Categories: ಕೋಲಾರ

ಯುವಕರಲ್ಲಿ ಸಾಂಸ್ಕೃತಿಕ ದಿವಾಳಿತನ ಹೆಚ್ಚುತ್ತಿದೆ: ನಿ.ನ್ಯಾ. ಎಚ್.ಎನ್.ನಾಗಮೋಹನ್‌ದಾಸ್

ಕೋಲಾರ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಾನವೀಯ ಗುಣಗಳು ಇಲ್ಲವಾಗಿದ್ದು ಯುವಕರಲ್ಲಿ ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಬುದ್ಧಿವಂತರಾಗುತ್ತಿದ್ದಾರೆಯೇ ಹೊರತು ಮಾನವೀಯ ಗುಣಗಳು ಅವರಲ್ಲಿ ಕಾಣುತ್ತಿಲ್ಲ ಎಂದರು.

ದೇಶದ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದರೆ ಬುದ್ಧವಂತರಿಗಿಂತಲೂ ಹೆಚ್ಚಾಗಿ ಮಾನವೀಯತೆ, ಸಹೃದಯ, ಸುಸಂಸ್ಕೃತ ಗುಣಗಳನ್ನು ಹೊಂದಿರುವ ಯುವಕರ ಬೇಕಾಗಿದ್ದು, ಇಂತಹ ಯುವಕರಿಂದ ಮಾತ್ರವೇ ಸಂವಿಧಾನವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೇರಿದವರಲ್ಲ!
ಬಹುತೇಕರಲ್ಲಿ ಅಂಬೇಡ್ಕರ್ ಎಂದರೆ ದಲಿತರು, ಅಂಬೇಡ್ಕರ್ ಎಂದರೆ ಮೀಸಲಾತಿಯೆಂಬ ತಪ್ಪು ಕಲ್ಪನೆಯಿದ್ದು, ಅಂಬೇಡ್ಕರ್ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೇರಿದವರಲ್ಲ. ಅವರು ಇಡೀ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದವರು ಎಂಬುದನ್ನು ತಿಳಿಯಬೇಕಿದೆ ಎಂದರು.

ವೈಸ್‌ರಾಯ್ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದಂತಹ ಅಂಬೇಡ್ಕರ್ ಅವರು ಕಾರ್ಮಿಕರ ಕೆಲಸದ ಅವಯನ್ನು 14 ರಿಂದ 8 ಗಂಟೆಗೆ ತಿಳಿಸಿದರು. ವೇತನ ಸಹಿತ ರಜೆ ನೀಡಿದರು. ಮಹಿಳೆಯರಿಗೆ ಹೆರಿಗೆ ರಜೆ ನೀಡಿದರು. ಅಂಬೇಡ್ಕರ್ ಅಂದು ಫ್ಯಾಕ್ಟರಿ ಕಾನೂನು ತರದಿದ್ದರೆ ಇಂದು ಕಾರ್ಮಿಕರಿಗೆ ಯಾವುದೇ ಹಕ್ಕುಗಳು ದೊರೆಯುತ್ತಿರಲಿಲ್ಲ ಎಂದರು.

ಕಾನೂನು ಸಚಿವರಾಗಿದ್ದಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಮಹಿಳೆಯರ ರಕ್ಷಣೆಗಾಗಿ ಹಿಂದೂ ಕೋಡ್ ಬಿಲ್ ತಂದರು. ಅದನ್ನು ಅವರದೇ ಪಕ್ಷದವರು ಅಂಗೀಕರಿಸದ ಹಿನ್ನೆಲೆಯಲ್ಲಿ ತಮ್ಮ ಕಾನೂನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದರು.

ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ, ಅತ್ಯಾಚಾರ ಪ್ರಕರಣಗಳಿಗೆ ರಾಜೀನಾಮೆ ನೀಡಿದ ಸಚಿವರಿದ್ದಾರೆಯೇ ಹೊರತು, ಮಹಿಳೆಯರ ಹಕ್ಕುಗಳಿಗಾಗಿ ರಾಜೀನಾಮೆ ನೀಡಿದ ಒಬ್ಬರೇ ವ್ಯಕ್ತಿ ಎಂದರೆ ಅದು ಅಂಬೇಡ್ಕರ್ ಮಾತ್ರ. ಅಂತಹ ವ್ಯಕ್ತಿಯನ್ನು ಒಂದು ಜಾತಿ, ವರ್ಗಕ್ಕೆ ಸೀಮಿತಗೊಳಿಸುವುದು ಸರಿಯೇ ಎಂದು ಪ್ರಶ್ನಿಸಿದರು.

ದೇಶ ತಿಳಿದರೆ ಮಾತ್ರವೇ ಸಂವಿಧಾನ ಅರ್ಥವಾಗುತ್ತದೆ
ದೇಶದ ಎಂದರೆ ಕೇವಲ ಅದು ಮಣ್ಣಲ್ಲ, ಜನರು. ದೇಶದ ಎಲ್ಲ ಭಾಗಗಳಲ್ಲಿನ ಜನರು, ಆಚರಣೆಗಳು, ಆಹಾರ ಪದ್ಧತಿ, ಭಾಷೆ, ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ತಿಳಿಸಿದಾಗ ಮಾತ್ರವೇ ನಮಗೆ ಸಂವಿಧಾನ ಅರ್ಥವಾಗುತ್ತದೆ. ಅನ್ಯಾಯ, ಅಸಮಾನತೆಯ ಕಲ್ಪನೆ ಇಲ್ಲದವರಿಗೆ ಸಾಮಾಜಿಕ ನ್ಯಾಯ ಎಂದರೆ ಏನು ತಿಳಿಯುತ್ತದೆ ಎಂದು ನಾಗಮೋಹನ್‌ದಾಸ್ ಅವರು ಪ್ರತಿಪಾದಿಸಿದರು.

ಸಂವಿಧಾನಕ್ಕೆ ಪರ್ಯಾಯವೇನು?
ಕೆಲವು ಅಜ್ಞಾನಿಗಳು ಸಂವಿಧಾನದಲ್ಲಿರುವ ಅಂಶಗಳು ಸರಿಯಿಲ್ಲ, ದೋಷದಿಂದ ಕೂಡಿದೆ ಎಂದು ಹೇಳಿಕೆಗಳನ್ನು ನೀಡುತ್ತಾರೆ. ಸರಿ ಆಯ್ತು , ಸಂವಿಧಾನ ಸರಿಯಿಲ್ಲ. ಸಂವಿಧಾನಕ್ಕೆ ಪರ್ಯಾಯವೇನು ಎನ್ನುವುದಕ್ಕೆ ಅವರ ಬಳಿ ಉತ್ತರವಿರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯವಾಗಿ ಯಾವ ವ್ಯವಸ್ಥೆಯನ್ನು ನೀವು ತರುತ್ತೀರಿ ಎಂದು ಪ್ರಶ್ನಿಸಿದರು.

ಯುವಕರು ಅಂಬೇಡ್ಕರ್ ಅವರನ್ನು ಏಪ್ರಿಲ್ 14ರ ಆಚರಣೆಗೆ ಸೀಮಿತಗೊಳಿಸದೆ, ಪ್ರತಿದಿನ ಪ್ರತಿ ಕ್ಷಣ ಅವರ ತತ್ವಗಳನ್ನು ಅನುಸರಿಸಿಕೊಂಡು ಹೋದಾಗ ಸಂವಿಧಾನದ ಮಹತ್ವ ಏನು ಎಂಬುದು ಎಲ್ಲರಿಗೂ ತಿಳಿಯಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿಗಳು ಯುವಕರಿಗೆ ಕಿವಿಮಾತು ಹೇಳಿದರು.

ಅಮ್ಮನ ಕಣ್ಣಿನಿಂದ ಅಂಬೇಡ್ಕರ್ ನೋಡಿ: ಗೊಲ್ಲಹಳ್ಳಿ ಶಿವಪ್ರಸಾದ್

ಬಹುತ್ವ ಭಾರತದ ಭವಿಷ್ಯ ಎಂದರೆ ಅದು ಸಂವಿಧಾನ ಮಾತ್ರö. ಅಂಬೇಡ್ಕರ್ ಅವರನ್ನು ಅಮ್ಮನ ಕಣ್ಣಿನಿಂದ ನೋಡಿದಾಗ ಮಾತ್ರವೇ ಸಂವಿಧಾನದ ಮಹತ್ವ ನಮಗೆ ತಿಳಿಯುತ್ತದೆ. ಜಾತಿ, ಧರ್ಮ, ವರ್ಗ, ಭಾಷೆಯ ಕಣ್ಣಿನಿಂದ ನೋಡಿದರೆ ಅಂಬೇಡ್ಕರ್ ಅರ್ಥವಾಗುವುದಿಲ್ಲ ಎಂದು ಜನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಸಮಾಜದ ಒಳಿತಿಗಾಗಿ ದುಡಿದ ಹಾಗೂ ದಾರಿ ತೋರಿದಂತಹ ದಾರ್ಶನಿಕರನ್ನು ನಾವೆಲ್ಲರೂ ಜಾತಿಗಳಿಗೆ ಸೀಮತಿಗೊಳಿಸುತ್ತಿರುವುದು ಖೇಧಕರ ಸಂಗತಿಯಾಗಿದೆ. ಪ್ರಾಣಿಗಳು, ಕೆರೆ-ಕುಂಟೆಗಳು, ಸರಕಾರಿ ಜಮೀನುಗಳು, ಅರಣ್ಯ ಉಳಿದಿದೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.

ದೇಶದಲ್ಲಿ 144ಕೋಟಿ ಜನಸಂಖ್ಯೆಯಿದ್ದರೆ 400 ಕೋಟಿಗೂ ಹೆಚ್ಚಿನ ಮೊಬೈಲ್‌ಗಳಿವೆ. ಯುವಕರು ಮೊಬೈಲ್ ಗೀಳಿಗೆ ಬಿದ್ದು ಯಾವುದಕ್ಕೂ ಪ್ರತಿಕ್ರಿಯಿಸಿದಂತಹ ಪರಿಸ್ಥಿತಿಗೆ ಹೋಗಿದ್ದು, ಯಾವುದನ್ನು ಎಷ್ಟು ಬಳಸಬೇಕು, ಯಾವ ಉದ್ದೇಶಕ್ಕಾಗಿ ಬಳಸಬೇಕೆಂಬುದನ್ನು ತಿಳಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ (ಮೌಲ್ಯಮಾಪನ) ಡಾ.ಕೆ.ತಿಪ್ಪೇಸ್ವಾಮಿ, ಹಣಕಾಸು ಅಕಾರಿ ಬಿ.ವಿ.ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಡಿ.ಕುಮುದ, ಸಿಂಡಿಕೇಟ್ ಸದಸ್ಯ ವೆಂಕಟೇಶಪ್ಪ, ಕಾರ್ಯಕ್ರಮ ಸಂಯೋಜಕ ಡಾ.ಆರ್.ಮಂಜುನಾಥ್, ಉಪನ್ಯಾಸಕರಾದ ಡಾ.ಗುಂಡಪ್ಪ, ಡಾ.ಸತೀಶ್, ಶಿವರಾಜ್, ಡಾ.ರೂಪಾ, ಲೋಕೇಶ್, ಮಮತಾ, ಮೈತ್ರಿ, ಶ್ರೀಲತಾ, ಸುಷ್ಮಾ, ಡಾ.ಶಿಲ್ಪಾ ಸೇರಿದಂತೆ ಪ್ರಮುಖರಿದ್ದರು.

Ramesh Babu

Journalist

Recent Posts

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

3 hours ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

10 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

11 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

1 day ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago