Categories: ಲೇಖನ

ದೇವನಹಳ್ಳಿ ರೈತರ ಹೋರಾಟ…: ರೈತರ ಭೂಮಿ ಉಳಿಸುವುದು ಅತ್ಯಂತ ಅವಶ್ಯಕ

ದೇವನಹಳ್ಳಿ ಭೂ ಸ್ವಾಧೀನ ವಿರುದ್ಧದ ರೈತ ಹೋರಾಟ ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಿರುವ ಸಂದರ್ಭದಲ್ಲಿ ನೆನಪಾಗುತ್ತಿರುವ ರೈತರ ಆ ದಿನಗಳು…….

ತುಂಬಾ ಹಿಂದೆ ಏನು ಅಲ್ಲ, ಕೇವಲ 25/30 ವರ್ಷಗಳ ಹಿಂದೆ ಜಾಗತೀಕರಣದ ಪರಿಣಾಮವಾಗಿ ಮುಕ್ತ ಮಾರುಕಟ್ಟೆಗೆ ಭಾರತ ಸಹಿ ಹಾಕಿದ ನಂತರ ಅಭಿವೃದ್ಧಿ ಎಂಬ ಮಾನದಂಡವೇ ಬದಲಾಯಿತು. ಆಗಿನ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಸ್ವಲ್ಪಮಟ್ಟಿಗೆ ರಾಜಾಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅದೇ ಹಾದಿಯಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಬಂಡವಾಳ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರಿದರು.

ಬಹುತೇಕ ಅವರು ಕೇಳಿದ ಎಲ್ಲಾ ಸೌಕರ್ಯಗಳನ್ನು ಸರ್ಕಾರವೇ ಅವರಿಗೆ ಶರಣಾದಂತೆ ಒದಗಿಸಿದರು. ಮುಖ್ಯವಾಗಿ ಯಥೇಚ್ಛವಾಗಿ ಭೂಮಿಯನ್ನು ಧಾರೆಯೆರೆದು ಕೊಡಲಾಯಿತು. ಜೊತೆಗೆ ವಿಶೇಷ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳನ್ನು ಸ್ಥಾಪಿಸಲಾಯಿತು. ಅದಕ್ಕಾಗಿ ಕೃಷಿ, ಅರಣ್ಯ, ಖಾಸಗಿ ಮುಂತಾದ ಅನೇಕ ಉಪಯುಕ್ತ ಜಮೀನುಗಳನ್ನು ಹಿಂದೆ ಮುಂದೆ ನೋಡದೆ ನೀಡಲಾಯಿತು.

ಉದ್ಯೋಗ ಸೃಷ್ಟಿಯಾಗುತ್ತದೆ,
ಜಿಡಿಪಿಗೆ ಬಹುದೊಡ್ಡ ಕೊಡುಗೆಯಾಗುತ್ತದೆ, ಸರ್ಕಾರಿ ಖಜಾನೆ ತುಂಬುತ್ತದೆ ಎಂಬ ಭರವಸೆ, ನಂಬಿಕೆ, ನೆಪದಿಂದ ಈ ಕೆಲಸ ಮಾಡಲಾಯಿತು. ಕೇಂದ್ರದಲ್ಲಿಯೂ ನರಸಿಂಹರಾವ್ ಸರ್ಕಾರ, ವಾಜಪೇಯಿ ಸರ್ಕಾರ ಮನಮೋಹನ್ ಸಿಂಗ್ ಸರ್ಕಾರ ಈ ನಿಟ್ಟಿನಲ್ಲಿ ಧಾರಾಳತನ ತೋರಿಸಿತು. ಆದರೆ ಈಗ ಅದೇ ಹಾದಿಯಲ್ಲಿ ಭಾರತದ ಬಹುತೇಕ ರಾಜ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಈ ರೀತಿಯ ಅಭಿವೃದ್ಧಿಗೆ ಭೂಮಿ ಇರಲಿ ಇಡೀ ಪ್ರಕೃತಿಯ ಮೇಲೆಯೇ ಸವಾರಿ ಮಾಡುತ್ತಾ ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲಾಗಿದೆ. ಅಂದರೆ ಭೂಮಿಯನ್ನು ಬಂಡವಾಳ ಹೂಡಿಕೆದಾರರಿಗೆ ಧಾರಾಳವಾಗಿ ಹಂಚುವುದು, ಅಷ್ಟೇ ದೊಡ್ಡ ಪ್ರಮಾಣದ ರಿಯಾಯಿತಿಗಳನ್ನು ಅವರಿಗೆ ನೀಡುವುದು, ಆ ಮೂಲಕ ಹೆಚ್ಚು ಕಡಿಮೆ ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡುತ್ತಿವೆ.

ಬಹುತೇಕ ರೈತರನ್ನು ಒಕ್ಕಲೆಬ್ಬಿಸುವ ರೀತಿಯಲ್ಲಿ ರೈತರ ಅಭಿಪ್ರಾಯಗಳಿಗೆ ಯಾವುದೇ ಮಾನ್ಯತೆ ನೀಡದೆ, ಮಹಾ ಉಪಕಾರ ಮಾಡಿದಂತೆ ಅವರ ಭೂಮಿಯನ್ನು ಕಿತ್ತುಕೊಂಡು ಅವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಿ ಕೈಗಾರಿಕೋದ್ಯಮಿಗಳಿಗೆ ಹಂಚಲಾಗುತ್ತಿದೆ. ಇಂತಹ ಒಂದು ಯೋಜನೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ 1777 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಅದರ ವಿರುದ್ಧವಾಗಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಹೋರಾಡಿದ ಸ್ಥಳೀಯ ರೈತರು ಮತ್ತು ಅವರಿಗೆ ಬೆಂಬಲವಾಗಿ ಸೂಚಿಸಿದ ರಾಜ್ಯದ ಮತ್ತು ರಾಷ್ಟ್ರದ ಹಲವಾರು ರೈತ ಪರ ಹೋರಾಟಗಾರರು, ಪ್ರಗತಿಪರರು ಇದೀಗ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ ಬಳಿಕ ಬಹುತೇಕ ಆ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಹಂತಕ್ಕೆ ಬಂದಿದೆ.

ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಸಿದ ಹೋರಾಟಕ್ಕೆ ಸಿಕ್ಕ ಜಯದ ನಂತರ, ದೇವನಹಳ್ಳಿ ರೈತ ಹೋರಾಟ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ. ಎಂಬತ್ತರ ದಶಕದ ಯಶಸ್ವಿ ರೈತ ಹೋರಾಟಗಳನ್ನು ಮತ್ತೆ ನೆನಪಿಸುತ್ತಿದೆ. ಸ್ವಾಭಿಮಾನಿ, ಸ್ವಾವಲಂಬಿ, ಸ್ವತಂತ್ರ, ಮುಕ್ತ ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡುವ ನೀತಿಗಳ ವಿರುದ್ಧ ಈ ರೀತಿಯ ಯಶಸ್ಸುಗಳು ನಿಜಕ್ಕೂ ಅತ್ಯಂತ ಉತ್ತೇಜನಕಾರಿ ಮತ್ತು ಪರಿಣಾಮಕಾರಿ. ಇದು ತುಂಬಾ ತುಂಬಾ ಒಳ್ಳೆಯ ಬೆಳವಣಿಗೆ. ಇಲ್ಲದಿದ್ದರೆ ಈ ಸರ್ಕಾರಗಳು ಖಂಡಿತವಾಗಿ ಇಡೀ ಭಾರತದ ಭೂಪ್ರದೇಶವನ್ನು ಕೈಗಾರಿಕೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ವಾಸಿಸಲು ಯೋಗ್ಯವೇ ಅಲ್ಲದ ಜಾಗವಾಗಿ ಮಾಡುವುದು ನಿಶ್ಚಿತ.

ಇದಕ್ಕೆ ದೇವನಹಳ್ಳಿ ಸುತ್ತಮುತ್ತ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ನಂತರ ಅಲ್ಲಿನ ನಿಜವಾದ ರೈತ ಮಕ್ಕಳು ಅನುಭವಿಸುತ್ತಿರುವ ಕಷ್ಟ ನಷ್ಟಗಳೇ ಸಾಕ್ಷಿ. ಇದು ಕೇವಲ ಸಾಂಕೇತಿಕ. ಈ ರೀತಿ ಎಲ್ಲಾ ಕಡೆಯೂ ನಡೆಯುತ್ತಿದೆ. ದೇವನಹಳ್ಳಿ ಈಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನುಭವಿಸುತ್ತಿರುವ ಒತ್ತಡವೇ ಸಾಕಾಗಿದೆ. ಏಕೆಂದರೆ,

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈತ ಮಕ್ಕಳು…………..

ಭೂಮಿಯ ಮೇಲೆ ನಡೆಯುವುದು, ನೀರಿನ ಮೇಲೆ ತೇಲುವುದು, ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುವುದು ಮನುಷ್ಯನ ಕುತೂಹಲಕಾರಿ ಪ್ರಯಾಣದ ಕನಸುಗಳಲ್ಲಿ ಮುಖ್ಯವಾದವು.

ರಸ್ತೆ ಹೊರತುಪಡಿಸಿ ನೀರು ಮತ್ತು ಗಾಳಿಯಲ್ಲಿ ಸಂಚರಿಸುವುದು ತುಂಬಾ ದುಬಾರಿಯಾದುದು. ಆಧುನಿಕ ಕಾಲದಲ್ಲಿ ವಿಮಾನ ಸಂಚಾರ ತುಂಬಾ ಸುಲಭವಾಗಿದೆ. ಆದರೆ ಅದು ಶ್ರೀಮಂತರ ಪ್ರಯಾಣ ವ್ಯವಸ್ಥೆ ಎಂಬುದು ಮಾತ್ರ ಸತ್ಯ. ಏಕೆಂದರೆ ಭಾರತದಲ್ಲಿ ಕೇವಲ ‌3/4 ಶೇಕಡಾ ಜನರು ಮಾತ್ರ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ಅದಕ್ಕಾಗಿ ವ್ಯಯಿಸುವ ಸಮಯ, ಹಣ, ಭೂಮಿ ಮುಂತಾದ ಸಂಪನ್ಮೂಲಗಳು ಮಾತ್ರ ಅತಿಹೆಚ್ಚು. ಅಂದರೆ ಕೇವಲ ಕೆಲವೇ ಜನರ ಹಿತಕ್ಕಾಗಿ ತುಂಬಾ ಶ್ರಮ ಪಡಬೇಕಾಗುತ್ತದೆ….

ಇಲ್ಲಿ ಮುಖ್ಯವಾಗಿ ರೈತ ಮಕ್ಕಳು ನೆನಪಾಗಲು ಕಾರಣ…….

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದ ಜಾಗ ಕೆಲವು ವರ್ಷಗಳ ಹಿಂದೆ ರೈತರ ಒಡೆತನದಲ್ಲಿತ್ತು. ಒಂದಷ್ಟು ಕೃಷಿ ಭೂಮಿ ಮತ್ತೊಂದಷ್ಟು ಕುರುಚಲು ಗಿಡಗಳ ಪಾಳು ಭೂಮಿ.

ವಿಮಾನ ನಿಲ್ದಾಣ ಮಾಡುವ ನಿರ್ಧಾರದ ನಂತರ ಆ ಜಾಗವನ್ನು ರೈತರಿಂದ ವಶಪಡಿಸಿಕೊಂಡು ಅದಕ್ಕೆ ಉತ್ತಮ ಪರಿಹಾರದ ಮೊತ್ತವನ್ನು ಅವರಿಗೆ ಕೊಡಲಾಯಿತು ಮತ್ತು ಅಲ್ಲಿನ ಸುತ್ತಮುತ್ತಲಿನ ಜಮೀನಿನ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿ ಸಾಕಷ್ಟು ಹಣವಂತರು ಅದನ್ನು ರೈತರಿಂದ ಖರೀದಿಸಿದರು. ರಿಯಲ್ ಎಸ್ಟೇಟ್ ಒಂದು ದೊಡ್ಡ ಉದ್ಯಮ ಮತ್ತು ದಂಧೆಯಾಯಿತು……

ಸುಮಾರು ‌15/20 ವರ್ಷಗಳ ನಂತರ……….

ಯಾವ ರೈತರ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಹಣ ನೀಡಿತೋ, ಯಾವ ರೈತರು ಹಣದ ಆಸೆಗಾಗಿ ಅಥವಾ ಬದುಕಿನ ಅನಿವಾರ್ಯತೆಗಾಗಿ ತಮ್ಮ ಹೊಲ ಗದ್ದೆಗಳನ್ನು ಮಾರಿಕೊಂಡರೋ ಅವರಲ್ಲಿ ಬಹುಶಃ ಶೇಕಡಾ 70 ಕ್ಕೂ ಹೆಚ್ಚು ಜನರ ಬಳಿ ಜಮೀನೂ ಇಲ್ಲ ಅಥವಾ ಆಗ ಗಳಿಸಿದ ಹಣವೂ ಇಲ್ಲ. ಅವರಲ್ಲಿ ಬಹುತೇಕರು ಅದೇ ವಿಮಾನ ನಿಲ್ದಾಣ ಮತ್ತು ಅಲ್ಲಿನ ಸುತ್ತಮುತ್ತಲಿನ ವ್ಯಾಪಾರ ಕೇಂದ್ರಗಳಲ್ಲಿ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಕೆಲವರು ಮಾತ್ರ ಬಂದ ಹಣವನ್ನು ಸದುಪಯೋಗ ಪಡಿಸಿಕೊಂಡು ಮೊದಲಿಗಿಂತ ಉತ್ತಮ ಗುಣಮಟ್ಟ ಜೀವನ ನಡೆಸುತ್ತಿದ್ದಾರೆ….

ನಿಜವಾದ ಚಿಂತನೆ ಮತ್ತು ಅಧ್ಯಯನದ ಅವಶ್ಯಕತೆ ಇರುವುದು ಇಲ್ಲಿಯೇ……

ಇದು ನಾಗರಿಕ ಸಮಾಜದ ಸಹಜ ಗುಣ. ಸಾಮರ್ಥ್ಯ ಇರುವವರು, ಬುದ್ದಿವಂತರು, ಎಲ್ಲಾ ರೀತಿಯ ಶ್ರಮಜೀವಿಗಳು ಪರಿಸ್ಥಿತಿಯನ್ನು ಬೇಗ ಅರ್ಥಮಾಡಿಕೊಂಡು ದೂರದೃಷ್ಟಿಯಿಂದ ಅದರ ಲಾಭ ಪಡೆದು ಶ್ರೀಮಂತರಾಗಿ ಬದುಕುತ್ತಾರೆ ಇದು ಸರಿ ಎನ್ನುವ ಬಲಪಂಥೀಯ ವಾದ…..

ಅಥವಾ….

ಸಾಮಾಜಿಕ ಅಸಮಾನತೆ, ಸಂಕೀರ್ಣ ಜಾತಿ ವ್ಯವಸ್ಥೆಯ ಅಮಾನವೀಯತೆ, ದುರ್ಬಲರ ಶೋಷಣೆ, ಹಣ, ಅಧಿಕಾರ, ಶಕ್ತಿ ಇರುವವರು ತಮ್ಮದೇ ಸಮುದಾಯಗಳನ್ನು ಧರ್ಮ ಅಥವಾ ಕಾನೂನು ಅಥವಾ ಸಂಪ್ರದಾಯದ ಹೆಸರಿನಲ್ಲಿ ವಂಚಿಸಿ ತಮ್ಮ ಸುಖಕ್ಕಾಗಿ ಈ ಜನರ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವರು ಎನ್ನುವ ಎಡಪಂಥೀಯ ವಾದ…..

ಈ ಎಡ ಬಲ ವಾದಗಳ ಜೊತೆಗೆ
ಅಂಬೇಡ್ಕರ್, ಬಸವಣ್ಣ, ಗಾಂಧಿ, ಲೋಹಿಯಾ ಮುಂತಾದವರ ಚಿಂತನೆಗಳು ಸಹ ಇಲ್ಲಿ ಒಂದಷ್ಟು ಪ್ರಸ್ತುತವಾಗುತ್ತದೆ.

ಹಾಗಾದರೆ ಅಭಿವೃದ್ಧಿಯ ಮಾನದಂಡ ಯಾವುದು ?….

ವಿಮಾನ ನಿಲ್ದಾಣಗಳ ಶ್ರೀಮಂತಿಕೆಯೇ ಅಥವಾ ರೈತ ಮಕ್ಕಳ ದುರ್ಗತಿಯೇ ?

ಹಣವೇ ಪ್ರಧಾನವಾದ ಸಮಾಜದಲ್ಲಿ ಇದರ ಬಗ್ಗೆ ಚಿಂತನೆಗೆ ಸಮಯವೂ ಸಿಗುತ್ತಿಲ್ಲ. ಕೆಲವರ ಬದುಕು ವಿಮಾನಗಳ ಹಾರಾಟದಂತೆ ವೇಗವಾಗಿ ಗಾಳಿಯಲ್ಲಿ ಹಾರಾಡುತ್ತಾ ಸಾಗುತ್ತಿದ್ದರೆ ಮತ್ತೆ ಕೆಲವರ ಬದುಕು ಜಟಕಾ ಬಂಡಿ………

ಎರಡರ ನಡುವೆ ಸಮನ್ವಯ ಸಾಧಿಸಬೇಕಾಗಿದ್ದ ಸರ್ಕಾರಗಳು ಕುರ್ಚಿಯ ಸುತ್ತ ಸುತ್ತುತ್ತಾ ತಮ್ಮ ಹಿತಾಸಕ್ತಿಗಳನ್ನು ಮಾತ್ರ ಕಾಯ್ದುಕೊಂಡಿವೆ……

ಈಗ ಯೋಚಿಸಬೇಕಾದ ಮತ್ತು ಕಾರ್ಯರೂಪಕ್ಕೆ ಇಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು…..

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಾದು ಹೋಗುವಾಗ ಅಲ್ಲಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುವ ರೈತ ಮಕ್ಕಳನ್ನು ನೋಡಿದಾಗ ಒಂದು ಕಾಲದ ಭೂಮಿಯ ಒಡೆಯರು ಸ್ವಾಭಿಮಾನ ಮರೆತ ಪರಿಣಾಮ ಇಂದು ಅದೇ ಭೂಮಿಯಲ್ಲಿ ಕೂಲಿ ಕೆಲಸಗಾರರು. ಅನೇಕ ಭ್ರಷ್ಟ ವ್ಯಕ್ತಿಗಳ ಪ್ರಯಾಣದ ವಾಹನಗಳಿಗೆ ರಕ್ಷಣಾ ನಿಲ್ದಾಣ ಒದಗಿಸುವ ನತದೃಷ್ಟರು……

ಅದಕ್ಕಾಗಿಯೇ ಇಂದು ರೈತರ ಭೂಮಿಯನ್ನು ಅವರ ಬಳಿಯೇ ಉಳಿಸುವುದು ಅತ್ಯಂತ ಅವಶ್ಯಕ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದು ಆಶಿಸುತ್ತಾ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬೈಕ್-ಟಿಪ್ಪರ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ಬೈಕ್-ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ…

9 hours ago

ರೈತರು ಇ-ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಆಗ್ರಿಸ್ಟಾಕ್ ಘಟಕದಡಿಯಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳನ್ನು ಅಳವಡಿಸಿ ಭೂಹಿಡುವಳಿಗಳನ್ನು ಹೊಂದಿರುವ ರಾಜ್ಯದ…

12 hours ago

ಮನರೇಗಾ ಉಳಿಸಲು ಗ್ರಾ.ಪಂ ಮಟ್ಟದಲ್ಲೂ ಹೋರಾಟ- ಜಿಲ್ಲಾ ಎಸ್.ಟಿ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ

ತಾಲ್ಲೂಕು ಕೇಂದ್ರದಲ್ಲಿ ಮಾತ್ರವಲ್ಲದೆ ಗ್ರಾ.ಪಂ ಮಟ್ಟದಲ್ಲಿ ಮನರೇಗಾ ಯೋಜನೆ ಉಳಿಸಲು ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ…

14 hours ago

ಉಚಿತ ಆರೋಗ್ಯ ತಪಾಸಣಾ ಶಿಬಿರ

ದೊಡ್ಡಬಳ್ಳಾಪುರ ನಗರ: ನವಚೇತನ ಆಸ್ಪತ್ರೆ ಉಷ್ಟ್ರತಿ ಎನ್‌ಜಿಓ, ಡಿ ಎಸ್ ಜಿ ಸ್ಪೋರ್ಟ್ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಯನ್ನು…

14 hours ago

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್-ಬಿಜೆಪಿ ಮಧ್ಯೆ ಘರ್ಷಣೆ ಜೋರು….ಮಾತು ತಪ್ಪಿದ ಶಾಸಕ ಎಂದ ಜೆಡಿಎಸ್ ನಾಯಕರು- ನಾನು ಮಾತು ತಪ್ಪಿಲ್ಲ, ಕೊಟ್ಟ ಮಾತಿನಂತೆ ನಡೆಯುತ್ತೇನೆ – ಶಾಸಕ ಧೀರಜ್ ಮುನಿರಾಜು

ರಾಜ್ಯ ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಬಳಿ…

21 hours ago

ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು…..

ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ..... ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು..... ತಾವೇ ಸೃಷ್ಟಿಸಿಕೊಂಡ, ನಾವೇ…

22 hours ago