ಮದ್ಯಪಾನ, ಡ್ರಗ್ಸ್ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ- ಸಚಿವ ಕೆ.ಎಚ್ ಮುನಿಯಪ್ಪ

ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂದು ಅಮಿಟಿ ವಿಶ್ವವಿದ್ಯಾಲಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವಿಭಾಗದ ವತಿಯಿಂದ ಹ್ಮಮಿಕೊಂಡಿದ್ದ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ *ಡ್ರಗ್ಸ್ ಬೇಡ ಬ್ರೊ* ಜಾಗೃತಿ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ಸದ್ಗುಣ, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಶೈಕ್ಷಣಿಕ ಸಂಸ್ಥೆ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಮಹಾತ್ಮ ಗಾಂಧೀಜಿ, ಸರದಾರ್ ವಲ್ಲಭಾಯ್ ಪಟೇಲ್ ಸೇರಿದಂತೆ ದೇಶಭಕ್ತರ ನಮ್ಮ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕೆಂದು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಮಹಾತ್ಮರು ಉಳಿಸಿ ಬೆಳೆಸಿದ ನಮ್ಮ ದೇಶವನ್ನು ಯುವ ಪೀಳಿಗೆ ಕೊಂಡೊಯ್ಯುವ ಕೆಲಸ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಕ್ಕಳು ದೇಶದ ಆಸ್ತಿ, ನಮ್ಮ ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ಪೂರಕವಾಗುವಂತಹ ಕಾರ್ಯವನ್ನು ಮಾಡಿ. ತಂದೆ-ತಾಯಿ, ಕುಟುಂಬ, ಸಮಾಜಕ್ಕೆ ಸತ್ಕೀರ್ತಿ ಯನ್ನು ತನ್ನಿ. ಡ್ರಗ್ಸ್ ಮುಕ್ತ ಸಮಾಜಕ್ಕೆ ವೈಜ್ಞಾನಿಕ ಸಲಹೆಗಳು ಇದ್ದರೆ ಪೋಲಿಸ್ ಇಲಾಖೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ ಯುವ ಪೀಳಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಒಂದು ಬಾರಿ ಡ್ರಗ್ಸ್ ಸೇವನೆಯಿಂದ ಏನು ಆಗುವುದಿಲ್ಲ ಎಂದು ನಿಮ್ಮ ಸ್ನೇಹಿತರು ನಿಮಗೆ ಸಲಹೆಯನ್ನು ಕೊಟ್ಟರೆ ಅದನ್ನು ಎಂದಿಗೂ ನೀವು ಪಾಲಿಸಬೇಡಿ. ಡ್ರಗ್ ಸೇವನೆ ಹವ್ಯಾಸವಾಗಿ ಮಾರ್ಪಾಟ್ಟು ಜೀವನ ಹಾಳಾಗುವುದರ ಜೊತೆಗೆ ಕುಟುಂಬವು ನೋವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಇಂದಿನಿಂದಲೇ ದೃಢ ನಿರ್ಧಾರ ತೆಗೆದುಕೊಂಡು ಡ್ರಗ್ಸ್ ಮುಕ್ತ ದೇಶ ನಿರ್ಮಾಣಕ್ಕೆ ಯುವ ಪೀಳಿಗೆ ಜೊತೆಯಾಗಬೇಕು. ಶಾಲಾ ಕಾಲೇಜು ಸುತ್ತಮುತ್ತ ಡ್ರಗ್ಸ್ ಮಾರಾಟ ಅಥವಾ ಮಾರಾಟ ಮಾಡುವವರು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮಾತನಾಡಿ ಡ್ರಗ್ಸ್ ಮಾರಾಟಗಾರರು ದುಡಿಯುವ ವರ್ಗ, ಯುವ ಸಮೂಹವನ್ನು ಗುರಿಯಾಗಿಸಿದೆ. ಎಷ್ಟೋ ಕುಟುಂಬಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿ ಇಂದು ಕಣ್ಣೀರು ಹಾಕುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟದಿದ್ದರೆ ಮುಂದೆ ಕೆಟ್ಟ ಪರಿಣಾಮವನ್ನು ಸಮಾಜ ಎದುರಿಸಬೇಕಾಗುತ್ತದೆ ಎಂದರು.

ಇಂದಿನ ಪರಿಸ್ಥಿಯಲ್ಲಿ ನಾವು ಎಲ್ಲಾ ಕಡೆಗಳಲ್ಲೂ ಮನೆ, ಮಕ್ಕಳ ಕೊಠಡಿ, ಪುಸ್ತಕಗಳಲ್ಲಿ ಮಾದಕ ವಸ್ತುಗಳು ಪರಿಶೋಧನೆ ಮಾಡುವಂಥ ಪರಿಸ್ಥಿತಿ ಉದ್ಭವಾಗಿದೆ. ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶವನ್ನು ಮುನ್ನಡೆಸುವ ಕಾರ್ಯ ಯುವ ಪೀಳಿಗೆ ನಿಮ್ಮ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಡ್ರಗ್ಸ್ ಬೇಡ ಬ್ರೋ ಅಭಿಯಾನದದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಎಎಸ್ಪಿ ಲಕ್ಷ್ಮಿನಾರಾಯಣ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ಅಮಿಟಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸುಧಾಕರ್, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!