
ಬೆಂಗಳೂರು: ಸ್ವಚ್ಚ, ಸುರಕ್ಷಿತ ಬೆಂಗಳೂರಿಗಾಗಿ ಜಿಬಿಎ ಜತೆ ಕೈಜೋಡಿಸಿರುವ ಬೆಸ್ಕಾಂ,ನಗರದ ಜನರಿಗೆ ಸುರಕ್ಷಿತ ನಡಿಗೆಯ ಗ್ಯಾರಂಟಿ ನೀಡುವ ಉದ್ದೇಶದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರ ಮುಂದಾಳತ್ವದಲ್ಲಿ ನಗರದ ಹಲವು ಭಾಗಗಳ ಪಾದಚಾರಿ ಮಾರ್ಗಗಳಲ್ಲಿದ್ದ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರ ಪರಿಕರಗಳನ್ನು ಶನಿವಾರ ತೆರವುಗೊಳಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದ ಕ್ಲೀನ್ ಅಪ್ ಬೆಂಗಳೂರು ತಿಂಗಳ ಅಭಿಯಾನದ ಭಾಗವಾಗಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಆಗಸ್ಟ್ 1ರಂದು ಅಭಿಯಾನಕ್ಕೆ ಚಾಲನೆ ನೀಡಿ, ಈ ಕಾರ್ಯವನ್ನು ಮುಂದುವರಿಸುವಂತೆ ಸೂಚಿಸಿದ್ದರು. ಅಂದರಂತೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಬೆಳಗ್ಗೆ 7 ಗಂಟೆಯಿಂದಲೇ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡರು.
ಯಲಹಂಕದಲ್ಲಿ ಬೆಳಗ್ಗೆ 7 ಗಂಟೆಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎನ್.ಶಿವಶಂಕರ ಅವರು ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಾಚರಣೆ ಮುಂದುವರಿಸಿದ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ, ಯಲಹಂಕ, ಸಹಕಾರ ನಗರ, ದಾಸರಹಳ್ಳಿ, ಹೆಬ್ಬಾಳ, ಎಂಎಸ್ಆರ್ ನಗರ, ಹೆಚ್ಬಿಆರ್ ಬಡಾವಣೆ, ಕೃಷ್ಣರಾಜಪುರ, ಚನ್ನಸಂದ್ರ ಮುಖ್ಯರಸ್ತೆ, ವೈಟ್ಫೀಲ್ಡ್, ಬೆಳ್ಳಂದೂರು, ಹೆಚ್ಎಸ್ಆರ್ ಬಡಾವಣೆ, ಜೆಪಿ ನಗರ, ಶಿವಾಜಿ ನಗರ ಸೇರಿದಂತೆ ವಿವಿಧೆಡೆ ಪಾದಚಾರಿ ಮಾರ್ಗಗಳಲ್ಲಿರುವ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರ ಪರಿಕರಗಳನ್ನು ಶನಿವಾರ ತೆರವುಗೊಳಿಸಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ಸೇರಿದಂತೆ ಅಭಿಯಾನದ ಮೇಲುಸ್ತುವಾರಿ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ತಂಡ ವಿವಿಧೆಡೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರಲ್ಲದೆ, ಈ ಕಾರ್ಯಾಚರಣೆಗೆ ಕೈಜೋಡಿಸಿದರು. ಸ್ವಚ್ಛತಾ ಕಾರ್ಯದ ಬಳಿಕ ಆರ್ಎಂಯುಗಳ ಬಳಿ ಕಸ ಎಸೆಯದಂತೆ, ಮೂತ್ರ ವಿಸರ್ಜನೆ ಮಾಡದಂತೆ ಜಾಗೃತಿ ಪತ್ರಗಳನ್ನು ಅಂಟಿಸಲಾಯಿತು. ಜಿಒಎಸ್ ಜಿಒಎಸ್ ರಾಡ್ ಗಳನ್ನು ನೆಲಮಟ್ಟದಿಂದ ಏಳು ಅಡಿ ಎತ್ತರಿಸುವ ಕಾರ್ಯವನ್ನು ನಡೆಸಲಾಯಿತು.
ಅಭಿಯಾನದ ಕುರಿತು ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ, “ಆಗಸ್ಟ್ 1ರಂದು ಆರಂಭವಾಗಿರುವ ಅಭಿಯಾನದಲ್ಲಿ ಆಗಸ್ಟ್ 8ರ ವರೆಗೆ 592 ಕಂಬಗಳು, 334 ಜಿಎಸ್ ಆಪರೇಟಿಂಗ್ ರಾಡ್ಗಳು, 2,888 ಡಿಟಿಸಿ ಯಾರ್ಡ್ಗಳ ಸ್ವಚ್ಛತೆ, 998 ಆರ್ಎಂಯು ಯಾರ್ಡ್ಗಳ ಸ್ವಚ್ಛತೆ ಹಾಗೂ 380 ಸ್ಪನ್ ಪೋಲ್/ಡಿಪಿ ಯಾರ್ಡ್ಗಳ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, 140 ಫೀಡರ್ ಪಿಲ್ಲರ್ ಬಾಕ್ಸ್/ಯುಜಿ ಕೇಬಲ್ ಮತ್ತು ಲೈನ್ ಬಲವರ್ಧನೆ ಕಾಮಗಾರಿಗಳು ಹಾಗೂ 101 ಆರ್ಸಿಸಿ ಕಂಬಗಳ ರಿವೈರಿಂಗ್ ಮತ್ತು ಯಾರ್ಡ್ ಸ್ವಚ್ಛತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ,” ಎಂದು ಹೇಳಿದರು.
“ಬೆಂಗಳೂರು ನಗರವನ್ನು ಸ್ವಚ್ವವಾಗಿಡುವ ಕಾರ್ಯದಲ್ಲಿ ಜಿಬಿಎ ಜತೆ ಕೈಜೋಡಿಸುವಲ್ಲಿ ಬೆಸ್ಕಾಂ ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ಇಂಧನ ಮತ್ತು ಪ್ರವಾಸೋದ್ಯಮ ಸಚಿವರ ಸೂಚನೆ ಮೇರೆಗೆ ಅನುಪಯುಕ್ತ, ಪಾದಚಾರಿಗಳಿಗೆ ಅಡಚಣೆಯಾಗುತ್ತಿರುವ ವಿದ್ಯುತ್ ಸಲಕರಣೆಗಳನ್ನು ನಮ್ಮ ತಾಂತ್ರಿಕ ಪರಿಣಿತರ ತಂಡದ ಮಾರ್ಗದರ್ಶನ ಹಾಗೂ ಮುಂದಾಳತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುತ್ತಿದ್ದೇವೆ. ವಿದ್ಯುತ್ ಉಪಕರಣಗಳ ಸಮೀಪ ಹಾಕಲಾಗಿದ್ದ ಕಸ ತೆರವುಗೊಳಿಸಲಾಗುತ್ತಿದೆ,” ಎಂದು ಹೇಳಿದರು.
“ಕ್ಲೀನ್ ಅಪ್ ಬೆಂಗಳೂರು ಅಭಿಯಾನಕ್ಕೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಿ ಇದನ್ನು ಆಂದೋಲನದ ರೀತಿ ರೂಪಿಸಲಾಗಿದೆ. ನೂರಾರು ಅಧಿಕಾರಿಗಳು, ಸಿಬ್ಬಂದಿ, ಸಾವಿರಾರು ಪವರ್ಮೆನ್ಗಳ ದೊಡ್ಡ ತಂಡದೊಂದಿಗೆ ಶನಿವಾರ ಕಾರ್ಯಾಚರಣೆ ನಡೆಸಲಾಗಿದ್ದು, ಇದೇ ರೀತಿ ಭಾನುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
*ಕೋಟ್*
“ಜನತೆಗೆ ವಿದ್ಯುತ್ ಒದಗಿಸುವುದರ ಜತೆಗೆ ಸುರಕ್ಷತೆಗೂ ಆದ್ಯತೆ ನೀಡುತ್ತದೆ. ಪಾದಚಾರಿಗಳು ಸುರಕ್ಷಿತವಾಗಿರಬೇಕಾದರೆ ಅವರ ಓಡಾಟಕ್ಕೆ ಸೂಕ್ತ ಪಾದಚಾರಿ ಮಾರ್ಗ ಅಗತ್ಯ. ಅದನ್ನು ನಿರ್ವಹಿಸುವ ಕಾರ್ಯಕ್ಕೆ ಜಿಬಿಎ ಜತೆ ಬೆಸ್ಕಾಂ ಕೈಜೋಡಿಸಿ ಕ್ಲೀನ್ ಅಪ್ ಬೆಂಗಳೂರು ಅಭಿಯಾನದಲ್ಲಿ ಭಾಗಿಯಾಗಿದೆ. ಈ ತಿಂಗಳ ಅಂತ್ಯದೊಳಗೆ ನಾವು ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಹಾಗೂ ಕಸಮುಕ್ತ ವಾತಾವರಣ ನಿರ್ಮಿಸಿಕೊಡಲಿದ್ದೇವೆ.
– *ಕೆ.ಜೆ.ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವರು*