Categories: ಲೇಖನ

ಪ್ರಶಂಸನೀಯ ಕೆಲಸಕ್ಕಾಗಿ ಅಭಿನಂದನೆಗಳು….

ಕರ್ನಾಟಕದ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವರಿಗೆ ಸ್ವಲ್ಪ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಹೇಳೋಣವೇ……..

ನಿಜ, ಇದು ಅವರ ಕರ್ತವ್ಯ. ಅದಕ್ಕಾಗಿ ಅವರು ಸರ್ಕಾರಿ ಸಂಬಳವನ್ನು ಪಡೆಯುತ್ತಾರೆ. ಆದರು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ ಮಾಡುತ್ತಿರುವುದಕ್ಕೆ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಸಣ್ಣ ಜವಾಬ್ದಾರಿ ಎಂದು ಭಾವಿಸುತ್ತಾ…….

ಇತ್ತೀಚಿನ ಕೆಲವು ತಿಂಗಳುಗಳಿಂದ ಆರೋಗ್ಯ ಇಲಾಖೆ ಆಹಾರ ಕಲಬೆರಕೆ, ಆಹಾರದಲ್ಲಿ ವಿಷಯುಕ್ತ ರಾಸಾಯನಿಕಗಳ ಪತ್ತೆ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು, ಬಣ್ಣದ ಲೇಪಿತ ಆಹಾರಗಳ ಮೇಲೆ ನಿಷೇಧ, ಅಜಿನೋಮೋಟೋದಂತ ಟೇಸ್ಟಿ ಪೌಡರ್ ಬಳಕೆಯ ನಿರ್ಬಂಧ, ಟ್ಯಾಟೂ ನಿಷೇಧ ಹೀಗೆ ಒಂದಷ್ಟು ಕ್ರಮಗಳು ಕೈಗೊಳ್ಳುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇವೆ. ಇದನ್ನು ಬಹಳ ವರ್ಷಗಳ ಹಿಂದೆಯೇ ಮಾಡಬೇಕಿತ್ತು, ಆದರೆ ಆರೋಗ್ಯ ಇಲಾಖೆಗೆ ಬಂದ ಇತ್ತೀಚಿನ ಮಾಹಿತಿಯಂತೆ ಕ್ಯಾನ್ಸರ್, ಹೃದ್ರೋಗ, ಥೈರಾಯ್ಡ್, ಬಿಪಿ, ಅಸಿಡಿಟಿ, ಮಧುಮೇಹ ಮುಂತಾದ ಖಾಯಿಲೆಗಳು ತೀರಾ ವಿಪರೀತ ಎನ್ನುವಷ್ಟು ಅಂಕಿ ಅಂಶಗಳು ತೋರಿಸುತ್ತಿರುವುದರಿಂದ ಹಾಗೂ ಜನರಿಗೂ ಕೂಡ ಈ ಬಗ್ಗೆ ಒಳಗೊಳಗೆ ಆಕ್ರೋಶ ಉಂಟಾಗುತ್ತಿರುವುದನ್ನು ಗಮನಿಸಿ ಈ ಕ್ರಮಕ್ಕೆ ಮುಂದಾಗಿರುವುದು ಸಂತೋಷದ ವಿಷಯವೇ…..

ಆದರೆ ಇದನ್ನು ಕೇವಲ ಪ್ರಚಾರಕ್ಕಾಗಿಯೋ ಅಥವಾ ತಾವು ಈ ಬಗ್ಗೆ ಮಹಾನ್ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎನ್ನುವ ತೋರಿಕೆಯ ಮನೋಭಾವದಿಂದ ಮಾಡಿದರೆ ಯಾವುದೇ ಪ್ರಯೋಜನವೂ ಇಲ್ಲ ಮತ್ತು ಸಾಮಾನ್ಯ ಜನ ಇದನ್ನು ಕ್ಷಮಿಸುವುದೂ ಇಲ್ಲ.

ಈಗ ಆರೋಗ್ಯ ಇಲಾಖೆ ಆಹಾರದ ವಿಷಯದಲ್ಲಿ ಜಾಗೃತಿ ವಹಿಸಿ ಏನು ಕ್ರಮ ಕೈಗೊಳ್ಳುತ್ತಿದೆಯೋ ಅದನ್ನು ನಿರಂತರವಾಗಿ ಮತ್ತು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ಇದನ್ನು ಸರಿಪಡಿಸಲು ಸಾರ್ವಜನಿಕರು ಜಾಗೃತಿ ವಹಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕಾಗುತ್ತದೆ. ಅಗತ್ಯವಿದ್ದರೆ ಒಂದಷ್ಟು ಕಠಿಣ ಕಾನೂನುಗಳನ್ನು ರೂಪಿಸಬೇಕಾಗುತ್ತದೆ.

ಇದು ನಿಜಕ್ಕೂ ಸಾಮಾನ್ಯ ಕೆಲಸವಲ್ಲ, ಖಂಡಿತವಾಗಲೂ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಪುಣ್ಯದ ಕೆಲಸ ಎಂದು ನೇರವಾಗಿ ಹೇಳಬಹುದು. ದೇಶಭಕ್ತಿ, ಧರ್ಮಭಕ್ತಿ ಕೇವಲ ಘೋಷಣೆಗಳಲ್ಲ. ಈ ರೀತಿಯ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದೇ ಧರ್ಮ ದೇವರನ್ನು ಒಲಿಸುವ ಪರಿ, ದೇಶವನ್ನು ಅಭಿವೃದ್ಧಿ ಪಡಿಸುವ ಪರಿಯೂ ಹೌದು…

ಸಮಾಜ ಮತ್ತು ಸರ್ಕಾರದಲ್ಲಿ ಭ್ರಷ್ಟಾಚಾರವಿದೆ, ಜಾತೀಯತೆಯಿದೆ, ಸ್ವಜನ ಪಕ್ಷಪಾತವಿದೆ. ಆದರೆ ಅದನ್ನು ಮೀರಿ ತಿನ್ನುವ ಆಹಾರ ಇಡೀ ಮನುಷ್ಯನ ಜೀವನವನ್ನೇ ಬದುಕನ್ನೇ ಕಸಿದುಕೊಳ್ಳುತ್ತಿರುವಾಗ ಈ ನಿಟ್ಟಿನಲ್ಲಾದರೂ ಶೇಕಡ ನೂರರಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ಕಲಬೆರಕೆ ವಿಷಯದಲ್ಲಿ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅದನ್ನು ಎಲ್ಲರೂ ಗಮನಿಸಬೇಕಿದೆ..

ಖಂಡಿತವಾಗಿ ಆರೋಗ್ಯ ಇಲಾಖೆಯ  ಈ ಕ್ರಮಗಳು ಸಾರ್ವಜನಿಕ ಮೆಚ್ಚುಗೆ ಗಳಿಸಿ ಅಧಿಕಾರಿಗಳಿಗೂ, ಮಂತ್ರಿಗಳಿಗೂ ಒಂದಷ್ಟು ಪ್ರೋತ್ಸಾಹ ದೊರೆತು ಈ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡರೆ ಅವರನ್ನು ಎಲ್ಲರೂ ಹೃದಯಪೂರ್ವಕವಾಗಿ ಅಭಿನಂದಿಸೋಣ. ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಒತ್ತಾಯ ಮಾಡೋಣ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಹ ಕಲಬೆರಕೆ, ವಿಷಯುಕ್ತ ರಾಸಾಯನಿಕಗಳ ಬಳಕೆ, ಅವಧಿ ಮುಗಿದ ಆಹಾರ ಪದಾರ್ಥಗಳು, ಸ್ವಚ್ಚತೆಯ ಕೊರತೆ ಮುಂತಾದ ಸಮಸ್ಯೆಗಳು ವ್ಯಾಪಕವಾಗಿ ಹರಡಿದೆ. ಅದರತ್ತಲ್ಲೂ ವಿಶೇಷ ಗಮನ ನೀಡಬೇಕಾಗಿದೆ…….

ಹಾಗೆಯೇ ಮಾದಕ ವಸ್ತುಗಳ ವಿಷಯದಲ್ಲಿ ಮತ್ತು ಆನ್ಲೈನ್ ಜೂಜು ವಿಷಯದಲ್ಲಿ ಸಹ ಅದಕ್ಕೆ ಸಂಬಂಧಪಟ್ಟ ಮಂತ್ರಿಗಳು ಮತ್ತು ಅಧಿಕಾರಿಗಳು ಒಂದು ವೇಳೆ ಇದೇ ರೀತಿಯ ಕ್ರಮಗಳನ್ನು ಕೈಗೊಂಡರೆ ಎಷ್ಟೊಂದು ಸಂತೋಷವಲ್ಲವೇ. ಅವರ ಬಗ್ಗೆಯೂ ಖಂಡಿತ ಮನದುಂಬಿ ಅಭಿನಂದಿಸೋಣ,

ಹೌದು, ಪೋಲಿಸ್ ಇಲಾಖೆ, ಕಾಮಗಾರಿ ಇಲಾಖೆ, ನೋಂದಣಿ ಇಲಾಖೆ ಮುಂತಾದ ಇಲಾಖೆಗಳಲ್ಲಿ ಭ್ರಷ್ಟಾಚಾರವಿದೆ. ಅನೇಕ ಲೋಪದೋಷಗಳಿವೆ. ಆದರೆ ಅವುಗಳು ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದವು. ಇಂದಲ್ಲ ನಾಳೆ ಅದನ್ನು ಹೇಗೋ ಸರಿಪಡಿಸಿಕೊಳ್ಳಬಹುದು. ಆದರೆ ಆಹಾರ ಮತ್ತು ನೀರಿನಿಂದ ಮನುಷ್ಯನ ದೇಹ ಮತ್ತು ಮನಸ್ಸೇ ಮಲಿನವಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ…

ಆಹಾರದ ಗುಣಮಟ್ಟ, ನೀರಿನ ಗುಣಮಟ್ಟ, ಪರಿಸರದ ಗುಣಮಟ್ಟಗಳ ಜೊತೆಗೆ, ಮಾದಕ ದ್ರವ್ಯಗಳ ನಿರ್ಮೂಲನೆ, ಜೂಜು ತಾಣಗಳ ಸರ್ವನಾಶ, ಬಹಳ  ಮುಖ್ಯವಾದದ್ದು. ಅದನ್ನು ನಿಜಕ್ಕೂ ರಾಜಕೀಯ ಹೊರತುಪಡಿಸಿ ಮಂತ್ರಿಗಳು, ಅಧಿಕಾರಿಗಳು ತಮ್ಮೆಲ್ಲ ಶ್ರಮವಹಿಸಿ ಕೆಲಸ ಮಾಡಿದಲ್ಲಿ ನಿಜಕ್ಕೂ ಅದ್ಭುತ ಬದಲಾವಣೆಯನ್ನು, ಆರೋಗ್ಯಕರ ಸಮಾಜವನ್ನು ನೋಡುವ ಸಾಧ್ಯತೆ ಇದೆ….

ವೈದ್ಯಕೀಯ ಕ್ಷೇತ್ರ ತುಂಬಾ ದುಬಾರಿಯಾಗುತ್ತಿರುವಾಗ, ರೋಗಗಳು, ಸಾವುಗಳು ಸಹಜವಾಗುತ್ತಿರುವಾಗ ಇಂತಹ ಕ್ರಮಗಳು ಮನದ ಮೂಲೆಯಲ್ಲಿ ಭರವಸೆ ಮೂಡಿಸಿ ಸಮಾಜದ ಬಗ್ಗೆ ಒಂದಷ್ಟು ನಂಬಿಕೆ ವಿಶ್ವಾಸ ಮೂಡಿಸಿದರೆ ಅದೇ ಒಂದು ಪುಣ್ಯದ ಕೆಲಸ. ಅದಕ್ಕಾಗಿಯೇ ಈ ರೀತಿಯ ಅಭಿಯಾನಗಳು ಸಾರ್ವಜನಿಕರು ಒಳಗೊಳ್ಳುವಂತಹ ಒಂದು ಪ್ರಕ್ರಿಯೆ ಪ್ರಾರಂಭವಾದರೆ ನಿಜಕ್ಕೂ ಹೆಮ್ಮೆ ಪಡಬಹುದು. ಹಾಗಾಗಲಿ ಎಂದು ಆಶಿಸುತ್ತಾ……

ಸದಾ ವ್ಯವಸ್ಥೆಯ ಬಗ್ಗೆ ವಿಮರ್ಶಾತ್ಮಕ ಟೀಕೆ ಟಿಪ್ಪಣಿಗಳನ್ನೇ ಹೆಚ್ಚಾಗಿ ಮಾಡುವ ನಾವು ಆಗಾಗ ಉತ್ತಮ ಕೆಲಸಗಳನ್ನು ಅಭಿನಂದಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಒಳ್ಳೆಯ ಕೆಲಸ ಮಾಡುವವರಿಗೆ ನಮ್ಮಿಂದ ಸ್ವಲ್ಪ ಉತ್ತೇಜನ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಸವನಹಳ್ಳಿಯಲ್ಲಿ ಅದ್ವಿತಾ ಜನ್ಮದಿನ ಅರ್ಥಪೂರ್ಣ ಆಚರಣೆ

ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಪೋಷಕತ್ವದಲ್ಲಿ, ಕೇಶವ ಮತ್ತು ಸುಷ್ಮಾ ದಂಪತಿಯ ಪುತ್ರಿ ಅದ್ವಿತಾ ಅವರ ಜನ್ಮದಿನವನ್ನು ಬಿಸವನಹಳ್ಳಿ…

16 minutes ago

ಕಾರಿಗೆ ಅಡ್ಡ ಬಂದ ನಾಯಿ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ದೊಡ್ಡಬಳ್ಳಾಪುರ: ಹಿಂದೂಪುರ–ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ದಿಢೀರನೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ…

3 hours ago

ಅನುಭವ, ಹಿರಿತನಕ್ಕೆ ತಕ್ಕಂತೆ ಸಚಿವ ಸ್ಥಾನ ನೀಡಿ- ಮನು.ಆರ್.ವಿ ಒತ್ತಾಯ

ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ…

15 hours ago

ಜೂ..7ರಂದು ‘ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ- ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಗಿರೀಶ್ ಕೆ

ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ…

16 hours ago

ಜೂ. 20 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಂಭ- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಯನ್ನು…

19 hours ago

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

  ದೊಡ್ಡಬಳ್ಳಾಪುರ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಇಂದು ಮಾಡುವ ಸಣ್ಣ…

21 hours ago