ಮಳೆಗಾಗಿ ಕಾದ ರೈತರಿಗೆ ಹೊಸ ಸಂಕಷ್ಟ: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಸ್ಥಗಿತ: ಬರದ ಭೀತಿ ಬಳಿಕ ಅತಿವೃಷ್ಟಿ ಕಾಟ: ಹೊಲಗಳಲ್ಲಿ ನೀರು ನಿಂತು ಕೃಷಿ ಚಟುವಟಿಕೆ ಅಸ್ತವ್ಯಸ್ತ

ತಿಂಗಳುಗಳ ಕಾಲ ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇಷ್ಟು ದಿನ ಸಮರ್ಪಕ ಮಳೆಯಿಲ್ಲದೆ ಬರದ ಆತಂಕದಲ್ಲಿದ್ದ ರೈತರು, ಈಗ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯ ಆರಂಭಿಸಲು ಸಾಧ್ಯವಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಬಂದರೂ ಕೃಷಿ ಚಟುವಟಿಕೆಗಳು ಆರಂಭವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನ್ನದಾತನ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಕಳೆದ ಕೆಲವು ವಾರಗಳವರೆಗೆ ಮಳೆಯ ಕೊರತೆಯಿಂದ ಹೊಲಗಳು ಒಣಗಿದ್ದವು. ಪರಿಣಾಮವಾಗಿ ಬಿತ್ತನೆ ಕಾರ್ಯವನ್ನು ಮುಂದೂಡಿದ್ದ ರೈತರು, ಇತ್ತೀಚೆಗೆ ಮಳೆ ಆರಂಭವಾಗುತ್ತಿದ್ದಂತೆ ಬೀಜ, ಗೊಬ್ಬರ ಖರೀದಿಸಿ ಕೃಷಿ ಕಾರ್ಯಗಳಿಗೆ ಸಜ್ಜಾಗಿದ್ದರು. ಆದರೆ ನಿರಂತರ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿರುವುದರಿಂದ ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ಕೃಷಿ ಯಂತ್ರೋಪಕರಣಗಳನ್ನು ಹೊಲಕ್ಕೆ ಇಳಿಸಲು ಸಾಧ್ಯವಾಗುತ್ತಿಲ್ಲ.

ಮಳೆ ವಿರಾಮ ನೀಡದ ಕಾರಣ ಉಳುಮೆ, ಬಿತ್ತನೆ ಸೇರಿದಂತೆ ಆರಂಭಿಕ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಈಗಾಗಲೇ ವಿಳಂಬವಾಗಿರುವ ಬಿತ್ತನೆ ಮತ್ತಷ್ಟು ತಡವಾದರೆ ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ದೊಡ್ಡಬಳ್ಳಾಪುರ ಭಾಗದಲ್ಲಿ ಮುಖ್ಯವಾಗಿ ಬೆಳೆಯಲಾಗುವ ರಾಗಿ, ಜೋಳ, ತೊಗರಿ ಸೇರಿದಂತೆ ಮಳೆ ಆಶ್ರಿತ ಬೆಳೆಗಳ ಬಿತ್ತನೆಗೆ ಇದು ಅತ್ಯಂತ ಮಹತ್ವದ ಅವಧಿಯಾಗಿದೆ. ಆದರೆ ನಿರಂತರ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿರುವುದರಿಂದ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸರಿಯಾದ ಸಮಯದಲ್ಲಿ ಬಿತ್ತನೆ ಆಗದಿದ್ದರೆ ಬೆಳೆಯ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಉತ್ಪಾದನೆ ಕಡಿಮೆಯಾಗುವ ಭೀತಿ ಎದುರಾಗಿದೆ.

ಕೃಷಿ ತಜ್ಞರ ಅಭಿಪ್ರಾಯದಂತೆ, ಮಳೆಯ ನಡುವೆ ಕೆಲ ದಿನಗಳ ಕಾಲ ವಿರಾಮ ದೊರೆತರೆ ಮಾತ್ರ ಹೊಲದ ತೇವಾಂಶ ಸಮತೋಲನಕ್ಕೆ ಬಂದು ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಇಲ್ಲದಿದ್ದರೆ ಬಿತ್ತನೆ ಅವಧಿ ಮತ್ತಷ್ಟು ಕುಗ್ಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.

ಒಂದೆಡೆ ಮಳೆ ಕೊರತೆಯಿಂದ ಬರದ ಭೀತಿ, ಮತ್ತೊಂದೆಡೆ ಅತಿಯಾದ ಮಳೆಯಿಂದ ಬಿತ್ತನೆ ವಿಳಂಬ. ಪ್ರಕೃತಿಯ ಈ ವೈಪರೀತ್ಯಗಳ ನಡುವೆ ಅನ್ನದಾತ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾನೆ. ಈಗಾದರೂ ಮಳೆ ಕೆಲ ದಿನಗಳ ಕಾಲ ವಿರಾಮ ನೀಡಿದರೆ ಮಾತ್ರ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆ ರೈತರದ್ದಾಗಿದೆ.

ಇಷ್ಟು ದಿನ ಮಳೆಯೇ ಇರಲಿಲ್ಲ. ಈಗ ಮಳೆ ಶುರುವಾದ ಮೇಲೆ ಒಂದೇ ಸಮನೆ ಸುರಿಯುತ್ತಿದೆ. ಹೊಲಕ್ಕೆ ಇಳಿದು ಬಿತ್ತನೆ ಮಾಡಲು ಅವಕಾಶವೇ ಸಿಗುತ್ತಿಲ್ಲ. ಇದೇ ರೀತಿ ಮಳೆ ಮುಂದುವರಿದರೆ ಬಿತ್ತನೆ ಮತ್ತಷ್ಟು ತಡವಾಗಿ ಬೆಳೆಗೂ ಹೊಡೆತ ಬೀಳಲಿದೆ ಎಂದು ರೈತ ಗಂಗರಾಜು ಹೇಳಿದ್ದಾರೆ.

ಬಿತ್ತನೆ ಕಾರ್ಯ ಈಗಾಗಲೇ ತಡವಾಗಿದೆ. ಹೀಗಾಗಿ ರೈತರು ಅಲ್ಪಾವಧಿಯ ಬೆಳೆಗಳತ್ತ ಗಮನಹರಿಸುವುದು ಸೂಕ್ತ. ಹವಾಮಾನ ಮುನ್ಸೂಚನೆಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ ನಿನೋದಿಂದ ಲಾ ನಿನಾಗೆ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ನಂತರ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ರೈತರು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಇಲಾಖೆಯ ಸಲಹೆ ಪಡೆದು ಬೆಳೆ ಆಯ್ಕೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ. ನಿಂಗರಾಜು ಜಿ.ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!