ಜಗತ್ತಿನ ಮಾನವ ಇತಿಹಾಸದಲ್ಲಿ ಕೆಲವೇ ಕೆಲವು ಅತ್ಯುತ್ತಮ ತತ್ವಜ್ಞಾನಿಗಳಲ್ಲಿ ಭಾರತದ ಸಿದ್ದಾರ್ಥ ಎಂಬ ಗೌತಮ ಬುದ್ದ ಒಬ್ಬ.
ಅವರ ಚಿಂತನೆಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಹಜತೆ, ಅನುಭಾವಿಕತೆ, ದೇಹ ಮತ್ತು ಮನಸ್ಸುಗಳ ದಂಡನೆಯಿಂದ ಸಿಗುವ ಅನುಭವ ಎಲ್ಲವನ್ನು ಒಳಗೊಂಡ ಜೀವಪರ ನಿಲುವಿನ ಅತ್ಯಂತ ಮಾನವೀಯ ನಡೆನುಡಿಗಳು ಅಡಕವಾಗಿದೆ.
ಅಂತಹ ಬುದ್ಧರ ಚಿಂತನೆಗಳ ಪ್ರಭಾವದಿಂದ ಬೌದ್ಧ ಧರ್ಮ ವಿಶ್ವದ ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ, ತೈವಾನ್, ಭೂತಾನ್, ಭಾರತ, ಶ್ರೀಲಂಕಾ, ನೇಪಾಳ, ಇಂಡೋನೇಷ್ಯಾ, ಸಿಂಗಾಪುರ, ಥಾಯ್ಲೆಂಡ್, ಟಿಬೆಟ್ ಮುಂತಾದ ದೇಶಗಳಲ್ಲಿ ಬೌದ್ಧ ಧರ್ಮ ಪೂರ್ಣವಾಗಿ ಮತ್ತು ಕೆಲವು ಕಡೆ ಭಾಗಶಃ ಆಚರಣೆಯಲ್ಲಿದೆ.
ಇದೀಗ ಟಿಬೆಟ್ ನ ಧರ್ಮಗುರು ದಲೈಲಾಮ ಅವರಿಗೆ 90 ವರ್ಷ ಆದ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಯ ಹುಡುಕಾಟ ಪ್ರಾರಂಭವಾಗಿದೆ. ಅದರಲ್ಲಿ ವಿಶೇಷತೆ ಏನು ಎಂದರೆ, ಉತ್ತರಾಧಿಕಾರಿಯನ್ನು ಪುನರ್ಜನ್ಮದ ನಂಬಿಕೆಯ ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಂದರೆ ಈ ದಲೈಲಾಮಾ ಅವರ ಉತ್ತರಾಧಿಕಾರಿ ಯಾವುದೋ ಒಂದು ಪ್ರದೇಶದಲ್ಲಿ ಹುಟ್ಟುತ್ತಾರೆ. ಅವರು ಈ ದಲೈಲಾಮ ಅವರ ಮುಂದುವರಿದ ಜೀವ ಅರ್ಥಾತ್ ಪುನರ್ಜನ್ಮ ಎಂಬ ನಂಬಿಕೆ ಅವರಲ್ಲಿದೆ. ಅದನ್ನು ಅನೇಕ ವಿಧಾನಗಳ ಮೂಲಕ ಗುರುತಿಸಿ ಒಂದು ಟ್ರಸ್ಟ್ ಈ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತದೆ.
ಜಗತ್ತಿಗೆ ಅತ್ಯಂತ ವೈಚಾರಿಕ ಚಿಂತನೆಗಳನ್ನು ನೀಡಿದ, ಮನುಷ್ಯನ ಆಸೆ, ದುಃಖ, ಕಷ್ಟ, ನೋವು, ರೋಗ ರುಜಿನ ಮುಂತಾದ ಸಮಸ್ಯೆಗಳಿಗೆ ಅತ್ಯಂತ ಸರಳ, ಸಹಜ, ವಾಸ್ತವ ಪರಿಹಾರಗಳನ್ನು ಸೂಚಿಸಿದ ಗೌತಮ ಬುದ್ಧರ ವಿಚಾರಗಳ ಆಧಾರದ ಮೇಲೆ ಬದುಕುತ್ತಿರುವ ಸಂಸ್ಕೃತಿಯ ಮುಖ್ಯಸ್ಥರು ಪುನರ್ಜನ್ಮ ಎಂಬ ನಂಬಿಕೆಗೆ ಅರ್ಹವಲ್ಲದ, ಮೌಢ್ಯ ಎಂದು ಕರೆಯಬಹುದಾದ, ವಾಸ್ತವಕ್ಕೆ ಹತ್ತಿರವಲ್ಲದ ವಿಧಾನದ ಮೂಲಕ ಉತ್ತರಾಧಿಕಾರಿಯ ಆಯ್ಕೆ ಮಾಡುವುದು
ಸೋಜಿಗವೆನಿಸುತ್ತದೆ, ಆಶ್ಚರ್ಯವಾಗುತ್ತದೆ.
ಏಕೆಂದರೆ ಬುದ್ಧ ಚಿಂತನೆಗಳು ಅತ್ಯಂತ ಸತ್ಯ, ಅಹಿಂಸೆ, ಕರುಣೆ, ತ್ಯಾಗ, ಕ್ಷಮೆ ಮುಂತಾದ ಮಾನವೀಯ ಗುಣಗಳ ಆಧಾರದ ಮೇಲೆ ರೂಪಿತವಾಗಿದೆಯೇ ಹೊರತು ಈ ರೀತಿಯ ಭ್ರಮಾತ್ಮಕ, ನಂಬಿಕೆಯ ಆಚರಣೆಗಳನ್ನಲ್ಲ. ಅಂತಹ ಸಂದರ್ಭದಲ್ಲಿ ಈ ಆಚರಣೆ ಮತ್ತು ವಿಧಾನ ಅಷ್ಟಾಗಿ ಸರಿ ಕಾಣುತ್ತಿಲ್ಲ.
ಜಗತ್ತು ಇಂದು ಸಾಗುತ್ತಿರುವ ಸಂಘರ್ಷಮಯ ವಾತಾವರಣದಲ್ಲಿ ಇಸ್ಲಾಂ, ಕ್ರಿಶ್ಚಿಯನ್, ಸನಾತನ, ಬೌದ್ಧ, ಸಿಖ್, ಜೈನ ಮುಂತಾದ ಯಾವುದೇ ಧರ್ಮಗಳು ಆದ್ಯತೆ ಕೊಡಬೇಕಾಗಿರುವುದು ಆಚರಣೆಗಳಿಗಲ್ಲ, ಪ್ರಚಾರಗಳಿಗಲ್ಲ, ವಿಸ್ತರಣೆಗಾಗಿಯಲ್ಲ, ನಿಜಕ್ಕೂ ಇಂದಿನ ಅತ್ಯವಶ್ಯಕತೆ, ಆಯಾ ಧರ್ಮದ ಚಿಂತನೆಗಳ, ತತ್ವಗಳ, ಮಾನವೀಯ ಅಂಶಗಳನ್ನು ಎತ್ತಿ ಹಿಡಿಯಬೇಕಿದೆ. ಸಂಘರ್ಷಕ್ಕೆ ಬದಲಾಗಿ ಸಂಧಾನಗಳು, ಶಾಂತಿ ಸೌಹಾರ್ದತೆಗಳು ಮುಖ್ಯವಾಗಬೇಕಿದೆ. ಅದು ಸಾಧ್ಯವಾಗಬೇಕಾದರೆ ಧರ್ಮಗಳಲ್ಲಿನ ನಾಗರಿಕ ಪ್ರಜ್ಞೆಯನ್ನು ಹೆಚ್ಚು ಪ್ರಚರಪಡಿಸಬೇಕೆ ಹೊರತು ಮೌಢ್ಯವನ್ನಲ್ಲ.
ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ದಲೈಲಾಮ ಅವರು ಒಂದು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಹೆಚ್ಚು ವೈಚಾರಿಕ ಪ್ರಜ್ಞೆಯನ್ನು ತನ್ನ ಅನುಯಾಯಿಗಳಲ್ಲಿ, ಹಾಗೆಯೇ ವಿಶ್ವದ ಎಲ್ಲ ಸಮುದಾಯಗಳಲ್ಲಿ ಬೆಳೆಸುವಂತಹ ಮಾತುಗಳನ್ನ ಆಡಲಿ ಎಂದು ಆಶಿಸುತ್ತಾ,
ಪುನರ್ಜನ್ಮದಲ್ಲಿ ಹುಟ್ಟುವ ಉತ್ತರಾಧಿಕಾರಿಯನ್ನು ಹುಡುಕುವುದಕ್ಕಿಂತ ಈಗ ಜೀವಿಸಿರುವ ಯಾರಾದರೂ ಅರ್ಹರನ್ನು ಹುಡುಕಿ ಆಯ್ಕೆ ಮಾಡಲಿ. ಅದು ಗೌತಮ ಬುದ್ಧರ ಚಿಂತನೆಗಳಿಗೆ ಸೂಕ್ತವಾದುದು. ಬುದ್ಧ ಪ್ರಜ್ಞೆ ಒಂದು ನಿರ್ಮಲ ಮನಸ್ಥಿತಿ. ಅದು ನಿನ್ನೆಯೂ ಅಲ್ಲ, ನಾಳೆಯೂ ಇಲ್ಲ, ಇಂದಿನ ವಾಸ್ತವಕ್ಕೆ ತೆರೆದುಕೊಂಡು ಬದುಕುವುದೇ ಆಗಿದೆ. ಸತ್ಯದ ಹುಡುಕಾಟವು ಬುದ್ಧ ಪ್ರಜ್ಞೆಯ ಒಂದು ಭಾಗ. ನೋವುಗಳಿಂದ ಮುಕ್ತವಾದ ಮನಸ್ಥಿತಿ.
ಇಂತಹ ಬುದ್ಧ ಪ್ರಜ್ಞೆಯ ಧಾರ್ಮಿಕ ಮುಖಂಡರನ್ನು ಪುನರ್ಜನ್ಮದ ಆಧಾರದಲ್ಲಿ ಆಯ್ಕೆ ಮಾಡುವುದು ಖಂಡಿತ ಸ್ವೀಕಾರಕವಲ್ಲ. ಈ ವಿಧಾನ ಬದಲಾಗಬೇಕು ಎಂದು ಬುದ್ಧ ಅನುಯಾಯಿಗಳು, ಬೌದ್ಧ ಧರ್ಮ ಪಾಲಕರು ದಲೈಲಾಮ ಅವರನ್ನು ಒತ್ತಾಯಿಸುವುದು ಸೂಕ್ತ.
ದಲೈಲಾಮ ಅವರಿಗೆ 90 ನೇ ವರ್ಷದ ಜನ್ಮದಿನದ ಶುಭಾಶಯಗಳು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…