Categories: ಲೇಖನ

ಸಮಾಜದಲ್ಲಿ ಗ್ರಹಿಕೆ ಎಂಬ ಭಾವ ಮತ್ತು ಅರಿವು ನಿಜಕ್ಕೂ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ…?

ಗ್ರಹಿಕೆ…….

” ಈ ಜಗತ್ತು ನಾವು ನಮ್ಮ ಬಗ್ಗೆ ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳುಗಳನ್ನೇ ಹೆಚ್ಚು ನಂಬುತ್ತದೆ….”
ಭಾರತರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ……..

ಎಷ್ಟೋ ಬಾರಿ ಈ ಮಾತು ನಮ್ಮೊಳಗೆ ಹೌದು, ಇದು ನಿಜ ಎನಿಸುತ್ತಿರುತ್ತೆ. ಏಕೆಂದರೆ ಕೆಲವೊಮ್ಮೆ ನಾವು ನಮ್ಮದಲ್ಲದ, ನಾವು ಮಾಡಿರದ ಆರೋಪಗಳನ್ನು ನಮ್ಮ ಮೇಲೆ ಹೊರಿಸಿದಾಗ ಮನಸ್ಸು ತಳಮಳಗೊಳ್ಳುತ್ತದೆ. ಮಾನಸಿಕ ಒತ್ತಡಕ್ಕೊಳಗಾಗುತ್ತದೆ. ನಮ್ಮ ತಪ್ಪು ನಮಗೆ ಪಶ್ಚಾತಾಪದ ಭಾವನೆ ಮೂಡಿಸಿದರೆ, ನಮ್ಮದಲ್ಲದ ತಪ್ಪು ಹಿಂಸಾತ್ಮಕ ಮನಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ. ಇದು ಭಂಡ ವ್ಯಕ್ತಿತ್ವದವರಿಗೆ ಅಷ್ಟಾಗಿ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಎಲ್ಲವನ್ನು ಸಾಧ್ಯವಾದಷ್ಟು ಸಮ ಪ್ರಮಾಣದಲ್ಲಿಯೋ ಅಥವಾ ನಿರ್ಲಕ್ಷದ ಮನೋಭಾವದಲ್ಲಿಯೋ ಅಥವಾ ಅಜ್ಞಾನದ ರೀತಿ ತಮಗೆ ಅನ್ವಯಿಸುವುದೇ ಇಲ್ಲ ಎಂದು ಪರಿಗಣಿಸಿದಾಗ ಇದು ಅಷ್ಟಾಗಿ ಬಾಧಿಸುವುದಿಲ್ಲ….

ಏಕೆ ಹೀಗೆ ಎಂದರೆ ಈ ಸಮಾಜದಲ್ಲಿ ಗ್ರಹಿಕೆ ಎಂಬ ಭಾವ ಮತ್ತು ಅರಿವು ನಿಜಕ್ಕೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮೊಳಗೆ ಈ ಗ್ರಹಿಕೆ ಸರಿಯಾಗಿ ಅರ್ಥವಾಗುವಷ್ಟು ನಮ್ಮ ವ್ಯಕ್ತಿತ್ವ ರೂಪುಗೊಂಡಿರುವುದೇ ಇಲ್ಲ. ಆಗ ಅದು ತಪ್ಪಾಗಿ ಮತ್ತು ಸುಲಭವಾಗಿ ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ. ಇದು ಜೀವನದ ಎಲ್ಲ ಕ್ಷೇತ್ರಗಳಿಗೂ, ಎಲ್ಲಾ ವರ್ಗದ, ಎಲ್ಲಾ ವಯೋಮಾನದವರಿಗೂ ಸಮ ಪ್ರಮಾಣದಲ್ಲಿ ಅನ್ವಯಿಸುತ್ತದೆ…..

ನಮ್ಮಲ್ಲಿ ಸರಿಯಾದ ಗ್ರಹಿಕೆ ಮೂಡಲು ಅಧ್ಯಯನ, ಚಿಂತನೆ, ಅನುಭವ, ಹೃದಯ ವೈಶಾಲ್ಯತೆ, ಶ್ರಮ, ಕ್ಷಮಾಗುಣ, ಕರುಣೆ, ತ್ಯಾಗ, ಸಹಕಾರ, ಸಮನ್ವಯ ಮುಂತಾದ ಎಲ್ಲಾ ಗುಣಗಳು ಸಮ್ಮಿಲನವಾಗಿರಬೇಕಾಗುತ್ತದೆ. ಆಗ ಮಾತ್ರ ಅದು ಸಾಧ್ಯ. ಉದಾಹರಣೆಗೆ ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನು ಗ್ರಹಿಸುವಲ್ಲಿ ಗೌತಮ ಬುದ್ಧ ಒಂದು ಮಾದರಿಯಾದರೆ, ಸಾಮಾಜಿಕ ಬದುಕನ್ನು ಗ್ರಹಿಸುವಲ್ಲಿ ಬಸವಣ್ಣ ಮತ್ತೊಂದು ಮಾದರಿಯಾಗುತ್ತಾರೆ, ಹಾಗೆಯೇ ಶೋಷಣೆಯನ್ನು ಗ್ರಹಿಸುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು, ರಾಜಕೀಯವನ್ನು ಗ್ರಹಿಸುವಲ್ಲಿ ಕೌಟಿಲ್ಯನೆಂಬ ಚಾಣಕ್ಯ, ಧರ್ಮ ಮತ್ತು ಆಧ್ಯಾತ್ಮವನ್ನು ಗ್ರಹಿಸುವಲ್ಲಿ ಸ್ವಾಮಿ ವಿವೇಕಾನಂದರು, ನೈತಿಕ ವ್ಯಕ್ತಿತ್ವವನ್ನು ಗ್ರಹಿಸುವಲ್ಲಿ ಮಹಾತ್ಮ ಗಾಂಧಿಯವರು ಹೀಗೆ ಅನೇಕರು ತಮ್ಮ ಗ್ರಹಿಕೆಯಿಂದಲೇ ಇಡೀ ಸಮಾಜಕ್ಕೆ ಮಾರ್ಗದರ್ಶಕರಾಗಿ, ಮಾದರಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ……

ಆ ಗ್ರಹಿಕೆ ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದಂತೆ ಇತರರ ಬಗ್ಗೆ ನಾವು ಅಥವಾ ನಮ್ಮ ಬಗ್ಗೆ ಇತರರು ಹೇಳುವುದನ್ನೇ ನಾವು ಸುಲಭವಾಗಿ ನಂಬುತ್ತೇವೆ. ಆ ಬಗ್ಗೆ ಸಮಗ್ರ ಚಿಂತನೆ ಮಾಡುವುದಿಲ್ಲ. ಅದರಲ್ಲಿ ಕೆಲವೊಮ್ಮೆ ನಿಜ ಇರಬಹುದೇ ಆದರೂ ಒಟ್ಟಾರೆಯಾಗಿ ಇನ್ನೊಬ್ಬರು, ಮುಖ್ಯವಾಗಿ ಅವರ ನೆಗೆಟಿವ್ ಅಥವಾ ನಕಾರಾತ್ಮಕ ಅಥವಾ ಕೆಟ್ಟ ಗುಣಗಳನ್ನು ಹೇಳಿದರೆ ನಾವು ಅದನ್ನೇ ನಂಬಿ ಅವರ ಬಗ್ಗೆ ಅಭಿಪ್ರಾಯ ಹೊಂದುತ್ತೇವೆ…..

ಇದು ಇಂದಿನ ಸಮಾಜದ ಜನರ ಮಾನಸಿಕ ಸ್ಥಿತಿ. ಯಾರೋ ಒಬ್ಬರು ಅವನು ಎಡಪಂಥೀಯ ಎಂತಲೋ ಅಥವಾ ಇನ್ನೊಬ್ಬರು ಆತ ಬಲಪಂಥೀಯ ಎಂತಲೋ ಅಥವಾ ಆತ ಮುಖವಾಡದ ಎಡಬಿಡಂಗಿ ಅಂತಲೋ, ಅಥವಾ ಆತ ಭ್ರಷ್ಟ ಎಂತಲೋ ಅಥವಾ ಅವಕಾಶವಾದಿ ಎಂತಲೋ ಅಥವಾ ಕೆಟ್ಟವನು ಎಂತಲೋ ಹೀಗೆ ಏನಾದರೂ ಹೇಳಿದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅವರೊಂದಿಗೆ ಮಾತುಕತೆ ನಡೆಸಿ, ಮನದಟ್ಟು ಮಾಡಿಕೊಂಡ ನಂತರವೇ ನಾವು ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಲ್ಲದಿದ್ದರೆ ಇತರರು ಹೇಳುವ ಸುಳ್ಳನ್ನೇ ನಿಜ ಎಂದು ನಂಬಿ ನಮ್ಮ ಆತ್ಮಕ್ಕೆ ನಾವು ಮೋಸ ಮಾಡಿಕೊಳ್ಳುತ್ತೇವೆ…..

ಈ ಆಧುನಿಕ ಕಾಲದ ಮಾಧ್ಯಮ ಕ್ರಾಂತಿಯ ಸಂದರ್ಭದಲ್ಲಿ ಅಬ್ದುಲ್ ಕಲಾಂ ಅವರ ಮಾತುಗಳನ್ನು ನಾವು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸುಳ್ಳುಗಳೇ ಈ ಜಗತ್ತನ್ನು ಆಳುವ ದಿನಗಳು ದೂರವಿಲ್ಲ……

ಬ್ರೇಕಿಂಗ್ ನ್ಯೂಸ್ ಗಳು, ವಾಟ್ಸಾಪ್ ಯೂನಿವರ್ಸಿಟಿಗಳು, ಸೋಷಿಯಲ್ ಮೀಡಿಯಾ ತತ್ವಜ್ಞಾನಿಗಳು ಇಡಿ ಸಮಾಜವನ್ನು ಆಕ್ರಮಿಸಿ ಕೃತಕ ಭಾವನೆಯ, ಮನಸ್ಸುಗಳ, ಚಿಂತನೆಯ, ವಿಚಾರಗಳ ನವ ಸಮಾಜ ನಿರ್ಮಾಣವಾಗುವುದು ಖಚಿತ. ಎಚ್ಚರಿಕೆ ಇರಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬೆಸ್ಕಾಂ ವಿರುದ್ಧ ರೈತರ ಆಕ್ರೋಶ: 10 ತಾಸು ಗುಣಮಟ್ಟದ ವಿದ್ಯುತ್‌ಗೆ ಆಗ್ರಹ: ನಷ್ಟ ಬೆಳೆ, ಮೆಣಸಿನಕಾಯಿ ಹಾಗೂ ಜಾನುವಾರುಗಳ ಸಮೇತ ಪ್ರತಿಭಟನೆ

ಕೋಲಾರ: ಬರದಿಂದ ತತ್ತರಿಸಿರುವ ರೈತರ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಬೆಸ್ಕಾಂ…

20 minutes ago

ಘಾಟಿ ತೇರಿನಬೀದಿ ಒತ್ತುವರಿ ತೆರವು; ವ್ಯಾಪಾರಸ್ಥರಲ್ಲಿ ಆತಂಕ

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ತೇರಿನಬೀದಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಂಗಡಿ ಮಳಿಗೆಗಳನ್ನು ಒತ್ತುವರಿ…

6 hours ago

ಹೃದಯ ವೈಶಾಲ್ಯತೆ ಮತ್ತು ಶುದ್ಧತೆ…

" ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " ಸ್ವಾಮಿ ವಿವೇಕಾನಂದ....... ಜೊತೆಗೆ ಹೃದಯ ಅಥವಾ ಮನಸ್ಸು…

7 hours ago

ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ: ಪಿಡಿಒ ಗೌರಮ್ಮ

ಚಿಕ್ಕನಾಯಕನಹಳ್ಳಿ ಸೆ.07: ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ ಹಾಗಾಗಿ ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಕ್ಷಿ…

19 hours ago

ಅರ್ಹ ರೈತರು ಸೌಲಭ್ಯಗಳನ್ನು ಪಡೆದುಕೊಳ್ಳಿ : ಪಿಡಿಒ ರಂಜಿತ

ಚಿಕ್ಕನಾಯಕನಹಳ್ಳಿ ಸೆ.08: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

19 hours ago

ಹೊರಗುತ್ತಿಗೆ ನೇಮಕಾತಿಯಲ್ಲೂ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಕಡ್ಡಾಯ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ SCSP-TSP ಅನುದಾನವನ್ನು ಸಮರ್ಪಕವಾಗಿ ಬಳಸದ ಇಲಾಖೆಗಳ ಮುಂದಿನ ಹಣಕಾಸು…

19 hours ago