Categories: ಲೇಖನ

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ….

ನೀಟ್ ಪ್ರಶ್ನೆ ಪತ್ರಿಕೆ ಬಯಲು….

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ.
ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ ಮುಖವಾಡಗಳ ಮರೆಯಲ್ಲಿ. ಎಲ್ಲವೂ ಬಟಾ ಬಯಲಾಗುತ್ತಿದೆ. ಇದು ಕಳ್ಳರ ಸಂತೆ. ಆದರೆ ಸಿಕ್ಕಿಹಾಕಿಕೊಂಡವನು ಮಾತ್ರ ಕಳ್ಳ ಎಂದು ನಾವು ಭ್ರಮಿಸಿದ್ದೇವೆ . ಇಡೀ ವ್ಯವಸ್ಥೆಯೇ ತೂತು ಬಿದ್ದಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂದರೇನು ? ಎರಡೂ ಸರ್ಕಾರಿಗಳಿಗೆ ಮತದಾನ ಮಾಡಿ ಆಯ್ಕೆ ಮಾಡುವುದು ನಾವೇ ತಾನೆ. ಎರಡೂ ಸರ್ಕಾರದ ಖಜಾನೆ ತುಂಬಲು ತೆರಿಗೆ Implementation ನಾವೇ ಹೌದೇ. ಎರಡೂ ಸರ್ಕಾರಗಳು ನಡೆಯುತ್ತಿರುವುದು ಒಂದೇ ಸಂವಿಧಾನದ ಅಡಿಯಲ್ಲಿ ಅಲ್ಲವೇ. ಹಾಗಾದರೆ ಸರ್ಕಾರಗಳ ನಡುವೆ ಭಿನ್ನತೆ ಏಕೆ. ಒಬ್ಬರಿಗೊಬ್ಬರು ನಾನು ಸರಿ, ನೀನು ತಪ್ಪು ಎಂದು ಆರೋಪ ಹೊರಿಸುವುದು ಏಕೆ. ನಾವು ಈ ಸರ್ಕಾರಗಳ ಮೇಲೆ ಕೈ ತೋರಿಸಿ ಎರಡೂ ಭಿನ್ನ ಎಂಬುದಾಗಿ ಏಕೆ ಭಾವಿಸಬೇಕು. ಪಕ್ಷ ಯಾವುದೇ ಇರಲಿ ಆಯ್ಕೆ ನಮ್ಮದೇ ತಾನೆ. ಹಾಗಾದರೆ ಸರಿ ತಪ್ಪುಗಳಿಗೆ ಸರ್ಕಾರವನ್ನು ಹೊಣೆ ಮಾಡಲು ಕೇಂದ್ರ, ರಾಜ್ಯ ಎಂದು ಪಲಾಯನವಾದದ ಒಂದು ಮಾರ್ಗ ಹುಡುಕುವುದು ಬೇಡ.

ಸ್ಪರ್ಧಾ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರೊಬ್ಬರು ಕರೆ ಮಾಡಿ
” ಸತತ ಎರಡು ತಿಂಗಳು ಎಲ್ಲಾ ಸಂಪರ್ಕಗಳಿಂದ ದೂರವಿದ್ದು ನಾವು ಕೆಲವು ಮುಖ್ಯ ವಿಷಯ ತಜ್ಞರು ಕಷ್ಟ ಪಟ್ಟು ಪ್ರಾಮಾಣಿಕತೆಯಿಂದ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ನಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ” ಎಂದರು…..

ಆದರೆ ವಾಸ್ತವ ಏನು ?…..

ಕಳೆದ ಹಲವಾರು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರದ ಬೇರೆ ಬೇರೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ. ಕೆಲವೊಮ್ಮೆ ಅದು ಬಹಿರಂಗವಾಗಿದೆ, ಮತ್ತೆ ಕೆಲವೊಮ್ಮೆ ಬಹಿರಂಗವಾಗದೆ ಕದ್ದು ಮುಚ್ಚಿ ನಡೆದು ಹೋಗಿದೆ.

ಇನ್ನೂ ಶಿಕ್ಷಣ ಇಲಾಖೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯವಸ್ಥೆ ಕಂಪ್ಯೂಟರೀಕರಣ ಆಗಿರದ ಸಮಯದಲ್ಲಿ ಇದು ಅತ್ಯಂತ ಸಹಜ, ಸ್ವಾಭಾವಿಕ ಘಟನೆಯಾಗಿತ್ತು. ಇಷ್ಟು ಮಾತ್ರವಲ್ಲದೇ ಹಣ ಪಡೆದು ಪಾಸು ಮಾಡುವುದು ಮತ್ತು ಹೆಚ್ಚು ಅಂಕ ಪಡೆಯುವುದು, ಒಬ್ಬರ ಹೆಸರಲ್ಲಿ ಇನ್ನೊಬ್ಬರು ಕದ್ದು ಉತ್ತರ ಬರೆಯುವುದು, ನಕಲಿ ಅಂಕಪಟ್ಟಿ ಸಿದ್ದಪಡಿಸುವುದು ಸಾಮಾನ್ಯವಾಗಿತ್ತು. ಕಂಪ್ಯೂಟರೀಕೃತ ವ್ಯವಸ್ಥೆ ಬಂದ ನಂತರ ಸ್ವಲ್ಪ ಕಡಿಮೆಯಾಗಿದೆ. ಆದರೆ ಬೇರೆ ರೂಪ ಪಡೆದುಕೊಂಡಿದೆ. ನಕಲಿ ಮಾಡುವುದು ಆಗಲೂ ಈಗಲೂ ಅದೇ ರೀತಿ ಇದೆ.

ಆಗಿನಿಂದಲೂ ಪ್ರಶ್ನೆ ಪತ್ರಿಕೆ ತಯಾರು ಮಾಡುವುದು ಯಾರು, ಎಲ್ಲಿ, ಅದು ಹೇಗೆ ಮತ್ತು ಎಲ್ಲಿ ಮುದ್ರಣವಾಗುತ್ತದೆ, ಎಲ್ಲಿ ಸಂಗ್ರಹವಾಗುತ್ತದೆ, ಹೇಗೆ ಹಂಚಿಕೆಯಾಗುತ್ತದೆ, ಯಾರ ನಿಯಂತ್ರಣದಲ್ಲಿ ಇರುತ್ತದೆ ಎಂಬ ಸಂಪೂರ್ಣ ಮಾಹಿತಿ ಇರುವ ಒಂದು ಏಜೆಂಟರ ಪಡೆಯೇ ಇರುತ್ತದೆ. ದೊಡ್ಡ ದೊಡ್ಡ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ತಮ್ಮ ಮಕ್ಕಳ ಅನುಕೂಲಕ್ಕಾಗಿ ಇವರ ಸಂಪರ್ಕದಲ್ಲಿ ಇರುತ್ತಾರೆ. ಎಸ್ ಎಸ್ ಎಲ್ ಸಿ, ಪಿಯುಸಿ, ಇಂಜಿನಿಯರಿಂಗ್, ವೈದ್ಯಕೀಯ, ಎಲ್ ಎಲ್ ಬಿ, ಕೆ.ಪಿ.ಎಸ್.ಸಿ, ಸಿಇಟಿ, ನೀಟ್ ಮುಂತಾದ ಮುಖ್ಯ ಪರೀಕ್ಷೆಗಳು ಇವರ ಗುರಿಯಾಗಿರುತ್ತದೆ.

ಪ್ರತಿ ಬಾರಿ ಪ್ರಶ್ನೆ ಪತ್ರಿಕೆ ಬಯಲಾದ ನಂತರ ಆಯಾಶ ಇಲಾಖೆಗಳು ಹೊಸ ಹೊಸ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಸರಿಯಾಗಿ ಈ ಏಜೆಂಟರುಗಳು ಸಹ ಹೊಸ ಹೊಸ ತಂತ್ರ ಮಾಡುತ್ತಾರೆ. ಕೆಲವರು ಪೋಲೀಸರಿಗೆ ಸಿಕ್ಕಿ ಬೀಳುತ್ತಾರೆ. ಕಿಲಾಡಿಗಳು ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಬಂಧಿತರು ಸ್ವಲ್ಪ ದಿನಗಳ ನಂತರ ಜಾಮೀನು ಪಡೆದು ಮತ್ತೆ ಧಂದೆಯಲ್ಲಿ ತೊಡಗುತ್ತಾರೆ.

ಇಂತಹ ಕೆಟ್ಟ ವ್ಯವಸ್ಥೆಯಲ್ಲಿ ಯಾರಾದರೂ ಮಾಡಬಹುದಾದ್ದರೂ ಏನು ?

ಪಬ್ಲಿಕ್ ಪರೀಕ್ಷೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ಭಾರತದಂತ ದೊಡ್ಡ ಸಂಖ್ಯೆಯ ದೇಶದಲ್ಲಿ ಒಂದು ಬೃಹತ್ ವ್ಯವಸ್ಥೆ. ಕೇವಲ ಶಿಕ್ಷಕರು ಮಾತ್ರವಲ್ಲ ಅಧಿಕಾರಿಗಳು, ಭೋದಕೇತರ ಸಿಬ್ಬಂದಿ, ಶೀಘ್ರಲಿಪಿಗಾರರು, ತಂತ್ರಜ್ಞರು, ಚಾಲಕರು, ತೂಕದ ಕಟ್ಟುಗಳನ್ನು ಸಾಗಿಸುವವರು, ಭದ್ರತಾ ಸಿಬ್ಬಂದಿ ಹೀಗೆ ಹಲವಾರು ಜನರಿರುತ್ತಾರೆ. ಇವರಲ್ಲಿ ಯಾರೋ ಒಬ್ಬರು ಹಣ ಅಥವಾ ಇನ್ಯಾವುದೋ ಆಸೆಗೆ ಕೇವಲ ಮೊಬೈಲಿನಲ್ಲಿ ಒಂದು ಛಾಯಾಚಿತ್ರ ತೆಗೆದಿಟ್ಟುಕೊಂಡರೆ ಮುಗಿಯಿತು. ಎಲ್ಲವೂ ವಿಫಲ.

ನಿಮಗೆ ಇನ್ನೂ ಒಂದು ಪ್ರಶ್ನೆ ಕಾಡಬಹುದು. ಕೆಲವು ವರ್ಷ, ಕೆಲವು ಪರೀಕ್ಷೆಗಳ, ಕೆಲವು ಪತ್ರಿಕೆಗಳು ಮಾತ್ರ ಹೇಗೆ ಬಯಲಾಗುತ್ತದೆ ಎಂದು. ಇಲ್ಲ ಪ್ರತಿ ವರ್ಷವೂ ಒಂದಲ್ಲ ಒಂದು ಪತ್ರಿಕೆ ಬಯಲಾಗಿರುತ್ತದೆ. ಕೆಲವು ಮಾತ್ರ ಹೊರ ಪ್ರಪಂಚಕ್ಕೆ ತಿಳಿಯುತ್ತದೆ. ಉಳಿದವು ಹಾಗೇ ಮುಚ್ಚಿಹೋಗುತ್ತದೆ.

ವಿಷಯ ತಜ್ಞರೇ, ಶೈಕ್ಷಣಿಕ ವಿದ್ವಾಂಸರೆ, ಶಿಕ್ಷಕರೇ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಶಿಕ್ಷಣ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಪರೀಕ್ಷೆ ಮತ್ತು ಅಂಕಗಳ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯುವುದು ಒಂದು ಸಣ್ಣ ಅಂಶ ಮಾತ್ರ. ಇಡೀ ವರ್ಷ ಅವರ ಸಂಪೂರ್ಣ ಮನಸ್ಸನ್ನು ನಿಯಂತ್ರಿಸಿ ಅವರ ಬದುಕು ಮತ್ತು ವ್ಯಕ್ತಿತ್ವವನ್ನು ರೂಪಿಸುವುದೇ ಶಿಕ್ಷಣದ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ – ಧರ್ಮ.

ಪ್ರಶ್ನೆ ಪತ್ರಿಕೆ ಬಯಲಾದಾಗ ನಾಚಿಕೆ ಪಡಬೇಕಾಗಿರುವುದು ಸರ್ಕಾರ ಮತ್ತು ಸಮಾಜ. ಕೇವಲ ಶಿಕ್ಷಕರು ಮಾತ್ರವಲ್ಲ.

ನಿಮಗೆ ತಿಳಿದಿರಲಿ ದೇವರ ಅವತಾರವೆಂದು ಭಾವಿಸಲಾದ ವೈದ್ಯರು ಇಂದು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ,

ನೋಟ್ ಬ್ಯಾನ್ ಸಮಯದಲ್ಲಿ ಗೌರವಯುತ ಸ್ಥಾನ ಗಳಿಸಿದ್ದ ಬ್ಯಾಂಕ್ ಅಧಿಕಾರಿಗಳು ನಂಬಿಕೆ ಕಳೆದುಕೊಂಡರು,

ಪತ್ರಕರ್ತರೆಂಬ ಬುದ್ದಿವಂತರು ನಂಬಿಕೆ ಉಳಿಸಿಕೊಳ್ಳುತ್ತಿಲ್ಲ,

ಸರ್ವ ಸಂಗ ಪರಿತ್ಯಾಗಿ ಧರ್ಮಾಧಿಕಾರಿಗಳು ನಂಬಿಕೆ ಉಳಿಸಿಕೊಂಡಿಲ್ಲ,

ತಮ್ಮ ಭಾವನೆಗಳನ್ನು ಅಕ್ಷರಗಳಲ್ಲಿ ಉಕ್ಕಿಸುವ ಸಾಹಿತಿಗಳು ನಂಬಿಕೆ ಉಳಿಸಿಕೊಂಡಿಲ್ಲ,

ಇನ್ನು ರಾಜಕಾರಣಿಗಳು, ಅಧಿಕಾರಿಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ.

ಹೀಗಿರುವಾಗ ಒಂದು ವರ್ಗದ ಮೇಲೆ ತಪ್ಪುಗಳನ್ನು ಹೊರಿಸುವುದು ಸೂಕ್ತವಲ್ಲ.

ಭ್ರಷ್ಟಾಚಾರ ಎಂಬುದು ಸರ್ವವ್ಯಾಪಿಯಾಗಿದೆ. ಕೇವಲ ಪ್ರಶ್ನೆ ಪತ್ರಿಕೆ ಬಯಲು ಮಾತ್ರವಲ್ಲ ಅದರ ನಂತರ ಉದ್ಯೋಗಕ್ಕಾಗಿ, ಕಾಲೇಜು ಪ್ರವೇಶಕ್ಕಾಗಿ ಅನೇಕ ರೀತಿಯ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತದೆ. ಅದೆಲ್ಲವೂ ವ್ಯವಸ್ಥೆಯ ಭಾಗವಾಗಿ ಅದರೊಳಗೆ ಅಂತರ್ಗತವಾಗಿದೆ. ಅದನ್ನು ತಡೆಯುವುದು ಅಷ್ಟು ಸುಲಭವಲ್ಲ.

ಇಡೀ ವ್ಯವಸ್ಥೆಯ ಎಲ್ಲಾ ಕ್ಷೇತ್ರಗಳ ಜನರ ಮನಸ್ಥಿತಿಯ ಪುನರ್ ಅವಲೋಕನದ ಅವಶ್ಯಕತೆ ಇದೆ. ಹೊಸ ಕಾನೂನುಗಳು ಹೊಸ ಅಪರಾಧಗಳಿಗೆ ದಾರಿ ಮಾಡಿಕೊಡುತ್ತಿದೆ. ಏಕೆಂದರೆ ಇದೇ ಜನರೇ ಆ ಕಾನೂನಿಗೂ ಒಳಪಡುತ್ತಾರೆ.
ಬದಲಾಣೆಯ ಮೂಲವನ್ನು ಹುಡುಕುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

32 minutes ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

2 hours ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

7 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

9 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

12 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

1 day ago