ಹವಾಮಾನ ವೈಪರಿತ್ಯಕ್ಕೆ ತತ್ತರಿಸಿದ ಕೃಷಿ: ಮಾವು, ದ್ರಾಕ್ಷಿ, ತರಕಾರಿ ಬೆಳೆಗಳಿಗೆ ಭಾರೀ ಹೊಡೆತ

ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ತೀವ್ರ ಬೇಸಿಗೆ ಮತ್ತು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. 2026-27ನೇ ಸಾಲಿನ ಪೂರ್ವ ಮುಂಗಾರು ಅವಧಿಯಲ್ಲಿ ಹವಾಮಾನದಲ್ಲಿ ಉಂಟಾದ ತೀವ್ರ ವ್ಯತ್ಯಾಸ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಸೂಪರ್ ಎಲಿನಿನೋ ಪರಿಣಾಮದಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶೇ.30ರಷ್ಟು ಮಳೆ ಕೊರತೆ ಕಂಡುಬಂದಿದ್ದು, ಇದರ ನೇರ ಪರಿಣಾಮ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ಬೀಳುತ್ತಿದೆ ಎಂದು ಬೆಂ.ಗ್ರಾ. ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ತಿಳಿಸಿದ್ದಾರೆ.

ಈ ಹಿಂದೆ ಬೇಸಿಗೆಯ ತಾಪಮಾನ ಕೇವಲ ವಾರ ಅಥವಾ ಹತ್ತು ದಿನಗಳ ಮಟ್ಟಿಗೆ ಮಾತ್ರ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿಯಿಂದಲೇ ಉರಿ ಬೇಸಿಗೆ ಆರಂಭವಾಗಿದ್ದು, ಹಗಲಿನ ತಾಪಮಾನ 35 ಡಿಗ್ರಿ ಸೆಲ್ಷಿಯಸ್ ಗಡಿ ದಾಟುತ್ತಿದೆ. ರಾತ್ರಿ ಸಮಯದಲ್ಲೂ 27 ಡಿಗ್ರಿಗೂ ಹೆಚ್ಚು ತಾಪಮಾನ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕಡಿಮೆ ಆದ್ರತೆ ಮತ್ತು ಅಧಿಕ ತಾಪಮಾನದಿಂದ ಹವಾಮಾನ ವೈಪರಿತ್ಯ ಉಂಟಾಗಿ ಮಳೆ ಸಕಾಲಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾವು ಬೆಳೆಗೆ ದೊಡ್ಡ ಹೊಡೆತ

ಈ ಬಾರಿಯ ಬಿಸಿಗಾಳಿ ಮತ್ತು ಉಷ್ಣಾಂಶ ಏರಿಕೆಯಿಂದ ಮಾವು ಬೆಳೆ ಅತ್ಯಂತ ಹಾನಿಗೊಳಗಾಗಿದೆ. ಫೆಬ್ರವರಿಯಲ್ಲಿ ಮಾವಿನ ಮರಗಳಲ್ಲಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದರೂ, ಹೆಚ್ಚಿನ ತಾಪಮಾನದಿಂದ ಹೂಗಳು ಕಾಯಿಯಾಗುವ ಪ್ರಕ್ರಿಯೆ ವಿಫಲವಾಗಿದೆ. ಪರಾಗಸ್ಪರ್ಶವಾದ ಬಳಿಕ ಕಾಯಿಯಾಗಬೇಕಿದ್ದ ಹೂಗಳು ಒಣಗಿ ಮಣ್ಣಿನಲ್ಲಿ ಬೆರೆತಿವೆ. ಉಳಿದಿರುವ ಕೆಲ ಕಾಯಿಗಳೂ ಸಹ ಸೂರ್ಯನ ತೀವ್ರ ಕಿರಣಗಳಿಗೆ ತುತ್ತಾಗಿ ಹಾನಿಗೊಳಗಾಗುತ್ತಿವೆ.

ಸಾಮಾನ್ಯವಾಗಿ 450 ಗ್ರಾಂ ತೂಕ ಬರಬೇಕಾದ ಬಾದಾಮಿ ಮಾವಿನಕಾಯಿ 300 ಗ್ರಾಂಗೂ ಕಡಿಮೆ ತೂಕ ಹೊಂದಿದ್ದು, 500 ಗ್ರಾಂ ಇರಬೇಕಾದ ಮಲ್ಲಿಕಾ ಮಾವು 400 ಗ್ರಾಂ ಸುತ್ತಮುತ್ತ ಮಾತ್ರ ತೂಕ ತಾಳುತ್ತಿದೆ. ಹಣ್ಣಿನ ಗಾತ್ರ ಕಡಿಮೆಯಾಗುವುದರ ಜೊತೆಗೆ ಬಣ್ಣ ಮತ್ತು ರುಚಿಯಲ್ಲಿಯೂ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವ ಸಾಧ್ಯತೆ ಹೆಚ್ಚಿದ್ದು, ಮಾವು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

ದ್ರಾಕ್ಷಿ ಮತ್ತು ತರಕಾರಿ ಬೆಳೆಗಳಿಗೂ ಬಿಸಿ ಬಿಸಿ ಪೆಟ್ಟು

ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿಯ ಮೇಲೂ ತಾಪಮಾನ ಪರಿಣಾಮ ಬೀರಿದೆ. ಈಗಾಗಲೇ ಬೆಳವಣಿಗೆಯ ಹಂತದಲ್ಲಿರುವ ದ್ರಾಕ್ಷಿ ಕಾಯಿಗಳು ಉರಿ ಬಿಸಿಲಿನಿಂದ ಕುಂಠಿತವಾಗುತ್ತಿವೆ. ಇಂತಹ ಸಂದರ್ಭದಲ್ಲಿ ದಿಢೀರ್ ಮಳೆ ಬಂದರೆ ಕಾಯಿಗಳಲ್ಲಿ ಒಡಕು ಉಂಟಾಗಿ ನೆಲಕ್ಕೆ ಬೀಳುವ ಸಾಧ್ಯತೆ ಹೆಚ್ಚಿದೆ. ದೀರ್ಘಾವಧಿಯ ತಾಪಮಾನದ ಒತ್ತಡದಿಂದ ಕೊಯ್ಲಿಗೆ ಬರುವ ಮುನ್ನವೇ ಕಾಯಿ ಹಾಳಾಗುತ್ತಿದೆ.

ಕೃಷಿ ಬೋರ್‌ವೆಲ್‌ಗಳಲ್ಲಿ ನೀರಿನ ಅಭಾವ

ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿ ಬೋರ್‌ವೆಲ್‌ಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ನೀರಿನ ಕೊರತೆಯಿಂದ ಅನೇಕ ಪಂಪ್‌ಸೆಟ್‌ಗಳು ಸ್ಥಗಿತಗೊಂಡಿವೆ. ಹಿಂದೆ ಎರಡು ಎಕರೆಯಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದ ರೈತರು ಈಗ ಅರ್ಧ ಎಕರೆಯಲ್ಲೂ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಬೀನ್ಸ್, ಟೊಮೆಟೊ, ಆಗಲಕಾಯಿ, ಹೀರೇಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಗಳಲ್ಲಿ ಶೇ.40ರಷ್ಟು ಇಳುವರಿ ಕುಸಿತ ಕಂಡುಬಂದಿದೆ.

ಹೂಬೆಳೆ, ಅಡಿಕೆಗೂ ಸಂಕಷ್ಟ

ಅಧಿಕ ತಾಪಮಾನದಿಂದ ಗುಲಾಬಿ, ಸೇವಂತಿಗೆ ಸೇರಿದಂತೆ ಹೂಬೆಳೆಗಳ ಉತ್ಪಾದನೆಯೂ ಕುಸಿದಿದೆ. ಹೂಗಳ ತಾಜಾತನ ಮತ್ತು ಗುಣಮಟ್ಟ ಕಡಿಮೆಯಾಗುತ್ತಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಇದೇ ರೀತಿ ಬಹುವಾರ್ಷಿಕ ಬೆಳೆಗಳಾದ ಅಡಿಕೆ ಗಿಡಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ. ಅಡಿಕೆ ಗರಿಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಕೆಲವೆಡೆ ಸುಟ್ಟು ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ.

ಕೀಟಬಾಧೆ ಹೆಚ್ಚಳ

ಒಣಹವೆಯಿಂದ ಬೆಳೆಗಳಲ್ಲಿ ಕೀಟಬಾಧೆ ಹೆಚ್ಚಾಗಿರುವುದೂ ರೈತರಿಗೆ ಮತ್ತೊಂದು ತಲೆನೋವಾಗಿದೆ. ಅಡಿಕೆ ಬೆಳೆಗಳಲ್ಲಿ ಕೆಂಪು ನುಸಿ ಕೀಟ, ಸುಳಿ ತಿಗಣೆ ಕಾಟ ಹೆಚ್ಚಾಗಿದೆ. ತರಕಾರಿ ಬೆಳೆಗಳಲ್ಲಿ ತ್ರಿಪ್ಸ್, ಎಫಿಡ್ಸ್, ಮೀನಿ ಬಗ್ಸ್ ಹಾಗೂ ಬಿಳಿ ಶಲ್ಕಗಳ ಹಾವಳಿ ಹೆಚ್ಚಿದ್ದು, ಬೆಳೆ ನಾಶವಾಗುತ್ತಿದೆ. ಮಾವಿನ ತೋಟಗಳಲ್ಲಿ ಹೂಜಿ ಕೀಟದ ದಾಳಿ ಹೆಚ್ಚಾಗಿದೆ.

ಹೈನುಗಾರಿಕೆಯ ಮೇಲೂ ಪರಿಣಾಮ

ಹವಾಮಾನ ವೈಪರಿತ್ಯ ಹೈನುಗಾರಿಕೆಯ ಮೇಲೂ ದುಷ್ಪರಿಣಾಮ ಬೀರಿದೆ. ಹಸಿ ಹುಲ್ಲಿನ ಕೊರತೆಯಿಂದ ಹಸುಗಳಿಗೆ ಸಮರ್ಪಕ ಮೇವು ಸಿಗುತ್ತಿಲ್ಲ. ಒಣ ಹುಲ್ಲಿನ ಅವಲಂಬನೆ ಹೆಚ್ಚಿರುವುದರಿಂದ ಹಾಲಿನ ಉತ್ಪಾದನೆ ಕುಸಿದಿದೆ. ಇದರಿಂದ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಸಹ ಸಂಕಷ್ಟ ಅನುಭವಿಸುವಂತಾಗಿದೆ.

ದ್ರಾಕ್ಷಿ ಬೆಳೆಗಾರ ರಾಕೇಶ್ ಮಾತನಾಡಿ, ಸಾಲ ಮಾಡಿ ಎರಡು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೇವೆ. ಬೇಸಿಗೆ ತಾಪಮಾನ‌ ಹೆಚ್ಚಾಗಿ ಕಾಯಿ ನೆಲಕ್ಕೆ ಬಿದ್ದಿವೆ. ಫಸಲು ಕೈಗೆ ಸಿಗುತ್ತಿಲ್ಲ. ಇರೋ ಹಣ್ಣಿಗೆ ಇಳುವರಿ ಬರುತ್ತಿಲ್ಲ. ಸಾಲಗಾರರು ಮನೆ ಬಳಿ ಬರುತ್ತಿದ್ದಾರೆ. ನಮಗೆ ದಿಕ್ಕೇ ತೋಚದಂತೆ ಆಗಿದೆ ಎಂದು ತಮ್ಮ ಆಳಲು ತೋಡಿಕೊಂಡರು.

ಅಡಿಕೆ ಬೆಳಗಾರ ರವಿಕುಮಾರ್ ಮಾತನಾಡಿ, ಸೂರ್ಯನ ಶಾಖದ ಕಿರಣಗಳಿಗೆ ಅಡಿಕೆ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಬಾಡುತ್ತಿವೆ. ದಿನದಿನಕ್ಕೆ ಬೋರ್ ವೆಲ್ ಗಳಲ್ಲಿ ನೀರು ಬತ್ತಿಹೋಗುತ್ತಿದೆ. ಬೆಳೆಗೆ ಸಾಕಾಗುವಷ್ಟು ನೀರಿಲ್ಲ. ಈ ಬಾರಿ ನಾವು ನಿರೀಕ್ಷಿಸಿದಷ್ಟು ಫಸಲು ಬರೋದಿಲ್ಲ. ನಷ್ಟದ ಭೀತಿಯಲ್ಲಿ ಇದ್ದೇವೆ ಎಂದರು.

ಒಟ್ಟಿನಲ್ಲಿ, ಮಳೆ ಕೊರತೆ, ಉರಿ ಬಿಸಿಲು ಮತ್ತು ಹವಾಮಾನ ವೈಪರಿತ್ಯದಿಂದ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಸೂಕ್ತ ನೆರವು ಮತ್ತು ಮಾರ್ಗದರ್ಶನ ದೊರಕಬೇಕೆಂಬ ಆಗ್ರಹ ರೈತರಿಂದ ಕೇಳಿಬರುತ್ತಿದೆ.

Ramesh Babu

Journalist

Recent Posts

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ….

ನೀಟ್ ಪ್ರಶ್ನೆ ಪತ್ರಿಕೆ ಬಯಲು.... ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ. ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ…

22 minutes ago

ಸೈಕಲ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಬೈಕ್: ಮಹಿಳೆ ಸಾವು

ದೇವನಹಳ್ಳಿ: ರಸ್ತೆಯಲ್ಲಿ ತೆರಳುತ್ತಿದ್ದ ಸೈಕಲ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು, ಬಳಿಕ ಬೈಕ್ ಡಿವೈಡರ್‌ಗೆ ಅಪ್ಪಳಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ…

13 hours ago

ಬೆಳೆಗಳಿಗೆ ಅಸಮರ್ಪಕ ರಸಗೊಬ್ಬರ ಬಳಕೆ: ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ- ಮಣ್ಣು ವಿಜ್ಞಾನಿ ಡಾ. ಬಾಲಾಜಿ ನಾಯ್ಕ್

ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ…

18 hours ago

ಬಾಲ್ಯ ವಿವಾಹ ತಡೆದ ಅಧಿಕಾರಿಗಳು: 16 ವರ್ಷದ ಬಾಲಕಿ ರಕ್ಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದು 16 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.…

20 hours ago

ರಾಜ್ಯದಲ್ಲಿ ಹೆಚ್ಚಿದ ಸನ್ ಸ್ಟ್ರೋಕ್‌ ಪ್ರಕರಣ : ಉರಿ ಬಿಸಿಲಿಗೆ ತತ್ತರಿಸಿದ ಜನಜೀವನ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೇ ತಿಂಗಳ ಉರಿ ಬಿಸಿಲು ಜನರನ್ನು…

21 hours ago

ವಿಜಯ್, ಆಃಡವನ್ ಮತ್ತು ಪ್ರಮಾಣವಚನ ನಿಷ್ಠೆ…….

ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ...…

1 day ago