Categories: ಕೋಲಾರ

ರೆವೆನ್ಯು ಮತ್ತು ಅರಣ್ಯ ಭೂಮಿ ಗುರುತಿಸುವಲ್ಲಿ‌ ಗೊಂದಲ- ರೆವೆನ್ಯು ಮತ್ತು ಅರಣ್ಯ ಇಲಾಖೆ ಜಂಟಿ‌ ಸರ್ವೆ ಮಾಡಿ ವರದಿ ಒಪ್ಪಿಸುವಂತೆ ಸೂಚಿಸಿದ ಸಿಎಂ‌ ಸಿದ್ದರಾಮಯ್ಯ

ರೆವೆನ್ಯು ಮತ್ತು ಅರಣ್ಯ ಭೂಮಿ ಗುರುತಿಸುವ ವಿಚಾರದಲ್ಲಿ ಆಗುತ್ತಿರುವ ತೊಂದರೆಗಳನ್ನು, ಗೊಂದಲಗಳನ್ನು ಪರಿಹರಿಸಲು ಎರಡೂ ಇಲಾಖೆಯ ಜಂಟಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳು ವರದಿ ನೀಡಬೇಕು. ಈ ಸಮಸ್ಯೆ ರಾಜ್ಯ ಮಟ್ಟದಲ್ಲೂ ಇರುವುದರಿಂದ ವಿಧಾನಸೌಧದಲ್ಲಿ ಪ್ರತ್ಯೇಕ ಉನ್ನತ ಮಟ್ಟದ ಸಭೆ ಕರೆಯುತ್ತೇನೆ. ಅಲ್ಲಿಯವರೆಗೂ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬಾರದು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ? ಎಷ್ಟು ಗ್ರಾಮಗಳಲ್ಲಿ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂಬ ಮಾಹಿತಿ ಒದಗಿಸಬೇಕು. ಇತರೆ ಯಾವುದೇ ನೀರಿನ ಮೂಲಗಳು ಇಲ್ಲದಿದ್ದಾಗ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅವಕಾಶ ಮಾಡಿಕೊಳ್ಳಬಹುದು ಎಂದರು.

ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿದ ಪ್ರಕರಣದಲ್ಲಿ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಅವರನ್ನು ತಕ್ಷಣ ಬಂಧಿಸಬೇಕು. ಇದೊಂದು ಕ್ರೂರ ಕೃತ್ಯ. ಇಂತಹುದ್ದನ್ನು ನಾವು ಅಪ್ಪಿತಪ್ಪಿಯೂ ಸಹಿಸುವುದಿಲ್ಲ. ಎರಡು ದಿನಗಳಲ್ಲಿ ಉಳಿದಿಬ್ಬರನ್ನು ಬಂಧಿಸಿ ಜೈಲಿಗಟ್ಟಬೇಕು. ಈ ಘಟನೆ ಇಡೀ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಂದು ಪಾಠ. ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದು ಎಂದು ತಿಳಿಸಿದರು.

ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ. ಹೀಗೆ ಮಾಡುವುದರಿಂದ ವಸತಿ ಶಾಲೆಗಳು ಜೈಲುಗಳು ಎನ್ನುವ ಭಾವನೆ ಹೋಗುತ್ತದೆ ಎಂದು ಹೇಳಿದರು.

ನನಗೆ ದಲಿತ ಚಳವಳಿಗಳ ಜತೆ ಒಡನಾಟ ಮೊದಲೂ ಇತ್ತು, ಈಗಲೂ ಇದೆ, ಸಾಯುವವರೆಗೂ ಇರುತ್ತದೆ. ಹಿಂದೆ “ಸರಾಯಿ ಬೇಡ-ವಸತಿ ಶಾಲೆ ಬೇಕು” ಎನ್ನುವುದು ದಲಿತ ಚಳವಳಿಯ ಘೋಷಣೆಯಾಗಿತ್ತು. ಅದಕ್ಕಾಗೇ ನಾನು ಹೋಬಳಿಗೊಂದು ವಸತಿ ಶಾಲೆ ಆರಂಭಿಸಿದೆ. ಈ ಶಾಲೆಗಳಲ್ಲಿ ಗುಣಮಟ್ಟ ಹೆಚ್ಚಿಸಬೇಕು. ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.

ದೇವಸ್ಥಾನದ ಮತ್ತು ವಕ಼್ಫ್ ಬೋರ್ಡ್‌ಗೆ ಸಂಬಂಧಪಟ್ಟ ಸ್ಥಳಗಳು, ಜಮೀನು ಆಯಾ ಆಯಾ ಸಂಸ್ಥೆಗೆ ಹೋಗಬೇಕು. ಇವರ ಜಾಗ ಅವರಿಗೆ ಅವರ ಜಾಗ ಇವರಿಗೆ ಹೋಗದಂತೆ, ತಾಂತ್ರಿಕ ದಾಖಲಾತಿಗಳ ಗೊಂದಲ ಉಂಟಾಗದಂತೆ ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ವಿಶ್ವಕರ್ಮ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳಲ್ಲೂ ನಿಯಮಾನುಸಾರ ಎಲ್ಲಾ ಜಾತಿ ಧರ್ಮದವರಿಗೂ ಅವಕಾಶ ನೀಡಬೇಕು ಎಂದು ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಅಪರಾಧಗಳ ಹೆಚ್ಚಳ ಆದರೆ ನಾನು ಸಹಿಸಲ್ಲ. ಕೋಲಾರ ಅಪರಾಧ ಮುಕ್ತ ಆಗಬೇಕು. ಚಾಳಿಬಿದ್ದ ಆರೋಪಿಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ, ಭ್ರೂಣಹತ್ಯೆ ತಪ್ಪಿಸಬೇಕು. ಕೋಲಾರದಲ್ಲಿ ಈ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವೇನು? ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಜಿಲ್ಲೆಯ ಅಧಿಕಾರಿಗಳ ಕರ್ತವ್ಯ. ಮುಂದೆ ಇಂಥವು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರ್‌ಗಳ ಖಾತೆಯಲ್ಲಿ ಬರ ನಿರ್ವಹಣೆಗೆ ಅಗತ್ಯವಾದ ಹಣ ಇದೆ. ಜನ-ಜಾನವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಮೇವಿಗೆ ತೊಂದರೆ ಇಲ್ಲ . ಮುಂದಿನ ಹಲವು ವಾರಗಳಿಗೆ ಆಗುವಷ್ಟು ಮೇವು ಸಂಗ್ರಹ ಇದೆ. ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿ ಬಗ್ಗೆ ಆದ್ಯತೆ ನೀಡಬೇಕು.
ನರೇಗಾ ಉದ್ಯೋಗ 100 ರಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಕೇಂದ್ರದಿಂದ ಒಪ್ಪಿಗೆ ಸಿಕ್ಕಿಲ್ಲ ಎಂದರು.

ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಆಗುವವರೆಗೂ ರೈತರಿಗೆ 2 ಸಾವಿರ ತಕ್ಷಣಕ್ಕೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೋಲಾರದ ಜನ ನನ್ನ ಬಳಿಗೆ ಬಂದರೆ ಇಲ್ಲಿ ಜಿಲ್ಲಾಡಳಿತ ವಿಫಲ ಎಂದೇ ಪರಿಗಣಿಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜನರ ಹಣದಲ್ಲಿ ಅಧಿಕಾರಿಗಳಿಗೆ ಸವಲತ್ತುಗಳು ಸಿಗುತ್ತಿವೆ. ಆದ್ದರಿಂದ ನಾವು ಜನರ ಪರವಾಗಿರಬೇಕು. ರೈತರನ್ನು ಪೊಲೀಸ್ ಮತ್ತು ಇತರೆ ಇಲಾಖೆ ಅಧಿಕಾರಿಗಳು ಸತಾಯಿಸಬಾರದು. ಇದನ್ನು ನಾನು ಸಹಿಸಲ್ಲ. ಇದನ್ನು ಎಸ್.ಪಿ ಗಳು ಗಮನಿಸಬೇಕು. ಎಸ್.ಪಿ ಗಳು ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೋಲಾರ ಜಿಲ್ಲೆ ಪ್ರಗತಿ ಸಾಧಿಸಬೇಕು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಮುಂದಿರಬೇಕು. ಮಕ್ಕಳಲ್ಲಿ ಅನಿಮೀಯ, ರಕ್ತ ಹೀನತೆ 0.6℅ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಏನು ಕ್ರಮ ಕೈಗೊಳ್ಳಲಾಗಿದೆ? ಅನಿಮಿಯ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮ. ಇದನ್ನು ಪರಿಣಾಮಕರಿಯಾಗಿ ಜಾರಿ ಮಾಡಬೇಕು ಎಂದು ತಿಳಿಸಿದರು.

ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಲ್ಲಿ ನಾವು ಊಟ ಕೊಡುತ್ತಿದ್ದೇವೆ. ಆದರೂ ರಕ್ತಹೀನತೆ ಪ್ರಮಾಣ 0.6℅ ಹೆಚ್ಚಾಗಿದ್ದು ಏಕೆ ಎಂದು ಪರಿಶೀಲಿಸಿ, ತಕ್ಷಣ ಪರಿಹಾರ ಮಾಡಬೇಕು. 31 ಜಿಲ್ಲೆಗಳಲ್ಲಿ ತಲಾ ಆದಾಯದಲ್ಲಿ ಕೋಲಾರ 19ನೇ ಸ್ಥಾನದಲ್ಲಿದೆ ಏಕೆ? ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆಯಾಗಿದ್ದು, ಮುಂದಿನ ಸಭೆಗಳಲ್ಲಿ ಇದೆಲ್ಲಾ ಸುಧಾರಿಸಿರಬೇಕು ಎಂದರು.

ಸ್ಮಶಾನ ಮತ್ತು ಖಬರಸ್ತಾನಕ್ಕೆ ಅಗತ್ಯ ಜಾಗಗಳನ್ನು ಒದಗಿಸಬೇಕು.‌ ಸರ್ಕಾರಿ ಸ್ಥಳ ಇಲ್ಲದಿದ್ದರೆ ಖರೀದಿಸಿ ಕೊಡಬೇಕು. ದಲಿತರು ಸೇರಿದಂತೆ ಯಾವುದೇ ಸಮುದಾಯ, ಧರ್ಮದವರಿಗೂ ಶವ ಸಂಸ್ಕಾರಕ್ಕೆ ತೊಂದರೆ ಆಗಕೂಡದು ಎಂದು ಸೂಚಿಸಿದರು.

Ramesh Babu

Journalist

Recent Posts

ಕೇಬಲ್ ಕಾರ್ಖಾನೆಗೆ ಬೆಂಕಿ: ಧಗಧಗ ಉರಿಯುತ್ತಿರುವ ಕಾರ್ಖಾನೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇಬಲ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಧಗಧಗನೆ ಕಾರ್ಖಾನೆ ಉರಿಯುತ್ತಿದೆ. ಈ ಘಟನೆ ಇಂದು ಸಂಜೆ ಸುಮಾರು…

58 minutes ago

ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟ ಕದ್ದೊಯ್ದ ಐನಾತಿಗಳು

ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…

4 hours ago

ಮಾರಮ್ಮ ದೇವಿಯ ಮೂರು ಚಿನ್ನದ ತಾಳಿ, ನಾಲ್ಕು ಗುಂಡುಗಳನ್ನ ಕದ್ದ ಖದೀಮರು

ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ‌ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…

5 hours ago

T20 World Cup: ವಿಶ್ವ ವಿಜೇತ ಟೀಂ ಇಂಡಿಯಾಗೆ ದಾಖಲೆಯ ಮೂರನೇ T20 ವಿಶ್ವಕಪ್ ಕಿರೀಟ

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಅದ್ಭುತವಾದ…

16 hours ago

2026-27ನೇ ಸಾಲಿನ ರಾಜ್ಯ ಬಜೆಟ್: ಬಜೆಟ್ ಬಗ್ಗೆ ಶಾಸಕ ಧೀರಜ್ ಮುನಿರಾಜ್ ಏನಂದ್ರು ಗೊತ್ತಾ….? ಅವರ ಪ್ರತಿಕ್ರಿಯೆ ಇಲ್ಲಿದೆ ನೋಡಿ….

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಎಲ್ಲಾ ಬಜೆಟ್ ಗಳ ಪೈಕಿ 2026-27ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಈ ಬಜೆಟ್ ನಲ್ಲಿ ಹೊಸ…

1 day ago

ವಸತಿ ಶಾಲಾ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್‌, ಚಾಕುವಿನಿಂದ ದಾಳಿ: ಒಬ್ಬ ವಿದ್ಯಾರ್ಥಿ ಸಾವು: 8 ಮಂದಿಗೆ ಗಾಯ

ಬಳ್ಳಾರಿ ನಗರದ "ಗುರುಕುಲ ವಸತಿ ಶಾಲೆ"ಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್‌, ಚಾಕುವಿನಿಂದ…

1 day ago