Categories: ಲೇಖನ

ಮಾನವೀಯ ಪ್ರಜ್ಞೆ…..

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ?…..

ಈ ರೀತಿಯ ಅನುಮಾನ ಬಲವಾಗುತ್ತಿದೆ.
ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ.
ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ……

ಆದರೆ,
ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು,
ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.
ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ, ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ ಸಾಮಾನ್ಯ ಜನರನ್ನು ಕೀಳಾಗಿ ಕಾಣುವ ಮನೋಭಾವ ಕಂಡುಬರುತ್ತಿದೆ…‌.

ಪ್ರಾರಂಭದ ದಿನಗಳಲ್ಲಿ ಅಕ್ಷರ ಬರದವರನ್ನು, ಅನಂತರ ‌ಸಂಸ್ಕೃತ ಕಲಿಯದವರನ್ನು, ನಂತರ ಇಂಗ್ಲೀಷ್ ಮಾತನಾಡದವರನ್ನು ಬಹಳ ಲಘುವಾಗಿ ಕಾಣಲಾಗುತ್ತಿತ್ತು.
ಈಗ ಹೃದಯದ ಭಾಷೆಗಿಂತ ಮೆದುಳಿನ ಭಾಷೆಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದು ಕಂಡುಬರುತ್ತಿದೆ……

ಭಗವದ್ಗೀತೆಯ ಶ್ಲೋಕಗಳನ್ನು,
ಖುರಾನಿನ ಅಧ್ಯಾಯಗಳನ್ನು,
ಬೈಬಲ್‌ನ ಸಂದೇಶಗಳನ್ನು,
ಸಾಹಿತ್ಯದ ಪ್ರಕಾರಗಳನ್ನು,
ಭಾಷೆಯ ವ್ಯಾಕರಣವನ್ನು,
ಆರ್ಥಿಕತೆಯ ಸೂಕ್ಷ್ಮತೆಯನ್ನು,
ಧಾರ್ಮಿಕ ಆಚರಣೆಗಳನ್ನು,
ಕಲೆಯ ಹೊಳಹುಗಳೂ ಸೇರಿ ಯಾವುದೇ ಕ್ಷೇತ್ರದ ಜ್ಞಾನದ ಮೇಲೆ ಒಬ್ಬರಿಗೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಿದ್ದರೆ ಅದು ಆ ವ್ಯಕ್ತಿಯ ಸರಳ ನಡವಳಿಕೆಗೆ ಕಾರಣವಾಗಿ ಸಾಮಾನ್ಯ ಜನರಿಗೆ ಅದನ್ನು ಅತ್ಯಂತ ವಿನಯದಿಂದ ತಲುಪಿಸುವ ಮತ್ತು
ಜ್ಞಾನ ಕೂಡ ಹರಿಯುವ ನೀರಿನಂತೆ, ಅದು ಸದಾ ಕಾಲ ಚಲಿಸುತ್ತಲೇ ಇರುತ್ತದೆ ಅದು ಶಾಶ್ವತ ಅಲ್ಲ, ಬದಲಾವಣೆ ಆಗುತ್ತಲೇ ಇರುತ್ತದೆ, ಇಂದಿನ ನನ್ನ ಜ್ಞಾನ ಮುಂದೆ ಅಪ್ರಸ್ತುತ ವಾಗಬಹುದು ಎಂಬ ಅರಿವು ಓದುವವರಿಗೆ ಇರಬೇಕಾಗುತ್ತದೆ.
ವರ್ತನೆ ಸಹಜವಾಗಿರಬೇಕೆ ಹೊರತು ವಿಚಿತ್ರವಾಗಿರಬಾರದು…..

ಮತ್ತು ಎಲ್ಲಕ್ಕಿಂತ ಹೆಚ್ಚಾಗಿ,
ವಿಶಾಲ ಮನೋಭಾವದ ಪ್ರೀತಿ ವಿಶ್ವಾಸ ತುಂಬಿದ, ಮಾನವೀಯ ಆಧಾರದ,
ಸೌಜನ್ಯದ ನಡವಳಿಕೆ ಅತ್ಯುನ್ನತ ಜ್ಞಾನವೇ ಹೊರತು, ಅಕ್ಷರಗಳ, ಅಧ್ಯಾಯಗಳ, ಪುಟಗಳ , ಶ್ಲೋಕಗಳ, ದಾಖಲೆಗಳ ಜ್ಞಾನ ಕೇವಲ ವಾದ ಪ್ರತಿವಾದಗಳಿಗೆ ಹೊರತು ಸಮಾಜದ ಶಾಂತಿಯ, ನೆಮ್ಮದಿಯ, ಜನರ ಜೀವನಮಟ್ಟ ಸುಧಾರಣೆಯ ದಿಕ್ಕಿನಲ್ಲಿ ಅವುಗಳ ಪಾತ್ರ ಕಡಿಮೆ. ಅದು ಈಗಾಗಲೇ ದೃಢಪಟ್ಟಿದೆ………

ಹೆಚ್ಚಿಗೆ ಓದಿರುವವರನ್ನು, ತಲೆ ಪ್ರತಿಷ್ಠೆಯವರನ್ನು ನೋಡಿದರೆ ನಾವು ನಿರಪರಾಧಿಗಳಾಗಿದ್ದರೂ ಪೋಲೀಸರನ್ನು ಕಂಡರೆ ಭಯವಾಗುವಂತೆ ಭಾಸವಾಗುತ್ತದೆ……

ನಮ್ಮ ದೇಶದಲ್ಲಿ ಸಾಕ್ಷರತೆಯ ಸಂಖ್ಯೆ ಹೆಚ್ಚಾಗುತ್ತಿದ್ದರೂ, ನಿಜವಾದ ಅರಿವಿರುವವರ ಸಂಖ್ಯೆ ತುಂಬಾ ಕಡಿಮೆಯಿದೆ. ಮುಗ್ಧತೆ ಮತ್ತು ಮೌಢ್ಯತೆಯೇ ಬಹಳಷ್ಟು ತುಂಬಿ ತುಳುಕುತ್ತಿದೆ…….

ನಮಗೆ ಸಾಹಿತ್ಯ, ಸಂಗೀತ, ಕಲೆ, ಧಾರ್ಮಿಕತೆ, ವಿಜ್ಞಾನ ಮುಂತಾದ ‌ವಿಷಯಗಳಲ್ಲಿ ಪಾಂಡಿತ್ಯವಿದೆ ಎಂದ ಮಾತ್ರಕ್ಕೆ ಸಾಮಾನ್ಯರಿಗಿಂತ ಭಿನ್ನ ಎಂದು ಭಾವಿಸಿ ಆ ಕಲೆಗಳಲ್ಲಿಯೇ ಸಾಮಾನ್ಯರಿಗೆ ಅರ್ಥವಾಗದ ಅಭಿಪ್ರಾಯ ವ್ಯಕ್ತಪಡಿಸಿದರೆ ನಿಮಗೆ ಪ್ರಶಸ್ತಿಯೂ, ಬಹುಮಾನವೋ, ಅಧಿಕಾರವೋ, ಡಾಕ್ಟರೇಟೋ ಬರಬಹುದು. ಆದರೆ ವಿನಯ, ಮಾನವೀಯತೆ ಇಲ್ಲದಿದ್ದರೆ, ವಿಶಾಲ ಮನೋಭಾವ ಇಲ್ಲದಿದ್ದರೆ ಎಲ್ಲವೂ ವ್ಯರ್ಥ.
ಪ್ರೀತಿಯ ಗುಣ ಮಾತ್ರ ಈ ಸಮಾಜದ ಒಳ್ಳೆಯ ಬದಲಾವಣೆಗೆ ಕಾರಣವಾಗಬಹುದೇ ಹೊರತು ನಿಮ್ಮ ಅಕ್ಷರ ಜ್ಞಾನ, ಅಹಂಕಾರ, ಸಣ್ಣ ಮನಸ್ಸು, ದ್ವೇಷ ಮನೋಭಾವ ಸಮಾಜಕ್ಕೆ ಮಾರಕ…….

ಬದುಕಿನ ಅನುಭವದ ಸಾಗರದಲ್ಲಿ ಓದು ಒಂದು ಪೂರಕ ಪ್ರಕ್ರಿಯೆಯೇ ಹೊರತು ಓದಿನಿಂದಲೇ ಅನುಭವ ಪಡೆದರೆ ಅದು ಅಜ್ಞಾನದ ಒಣ ರೂಪ ಅಷ್ಟೆ……..

ಸರ್ಕಾರದ, ನ್ಯಾಯಾಲಯಗಳ ರೀತಿಯಲ್ಲಿ ದಾಖಲೆ, ಆಧಾರಗಳು ನಮ್ಮ ಅಭಿಪ್ರಾಯ ರೂಪಿಸದೆ, ನಮ್ಮನ್ನು ನಿಯಂತ್ರಿಸದೆ ಕ್ರಿಯಾತ್ಮಕ ಮನಸ್ಥಿತಿ ನಮ್ಮನ್ನು ಕಾಡಬೇಕು…….
( ಕೆಲವು ಅನಿವಾರ್ಯ ಮತ್ತು ಅಧಿಕೃತ ವಿಷಯಗಳನ್ನು ಹೊರತುಪಡಿಸಿ )……

ಈ ಎಲ್ಲಾ ಅಭಿಪ್ರಾಯ ನನಗೂ ಅನ್ವಯಿಸುತ್ತದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…

1 hour ago

ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ…

1 hour ago

ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಹೆಚ್ಚಿದ ಕರಡಿ ಹಾವಳಿ: ಜೀವ ಭಯದಲ್ಲಿ ರೈತರು

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಹಾವಳಿ ಮುಂದುವರಿದಿದೆ.. ರಾತ್ರೋರಾತ್ರಿ ರೈತರ ಹೊಲಗಳಿಗೆ ನುಗ್ಗಿ ಬಾಳೆ, ಹಲಸಿನ…

2 hours ago

ಹಾಡಹಗಲೇ ಮನೆ ಬೀಗ ಮುರಿದು ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ

ಹಾಡಹಗಲೇ ಮನೆ ಬೀಗ ಮುರಿದು ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ಏ.20ರಂದು ದೊಡ್ಡಬಳ್ಳಾಪುರ…

7 hours ago

ಬೆಳ್ಳಂಬೆಳಗ್ಗೆ ಮಾಂಗಲ್ಯ ಸರ ಕದ್ದ ಕಳ್ಳ: ಮಹಿಳೆ ವಾಕಿಂಗ್ ಮಾಡುವ ವೇಳೆ ಘಟನೆ

ಇಂದು ಬೆಳ್ಳಬೆಳಗ್ಗೆ ಸರಗಳನ್ನ ಕೈಚಳಕ ಕಂಡುಬಂದಿದೆ. ಬೆಳಗ್ಗೆ ಸುಮಾರು 5:30ರ‌ ಸಮಯದಲ್ಲಿ ಮಹಿಳೆ ವಾಕಿಂಗ್ ಮಾಡುವ ವೇಳೆ ಕಳ್ಳನೋರ್ವ ಏಕಾಏಕಿ…

8 hours ago

ಭಾರತದ ಜಾತಿ ವ್ಯವಸ್ಥೆಗೆ ಚಲನೆಯಿಲ್ಲ- ಸಿಎಂ ಸಿದ್ದರಾಮಯ್ಯ

ಬಸವಣ್ಣನವರ ಆದರ್ಶಗಳನ್ನು ಪಾಲಿಸಿದ ಡಾ.ಸಿದ್ಧರಾಮ ಶರಣರು 2025-26ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು, ಅವರಿಗೆ ಅಭಿನಂದನೆಗಳು ಎಂದು…

22 hours ago