುದ್ಧ ಕೊನೆಗೊಳಿಸುವುದಕ್ಕಿಂತ
ಈಗಲೇ ಆ ಅನುಭವದ ಆಧಾರದ ಮೇಲೆ ಯುದ್ಧ ನಿಲುಗಡೆ ಒಪ್ಪಂದ ಮಾಡಿಕೊಳ್ಳಬಹುದಲ್ಲವೇ ಎಂಬ ದೂರದ ಆಸೆ ಪುಟ್ಟ ಮಗುವಿನ ರೀತಿ ಮನದಲ್ಲಿ ಮೂಡುತ್ತದೆ…..

ವಿಶ್ವದ ಯಾರಾದರೂ ಮಹಾನ್ ವ್ಯಕ್ತಿಗಳು ಒಂದೆಡೆ ಕುಳಿತು ಕೆಲವು ಸಂಧಾನ ಸೂತ್ರಗಳನ್ನು ಹಣೆಯಬಹುದಲ್ಲವೇ. ಹೇಗಿದ್ದರೂ ಅದಕ್ಕೆ ವಿಶ್ವ ಸಂಸ್ಥೆ ಎಂಬ ವೇದಿಕೆಯೂ ಇದೆ. ಎಲ್ಲಾ ನಾಶದ ಬಳಿಕ ಅನಿವಾರ್ಯವಾಗಿ ಒಪ್ಪಂದ ಮಾಡಿಕೊಂಡರೆ ಹೋದ ಜೀವಗಳು ಮರಳಿ ಬರುತ್ತವೆಯೇ. ಈ ವಿಷಯ ವಿಚಿತ್ರವೆನಿಸುತ್ತದೆ. ಇದು ಮನುಷ್ಯನ ನೈತಿಕತೆಯ ಬಗ್ಗೆಯೇ ಅನೇಕ ಪ್ರಶ್ನೆಗಳನ್ನ ಹುಟ್ಟು ಹಾಕಿದೆ…..

ಅಮೆರಿಕಾದಲ್ಲಿ ಅಷ್ಟೇನೂ ನೈತಿಕ ಪ್ರಜ್ಞೆ ಹೊಂದಿರದ, ಮಾನಸಿಕವಾಗಿ ಸೀಮಿತದಲ್ಲಿಲ್ಲದ, ತಿಕ್ಕಲು ಸ್ವಭಾವದ, ಆಕ್ರಮಣಕಾರಿ ಮನೋಭಾವದ, ಅಮೆರಿಕಾದ ಘನತೆಯನ್ನು, ಮಾನವೀಯ ಮೌಲ್ಯಗಳನ್ನು ಕಡಿಮೆ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ಅಧ್ಯಕ್ಷ ಸ್ಥಾನದಲ್ಲಿ ಇರುವುದರಿಂದ ಯುದ್ಧ ನಿಲ್ಲುವ ಉತ್ತಮ ಫಲಿತಾಂಶವನ್ನು ಅಥವಾ ಪ್ರಬುದ್ಧ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮೊದಲೇ ಯುದ್ಧದ ಶಸ್ತ್ರಾಸ್ತ್ರಗಳ ಮಾರಾಟದ ವಿಷಯದಲ್ಲಿ ಅಮೆರಿಕಾ ನಂಬಿಕೆಗೆ ಅರ್ಥವಾಗಿಲ್ಲ, ತನ್ನ ಸ್ವ ಹಿತಾಸಕ್ತಿಗಾಗಿ ಅನೇಕ ಭಯೋತ್ಪಾದಕ ಗುಂಪುಗಳನ್ನು ಬೆಳೆಸಿದೆ…..

ಅಂತಹ ದೇಶದ ನಾಯಕತ್ವವನ್ನು ಈ ರೀತಿಯ ಅಪ್ರಬುದ್ಧರೊಬ್ಬರು ಮುನ್ನಡೆಸುತ್ತಿರುವುದರಿಂದ ಇನ್ನು ಮುಂದಿನ ಮೂರು ನಾಲ್ಕು ವರ್ಷಗಳು ಜಾಗತಿಕ ವಿದ್ಯಮಾನಗಳು ಹೀಗೆ ಹುಚ್ಚುಚ್ಚಾಗಿಯೇ ಸಾಗಬಹುದು……

ಹಾಗೆಯೇ ಇಸ್ರೇಲ್ ಎಂಬ ದೇಶದ ತಂತ್ರಜ್ಞಾನ, ಚಾಕಚಕ್ಯತೆ, ಶ್ರಮ ಸಂಸ್ಕೃತಿ, ಆಧುನಿಕತೆ, ದೂರ ದೃಷ್ಟಿ, ಬೇಹುಗಾರಿಕೆ ಮುಂತಾದ ಎಲ್ಲದರ ನಡುವೆಯೂ ಅದು ತುಂಬಾ ತುಂಬಾ ತನ್ನೊಳಗೆ ಧೈರ್ಯದ ಜೊತೆಗೆ ಕ್ರೌರ್ಯವನ್ನು ಅಡಗಿಸಿಕೊಂಡಿದೆ. ಅದರ ಅತಿರೇಕದ ಪ್ರತಿನಿಧಿಯಾಗಿ ಬೆಂಜಮಿನ್ ನೆತನ್ಯಾಹು ಪ್ರಧಾನಿಯ ಪುಟ್ಟ ವಹಿಸಿದ್ದಾರೆ. ಇದು ಯುದ್ಧಗಳು ಮತ್ತಷ್ಟು ತೀವ್ರವಾಗಲು ಕಾರಣವಾಗಿದೆ……

ಹಾಗೆಯೇ ಇನ್ನೊಂದು ಕಡೆ ಇರಾನ್ ಎಂಬ ಮತಾಂಧ ಶಕ್ತಿ ಖಮೇನಿ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಪ್ರಗತಿಪರವಲ್ಲದ, ವಿನಾಶಕಾರಿ, ಮತಾಂಧ ಭಂಡತನವನ್ನು ಪ್ರದರ್ಶಿಸುತ್ತಿದೆ. ಅದು ಕೂಡ ಮಾನವ ಶಾಂತಿಗೆ ವಿರುದ್ಧವಾಗಿದೆ…..

ಇನ್ನು ಬಲಿಷ್ಠ ರಷ್ಯಾ, ಚೀನಾ, ಭಾರತ ತಮ್ಮ ಸ್ವಂತದ ಆರ್ಥಿಕ ಹಿತಾಸಕ್ತಿಗಳನ್ನೇ ಗಮನದಲ್ಲಿಟ್ಟುಕೊಂಡು ಹೊಂಚು ಹಾಕಿ ಕುಳಿತಿವೆ. ಯೂರೋಪ್ ಯೂನಿಯನ್ ಬಹುತೇಕ ಅಮೆರಿಕಾದ ಬಾಲಂಗೋಚಿ…..

ಈ ನಿಟ್ಟಿನಲ್ಲಿ ಯೋಚಿಸಿದಾಗ ನಿಜಕ್ಕೂ ಮೂರನೆಯ ಮಹಾಯುದ್ಧದ ಸಾಧ್ಯತೆಗಳು ಕಾಣುತ್ತಿದೆ. ಇಲ್ಲಿ ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾದ ಮುಂದಿನ ನಡೆಗಳು ಸ್ವಲ್ಪ ಮಟ್ಟಿಗೆ ಕುತೂಹಲಕಾರಿಯಾಗಿದೆ. ಯುದ್ಧ, ಜಗಳ, ಸಂಘರ್ಷಗಳಲ್ಲಿ ಸತ್ಯವೇ ಗೆಲ್ಲುತ್ತದೆ, ವಾಸ್ತವವೇ ವಿಜಯಿಯಾಗುತ್ತದೆ ಎಂಬ ನಂಬಿಕೆ ಏನೂ ಇಲ್ಲ. ಸುಳ್ಳುಗಳು, ಕುತಂತ್ರಗಳು, ಗಾಳಿ ಮಾತುಗಳು, ಭಯ ಇವೇ ಹೆಚ್ಚು ಮೇಲುಗೈ ಸಾಧಿಸುತ್ತವೆ. ಇಂತಹ ಸಂದರ್ಭದಲ್ಲಿ ನಾಯಕರುಗಳಲ್ಲಿ ಮಾನಸಿಕ ಗೊಂದಲ, ದ್ವಂದ್ವಗಳು ಮನೆ ಮಾಡುತ್ತವೆ. ಆ ಒತ್ತಡದಲ್ಲಿ ಬಹುತೇಕ ತಪ್ಪು ನಿರ್ಧಾರಗಳೇ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ….

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನಿಂದ ಜಾಗತಿಕ ವಿದ್ಯಮಾನಗಳನ್ನು ನೋಡಿದರೆ, ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ವಿರುದ್ಧವಾಗಿ ನಾವೇ ಶ್ರೇಷ್ಠ, ನಾವೇ ಮುಖ್ಯ, ನಮ್ಮ ದೇಶವೇ ಮೊದಲು ಎನ್ನುವ ಸಂಕುಚಿತ ವ್ಯಾಪಾರಿ ಮನೋಭಾವದ ನಾಯಕರುಗಳು ಮುನ್ನಲೆಗೆ ಬಂದ ಪರಿಣಾಮವಾಗಿ, ಅದರ ಮುಂದುವರಿದ ಭಾಗವಾಗಿ ದುಷ್ಪರಿಣಾಮದ ರೂಪದಲ್ಲಿ ಈ ಕ್ಷಣದ ಘಟನೆಗಳು ನಡೆಯುತ್ತಿದೆ. ಅಲ್ಲದೆ ಬಹುಶಃ ಭೂ ಸೈನ್ಯಕ್ಕಿಂತ ವಾಯು ಪಡೆ ಮತ್ತು ನೌಕಾದಳಗಳು ಹೆಚ್ಚು ಬಲಿಷ್ಠವಾದ ಮತ್ತು ಪ್ರಭಾವಶಾಲಿಯಾದ ಹಾಗೂ ತಂತ್ರಜ್ಞಾನ ಹೆಚ್ಚು ಹೆಚ್ಚು ವಿನಾಶಕಾರಿಯಾದ ಕಾರಣ ಯುಧ್ಧೋತ್ಸಾಹಗಳು ಅದೇ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ….

ಈ ಎಲ್ಲವನ್ನು ನೋಡುತ್ತಿದ್ದರೆ ವಿಶ್ವದಲ್ಲಿ ಯಾರ ಮೇಲೆ ಯಾರಿಗೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಾಗೆಯೇ ಅತ್ಯಂತ ಬಲಿಷ್ಠ ನಾಯಕತ್ವ ಹೊಂದಿದ್ದ ಅಮೆರಿಕ ಕೂಡ ಚಂಚಲ ಮನಸ್ಸಿನ ವ್ಯಕ್ತಿಯ ಕೈಗೆ ಹೋಗಿರುವುದರಿಂದ ವಿಶ್ವ ಬಹುತೇಕ ವಿನಾಶದ ಅಂಚಿಗೆ ತಲುಪುತ್ತಿದೆ……

ಐದು ವರ್ಷಗಳ ಹಿಂದಿನ ಕೋವಿಡ್ ಸಮಯದಲ್ಲಿಯೇ ವಿಶ್ವ ಇನ್ನೇನು ತೀರಾ ಅಧೋಗತಿಗೆ ಇಳಿಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಒಂದಷ್ಟು ಅನಾಹುತದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಆದರೆ ಈಗ ಈ ನಾಯಕರುಗಳು ವಿಶ್ವವನ್ನು, ಈ ಭೂಮಂಡಲವನ್ನು ತುಂಬಾ ಬಿಕ್ಕಟ್ಟಿಗೆ, ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ…..

ಸಾಮಾಜಿಕ ಜಾಲತಾಣಗಳು, ಸಮೂಹ ಸಂಪರ್ಕ ಮಾಧ್ಯಮಗಳು ಪ್ರಬಲವಾಗಿರುವ ಇಂತಹ ಸಂದರ್ಭದಲ್ಲಿ, ಜಾಲತಾಣಗಳ ಮುಖ್ಯಸ್ಥರು, ಜಾಲತಾಣಗಳಲ್ಲಿ ಜನಪ್ರಿಯತೆ ಹೊಂದಿರುವವರು, ಸುದ್ದಿ ಮಾಧ್ಯಮಗಳು ಎಲ್ಲವೂ ಸೇರಿ ವಿಶ್ವ ನಾಯಕರ ಮೇಲೆ ಶಾಂತಿಯ ಒತ್ತಡವನ್ನು ತರದಿದ್ದರೆ ನಮ್ಮ ಯಾರಿಗೂ ಉಳಿಗಾಲವಿಲ್ಲ ಎನಿಸುತ್ತದೆ ಅಥವಾ ವಿಶ್ವದಲ್ಲಿ ಮತ್ತೊಂದು ಪ್ರಬಲ ನಾಯಕತ್ವ ಉಗಮವಾಗಲು ಈ ಪರಿಸ್ಥಿತಿ ಕಾರಣವಾದರೂ ಆಗಬಹುದು…..

ಎಲ್ಲಾ ನಾಶದ ನಂತರ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಈಗಲೇ ಮಾಡಿಕೊಳ್ಳುವುದು ಉತ್ತಮ ಎಂಬ ಆಸೆ. ಆದರೆ ಮನುಷ್ಯ ತನ್ನ ಮೇಲೆ ತಾನೇ ನಿಯಂತ್ರಣ ಕಳೆದುಕೊಂಡಾಗ ಆಗುವ ದುಷ್ಪರಿಣಾಮ ಈಗ ಇಡೀ ವಿಶ್ವವೇ ಎದುರಿಸುತ್ತಿದೆ. ಆದಷ್ಟು ಬೇಗ ವಿಶ್ವ, ಶಾಂತಿಯ ಕಡೆ ಮುಖ ಮಾಡಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಎಲ್‌ಒ ಕೆಲಸ ಬೇಡ: ಅಂಗನವಾಡಿಗಳಲ್ಲೇ ಎಲ್‌ಕೆಜಿ–ಯುಕೆಜಿ ಆರಂಭಕ್ಕೆ ಅಂಗನವಾಡಿ ನೌಕರರ ಸಂಘ ಒತ್ತಾಯ

ಬೆಂಗಳೂರು ಗ್ರಾಮಾಂತರ: ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಕೆಲಸವನ್ನು ಅಂಗನವಾಡಿ ನೌಕರರಿಗೆ ನೀಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಅಂಗನವಾಡಿ…

14 hours ago

ಟ್ರಂಪ್ ಕಾರ್ಡ್…….

ಟ್ರಂಪ್ ಕಾರ್ಡ್....... ವಿಶ್ವದ ಕ್ರೀಡಾ ಸಂಸ್ಕೃತಿಯ ಘನತೆಗೆ ಚ್ಯುತಿ ತಂದ ಡೊನಾಲ್ಡ್ ಟ್ರಂಪ್... ವಿಶ್ವದ ಕ್ರೀಡಾ ಸಂಸ್ಕೃತಿಗೆ ಅವಮಾನ ಮಾಡಿದ,…

23 hours ago

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ ಬಳಿ ಕ್ಯಾಂಟರ್ ಪಲ್ಟಿ: ರಸ್ತೆಬದಿಯ ಅಂಗಡಿಗಳು ಜಖಂ

ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದ ಶನಿಮಹಾತ್ಮ ದೇವಾಲಯದ ಬಳಿ ಕಳೆದ ರಾತ್ರಿ ಸಂಭವಿಸಿದ ಕ್ಯಾಂಟರ್ ಅಪಘಾತದಲ್ಲಿ ರಸ್ತೆಬದಿಯ ಮೂರು-ನಾಲ್ಕು ಅಂಗಡಿಗಳು…

1 day ago

ಹಾಲಿನ ಖರೀದಿ ದರ ಹೆಚ್ಚಳಕ್ಕೆ ರೈತರ ಬೃಹತ್ ಪ್ರತಿಭಟನೆ

ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ರೂ. 10 ಹೆಚ್ಚಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು…

1 day ago

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಉನ್ನತೀಕರಣಕ್ಕೆ ಗುದ್ದಲಿ ಪೂಜೆ

ದೊಡ್ಡಬಳ್ಳಾಪುರ: ತಾಲೂಕಿನ ಅನಿಬೆಸೆಂಟ್ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು ಉನ್ನತೀಕರಿಸುವ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜ್…

1 day ago

ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್‌ನಲ್ಲಿ ಕರಡಿಗಳ ಪ್ರತ್ಯಕ್ಷ: ನಂದಿಬೆಟ್ಟ ಸಮೀಪ ವನ್ಯಜೀವಿಗಳ ಓಡಾಟದಿಂದ ಆತಂಕ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ಪ್ರಖ್ಯಾತ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್ ಆವರಣದಲ್ಲಿ…

1 day ago