
ವಿಜಯಪುರದಲ್ಲೋಂದು ವಿಚಿತ್ರ, ಅಮಾನವೀಯ, ಕರಳುಹಿಂಡುವ ಘಟನೆ ನಡೆದಿದೆ.
ಇಲ್ಲೊಬ್ಬ ಕಿರಾತಕ ತಂದೆ ಮಗನನ್ನೇ ಕೊಲೆ ಮಾಡಿದ್ದಾನೆ. ಮಗ ನೋಡಲು ತನ್ನಂತೆ ಇಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆ.
ವಿಜಯಪುರ ಜಿಲ್ಲೆ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ.
ಮಲ್ಲಿಕಾರ್ಜುನ ಅರಕೇರಿ ಮಗನನ್ನೇ ಹತ್ಯೆ ಮಾಡಿದ ಪಾಪಿ ತಂದೆ.
6 ವರ್ಷದ ಪುತ್ರ ಸಿದ್ದಾರ್ಥ ನೋಡಲು ನಿನ್ನಂತಿಲ್ಲ, ನಿನ್ನ ಒಂದು ಹೋಲಿಕೆಯೂ ಇಲ್ಲ ಎಂದು ಮಲ್ಲಿಕಾರ್ಜುನ ಅರಕೇರಿಗೆ ಗ್ರಾಮದಲ್ಲಿ ಕೆಲವರು ನಿತ್ಯ ಚೇಡಿಸಿದ್ದರಂತೆ. ಇದರಿಂದಾಗಿ ರೋಸಿಹೋದ ಮಲ್ಲಿಕಾರ್ಜುನ ತನ್ನ 6 ವರ್ಷದ ಪುತ್ರ ಸಿದ್ದಾರ್ಥನನ್ನು ಕಳೆದ ಮಾರ್ಚ್ 16 ರಂದು ಮಹಾರಾಷ್ಟ್ರದ ಕರಾಡ್ ಜಿಲ್ಲೆ ವಡೋಲಿ ಬಳಿ ಕೃಷ್ಣಾ ನದಿ ಬಳಿ ಕರೆದುಕೊಂಡು ಹೋಗಿ ಮಗುವನ್ನ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ..
ಬಳಿಕ ಮಗನನ್ನು ಸಿಂದಗಿ ಬಳಿ ಶಾಲೆಗೆ ಸೇರಿಸಿ ಹಾಸ್ಟೆಲ್ ನಲ್ಲಿ ಇಟ್ಟಿದ್ದಾಗಿ ತಿಳಿಸಿದ್ದಾನೆ. ಏಪ್ರಿಲ್ 1 ರಂದು ಮಗನ ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರಿ ಪಟ್ಟುಹಿಡಿದಿದ್ದಾರೆ.
ಮಗ ಎಲ್ಲಿದ್ದಾನೆ ಎಂದು ಕೇಳಿದಾಗ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದಾನೆ. ಇದರಿಂದಾಗಿ ಅನುಮಾನ ಬಂದು ಪೊಲೀಸರಿಗೆ ತಾಯಿ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದು ಬಹಿರಂಗ ಮಾಡಿದ್ದಾನೆ. ಮಹಾರಾಷ್ಟ್ರದಲ್ಲಿ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.
ಮಾರ್ಚ್ 16 ರಂದು ಕರಾಡ್ ನ ಮಸೂರು ಠಾಣೆ ಪೊಲೀಸರು ಅಪರಿಚಿತ ಬಾಲಕನ ಶವದ ಬಗ್ಗೆ ಪ್ರಕಟಣೆ ಹೊರಡಿಸಿದ್ದರು. ಈ ಪ್ರಕಟಣೆ ಹಾಗೂ ಮಲ್ಲಿಕಾರ್ಜುನ ನೀಡಿದ ಹೇಳಿಕೆ ಆಧಾರದ ಮೇಲೆ ಬಾಲಕನ ಶವ ಪತ್ತೆ ಮಾಡಲಾಗಿದೆ.
ತನಿಖೆ ವೇಳೆ ಬಾಲಕನ ಹತ್ಯೆ ಮಾಡಿರೋದು ಬೆಳಕಿಗೆ ಬಂದಿದೆ…