Categories: ಲೇಖನ

ರತನ್ ಟಾಟಾ ಅವರಲ್ಲಿತ್ತು ಒಂದಷ್ಟು ನೈತಿಕ ಪ್ರಜ್ಞೆ ಮತ್ತು ಸೇವಾ ಮನೋಭಾವ

ರತನ್ ಟಾಟಾ……

ವ್ಯಾಪಾರಂ ದ್ರೋಹ ಚಿಂತನಂ
ಅಥವಾ
ವ್ಯಾಪಾರಂ ಲಾಭ ಚಿಂತನಂ
ಅಥವಾ
ವ್ಯಾಪಾರ ಬದುಕಿಗಾಗಿ ಒಂದು ಉದ್ಯೋಗ
ಅಥವಾ
ವ್ಯಾಪಾರ ಒಂದು ವೈಯಕ್ತಿಕ ಸಾಧನೆ
ಅಥವಾ
ವ್ಯಾಪಾರ ದೇಶ ಸೇವೆ
ಅಥವಾ
ವ್ಯಾಪಾರ ಹೊಟ್ಟೆ ಪಾಡಿನ ಒಂದು ಅನಿವಾರ್ಯ ಮಾರ್ಗ, ಅವಕಾಶ ಮತ್ತು ಮೌಲ್ಯ…….

ಅಸ್ತಂಗತ ಶ್ರೀ ರತನ್ ಟಾಟಾ ಅವರ ನೆನಪಿನ ಹಿನ್ನೆಲೆಯಲ್ಲಿ…..

ಅಂದು ಟಾಟಾ – ಬಿರ್ಲಾ,
ಇಂದು ಅಂಬಾನಿ – ಅದಾನಿ
ಒಂದಷ್ಟು ವ್ಯತ್ಯಾಸ ಮತ್ತು ಅಪಮೌಲ್ಯ…….

ಒಂದು ದೇಶದ ಅಭಿವೃದ್ಧಿಯಲ್ಲಿ ಉದ್ಯಮ ಮತ್ತು ಉದ್ಯಮಿಗಳ ಪಾತ್ರ ಬಹು ಮುಖ್ಯವಾದದ್ದು. ಏಕೆಂದರೆ ಈ ಆಧುನಿಕ ಕಾಲದಲ್ಲಿ ಉದ್ಯಮಗಳ ಸೃಷ್ಟಿ ಉದ್ಯೋಗಕ್ಕೆ ಮತ್ತು ಜೀವನಕ್ಕೆ ಅತ್ಯವಶ್ಯಕವಾಗಿದೆ….

ಭಾರತ ಕೃಷಿ ಪ್ರಧಾನ ದೇಶವಾದರೂ ಅದೊಂದರಿಂದಲೇ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಅದಕ್ಕೆ ಪೂರಕವಾಗಿ ಇತರ ಉದ್ಯಮಗಳು ನಿರಂತರವಾಗಿ ಬೆಳವಣಿಗೆ ಹೊಂದುತ್ತಲೇ ಇರಬೇಕು. ಕೃಷಿಗೆ ಪೂರಕವಾದ ವಸ್ತುಗಳು ಮತ್ತು ಮಾರುಕಟ್ಟೆ ರೂಪದಲ್ಲಿ ಈ ಕೈಗಾರಿಕೆಗಳಿಂದಲೇ ಅನೇಕ ತಂತ್ರಜ್ಞಾನ ಪೂರೈಕೆಯಾಗುತ್ತದೆ. ಅದರಲ್ಲೂ ಈ ಆಧುನಿಕ ಕಾಲದಲ್ಲಿ ತೀವ್ರ ಜನಸಂಖ್ಯಾ ಸ್ಪೋಟ ನಿರುದ್ಯೋಗವನ್ನು ಸೃಷ್ಟಿ ಮಾಡುವ ಸಾಧ್ಯತೆ ಇರುವುದರಿಂದ ಅನೇಕ ಹೊಸ ಹೊಸ ಉದ್ಯಮ ವಲಯಗಳು ಹಾಗೂ ಸೇವಾ ವಲಯಗಳು ಅಭಿವೃದ್ಧಿ ಹೊಂದುತ್ತಲೇ ಇರಬೇಕಾಗುತ್ತದೆ…..

ಅದಕ್ಕೆ ಈ ಉದ್ಯಮಿಗಳ ಕೊಡುಗೆಯು ಬಹಳ ದೊಡ್ಡದು. ಸ್ವಾತಂತ್ರ್ಯ ಭಾರತ ಪ್ರಾರಂಭದಲ್ಲಿ ಶೇಕಡಾ 90% ಕ್ಕೂ ಹೆಚ್ಚು ಕೃಷಿ ಪ್ರಧಾನ ದೇಶವಾಗಿತ್ತು. ಇದು ಮೂಲಭೂತವಾಗಿ ಹಳ್ಳಿಗಳ ದೇಶ. ಆಗ ಆರ್ಥಿಕವಾಗಿ ಸಹ ತುಂಬಾ ದುರ್ಬಲ ಪರಿಸ್ಥಿತಿಯಲ್ಲಿತ್ತು. ಎಷ್ಟೋ ಮನೆಯಲ್ಲಿ ಸೌದೆ ಒಲೆ ಹಚ್ಚಲು ಬೆಂಕಿ ಪೊಟ್ಟಣವೂ ಸಹ ಇರುತ್ತಿರಲಿಲ್ಲ. ಪಕ್ಕದ ಅಥವಾ ಊರಿನ ಇನ್ಯಾರದೋ ಮನೆಯಲ್ಲಿ ಬೆಂಕಿ ಹಚ್ಚಿದಾಗ ಅದರ ಕೆಂಡವನ್ನು ಮನೆಗೆ ತಂದು ಬೆಂಕಿ ಹಚ್ಚಬೇಕಾಗಿತ್ತು….

ಎರಡು ಹೊತ್ತಿನ ಊಟಕ್ಕೂ ಸಾಕಷ್ಟು ತೊಂದರೆ ಇತ್ತು. ಕ್ರೀಡಾಪಟುಗಳಿಗೆ ಸ್ವಂತ ಶೂಗಳು ಇರುತ್ತಿರಲಿಲ್ಲ. ವಾಹನಗಳು ತುಂಬಾ ಕಡಿಮೆ ಪ್ರಮಾಣದಲ್ಲಿದ್ದವು. ಯಾವುದೇ ದೊಡ್ಡ ಉದ್ಯಮಗಳು ಬೆಳವಣಿಗೆ ಹೊಂದಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ಅವರಿಗೆ ಅವಶ್ಯಕತೆ ಇದ್ದ ಕೆಲವು ಉದ್ಯಮಗಳನ್ನು ಮಾತ್ರ ಸ್ಥಾಪಿಸಿದ್ದರು…..

ಅಂತಹ ಸಂದರ್ಭದಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ಗಾಂಧಿಯವರ ಜೊತೆ ಭಾಗವಹಿಸಿ, ಸಾಕಷ್ಟು ಆರ್ಥಿಕ ಸಹಾಯವನ್ನು ನೀಡಿ, ತದನಂತರ ಸರ್ಕಾರದ ಜೊತೆ ಸೇರಿ ಸಮಾಜವಾದಿ ಆರ್ಥಿಕ ತತ್ವದ ಆಧಾರದ ಮೇಲೆ ಉದ್ಯಮ ಬೆಳವಣಿಗೆ ಹೊಂದಲು, ಆ ಸಂದರ್ಭದ ಬಹುಮುಖ್ಯ ಉದ್ಯಮಿದಾರರು ಇದೇ ಟಾಟಾ ಬಿರ್ಲಾ ಗಳು….

ಆ ಕಾಲಘಟ್ಟದ ನಂತರ ಭಾರತ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಮತ್ತೆ ಮುಂದೆ ಜಾಗತೀಕರಣದಿಂದಾಗಿ ಮತ್ತಷ್ಟು ವೇಗ ಪಡೆಯಿತು. ಅಂತಹ ಸಂದರ್ಭದಲ್ಲಿ ಈ ದೇಶದ ಉದ್ಯಮ ಕ್ಷೇತ್ರದ ಮುಂಚೂಣಿಯಲ್ಲಿ ಕೆಲಸ ಮಾಡಿದವರಲ್ಲಿ ರತನ್ ಟಾಟಾ ಪ್ರಮುಖರು……

ಉದ್ಯಮ ಎಂದ ತಕ್ಷಣ ಕೆಲವರಿಗೆ ಸಂಬಳ, ಸಾರಿಗೆ, ಉದ್ಯೋಗ, ಅಧಿಕಾರ ನೆನಪಾದರೆ ಮತ್ತಷ್ಟು ಜನರಿಗೆ ಅಲ್ಲಿನ ಶೋಷಣೆ, ಉದ್ಯಮಿಗಳ ಲಾಭಕೋರತನ ಸಹಜವಾಗಿಯೇ ನೆನಪಾಗುತ್ತದೆ. ವ್ಯಾಪಾರಂ ದ್ರೋಹ ಚಿಂತನಂ ಎಂಬ ಘೋಷ ವಾಕ್ಯವನ್ನು ಹಿಡಿದು ನಮ್ಮ ಯುವಶಕ್ತಿಯನ್ನು ದುಡಿಸಿಕೊಂಡು ಕೈಗಾರಿಕೆಗಳು ಒಂದು ರೀತಿಯ ಅಸಮಾನತೆಗೆ ಕಾರಣವಾಗುತ್ತಿರುವ ಸಂದರ್ಭಗಳು, ಸನ್ನಿವೇಶಗಳು ಸೃಷ್ಠಿಯಾಗುತ್ತಿರುವಾಗ ಮುಖ್ಯವಾಗಿ ರತನ್ ಟಾಟಾ ಅವರ ಕಾರ್ಯವೈಖರಿ ಸ್ವಲ್ಪಮಟ್ಟಿಗೆ ಅದಕ್ಕೆ ಭಿನ್ನವಾಗಿತ್ತು. ಒಂದಷ್ಟು ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ವ್ಯಾಪಾರಂ ಲಾಭ ಚಿಂತನಂ ಎನ್ನುವಷ್ಟರ ಮಟ್ಟಿಗೆ ಸ್ವಲ್ಪ ಮೌಲ್ಯಅವರಲ್ಲಿ ಉಳಿದಿತ್ತು……

ಹಾಗೆಯೇ ಒಂದು ಹಂತದ ನಂತರ ಸಾರ್ವಜನಿಕ ಸೇವೆಗಾಗಿ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಇದೇ ಮಾತನ್ನು ಈಗಿನ ಅಂಬಾನಿ, ಅದಾನಿ ಮುಂತಾದ ಈಗಿನ ಕೆಲವರಿಗೆ ಹೇಳಲಾಗುವುದಿಲ್ಲ. ಏಕೆಂದರೆ ಅವರು ಈಗಲೂ ಲಾಭವನ್ನೇ ಕೇಂದ್ರೀಕೃತ ಮಾಡಿಕೊಂಡು ತಮ್ಮ ಉದ್ಯಮವನ್ನು ನಡೆಸುತ್ತಿದ್ದಾರೆ. ಇಲ್ಲಿನ ಮೌಲ್ಯಗಳು, ಜನಜೀವನ, ಉದ್ಯೋಗಿಗಳ ಬಗೆಗಿನ ಕಾಳಜಿ, ಮಾನವೀಯತೆ ಇವುಗಳ ಬಗ್ಗೆ ಟಾಟಾ ಅವರಿಗಿದ್ದಷ್ಟು ಕಾಳಜಿ ಇವರುಗಳಿಗೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ……

ಇಂದು ಈ ಸಂದರ್ಭದಲ್ಲಿ ಸಾಮಾನ್ಯ ಜನರು, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರತನ್ ಟಾಟಾ ಅವರನ್ನು ಇಷ್ಟೊಂದು ವಿಜೃಂಭಿಸಲು ಕಾರಣ ಅವರ ಒಳಗೆ ಇದ್ದ ಒಂದಷ್ಟು ನೈತಿಕ ಪ್ರಜ್ಞೆ ಮತ್ತು ಸೇವಾ ಮನೋಭಾವ ಕಾರಣವಾಗಿದೆ…..

ಇದರ ಅರ್ಥ ಈ ಸಮಾಜದಲ್ಲಿ ಇನ್ನೂ ಒಳ್ಳೆಯದನ್ನು ಮತ್ತು ಒಳ್ಳೆಯವರನ್ನು ಗುರುತಿಸುವ ಮನೋಭಾವ ಉಳಿದಿದೆ. ಸಮಾಜಮುಖಿ ಕೆಲಸಗಳು ಮತ್ತು ಚಿಂತನೆಗಳಿಗೆ ಈಗಲೂ ಸ್ಪಂದಿಸುವ ಗುಣವಿದೆ. ಸ್ವಾರ್ಥಿಗಳು, ವಂಚಕರು, ಭ್ರಷ್ಟಾಚಾರಿಗಳು, ಲಾಭಕೋರರು, ದುರಹಂಕಾರಿಗಳ ಬಗ್ಗೆ ಜನರ ಅಂತರ್ಯದಲ್ಲಿ ಅಸಹನೆ ಇದ್ದೇ ಇರುತ್ತದೆ. ಸಮಯ ಬಂದಾಗ ಅದು ಹೊರಬರುತ್ತದೆ ಎಂಬ ಅಂಶ ತುಂಬಾ ಸ್ಪಷ್ಟವಾಗಿ ಈಗ ಅರ್ಥವಾಗುತ್ತಿದೆ….

ನಮ್ಮನ್ನು ನಾವು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಮತ್ತೊಮ್ಮೆ ನಮ್ಮ ಕಾರ್ಯವೈಖರಿಯನ್ನು ಪುನರ್ ವಿಮರ್ಶಿಸುವ ಅವಶ್ಯಕತೆಯನ್ನು ನೆನಪಿಸುತ್ತಾ…..

ಶ್ರೀಯುತ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಎಲ್‌ಒ ಕೆಲಸ ಬೇಡ: ಅಂಗನವಾಡಿಗಳಲ್ಲೇ ಎಲ್‌ಕೆಜಿ–ಯುಕೆಜಿ ಆರಂಭಕ್ಕೆ ಅಂಗನವಾಡಿ ನೌಕರರ ಸಂಘ ಒತ್ತಾಯ

ಬೆಂಗಳೂರು ಗ್ರಾಮಾಂತರ: ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಕೆಲಸವನ್ನು ಅಂಗನವಾಡಿ ನೌಕರರಿಗೆ ನೀಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಅಂಗನವಾಡಿ…

14 hours ago

ಟ್ರಂಪ್ ಕಾರ್ಡ್…….

ಟ್ರಂಪ್ ಕಾರ್ಡ್....... ವಿಶ್ವದ ಕ್ರೀಡಾ ಸಂಸ್ಕೃತಿಯ ಘನತೆಗೆ ಚ್ಯುತಿ ತಂದ ಡೊನಾಲ್ಡ್ ಟ್ರಂಪ್... ವಿಶ್ವದ ಕ್ರೀಡಾ ಸಂಸ್ಕೃತಿಗೆ ಅವಮಾನ ಮಾಡಿದ,…

24 hours ago

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ ಬಳಿ ಕ್ಯಾಂಟರ್ ಪಲ್ಟಿ: ರಸ್ತೆಬದಿಯ ಅಂಗಡಿಗಳು ಜಖಂ

ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದ ಶನಿಮಹಾತ್ಮ ದೇವಾಲಯದ ಬಳಿ ಕಳೆದ ರಾತ್ರಿ ಸಂಭವಿಸಿದ ಕ್ಯಾಂಟರ್ ಅಪಘಾತದಲ್ಲಿ ರಸ್ತೆಬದಿಯ ಮೂರು-ನಾಲ್ಕು ಅಂಗಡಿಗಳು…

1 day ago

ಹಾಲಿನ ಖರೀದಿ ದರ ಹೆಚ್ಚಳಕ್ಕೆ ರೈತರ ಬೃಹತ್ ಪ್ರತಿಭಟನೆ

ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ರೂ. 10 ಹೆಚ್ಚಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು…

2 days ago

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಉನ್ನತೀಕರಣಕ್ಕೆ ಗುದ್ದಲಿ ಪೂಜೆ

ದೊಡ್ಡಬಳ್ಳಾಪುರ: ತಾಲೂಕಿನ ಅನಿಬೆಸೆಂಟ್ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು ಉನ್ನತೀಕರಿಸುವ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜ್…

2 days ago

ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್‌ನಲ್ಲಿ ಕರಡಿಗಳ ಪ್ರತ್ಯಕ್ಷ: ನಂದಿಬೆಟ್ಟ ಸಮೀಪ ವನ್ಯಜೀವಿಗಳ ಓಡಾಟದಿಂದ ಆತಂಕ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ಪ್ರಖ್ಯಾತ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್ ಆವರಣದಲ್ಲಿ…

2 days ago