
ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದು ಅನನ್ಯ ಸಾಧನೆ ಮಾಡಿರುವ ಕನ್ನಡಿಗ ಬಸವರಾಜ್ ಕೆಂಪವಾಡ್ ಅವರಿಗೆ ಹಾಗೂ ಇದೇ ಪರೀಕ್ಷೆಯಲ್ಲಿ 14ನೇ ರ್ಯಾಂಕ್ ಪಡೆದು ರಾಜ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿರುವ ದೀಕ್ಷಿತ್.ಎನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪರಿಶ್ರಮ, ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಕಠಿಣಾತಿ ಕಠಿಣ ಗುರಿಯನ್ನು ಕೂಡ ಮುಟ್ಟಲು ಸಾಧ್ಯವೆಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ. ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸುವಲ್ಲಿ ನಿಮ್ಮ ಪ್ರತಿಭೆ, ಶ್ರದ್ಧೆಯಿಂದ ರಾಷ್ಟ್ರಕ್ಕೆ ಗರಿಷ್ಠ ಅನುಕೂಲವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಈ ಇಬ್ಬರ ಸಾಧನೆಯು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಮತ್ತು ಸ್ಪೂರ್ತಿದಾಯಕವಾದುದ್ದು. ಮತ್ತೊಮ್ಮೆ ವಿಶಿಷ್ಟ ಸಾಧನೆಗೈದ ಯುವ ಕನ್ನಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ನಮ್ಮ ಬೆಳಗಾವಿ ಜಿಲ್ಲೆಯ ಅಥಣಿಯ ಸವದಿ ಗ್ರಾಮದ ಪ್ರತಿಭೆ ಬಸವರಾಜ್ ದರೇಪ್ಪ ಕೆಂಪವಾಡ ಅವರು ಸಾಬೀತುಪಡಿಸಿದ್ದಾರೆ. ಯುಪಿಎಸ್ಸಿ ನಡೆಸಿದ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟಕ್ಕೆ ಪ್ರಥಮ ರ್ಯಾಂಕ್ ಪಡೆದ ನಮ್ಮ ಹೆಮ್ಮೆಯ ಕನ್ನಡಿಗನಿಗೆ ಹಾರ್ದಿಕ ಅಭಿನಂದನೆಗಳು. ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದು, ಸತತ ಪರಿಶ್ರಮದ ಮೂಲಕ ದೇಶದ ಗಮನ ಸೆಳೆದ ಬಸವರಾಜ್ ಅವರ ಸಾಧನೆ ಕೋಟ್ಯಂತರ ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.