
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಉದ್ಘಾಟನೆ ಮಾಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಶ್ರೇಷ್ಠ ಸಂವಿಧಾನ ತಂದುಕೊಟ್ಟ ಮಹಾನ ವ್ಯಕ್ತಿ ಡಾ.ಬಿ.ಆರ್ ಅಂಬೇಡ್ಕರ್, ಅವರ ಪುತ್ಥಳಿಯನ್ನು ಅನಾವರಣ ಮಾಡಿದ್ದು ತುಂಬಾ ಸಂತಸ ತಂದಿದೆ. ಎಲ್ಲರೂ ಶಿಕ್ಷಣವನ್ನು ಪಡೆಯಬೇಕು. ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು….

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ನರೇಗಾ ಹೆಸರು ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ಅದೊಂದು ದುರಂತ ವಿಚಾರ. ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ಮಹಾತ್ಮಗಾಂಧಿ, ರಾಮ ಯಾರೀಗೂ ಬೇಡ ಅಂತ ಹೇಳಲ್ಲ. ಮನೆಯಲ್ಲಿ ರಾಮನಿಗೂ ಆಂಜನೇಯನಿಗೂ ಪೂಜೆ ಮಾಡುತ್ತೇವೆ. ಸಮಾಜ ಸುಧಾರಣೆ, ಸಮಾನತೆ ಸಾರುವ ಉದ್ದೇಶದಿಂದ ಮಹಾತ್ಮ ಗಾಂಧಿ ಹೆಸರು ಇಟ್ಟಿದ್ದೆವು. ಮನಮೋಹನ್ ಸಿಂಗ್ ಸರಕಾರದಲ್ಲಿ ನಾನು ಸಚಿವನಿದ್ದಾಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಮಾಡಿದ್ದರು. ಇದನ್ನ ಇಡೀ ದೇಶ ಒಪ್ಪಿತ್ತು, ಹೆಸರು ಬದಲಾವಣೆಯಿಂದ ಮೋದಿಗೆ ಗೌರವ ಕಡಿಮೆ ಆಯಿತು. ಒಬ್ಬ ರಾಷ್ಟ್ರಪಿತ, ಜಗತ್ ಒಪ್ಪಿರುವ ವ್ಯಕ್ತಿ ಹೆಸರು ಬದಲಾವಣೆ ಮಾಡಿ ನೀವು ಏನು ಕಿರೀಟ ಇಟುಕೊಳ್ಳುತ್ತಿರಿ. ಯಾರಿಗೆ ಗೊತ್ತಿಲ್ಲ ರಾಮ, ನೀವು ಎಷ್ಟು ಜನ ಬರೆಯುತ್ತೀರಾ ರಾಮ ಕೋಟಿ. ನಾನು ನಿತ್ಯ ರಾಮ ಕೋಟಿ ಬರೆಯುತ್ತೇನೆ. ನೀವು ಓಟು ಪಡೆಯಲು ರಾಮನನ್ನು ಉಪಯೋಗಿಸಬೇಡಿ. ಆತ್ಮಶುದ್ದವಾಗಿ ರಾಮನನ್ನ ಪ್ರೀತಿ ಮಾಡಿ, ಪೂಜೆ ಮಾಡಿ. ಗಾಂಧಿಜಿ ಹೆಸರು ಬದಲಾಯಿಸಿದ್ದಕ್ಕೆ ನಮಗೆಲ್ಲಾ ನೋವಿದೆ. ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದರು.

ಸಚಿವ ಕೃಷ್ಣಬೈರೇಗೌಡ ಭೂ ಕಬಳಿಕೆ ವಿಚಾರ ಕುರಿತು ಮಾತನಾಡಿ, ನಾನು ಅಲ್ಲೆ ಇದ್ದು ರಾಜಕಾರಣ ಮಾಡಿದವನು. ಅದು ಮೂಲತಃ ಅವರ ಪೂರ್ವಜರ ಆಸ್ತಿ. ಅವರ ಚಿಕ್ಕಪ್ಪನವರು ವ್ಯವಸಾಯ ಮಾಡುತ್ತಿದ್ದರು. ನೂರು ವರ್ಷಗಳ ಇತಿಹಾಸವಿದೆ. ಕೃಷ್ಣಬೈರೇಗೌಡರಿಗೆ ಗೊತ್ತಿಲ್ಲ, ಅಸಲಿಗೆ ಅವರು ಹುಟ್ಟಿದ್ದರೊ ಇಲ್ಲವೋ ಗೊತ್ತಿಲ್ಲ. ಇಂತದ್ದನೆಲ್ಲಾ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದಾರೆ. ಅದನ್ನ ಸಹಿಸಲಾಗದೆ ತರಲೆ ತಕರಾರು ತರುತ್ತಿದ್ದಾರೆ. ಆರೋಪ ಮಾಡುವವರು ದಾಖಲೆ ಒದಗಿಸಲಿ. ಉತ್ತರ ಕೊಡಲು ಅವರು ತಯಾರಿದ್ದಾರೆ. ಅವರಿಗೂ ಅದಕ್ಕೂ ಸಂಬಂಧವಿಲ್ಲ. ತನಿಖೆಗೆ ಅವರು ತಯಾರಿದ್ದಾರೆ ಎಂದರು..
ಈ ವೇಳೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರಂಗಪ್ಪ, ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದ ಅಧ್ಯಕ್ಷ ನರೇಶ್ ಎಸ್ ಜಿ, ಸಂಘದ ಗೌರವ ಅಧ್ಯಕ್ಷ ಮುನಿಯಪ್ಪ, ಗೌರವ ಅಧ್ಯಕ್ಷ ಎಂ ಮುನಿರಾಜು, ಉಪಾಧ್ಯಕ್ಷ ರಘು ಎಸ್ ಎನ್, ಮುನಿರಾಜು ಆರ್, ಲೋಕೇಶ್ ಎಂ, ಪ್ರಧಾನ ಕಾರ್ಯದರ್ಶಿ ಎಸ್ ಎನ್ ಸುಬ್ರಮಣಿ, ಸದಸ್ಯರು ಸೇರಿದಂತೆ ಇತರೆ ಗಣ್ಯರು ಇದ್ದರು.
ಸಿದ್ದೇನಾಯಕನಹಳ್ಳಿಯಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದ ಅಧ್ಯಕ್ಷ ನರೇಶ್ ಎಸ್ ಜಿ, ಮನವಿ ಮಾಡಿದರು.