
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ಆಯೋಗವು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಡೆದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ನೆರಿದಿದ್ದ ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರಿಂದ ಅಹವಾಲು ಸ್ವೀಕರಿಸಿದರು ವಿಚಾರಗಳ ಬಗ್ಗೆ ಚರ್ಚಿಸಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯಾವುದೇ ವ್ಯಕ್ತಿ ಅಥವಾ ಸಮುದಾಯ,ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾದರೆ ಆಯೋಗವು ತಕ್ಷಣ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ಈ ಸಂಬಂಧವಾಗಿ ಆಯೋಗಕ್ಕೆ ಬಂದು ಪ್ರಕರಣ ದಾಖಲಿಸಬಹುದು.

ಪ್ರಮುಖವಾಗಿ ಶೋಷಣೆ, ದೌರ್ಜನ್ಯ, ಜಮೀನಿನ ಖಾತೆ, ಪಹಣಿ, ಸ್ಮಶಾನ, ಸಮುದಾಯ ಭವನ, ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನ ಬಳಕೆ, ಅಕ್ರಮ ಮದ್ಯ ಮಾರಾಟ, ಪೊಲೀಸ್ ನಡವಳಿಕೆ, ಕಾಮಗಾರಿಗಳಿಗೆ ನಾಮ ಫಲಕ, ಆಶ್ರಯ ಯೋಜನೆ ಮುಂತಾದ ಸಮಸ್ಯೆಗಳ ಬಗ್ಗೆ ಸಮಾಜದ ಮುಖಂಡರು ತಿಳಿಸಿದ್ದಾರೆ. ಇವುಗಳನ್ನು ಆಯೋಗವು ಕುಲಂಕುಶವಾಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಬಳಿಕ ಇದೇ ನಡೆದ ಜಿಲ್ಲಾಮಟ್ಡದ ಅಧಿಕಾರಿಗಳ ಸಭೆಯಲ್ಲಿ, ಎಲ್ಲಾ ಇಲಾಖೆಗಳಿಂದ ಜಿಲ್ಲೆಗೆ ಹಂಚಿಕೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ಪಡೆದು, ವಿಸ್ತೃತವಾಗಿ ಚರ್ಚಿಸಿದರು. ಎಸ್ಸಿ/ಎಸ್ಟಿ ಸಮುದಾಯಗಳ ನಾಗರಿಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢರಾಗಿಸಲುಷ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಹಲವು ಸೂಚನೆ ಮತ್ತು ನಿರ್ದೇಶನಗಳನ್ನು ನೀಡಿದರು.
*ಅನುದಾನ ಸದ್ಬಳಕೆ ಆಗಬೇಕು*
ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅನುದಾನ ಒದಗಿಸಲಿದ್ದು ಆ ಹಣವು ಸಂಪೂರ್ಣವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಸಮರ್ಪಕವಾಗಿ ಸದ್ಬಳಕೆ ಆಗಬೇಕು. ಪುರಸಭೆ, ನಗರಸಭೆ 24.5% ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 25% ಹಣ ಪರಿಶಿಷ್ಟರಿಗೆ ಮೀಸಲಿಡಲಾಗುತ್ತದೆ. ಆ ಹಣ ದುರುಪಯೋಗ ಪಡಿಸಿಕೊಳ್ಳುವುದು ಅಥವಾ ಇತರೆ ಕೆಲಸಗಳಿಗೆ ಅನುದಾನ ಬಳಕೆ ಮಾಡುವುದು ಅಪರಾಧ. ಅಂತಹ ಲೋಪ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
*ಕಾಮಗಾರಿಗಳಿಗೆ ನಾಮಫಲಕ ಅಳವಡಿಸಿ*
ಎಸ್ಸಿಎಸ್ಪಿ ಟಿಎಸ್ಪಿ ಅನುದಾನ ಯೋಜನೆಯಡಿ ಕೈಗೊಂಡಿರುವ ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳು ಮುಗಿದ ನಂತರ ಅಲ್ಲಿ ನಾಮಫಲಕ ಅಳವಡಿಸಿ ಇದರಿಂದ ಅಕ್ರಮ ಬಿಲ್ಲುಗಳು ಮಾಡಿಕೊಳ್ಳುವುದು ತಪ್ಪುತ್ತದೆ.
*ಅಕ್ರಮ ಮದ್ಯ ಮಾರಾಟ ತಡೆ*
ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕೇರಿ, ಕಾಲೋನಿಗಳಲ್ಲಿ ಸಣ್ಣ ಅಂಗಡಿ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಸಮುದಾಯದ ಜನರು ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಇದನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
*ಕುಂದುಕೊರತೆ ಸಭೆಗಳು ಕಾಲಮಿತಿಯೊಳಗೆ ಆಗಬೇಕು*
ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿ ಸಭೆಗಳು ಕಾಲಮಿತಿಯೊಳಗೆ ಆಗಬೇಕು. ಪ.ಜಾತಿ ಪಂಗಡದ ಮುಖಂಡರನ್ನು, ಸದಸ್ಯರನ್ನು ಸಭೆಗೆ ಆಹ್ವಾನಿಸಬೇಕು. ಜಾಗೃತಿ ಸಭೆಗಳಲ್ಲಿ ಪರಿಶಿಷ್ಟರ ಸಮಸ್ಯೆಗಳಿಗೆ ತ್ವರಿತ ಪರಿಹಾರ, ಕ್ರಮ ಕೈಗೊಳ್ಳುವುದು. ಪೊಲೀಸ್ ಠಾಣೆಗಳಲ್ಲಿ ಪ.ಜಾತಿ ಪ.ಪಂಗಡದ ಜನರಿಗೆ ಗೌರವ, ಸೌಜನ್ಯದಿಂದ ವರ್ತಿಸುವುದನ್ನು ಮುಖ್ಯ ಎಂದರು.
*ಪಿಟಿಸಿಎಲ್ ಪ್ರಕರಣಗಳ ತ್ವರಿತ ವಿಲೇವಾರಿ ಆಗಬೇಕು*
ಭೂ ಒತ್ತುವರಿ, ಭೂ ಒಡೆತನ ಸಂಬಂಧಿಸಿದಂತೆ ಎಸಿ ನ್ಯಾಯಾಲಯದಲ್ಲಿನ ಪ್ರಕರಣಗಳ ತ್ವರಿತ ವಿಲೇವಾರಿ ಆಗಬೇಕು. ಪಿಟಿಸಿಎಲ್ ಪ್ರಕರಣಗಳು ಹೈಕೋರ್ಟ್ ನಲ್ಲಿ ತಡೆಷಇದ್ದರೆ ಅಂತಹ ಪ್ರಕರಣಗಳ ವಿಲೇವಾರಿಗೆ ಆಯೋಗದ ವತಿಯಿಂದ ಮೂರು ಜನ ಅಡ್ವೋಕೇಟ್ ನೇಮಿಸಿದ್ದು ದೂರುದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಬಿ ಬಸವರಾಜು, ಎಸ್ಪಿ ಸಿಕೆ ಬಾಬಾ, ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಕಾರ್ಯದರ್ಶಿ ಹೆಚ್.ಎಸ್ ಶಿವರಾಂ ಹೆಚ್ ಎಸ್, ಸದಸ್ಯರಾದ ಕುಂಬಯ್ಯ, ಎಎಸ್ಪಿ ನಾಗರಾಜ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.