Categories: ಲೇಖನ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಾಗಿದೆ……..ಒಂದು ಅಂತರಂಗದ ಅಭಿಯಾನ..

ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ ಹೋದವು. ಇನ್ನೊಂದಷ್ಟು ಜನ ಅನಾರೋಗ್ಯಗಳಿಗೆ ತುತ್ತಾದರು. ಪ್ರಾಣಿಪಕ್ಷಿಗಳು ಕಣ್ಣ ಮುಂದೆಯೇ ತುಂಬಾ ಒದ್ದಾಡಿದವು……

ಈಗ ಎರಡು ಮೂರು ದಿನದಿಂದ ಸ್ವಲ್ಪಮಟ್ಟಿಗೆ ಉಷ್ಣಾಂಶ ಕಡಿಮೆಯಾಗಿದೆ. ಆದರೆ ಆ ತಾಪಮಾನದ ಹೊಡೆತ ನಮಗೆ ಒಂದು ಬಹುದೊಡ್ಡ ಪಾಠವಾಗಬೇಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ವರ್ಷ ಹೀಗೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಾಸ್ತಿಯಾಗುತ್ತಾ ಹೋಗುತ್ತದೆ ಎಂದು ಯಾರೋ ಬರೆದ ಒಂದು ಲೇಖನ ಪ್ರಸಾರವಾಗುತ್ತಿದೆ. ಅದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಮುಂದೆಯೂ ಪರಿಸರವನ್ನು ಹೀಗೇ ನಿರ್ಲಕ್ಷಿಸಿದರೆ ಖಂಡಿತವಾಗಿಯೂ ತಾಪಮಾನದ ಹೊಡೆತಕ್ಕೆ ನಾವೆಲ್ಲರೂ ನಾಶವಾಗುವುದು ನಿಶ್ಚಿತ. ಅದಕ್ಕಾಗಿ ಆ ಹಂತ ತಲುಪುವ ಮುನ್ನವೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಆ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡಬೇಕಾಗಿದೆ……..

ಮುಖ್ಯವಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಈ ವರ್ಷದ ಈಗ ಪ್ರಾರಂಭವಾಗಿರುವ ಮಳೆಗಾಲದಲ್ಲಿ ಕನಿಷ್ಠ ಒಂದು ಲಕ್ಷ ಗಿಡಗಳನ್ನು ಬೆಳೆಸುವ ಪ್ರತಿಜ್ಞೆ ಮಾಡಬೇಕು. ಹಾಗೆಯೇ ಹೋಬಳಿ ಮಟ್ಟದಲ್ಲಿ 10 ಲಕ್ಷ ಗಿಡಗಳು, ತಾಲೂಕು ಮಟ್ಟದಲ್ಲಿ 50 ಲಕ್ಷದಷ್ಟು ಗಿಡಗಳು ಮತ್ತು ಗ್ರೇಡ್-ಒನ್ ನಗರಗಳಲ್ಲಿ ಅಂದರೆ ಜಿಲ್ಲಾಮಟ್ಟದಲ್ಲಿ ಒಂದು ಕೋಟಿ ಗಿಡಮರಗಳನ್ನು ನೆಡುವ ಕಾರ್ಯಕ್ರಮವನ್ನು ತತ್ ಕ್ಷಣದಿಂದಲೇ ಹಮ್ಮಿಕೊಳ್ಳಬೇಕು. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಜಂಟಿ ನೇತೃತ್ವದಲ್ಲಿ ಇದನ್ನು ಆರಂಭಿಸಬೇಕು. ಅಂದರೆ ಇಡೀ ರಾಜ್ಯದಲ್ಲಿ ನೂರಾರು ಕೋಟಿ ಗಿಡಗಳನ್ನು ಈ ಮಳೆಗಾಲದ ಸಮಯದಲ್ಲಿ ನೆಟ್ಟರೆ ಕನಿಷ್ಠ ಅದರಲ್ಲಿ ತೀರಾ ಕಡಿಮೆ ಎಂದರೂ 30 ರಿಂದ 40 ಶೇಕಡಾ ಗಿಡಗಳು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾದರೆ ಎಷ್ಟೋ ಕೋಟಿ ಮರಗಳು ಬೆಳೆಯುತ್ತವೆ. ಇಡೀ ರಾಜ್ಯದಲ್ಲಿ ಅರಣ್ಯ ಪ್ರದೇಶ ತುಂಬಾ ಹೆಚ್ಚಾಗುತ್ತದೆ…..

ಆಗ ಆಮ್ಲಜನಕ ಹೆಚ್ಚಾಗುತ್ತದೆ. ಮಳೆಯ ಕೊರತೆ ಕಡಿಮೆಯಾಗುತ್ತದೆ. ತಾಪಮಾನದ ಕುಸಿತ, ಮನಸ್ಸಿನ ಆಹ್ಲಾದ, ಆರೋಗ್ಯ ಎಲ್ಲವುಗಳಲ್ಲಿ ಕೆಲವೇ ವರ್ಷದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟು ಮಾಡುತ್ತದೆ‌…..

ಇಷ್ಟನ್ನು ಸಹ ನಮ್ಮಿಂದ ಮಾಡಲು ಸಾಧ್ಯವಿಲ್ಲವೇ ! ಪ್ರಕೃತಿ ತನ್ನ ಕಷ್ಟ ಸಹಿಸಿ ನಮಗೆ ಸಹಾಯ ಮಾಡುತ್ತದೆ. ನಾವು ಆ ಪರಿಸರವನ್ನು ಉಳಿಸಲು ಇಷ್ಟೂ ಪ್ರಯತ್ನ ಪಡದಿದ್ದರೆ ನಮಗೆ ಕ್ಷಮೆಯೇ ಇಲ್ಲ…..

ಯಾರು ಏನು ಮಾಡುತ್ತಿರೋ ಗೊತ್ತಿಲ್ಲ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾಮಾನ್ಯ ಜನರು ದಯವಿಟ್ಟು ಇದನ್ನು ಒಂದು ದೊಡ್ಡ ಅಭಿಯಾನವಾಗಿ ಪ್ರಾರಂಭಿಸಿ, ಮಳೆಗಾಲದಲ್ಲಿ ಗಿಡ ನೆಟ್ಟರೆ, ನೀರು ಉಣಿಸುವ ತೊಂದರೆಯೂ ಇರುವುದಿಲ್ಲ. ಸಹಜವಾಗಿಯೇ ಮಳೆ ನೀರಿನಲ್ಲಿ ಅವು ಬೆಳೆಯುತ್ತವೆ. ಸ್ವಲ್ಪ ಸಸಿ ದೊಡ್ಡದಾಗುವವರೆಗೂ ಒಂದಷ್ಟು ಜಾಗೃತಿ ವಹಿಸಿದರೆ ಸಾಕು….

ಯೋಚಿಸಿ, ಏನನ್ನಾದರೂ ಮಾಡಿ. ಮುಂದಿನ ವರ್ಷಕ್ಕೆ ಇಷ್ಟೊಂದು ತಾಪಮಾನ ಹೆಚ್ಚಾಗದೆ ನಿಯಂತ್ರಿಸಲು ನಮ್ಮ ನಮ್ಮ ಕರ್ತವ್ಯ ನಿರ್ವಹಿಸೋಣ. ಈ ವರ್ಷದ ಭೀಕರ ಬಿಸಿಲನ್ನು ಮರೆಯುವುದು ಬೇಡ. ಅದು ಸದಾ ನೆನಪಾಗಿ ಗಿಡ ಬೆಳೆಸುವ ಕೆಲಸ ವೇಗ ಪಡೆಯಲಿ……

ಹಾಗೆಯೇ, ಫ್ಲೈ ಓವರ್ ಗಳು,
ಅನಾವಶ್ಯಕವಾದ ಉದ್ದುದ್ದ, ಹೆಚ್ಚು ಅಗಲದ ರಸ್ತೆಗಳು ಮುಂತಾದವುಗಳನ್ನು ಕಡಿಮೆ ಮಾಡಿ, ಆ ಜಾಗದಲ್ಲಿ ಕೆರೆಕಟ್ಟೆಗಳು, ಇಂಗು ಗುಂಡಿಗಳು ಮುಂತಾದ ನೀರಾವರಿ ಯೋಜನೆಗಳು, ನೀರಿನ ಸಂಗ್ರಹ ಕಾಲುವೆಗಳ ಬಗ್ಗೆ ಹೆಚ್ಚು ಗಮನಹರಿಸುವಂತೆ ಸ್ಥಳೀಯ ಜನರು ಅಲ್ಲಿನ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯನ್ನು ಒತ್ತಾಯಿಸಬೇಕಾಗುತ್ತದೆ. ಅಭಿವೃದ್ಧಿಯ ಪರಿಕಲ್ಪನೆಯನ್ನು ನಾವು ಬದಲಾಯಿಸಿಕೊಳ್ಳದಿದ್ದರೆ ಇಡೀ ದೇಶ ಸಿಮೆಂಟ್ ಕಾಡಾಗಿ ತಾಪಮಾನ, ಬರಗಾಲ ನಮ್ಮನ್ನು ನಿರಂತರವಾಗಿ ಕಾಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಅತ್ಯಂತ ಅಪಾಯಕಾರಿ ವಾತಾವರಣವನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ.
ಅವರು ನಮ್ಮನ್ನು ಕ್ಷಮಿಸುವುದಿಲ್ಲ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಬಿಸವನಹಳ್ಳಿಯಲ್ಲಿ ಅದ್ವಿತಾ ಜನ್ಮದಿನ ಅರ್ಥಪೂರ್ಣ ಆಚರಣೆ

ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಪೋಷಕತ್ವದಲ್ಲಿ, ಕೇಶವ ಮತ್ತು ಸುಷ್ಮಾ ದಂಪತಿಯ ಪುತ್ರಿ ಅದ್ವಿತಾ ಅವರ ಜನ್ಮದಿನವನ್ನು ಬಿಸವನಹಳ್ಳಿ…

18 hours ago

ಕಾರಿಗೆ ಅಡ್ಡ ಬಂದ ನಾಯಿ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ದೊಡ್ಡಬಳ್ಳಾಪುರ: ಹಿಂದೂಪುರ–ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ದಿಢೀರನೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ…

21 hours ago

ಅನುಭವ, ಹಿರಿತನಕ್ಕೆ ತಕ್ಕಂತೆ ಸಚಿವ ಸ್ಥಾನ ನೀಡಿ- ಮನು.ಆರ್.ವಿ ಒತ್ತಾಯ

ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ…

1 day ago

ಜೂ..7ರಂದು ‘ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ- ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಗಿರೀಶ್ ಕೆ

ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ…

1 day ago

ಜೂ. 20 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಂಭ- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಯನ್ನು…

2 days ago

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

  ದೊಡ್ಡಬಳ್ಳಾಪುರ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಇಂದು ಮಾಡುವ ಸಣ್ಣ…

2 days ago