Categories: ಲೇಖನ

ಓದು, ಪ್ರವಾಸ ಮತ್ತು ಧ್ಯಾನಸ್ಥ ಮನಸ್ಥಿತಿ……..

ಪ್ರವಾಸ ಕಥನಗಳ ಬಗ್ಗೆ ಬಹಳ ಹಿಂದಿನಿಂದಲೂ ಸಾಕಷ್ಟು ಲೇಖನಗಳನ್ನು ಓದುತ್ತಲೇ ಇರುತ್ತೇನೆ. ಅದು ಪ್ರವಾಸೋದ್ಯಮಕ್ಕಾಗಿಯಲ್ಲ. ಏಕೆಂದರೆ ಪ್ರವಾಸ ವ್ಯಾಪಾರಿಗಳಿಗೆ ಒಂದು ಉದ್ಯಮ. ಆದರೆ ಪ್ರವಾಸಿಗರಿಗೆ ಅದು ಅದ್ಬುತ ಅನುಭವ. ಆ ಪ್ರವಾಸಿಗರು ಕಂಡ ಅನುಭವಗಳನ್ನು ದಾಖಲಿಸುವ ರೀತಿಯನ್ನು ಬಹಳಷ್ಟು ಕುತೂಹಲದಿಂದ ಓದುತ್ತಲೇ ಇರುತ್ತೇನೆ.

ಬಹಳ ಹಿಂದೆ ಭಾರತಕ್ಕೆ ಪ್ರವಾಸ ಬಂದ ಹ್ಯೂಯನ್ ತ್ಸಾಂಗ್, ಪಾಹಿಯಾನ್, ಮೆಗಸ್ತಾನೀಸ್, ಇಬ್ನಾ ಬಟೂಟರಿಂದ ಪ್ರವಾಸಿ ಕಂಡ ವಿಶ್ವ, ಪ್ರವಾಸಿ ಕಂಡ ಭಾರತ, ಪ್ರವಾಸಿ ಕಂಡ ಕರ್ನಾಟಕ, ಹಾಗೆಯೇ
” ಮಾಸ್ಕೋದಲ್ಲಿ 22 ದಿನ ” ಎಂಬ ಸೋವಿಯತ್ ಪ್ರವಾಸ ಕುರಿತ ರಾಷ್ಟ್ರಕವಿ ಡಾಕ್ಟರ್ ಜಿಎಸ್ ಶಿವರುದ್ರಪ್ಪನವರ ಕೃತಿ, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಎನ್ನುವ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಹೀಗೆ ಬೇರೆ ಬೇರೆ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಸಂಚಿಕೆಗಳಲ್ಲಿ, ಇತಿಹಾಸದ ಪುಟಗಳಲ್ಲಿ ಪ್ರಕಟವಾಗಿರುವ ಬರಹಗಳು ತುಂಬಾ ಕುತೂಹಲಕರವಾಗಿರುತ್ತದೆ, ಸ್ವಾರಸ್ಯಕರವಾಗಿರುತ್ತದೆ.

ವಿಶ್ವದ ಮೂಲೆ ಮೂಲೆಯ ಅತ್ಯುತ್ತಮ ಸ್ಥಳಗಳನ್ನು ಲೇಖಕರು ವಿವರಿಸುವ ರೀತಿ ತುಂಬಾ ಅಮೋಘವಾಗಿರುತ್ತದೆ. ಇಲ್ಲಿ ಸ್ಥಳಗಳು ಮತ್ತು ಅದರ ವರ್ಣನೆ, ಗ್ರಹಿಕೆ, ನಿರೂಪಣೆ, ಆಕರ್ಷಣೆ ಬಹಳಷ್ಟು ವಿಭಿನ್ನವಾಗಿರುತ್ತದೆ. ಆಫ್ರಿಕಾದ ಕಾಡುಗಳಿರಲಿ, ಯೂರೋಪಿನ ಆಲ್ಪ್ಸ್ ಪರ್ವತಗಳ ಹಿಮಾಚ್ಚಾದಿತ ಪ್ರದೇಶಗಳಿರಲಿ, ಪೆರುವಿನ ಮಚು ಪೀಚು ಇರಲಿ, ಅಮೆರಿಕಾ – ಕೆನಡಾದ ನಯಾಗರ ಜಲಪಾತವಿರಲಿ, ಇಂಗ್ಲೆಂಡಿನ ಥೇಮ್ಸ್ ನದಿಯ ದಂಡೆಯ ಮೇಲಿನ ಸೌಂದರ್ಯವೇ ಇರಲಿ, ನ್ಯೂಜಿಲ್ಯಾಂಡ್ ಆಸ್ಟ್ರೇಲಿಯಾದ ಅದ್ಭುತ ಪ್ರವಾಸಿ ತಾಣಗಳೇ ಆಗಿರಲಿ, ಮಧ್ಯಪ್ರಾಚ್ಯ ದೇಶಗಳ ಭವ್ಯತೆ, ಅಗಾಧತೆ ಇರಲಿ, ಅರಬ್ ರಾಷ್ಟ್ರಗಳ ಜೀವನ ಶೈಲಿ ಮತ್ತು ಮರಳುಗಾಡು, ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಸೌಂದರ್ಯ, ಚೀನಾ, ಜಪಾನ್, ಕೊರಿಯಾ, ವಿಯಟ್ನಾಂ, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳ ಯಾತ್ರಾ ಸ್ಥಳಗಳು, ವಿಶ್ವದ ಏಳು ಅದ್ಭುತಗಳ ಜೊತೆಗೆ ಇನ್ನೂ ಹೆಚ್ಚು ಪ್ರಖ್ಯಾತಿ ಹೊಂದದ, ಆದರೆ ಸೌಂದರ್ಯದ ಖನಿಯಂತಿರುವ ಅನೇಕ ಪ್ರದೇಶಗಳನ್ನು ವರ್ಣಿಸುತ್ತಿದ್ದರೆ ಓದುವ ಸಮಯವೇ ಗೊತ್ತಾಗುವುದಿಲ್ಲ.

ಮತ್ತೂ ಒಂದು ವಿಶೇಷವೆಂದರೆ ಅದನ್ನು ಬರೆಯುವ ಲೇಖಕ, ಬರಹಗಾರ, ಸಾಹಿತಿ, ಪ್ರವಾಸಿ, ಚಿಂತಕ, ಹೋರಾಟಗಾರ, ಸೈದ್ಧಾಂತಿಕ ಸ್ಪಷ್ಟತೆಯ ವ್ಯಕ್ತಿ ಅಥವಾ ಸಾಮಾನ್ಯ ಪ್ರವಾಸಕ್ಕೆ ಹೋದ, ಜೀವನದಲ್ಲಿ ಎಂದೂ ಬರೆಯದ ವ್ಯಕ್ತಿಗಳು ಬರೆಯುವ ಶೈಲಿಯಲ್ಲಿ ಕೂಡ ಸಾಕಷ್ಟು ವಿಭಿನ್ನತೆಯನ್ನು, ಗ್ರಹಿಕೆಯನ್ನು ಗುರುತಿಸಬಹುದು.

ಇಂತಹ ಕೆಲವು ಲೇಖನಗಳನ್ನು ಇತ್ತೀಚಿನ ದಿನಗಳಲ್ಲಿ ಓದುತ್ತಿದ್ದೆ. ಆಗ ಲೇಖಕರು ಇಂಗ್ಲೆಂಡ್ ಬಳಿಯ ಒಂದು ಸಣ್ಣ ಹಳ್ಳಿಯನ್ನು ವಿವರಿಸುತ್ತಾ ಆ ಇಡೀ ಹಳ್ಳಿಯಲ್ಲಿ ಓಡಾಡುತ್ತಿದ್ದರೆ ಬಹುತೇಕ ಹಳ್ಳಿಯೇ ಧ್ಯಾನಸ್ಥ ಸ್ಥಿತಿಯಲ್ಲಿಯೇ ಇರುವಂತೆ ಕಾಣುತ್ತದೆ. ಅಲ್ಲಿನ ಮುಖ್ಯ ಉದ್ಯೋಗ ಪ್ರವಾಸಿಗಳು ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿ ಹರಿಯುವ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಸುತ್ತಾಟ ಮಾಡಿ ಮತ್ತೆ ವಾಪಸ್ಸು ಕರೆತರುವುದು. ಅವರು ನೀಡುವ ಹಣವೇ ಅವರ ಜೀವನೋಪಾಯ. ಅಲ್ಲಿ ನದಿ ಕೂಡ ತುಂಬಾ ಪ್ರಶಾಂತತೆಯಿಂದ ಹರಿಯುತ್ತಿರುತ್ತದೆ. ಯಾವುದೇ ಸದ್ದು ಗದ್ದಲ ಇರುವುದಿಲ್ಲ. ಒಂದು ರೀತಿ ನಿಶ್ಯಬ್ದ ಧ್ಯಾನಸ್ಥ ಸ್ಥಿತಿಯಲ್ಲಿ ಇಡೀ ಹಳ್ಳಿಯೇ ಇದ್ದಂತೆ ಭಾಸವಾಗುತ್ತದೆ. ಪ್ರವಾಸಿಗಳನ್ನು ಕರೆದೊಯ್ಯುವ ವ್ಯಕ್ತಿ ಸಹ ಯಾರೂ ಇಲ್ಲದಿದ್ದಾಗ ಅಲ್ಲಿಯೇ ಒಂದು ಜಗಲಿಯ ಮೇಲೆ ಕುಳಿತು, ಪುಸ್ತಕ ಓದುತ್ತಾ, ಮನೆಯಿಂದ ತಂದ ಆಹಾರ ಸೇವಿಸುತ್ತಾ ಇರುವ ಪರಿಸರವನ್ನು ಲೇಖಕರು ಅತ್ಯಂತ ನಿರ್ಭಾವುಕವಾಗಿ ಧ್ಯಾನಸ್ಥ ಸ್ಥಿತಿಯಲ್ಲಿಯೇ ವರ್ಣಿಸುತ್ತಾರೆ. ಅದು ಹೇಗೆ ಅನುಭವ ನೀಡುತ್ತದೆ ಎಂದರೆ ಓದುವವರು ಕೂಡ ಒಮ್ಮೆ ಧ್ಯಾನಸ್ಥ ಮನಸ್ಥಿತಿಯನ್ನ ತಲುಪಬೇಕು ಹಾಗಿರುತ್ತದೆ.

ಯೋರೋಪಿನ ಇನ್ನೊಂದು ನಗರವನ್ನು ವರ್ಣಿಸುವ ಮತ್ತೊಬ್ಬ ಲೇಖಕರು ಆ ಇಡೀ ನಗರ ನಿಧಾನವಾಗಿ ಸಂಗೀತದ ನಿನಾದದಂತೆ
ಚಲಿಸುವ ಅನುಭವವಾಗುತ್ತದೆ ಎಂದು ಬರೆಯುತ್ತಾರೆ. ಅಲ್ಲಿನ ಜನಜೀವನ ಮೌನದ ಅರ್ಥ ಹೊಮ್ಮಿಸುವಂತೆ ನಿಧಾನವಾಗಿ ಚಲಿಸುವ ರೀತಿಯಲ್ಲಿ ಇರುತ್ತದೆ ಎಂದು ವರ್ಣಿಸುವುದನ್ನು ಓದುವಾಗಲೇ ನಾವು ಕೂಡ ಅದರೊಂದಿಗೆ ಚಲಿಸುವಂತೆ ಭಾಸವಾಗುತ್ತದೆ.

ಈ ಲೇಖನ ಬರೆಯಲು ಸಹ ಮುಖ್ಯ ಕಾರಣ, ಇಂದಿನ ಆಧುನಿಕ ಸಂಕೀರ್ಣ ಸಮಾಜದಲ್ಲಿ ನಮ್ಮ ಮನಸ್ಸುಗಳು ಸಹ ಪ್ರಕ್ಷ್ಯುಬ್ಧವಾಗಿದೆ. ಪ್ರಶಾಂತತೆ, ಮೌನ, ಧ್ಯಾನಸ್ಥ ಮನಸ್ಥಿತಿ ನಮ್ಮಿಂದ ಬಹುತೇಕ ದೂರವಾಗಿದೆ. ಪ್ರತಿ ನಿಮಿಷ, ಪ್ರತಿ ಗಂಟೆ, ಪ್ರತಿದಿನ ಓಡುತ್ತಲೇ ಇದ್ದೇವೆ, ಓಡುತ್ತಲೇ ಇದ್ದೇವೆ. ದೇಹ ಮಾತ್ರವಲ್ಲ ಮನಸ್ಸು ಓಡುತ್ತಲೇ ಇದೆ, ಗೊಂದಲಗೊಂಡಿದೆ, ದ್ವಂದ್ವವಿದೆ, ಸಂಘರ್ಷವಿದೆ, ನಿರಾಸೆ ಇದೆ, ಕೋಪವಿದೆ, ಅಸೂಯೆ ಇದೆ ಅದನ್ನು ನಿಯಂತ್ರಿಸುವ ಹಾದಿ ನಾವು ಕಂಡುಕೊಳ್ಳಬೇಕಾಗಿರುವ ಧ್ಯಾನಸ್ಥ ಮನಸ್ಥಿತಿ.

ಪ್ರಕೃತಿಗೆ ಧ್ಯಾನಸ್ಥ ಮನಸ್ಥಿತಿ ಸಾಧ್ಯವಾಗುವುದಾದರೆ, ಮೌನಕ್ಕೆ ಧ್ಯಾನಸ್ಥ ಮನಸ್ಥಿತಿ ಸಾಧ್ಯವಾಗುವುದಾದರೆ, ಪ್ರಾಣಿ, ಪಕ್ಷಿ, ಸಕಲ ಜೀವರಾಶಿಗಳಿಗೆ ಧ್ಯಾನಸ್ಥ ಮನಸ್ಥಿತಿ ಸಾಧ್ಯವಾಗುವುದಾದರೆ, ಮನುಷ್ಯರಾದ, ನಾಗರಿಕ ಸಮಾಜದ ಭಾಗವಾದ ನಮಗೆ ಆ ಧ್ಯಾನಸ್ಥ ಮನಸ್ಥಿತಿ ಏಕೆ ಸಾಧ್ಯವಾಗುವುದಿಲ್ಲ. ಸದಾ ಕಾಲ ಗಡಿಬಿಡಿಯ ಮನಸ್ಥಿತಿಯಲ್ಲಿ ಕಳೆದುಹೋಗುತ್ತಿರುವ ನಾವು, ಹೇಗಾದರೂ ಮಾಡಿ ಧ್ಯಾನಸ್ಥ ಮನಸ್ಥಿತಿಯನ್ನ ತಲುಪಲೇಬೇಕಿದೆ. ಆಗ ಖಂಡಿತವಾಗಲೂ ನಮ್ಮ ಜೀವನ ಮಟ್ಟ ಸುಧಾರಿಸುವುದು ನಿಶ್ಚಿತ.

ಇಂದು ನಾವು ಪ್ರತಿಕ್ಷಣ ಕೇಳುತ್ತಿರುವ ಅಪಘಾತ, ಅಪರಾಧ, ಆತ್ಮಹತ್ಯೆ, ಅನಾಹುತ, ಅತೃಪ್ತಿ, ಅಸಹಿಷ್ಣುತೆ ಮುಂತಾದ ಗಂಡು ಕೇಳರಿಯದ ಭಾವನೆಗಳಿಗೆ, ಘಟನೆಗಳಿಗೆ, ಪ್ರತಿಕ್ರಿಯೆಗಳಿಗೆ ಉತ್ತರ ರೂಪದಲ್ಲಿ ಧ್ಯಾನಸ್ಥ ಮನಸ್ಥಿತಿ ರೂಪಗೊಳ್ಳಬಹುದು. ಬದುಕಿನ ಬಗ್ಗೆ ಇರುವ ನಿರಾಸೆ ಕಡಿಮೆಯಾಗಿ ಜೀವನೋತ್ಸಾಹ ಪುಟಿದೇಳಬಹುದು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ…

13 hours ago

ಬರದ ಬವಣೆಗೆ ಸಿಲುಕಿದ ದೊಡ್ಡಬಳ್ಳಾಪುರ: ಬರಪೀಡಿತ ಪಟ್ಟಿಗೆ ಸೇರ್ಪಡೆ

ಬೆಂಗಳೂರು ಗ್ರಾಮಾಂತರ: ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ದೊಡ್ಡಬಳ್ಳಾಪುರ ತಾಲೂಕು ಇದೀಗ ಬರಪೀಡಿತ ತಾಲೂಕುಗಳ ಪಟ್ಟಿಗೆ…

15 hours ago

50 ಲಕ್ಷ ಲಂಚ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ!

ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ…

16 hours ago

ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು-ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ

ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭೂತಪೂರ್ವ ವೇಗ ನೀಡಿದ್ದಾರೆ. ಒಂದೆಡೆ ಮೇಕೆದಾಟು ಯೋಜನೆ…

20 hours ago

ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ ಪತ್ನಿ ಶವವಾಗಿ ಪತ್ತೆ: ಸಾವಿನ ಹಿಂದೆ ಕೊಲೆ ಶಂಕೆ; ಪತಿಯ ಚಲನವಲನಗಳ ಕುರಿತು ಪೊಲೀಸರಿಂದ ತನಿಖೆ

ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ 21 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೃತರನ್ನು ಗೌರಿಬಿದನೂರು ತಾಲೂಕಿನ…

22 hours ago

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಡಿ.ಜಿ. ನೇಮಕ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹ ಆಡಳಿತ ಉಸ್ತುವಾರಿಯಾಗಿ…

1 day ago