
ದೊಡ್ಡಬಳ್ಳಾಪುರ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲೇ ಮಹಿಳೆ ಸುಟ್ಟುಭಸ್ಮವಾಗಿರುವ ಘಟನೆ ಮೇ.2ರ ಮಧ್ಯಾಹ್ನ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಜಿ.ಕೆ ಕುಂಟನಹಳ್ಳಿ ಬಯಲು ಪ್ರದೇಶದಲ್ಲಿ ನಡೆದಿತ್ತು…
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಕಾಣಿಸಿಕೊಂಡ ನಂತರ ಕಾರಿನಿಂದ ಹೊರ ಬಂದು ಜೀವ ರಕ್ಷಣೆ ಮಾಡಿಕೊಂಡಿದ್ದ ರಾಮಾಂಜಿನಪ್ಪ ಎಂಬ ವ್ಯಕ್ತಿ ಕೂಡ ಬಿಡದಿ ವ್ಯಾಪ್ತಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಒದಗಿಬಂದಿದೆ…
ಮೃತ ರಾಮಾಂಜಿನಪ್ಪ ಮಾರಸಂದ್ರ ಗ್ರಾಮದ ನಿವಾಸಿಯಾಗಿದ್ದು, ಮೇ.2ರಂದು ಮಾರಸಂದ್ರ ಸುರೇಶ್ ಎಂಬುವರ ಗ್ಲಾಂಜಾ ಕಾರನ್ನು ಪಡೆದು ಮಹಿಳೆಯೊಬ್ಬರನ್ನು ಕಾರಿನಲ್ಲಿ ಕರೆದುಕೊಂಡು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಜಿ.ಕೆ ಕುಂಟನಹಳ್ಳಿ ಬಯಲು ಪ್ರದೇಶಕ್ಕೆ ಬಂದಿದ್ದ. ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಮಹಿಳೆ ಸುಟ್ಟುಕರಕಲಾಗಿದ್ದಳು. ಆದರೆ ರಾಮಾಂಜಿನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದ. ಸ್ಥಳದಲ್ಲಿ ಮೊಬೈಲ್, ಶರ್ಟ್ ಎಸೆದು ಅಲ್ಲಿಂದ ಪರಾರಿಯಾಗಿದ್ದ. ಘಟನೆ ನಂತರ ತಲೆಮರೆಸಿಕೊಂಡಿದ್ದ, ಇದೀಗ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಗೌರಿಬಿದನೂರು ಮೂಲದ ಸುಜಾತಾ (35), ದೇವನಹಳ್ಳಿ ಮೂಲದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಗೌರಿಬಿದನೂರಿನಿಂದ ಗಂಡನ ಮನೆ ಅಂದರೆ ದೇವನಹಳ್ಳಿಗೆ ಹೋಗುತ್ತೇನೆ ಎಂದು ಮನೆಯಿಂದ ಬಂದು ಬೀದಿ ಹೆಣವಾಗಿದ್ದಾಳೆ.