Categories: ಲೇಖನ

ಸುದ್ದಿ ಮೂಲಗಳನ್ನು ವಿವೇಚಿಸುವ ಪ್ರಬುದ್ಧತೆ ನಮಗಿರಲಿ….

ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ?

ಯಾವುದು ನಿಜ ?
ಯಾವುದು ಸುಳ್ಳು ?
ಯಾವುದು ಇರಬಹುದು ಎಂಬ ಅನುಮಾನ ?
ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ?
ಯಾವುದನ್ನು ಒಪ್ಪಬೇಕು ?
ಯಾವುದನ್ನು ನಿರ್ಲಕ್ಷಿಸಬೇಕು ?
ಯಾವುದನ್ನು ತಿರಸ್ಕರಿಸಬೇಕು ?

ಇದೊಂದು ಸವಾಲಿನ ವಿಷಯವಾದರೂ ಒಂದು ಹಂತಕ್ಕೆ ಇದು ತುಂಬಾ ಸರಳವೂ ಆಗಿದೆ. ಕೆಲವು ಮೂಲ ಅಂಶಗಳು ಮತ್ತು ಅನುಭವದ ಆಧಾರದ ಮೇಲೆ ಇದನ್ನು ಅರ್ಥಮಾಡಿಕೊಳ್ಳಬಹುದು.

ಸುದ್ದಿಗಳು ಅಪಘಾತ, ಅವಘಡ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇದ್ದರೆ ಸಾಮಾನ್ಯವಾಗಿ ಸಾವು ನೋವುಗಳು ಬಗ್ಗೆ ಬರುವ ವರದಿಗಳನ್ನು – ಅಂಕಿಅಂಶಗಳನ್ನು ಸಂಪೂರ್ಣ ಸತ್ಯ ಎಂದು ಭಾವಿಸಬಹುದು. ಸರ್ಕಾರದ ವೈಧ್ಯಕೀಯ ಸಿಬ್ಬಂದಿ ಮತ್ತು ಪೋಲೀಸರು ಹೇಳಿಕೆ ಆಧರಿಸಿ ಪ್ರಸಾರ ಮಾಡಿದರೆ ಇನ್ನೂ ಹೆಚ್ಚು ನಿಖರ ಎಂದು ಅರ್ಥಮಾಡಿಕೊಳ್ಳಬಹುದು. ಆದರೆ ಇದಕ್ಕೆ ಕಾರಣಗಳನ್ನು ಪತ್ರಕರ್ತರು ಊಹಿಸಿ ಅಥವಾ ತಮಗೆ ದೊರೆತ ಸಾಕ್ಷ್ಯವನ್ನು ಪರಿಶೀಲಿಸಿ, ಅತಿರಂಜಿಸಿ ವರದಿ ಮಾಡಿದರೆ ಅದನ್ನು ನಾವು ಮತ್ತೊಮ್ಮೆ ನಮ್ಮ ಅನುಭವದ ಆಧಾರದ ಮೇಲೆ ವಿವೇಚಿಸಿ ತೀರ್ಮಾನ ಕೈಗೊಳ್ಳಬೇಕೆ ಹೊರತು ಸಂಪೂರ್ಣ ಪತ್ರಕರ್ತರ ವರದಿಯನ್ನು ನಂಬಬಾರದು.

ರಾಜಕೀಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಹಲವಾರು ರೀತಿಗಳು ಇವೆ. ಕೆಲವು ಅಧೀಕೃತ ಮಾಹಿತಿಗಳನ್ನು ಸಹಜವಾಗಿ ಒಪ್ಪಿಕೊಳ್ಳಬಹುದು. ಆದರೆ ರಾಜಕೀಯ ನಾಯಕರ ಹೇಳಿಕೆಗಳ ಆಧಾರದ ಮೇಲೆ ರೂಪಿತವಾಗುವ ಕಾರ್ಯಕ್ರಮ ಅಥವಾ ಬರಹಗಳನ್ನು ಒಪ್ಪಿಕೊಳ್ಳುವ ಮೊದಲು ಹಲವಾರು ಬಾರಿ ಯೋಚಿಸಬೇಕು. ಅದಕ್ಕೆ ಇರುವ ಎಲ್ಲಾ ಆಯಾಮಗಳನ್ನು ಸ್ವತಃ ನಾವು ವಿವೇಚಿಸಬೇಕು.

ರಾಜಕೀಯ ಏರಿಳಿತಗಳ ಬಗ್ಗೆ ಪತ್ರಕರ್ತರಿಗೆ ಕೆಲವು ಸುದ್ದಿ ಮೂಲಗಳ ಮೂಲಕ ಒಂದಷ್ಟು ಮಾಹಿತಿ ಸಿಗುತ್ತದೆ. ಅದನ್ನು ಅತ್ಯುತ್ಸಾಹದಿಂದ ಬ್ರೇಕಿಂಗ್ ನ್ಯೂಸ್ ಎಂದು ವರದಿ ಮಾಡಲಾಗುತ್ತದೆ. ಇದರಲ್ಲಿ ಎಲ್ಲವೂ ನಿಜ ಎಂದು ನಂಬಬಾರದು. ಕೇವಲ ಸಾಧ್ಯತೆಗಳು ಮಾತ್ರ ಎಂದು ಭಾವಿಸಬೇಕು. ಏಕೆಂದರೆ ಕೆಲವೊಮ್ಮೆ ಸುದ್ದಿ ಮೂಲಗಳು ಜನರನ್ನು ದಾರಿ ತಪ್ಪಿಸಲು ಸುಳ್ಳುಗಳನ್ನು ಹರಿಯಬಿಡುತ್ತಾರೆ.

ಕೆಲವು ಅತಿಸೂಕ್ಷ್ಮ ಮನಸ್ಥಿತಿಯ ಬರಹಗಾರರು ರಾಜಕೀಯ ಮುನ್ನೋಟವನ್ನು ನಮ್ಮ ಮುಂದೆ ಇಡುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಒಂದಷ್ಟು ಒಪ್ಪಿಕೊಳ್ಳಬಹುದು.

ಇನ್ನು ಕೆಲವು ಅರೆಬೆಂದ ಅಂಕಣಕಾರರು ತಾವು ಸಾವಿರಾರು ವರ್ಷಗಳಿಂದ ಎಲ್ಲವನ್ನೂ ಕಣ್ಣಾರೆ ನೋಡಿದವರಂತೆ ಇಡೀ ಇತಿಹಾಸವನ್ನು ತಮಗೆ ತೋಚಿದಂತೆ ಚಿತ್ರಿಸುತ್ತಾರೆ. ಯಾವ ಅನುಭವವೂ ಇಲ್ಲದೆ ಕೇವಲ ಅಕ್ಷರಗಳ ಜ್ಞಾನದಿಂದ ಅನುಭವದ ರೂಪ ನೀಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಇದನ್ನು ಗುರುತಿಸುವುದು ನಮ್ಮ ಜವಾಬ್ದಾರಿ.

ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಕಣ್ಣಿಗೆ ಕಾಣುವ ದೃಶ್ಯಗಳ ಜೊತೆಗೆ ಅತಿರಂಜಿತ ಅತಿರೇಕದ ಸುದ್ದಿಗಳನ್ನು ಸಿನಿಮಾ ಸಂಗೀತದೊಂದಿಗೆ ಬೆರೆಸಿ ಪ್ರಸಾರ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ತಾವೇ ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ತಾವು ಹೆಚ್ಚು ಕೆಲಸ ಮಾಡುತ್ತಿರುವುದಾಗಿ ಮುಖ್ಯ ಸಂಪಾದಕರಿಗೆ ತಿಳಿಸಲು ಮಾಡುವ ಕೃತಕ ಸುದ್ದಿಗಳೂ ಇರುತ್ತವೆ. ಅದರ ಬಗ್ಗೆ ಒಂದು ಅನುಮಾನದ ಎಳೆ ಇರಬೇಕಾಗುತ್ತದೆ.

ಜಾಹೀರಾತುಗಳ ಹೆಸರಿನಲ್ಲಿ ಪ್ರಸಾರವಾಗುವ ವೈದ್ಯಕೀಯ, ಅರೆ ವೈದ್ಯಕೀಯ, ರಿಯಲ್ ಎಸ್ಟೇಟ್, ಚಿನ್ನದ ಅಡಮಾನ, ಸಂಕಷ್ಟ ಪರಿಹಾರದ ಜೈ ಹನುಮಾನ್ ಯಂತ್ರಗಳು ಮುಂತಾದ ಅನೇಕ ವಿಷಯಗಳನ್ನು ಮತ್ತೆ ಮತ್ತೆ ಸರ್ಕಾರದ ಅಧೀಕೃತ ಸಂಸ್ಥೆಗಳಿಂದ ದೃಢಪಡಿಸಿಕೊಂಡು ಮುಂದುವರಿಯಬೇಕು. ಮಾಧ್ಯಮಗಳ ಆ ಸುದ್ದಿಗೆ ಮರುಳಾಗಬಾರದು. ಹಣದ ಕಾರಣಕ್ಕಾಗಿ ಅವರು ವಿಶ್ವಾಸಾರ್ಹವಲ್ಲದ ವಿಷಯಗಳನ್ನು ಪ್ರಸಾರ ಮಾಡುತ್ತಾರೆ ಎಂಬುದು ಗಮನದಲ್ಲಿರಬೇಕು.

ಇನ್ನು ಕೌಟುಂಬಿಕ ಜಗಳಗಳನ್ನು ಯಾವುದೇ ವಿವೇಚನೆ ಸೂಕ್ಷ್ಮತೆ ಇಲ್ಲದೆ ಹಸಿಹಸಿಯಾಗಿ ಸಿನಿಮೀಯ ರೀತಿಯಲ್ಲಿ ಪ್ರಸಾರ ಮಾಡುತ್ತಾರೆ. ವೀಕ್ಷಕರ ಕುತೂಹಲವೇ ಇವರ ಟಾರ್ಗೆಟ್. ಅಂತಹ‌ ಸುದ್ದಿಗಳನ್ನು ನಿರ್ಲಕ್ಷಿಸುವುದು ಒಳಿತು. ಎಲ್ಲರ ಮನೆಯ ದೋಸೆಯೂ ತೂತು ಎಂಬ ನಾಣ್ಣುಡಿಯನ್ನು ಅರ್ಥಮಾಡಿಕೊಳ್ಳುವುದು ಒಳಿತು.

ಸುದ್ದಿಗಳು ಮಾಧ್ಯಮಗಳಿಗೆ ತಲುಪುವ ಮೊದಲು ಸಾಮಾನ್ಯವಾಗಿ ಹಲವಾರು ಹಂತಗಳನ್ನು ದಾಟಿರುತ್ತದೆ. ಆದರೆ ಪತ್ರಕರ್ತರು ಅದನ್ನು ತಾವೇ ಮೊದಲು ನೋಡಿದ್ದು, ತಮಗೆ ಎಲ್ಲವೂ ತಿಳಿದಿದೆ ಎಂಬ ರೀತಿಯಲ್ಲಿ ಬ್ರೇಕಿಂಗ್ ನ್ಯೂಸ್‌ ಮಾಡುತ್ತಾರೆ. ಇದರ ಬಗ್ಗೆ ಎಚ್ಚರವಿರಲಿ.

ಕೆಲವರು ಬೇಕಂತಲೇ ಪ್ರಖ್ಯಾತರಾಗಲು ಅಥವಾ ಪ್ರಚಾರ ಪಡೆಯಲು ಗಿಮಿಕ್ ಮಾಡುತ್ತಾರೆ. ಆದರೆ ಪತ್ರಕರ್ತರು ಆ ಸೂಕ್ಷ್ಮ ಗ್ರಹಿಸದೆ ಅತ್ಯುತ್ಸಾಹದಿಂದ ಅದನ್ನು ಪ್ರಸಾರ ಮಾಡುತ್ತಾರೆ. ಅದನ್ನು ನಾವು ಪರಶೀಲಿಸಿ ಅರ್ಥಮಾಡಿಕೊಳ್ಳಬೇಕು.

ಇದು ಕೆಲವು ಉದಾಹರಣೆಗಳು ಮಾತ್ರ. ಸುದ್ದಿಗಳನ್ನು ನೈಜ, ವಾಸ್ತವ, ಕಲ್ಪಿತ, ಸೂಕ್ಷ್ಮ, ದೂರದೃಷ್ಟಿಯ, ಭ್ರಮಾತ್ಮಕತೆಯ, ಉಡಾಪೆ, ಅತಿರಂಜಿತ, ಅತಿರೇಕದ, ಅತ್ಯುತ್ತಮ ಒಳನೋಟದ, ಸ್ಪೂರ್ತಿದಾಯಕ ಮುಂತಾದ ಅನೇಕ ಆಯಾಮಗಳಿಂದ ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಸಾಮಾಜಿಕ ಜಾಲತಾಣಗಳಿಗು ಇದು ಅನ್ವಯ. ಅನೇಕ ಜನರು, ಸಂಸ್ಥೆಗಳು, ಸಮಾಜ ದ್ರೋಹಿಗಳು ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದನ್ನೇ ಒಂದು ದಂಧೆಯಾಗಿ ಮಾಡಿಕೊಂಡಿದ್ದಾರೆ. ಸುಲಭವಾಗಿ ಇದನ್ನು ಹರಿಯಬಿಡುತ್ತಾರೆ.
ಜನರು ಅದಕ್ಕೆ ಮರುಳಾಗುವುದನ್ನು ಕಾಣುತ್ತಿದ್ದೇವೆ.

ಓದುವ, ವೀಕ್ಷಿಸುವ ವರ್ಗ ಒಂದು ಪ್ರಬುದ್ಧ ಮನಸ್ಥಿತಿಯ ವಿವೇಚನಾಯುಕ್ತ ಗುಣಮಟ್ಟ ರೂಪಿಸಿಕೊಂಡರೆ ಇವರ ಆಟಗಳು ನಡೆಯುವುದಿಲ್ಲ. ದಯವಿಟ್ಟು ಈ ಬಗ್ಗೆ ಗಮನಹರಿಸಲು ಕಳಕಳಿಯ ಮನವಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

1 day ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

2 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

2 days ago

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ - ಆಗಸ್ಟ್ 26, 1910..... ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ…

2 days ago

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

3 days ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

3 days ago