Categories: ಲೇಖನ

ವೇಶ್ಯಾವಾಟಿಕೆ ಜಗತ್ತಿನ ಹಳೆಯದಾದ ಒಂದು ಕ್ರಿಯೆ…?

ವೇಶ್ಯಾವಾಟಿಕೆ……

ಒಂದು ವೃತ್ತಿಯೇ,
ಜೀವನ ನಿರ್ವಹಣೆಯ ಒಂದು ಮಾರ್ಗವೇ,
ಒಂದು ಉದ್ಯೋಗವೇ,
ಸಹಜ ಪ್ರಾಕೃತಿಕ ವಿಧಾನವೇ,
ಹೆಣ್ಣಿನ ಶೋಷಣೆಯೇ,
ಗಂಡಿನ ಸುಖದ ಒಂದು ವಿಧಾನವೇ,
ದೌರ್ಜನ್ಯವೇ,
ಅಮಾನವೀಯವೇ,
ಗಂಡಿನ ಅಹಂಕಾರದ ತೆವಲೇ,
ಒಂದು ಹೀನ ಕೆಲಸವೇ,
ಅನೈತಿಕತೆಯೇ,
ಅಪರಾಧವೇ,
ಸಮಾಜ ವಿರೋಧಿಯೇ,
ಧರ್ಮ ವಿರೋಧಿಯೇ,
ವ್ಯಕ್ತಿಗತ ಸ್ವಾತಂತ್ರ್ಯವೇ,
ಪುರುಷತ್ವದ ಅಹಮಿಕೆಯೇ,
ಪ್ರೋತ್ಸಾಹಿಸಬೇಕೆ, ನಿರ್ಲಕ್ಷಿಸಬೇಕೆ,
ಖಂಡಿಸಬೇಕೆ, ತಿರಸ್ಕರಿಸಬೇಕೆ,
ಶಿಕ್ಷಿಸಬೇಕೆ……

ಈ ಬಗ್ಗೆ ಬಹಳ ಕಾಲದಿಂದಲೂ ಚರ್ಚೆಗಳ ನಡೆಯುತ್ತಲೇ ಇವೆ. ನ್ಯಾಯಾಲಯಗಳು ತೀರ್ಪು ನೀಡುತ್ತಲೇ ಇವೆ. ವಿಶ್ವದ ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆ ಪ್ರವಾಸೋದ್ಯಮದ ಒಂದು ಭಾಗವೇ ಆಗಿದೆ. ಆದರೆ ಭಾರತದಂತ ಮಡಿವಂತಿಕೆ ದೇಶದಲ್ಲಿ ಇದು ಚರ್ಚೆಗೂ ಮುಕ್ತವಾಗದ ವಿಷಯವಾಗಿಯೇ ಮುಂದುವರಿದಿದೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇದಕ್ಕೆ ಸಂಪೂರ್ಣ ನಿಷೇಧವಿದೆ. ಕೆಲವು ಸಮುದಾಯಗಳಲ್ಲಿ ಇದಕ್ಕೆ ಪರೋಕ್ಷ ಬೆಂಬಲವೂ ಇದೆ…..

ವೇಶ್ಯಾವಾಟಿಕೆ ಜಗತ್ತಿನ ಹಳೆಯದಾದ ಒಂದು ಕ್ರಿಯೆ. ಅದು ಎಲ್ಲಾ ಸಮಾಜಗಳಲ್ಲೂ, ಎಲ್ಲಾ ಕಾಲದಲ್ಲೂ ಅಂದಿನಿಂದ ಇಂದಿನವರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಅಧಿಕೃತವಾಗಿ ಅಥವಾ ಅನಧಿಕೃತವಾಗಿ, ನೈತಿಕವಾಗಿ ಅಥವಾ ಅನೈತಿಕವಾಗಿ ನಡೆಯುತ್ತಲೇ ಇದೆ. ಹಾಗೆಯೇ ಇದರ ಬಗ್ಗೆ ಮಡಿವಂತಿಕೆಯೂ, ಮುಕ್ತತೆಯೂ ಏಕಕಾಲದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಪ್ರದಾಯವಾದಿ ಧಾರ್ಮಿಕ ಚಿಂತಕರಿಗೆ ಸ್ವಲ್ಪ ಬೇಸರವಾಗಬಹುದು ಅಥವಾ ಅರಗಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಒಂದು ವಿಭಿನ್ನ ದೃಷ್ಟಿಕೋನದಲ್ಲಿ ವಾಸ್ತವಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಒಂದು ವಿಶಾಲ ದೃಷ್ಟಿಕೋನದಿಂದ ಹೇಳುವುದಾದರೆ, ಹೆಣ್ಣಾಗಲಿ ಗಂಡಾಗಲಿ, ಲೈಂಗಿಕ ಅಲ್ಪಸಂಖ್ಯಾತರೇ ಆಗಲಿ ತಮ್ಮ ದೇಹ ಮತ್ತು ಮನಸ್ಸು ಅಥವಾ ಬುದ್ದಿಶಕ್ತಿಯನ್ನು ಹಣಕ್ಕಾಗಿಯೋ, ಆಸೆಗಾಗಿಯೋ, ಮತ್ಯಾವುದೋ ತನ್ನ ಲಾಭಕ್ಕಾಗಿ ಸಂಬಳ, ದಕ್ಷಿಣೆ, ಬಾಡಿಗೆ, ಶುಲ್ಕ, ಗೌರವಧನ ಎಂಬ ಯಾವುದೇ ರೂಪದ ಪ್ರತಿಫಲ ಪಡೆದರೆ ಅಥವಾ ಇನ್ನೊಂದು ರೂಪದಲ್ಲಿ ಮಾರಿಕೊಂಡರೆ ಅದನ್ನು ಏನೆಂದು ಕರೆಯಲಾಗುತ್ತದೆಯೋ ಅದೇ ಅರ್ಥದಲ್ಲಿ ವೇಶ್ಯಾವಾಟಿಕೆಯನ್ನು ಒಂದು ವೃತ್ತಿ ಎಂದು ಕರೆಯಬಹುದಲ್ಲವೇ ?

ಡಾಕ್ಟರು, ಆಕ್ಟರು, ಮೇಷ್ಟ್ರರು, ಡ್ರೈವರು, ಆಫೀಸರು, ಕಂಟ್ರಾಕ್ಟರರು, ಆಡಿಟರು, ಮ್ಯಾನೇಜರು, ಓನರು ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಹಣಕ್ಕಾಗಿ ತಮ್ಮ ದೇಹ ಮತ್ತು ಬುದ್ಧಿಶಕ್ತಿಯನ್ನು ದುಡಿಸಿಕೊಂಡು ಮಾರಾಟ ಮಾಡುವವರೇ ಅಲ್ಲವೇ ?

ಸ್ವಲ್ಪ ಮಡಿವಂತಿಕೆ, ಸ್ವಲ್ಪ ಸಾಂಪ್ರದಾಯಿಕ ಮತ್ತು ಮಾನವೀಯತೆಯ‌ ದೃಷ್ಟಿಕೋನದಿಂದ ಯೋಚಿಸಿದರೆ ಒಂದು ಹೆಣ್ಣನ್ನು ಅದರ ಬದುಕಿನ ಅನಿವಾರ್ಯತೆಗಾಗಿ ಅಥವಾ ಬೇರೆ ಕಾರಣದಿಂದಾಗಿಯೂ ಆಕೆಗೆ ಹಣ ಅಥವಾ ಇನ್ನಾವುದೋ ಆಸೆ ತೋರಿಸಿ‌ ಆಕೆಯ ಒಪ್ಪಿಗೆ ಇದ್ದರೂ ಸಹ ಪರೋಕ್ಷವಾಗಿ ನಮ್ಮ ಸುಖಕ್ಕಾಗಿ ಆಕೆಯ ದೇಹವನ್ನು ಉಪಯೋಗಿಸಿಕೊಳ್ಳುವುದು ಅಮಾನವೀಯ ಅಧರ್ಮ ಎನಿಸುತ್ತದೆಯಲ್ಲವೇ ? ಅದನ್ನು ಅಪರಾಧ ಎಂದು ಪರಿಗಣಿಸದಿದ್ದರೂ ಶೋಷಣೆಯ ವ್ಯಾಪ್ತಿಗೆ ಬರುವುದಿಲ್ಲವೇ ?

ಅಕ್ಕ ತಂಗಿ, ‌ಅಮ್ಮ, ಹೆಂಡತಿ ಸೊಸೆ, ಪ್ರೇಯಸಿ, ಮದುವೆ, ವಿಚ್ಚೇದನ, ಲೀವಿಂಗ್ ರಿಲೇಶನ್ಷಿಪ್, ಸ್ವ ಇಚ್ಛೆಯಿಂದ ಬೆಳೆಸಬಹುದಾದ ಸಂಬಂಧ ಹೀಗೆ ಅನೇಕ ಅಧೀಕೃತ ಮತ್ತು ಮುಕ್ತ ‌ಸಂಬಂಧಗಳು ಮತ್ತು ವೇದಿಕೆಗಳು ಕಾನೂನಿನ ವ್ಯಾಪ್ತಿಯಲ್ಲಿಯೇ ಇರುವಾಗ ಮತ್ತೆ ಮನಸ್ಸಿಗೆ ಖೇದ ಉಂಟುಮಾಡುವ ‌ವೇಶ್ಯಾವಾಟಿಕೆ ಎಂಬ ವರ್ಗ ಬೇಕೆ ಎಂಬ ಪ್ರಶ್ನೆ ಎಲ್ಲೋ ಆತ್ಮದ ಮೂಲೆಯಲ್ಲಿ ಕೇಳಿ ಬರುತ್ತದೆ…

ಹಾಗೆಯೇ ವೇಶ್ಯಾವಾಟಿಕೆಗೆ ಕಡಿವಾಣ ಹಾಕಿದರೆ ಅತ್ಯಾಚಾರ ಮತ್ತು ಅದರಿಂದಾಗಿ ಕೊಲೆಗಳು ಹೆಚ್ಚಾಗುವ ಸಂಭವವಿದೆ ಎಂದೂ ವಾದ ಮಂಡಿಸಲಾಗುತ್ತದೆ.

ಇದನ್ನು ಹೀಗೂ ಅರ್ಥೈಸಬಹುದು. ವೇಶ್ಯಾವಾಟಿಕೆ ಪುರುಷರಿಗೆ ವರ ಮಹಿಳೆಯರಿಗೆ ಶಾಪ. ಇದನ್ನು ಗಮನಿಸಿದಾಗ ವೇಶ್ಯಾವಾಟಿಕೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆಯಾದರೆ ಒಳ್ಳೆಯದು. ಒಂದು ನಾಗರಿಕ ಸಮಾಜದಲ್ಲಿ ಅದು ಇಲ್ಲದಿದ್ದರೆ ಇನ್ನೂ ಉತ್ತಮ.

ಅಲ್ಲದೇ ವೇಶ್ಯಾವಾಟಿಕೆ ಬಗ್ಗೆ ತಲೆ ತಗ್ಗಿಸಬೇಕಾಗಿರುವುದು, ನಾಚಿಕೆ ಪಡಬೇಕಾಗಿರುವುದು ಗಂಡು ಸಮುದಾಯವೇ ಹೊರತು ಹೆಣ್ಣಲ್ಲ ಎಂದು ಪ್ರಜ್ಞಾಪೂರ್ವಕವಾಗಿ ಹೇಳುತ್ತಾ….

ಇದು ಒಂದು ಸಾಮಾಜಿಕ ಸಂಬಂಧಗಳ ಸಂಕೀರ್ಣ ವಿಷಯ. ಇದಕ್ಕೆ ಹಲವಾರು ಮುಖಗಳಿರುತ್ತವೆ. ಇದನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ. ಆದರೆ ನಮ್ಮೆಲ್ಲರ ಜವಾಬ್ದಾರಿ ಮತ್ತು ನೈತಿಕ ಪ್ರಜ್ಞೆ ಸದಾ ಜಾಗೃತವಾಗಿರಲಿ ಎಂದು ಮನವಿ ಮಾಡಿಕೊಳ್ಳುತ್ತಾ……

ವಿಶಾಲ ಮನೋಭಾವ ಮತ್ತು ವ್ಯಕ್ತಿ ಸ್ವಾತಂತ್ರ್ಯ ದ ಹಿನ್ನೆಲೆಯಲ್ಲಿ ಒಮ್ಮೆ ಯೋಚಿಸಿ.

ಸೃಷ್ಟಿಯ ಮೂಲದಲ್ಲಿ ಮನುಷ್ಯ ಒಂದು ಜೀವಿ. ಪ್ರಾರಂಭದಲ್ಲಿ ಯಾವುದೇ ಸಂಬಂಧಗಳ ಬಗ್ಗೆ ಅವರಿಗೆ ಯಾವ ಅರಿವೂ ಇರಲಿಲ್ಲ. ಆದರೆ ಕ್ರಮೇಣ ತಾಯಿ ತಂದೆ, ಮಕ್ಕಳು, ಮೊಮ್ಮಕ್ಕಳು ಹೀಗೆ ಅರ್ಥವಾಗುತ್ತಾ, ಊರು ಕೇರಿ, ಸಮಾಜ, ರಕ್ಷಣೆ, ಒಳಿತು ಕೆಡಕುಗಳು, ನೈತಿಕ ಅನೈತಿಕ ಮೌಲ್ಯಗಳು, ಆಡಳಿತ, ಕಾನೂನು ಹೀಗೆ ಒಂದಕ್ಕೊಂದು ಅನುಭವದೊಂದಿಗೆ ಬೆಳೆಯುತ್ತಾ ಸಾಗಿತು.

ಆಗ ಸಮಾಜದ ಸೌಹಾರ್ದಯುತ ಚಲನೆಗಾಗಿ ಕೆಲವು ನೀತಿ ನಿಯಮಗಳನ್ನು ನಾಗರಿಕತೆಯ ಹಿನ್ನೆಲೆಯಲ್ಲಿ ರೂಪಿಸಿಕೊಳ್ಳಲಾಯಿತು. ಅದರಲ್ಲಿ ಅನೇಕವು ಈಗಲೂ ಮುಂದುವರಿಯುತ್ತಿದೆ.

ಆದರೆ,
ಕ್ರಮೇಣ ಆ ನಿಯಮಗಳಲ್ಲಿಯೂ ಕೆಲವು ಲೋಪ ದೋಷಗಳು ಮತ್ತು ನಾಗರಿಕ ಪ್ರಜ್ಞೆಗೆ ವಿರುದ್ಧವಾಗಿ ಅಸಮಾನತೆಯ ಅಂಶಗಳು ಗೋಚರಿಸಿದವು.

ವ್ಯಕ್ತಿ ಸ್ವಾತಂತ್ರ್ಯ ಗೌರವಿಸುವುದೇ ನಾಗರಿಕ ಸಮಾಜದ ಬಹುಮುಖ್ಯ ಗುಣಲಕ್ಷಣ. ಅದರ ಪ್ರತಿಪಾದನೆಯ ಮುಂದುವರಿದ ಭಾಗವೇ ಈ ಚಿಂತನೆಗಳು…….

ಮದುವೆ ಗಂಡು ಹೆಣ್ಣಿನ ಒಪ್ಪಿತ ಪ್ರೀತಿಯ ಒಂದು ಭಾಗ. ಇಲ್ಲಿ ಯಾರು ಯಾರಿಗೂ ಮಾರಾಟವಾಗುವುದಿಲ್ಲ. ಅದು ಪವಿತ್ರ ಸಂಬಂಧವೂ ಅಲ್ಲ. ಪ್ರೀತಿಯ ಜವಾಬ್ದಾರಿಯುತ ಮಿಲನ.
ಅದು ಇರುವವರೆಗೂ ಯಾವುದೇ ಸಮಸ್ಯೆ ಇಲ್ಲ. ಅದು ಶಿಥಿಲವಾದಂತೆ ಅನೈತಿಕವೂ ಸೇರಿದಂತೆ ಬಹಳ ಸಮಸ್ಯೆಗಳು ಉದ್ಭವವಾಗುತ್ತದೆ. ಅದು ಅವರವರ ವೈಯಕ್ತಿಕ ವಿಷಯ. ಆದರೆ ಕಾನೂನಿನ ಪ್ರಕಾರ ಅಪರಾಧವಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಅನೈತಿಕ ಮತ್ತು ಅಪರಾಧದ ಅರ್ಥಗಳನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿ.
ಅಪರಾಧಕ್ಕೆ ಕಾನೂನಿನ ಶಿಕ್ಷೆ ಇದೆ ಅದರ ವ್ಯಾಪ್ತಿಯೇ ಬೇರೆ. ಆದರೆ ಅನೈತಿಕತೆ ತುಂಬಾ ಸೂಕ್ಷ್ಮವಾದದ್ದು..

ಕೇವಲ ಇದೊಂದೇ ಅಲ್ಲ, ಎಲ್ಲಾ ಅನೈತಿಕ ಚಟುವಟಿಕೆಗಳು ಹೇಗೆ ವ್ಯಕ್ತಿಗಳನ್ನು ಸಂಪೂರ್ಣ ನಾಶ ಮಾಡುತ್ತವೆ ಎಂಬುದು ವಿಶ್ವ ಮಾನವ ಇತಿಹಾಸ ಅರಿತಿರುವ ಎಲ್ಲಾ ಸಾಮಾನ್ಯರಿಗೂ ತಿಳಿದಿದೆ. ಅನೈತಿಕ ವ್ಯವಹಾರಗಳು ನಮ್ಮ ಬದುಕನ್ನೇ ನಾಶ ಮಾಡುತ್ತದೆ. ನೈತಿಕ ಪ್ರಜ್ಞೆ ಜಾಗೃತಿಯಾಗಿ ಇಟ್ಟುಕೊಳ್ಳೋಣ.

ನೀತಿ ನಿಯಮ, ಕಾನೂನುಗಳು ದುಷ್ಟರ ನಿಯಂತ್ರಣಕ್ಕೇ ಹೆಚ್ಚಾಗಿ ರೂಪಿಸಲಾಗುತ್ತದೆ. ಒಳ್ಳೆಯವರಿಗೆ ಇದರ ಬಗ್ಗೆ ಹೆಚ್ಚು ಚಿಂತಿಸುವ ಅವಶ್ಯಕತೆ ಇಲ್ಲ.

ಭಾರತೀಯ ಸಮಾಜ ಕನಿಷ್ಠ ನೀತಿ ನಿರೂಪಣೆಯ ದೃಷ್ಟಿಯಿಂದ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಭಾವಿಸೋಣವೇ ?
ಆಚರಣೆಯಲ್ಲಿ ಮಾತ್ರ ಇನ್ನೂ ದೂರ ಉಳಿದಿದೆ.
ಮನಸ್ಸುಗಳ ಪ್ರಬುದ್ದವಾದರೆ ಆಚರಣೆಗಳು ಸಾಧ್ಯ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ; ಚಾಲಕ ಸ್ಥಳದಲ್ಲೇ ಸಾವು ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಮುಂಜಾನೆ ದುರಂತ | ರಸ್ತೆಗೆ ಚೆಲ್ಲಾಪಿಲ್ಲಿಯಾದ ಸಿಮೆಂಟ್ ಮೂಟೆಗಳು

  ದೊಡ್ಡಬಳ್ಳಾಪುರ: ಕಡಿದಾದ ತಿರುವಿನಲ್ಲಿ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ…

57 minutes ago

ಬಸ್ ಏರಿದ್ರೆ ಗಮ್ಯಸ್ಥಾನ ಸೇರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ!: ಗುಂಡಮ್ಮಗೆರೆ–ಹೊಸಹಳ್ಳಿ ಮಾರ್ಗದಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ದೊಡ್ಡಬಳ್ಳಾಪುರ: ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪದೇ ಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…

1 hour ago

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ……

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು…

4 hours ago

ಅರ್ಹ ರೈತರು ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ ರಾಜಶೇಖರ್ ಆಚಾರ್

  ಚಿಕ್ಕನಾಯಕನಹಳ್ಳಿ: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

14 hours ago

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ : ಕಾರ್ಯದರ್ಶಿ ಹೇಮಂತ್

  ಚಿಕ್ಕನಾಯಕನಹಳ್ಳಿ: ರೈತರ ವಿಕಸನಕ್ಕೆಂದೇ ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

14 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಕೇರ್ ಬೈ ಬಿಎಲ್‌ಆರ್’ ವೈಯಕ್ತಿಕ ಪ್ರಯಾಣಿಕ ಸೇವೆ ಆರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸುಗಮ, ಅನುಕೂಲಕರ ಮತ್ತು ವೈಯಕ್ತಿಕ ಅಗತ್ಯಗಳಿಗೆ ಹೊಂದುವಂತೆ…

17 hours ago