Categories: ಕೋಲಾರ

ಯುವಕರಲ್ಲಿ ಸಾಂಸ್ಕೃತಿಕ ದಿವಾಳಿತನ ಹೆಚ್ಚುತ್ತಿದೆ: ನಿ.ನ್ಯಾ. ಎಚ್.ಎನ್.ನಾಗಮೋಹನ್‌ದಾಸ್

ಕೋಲಾರ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಾನವೀಯ ಗುಣಗಳು ಇಲ್ಲವಾಗಿದ್ದು ಯುವಕರಲ್ಲಿ ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಬುದ್ಧಿವಂತರಾಗುತ್ತಿದ್ದಾರೆಯೇ ಹೊರತು ಮಾನವೀಯ ಗುಣಗಳು ಅವರಲ್ಲಿ ಕಾಣುತ್ತಿಲ್ಲ ಎಂದರು.

ದೇಶದ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದರೆ ಬುದ್ಧವಂತರಿಗಿಂತಲೂ ಹೆಚ್ಚಾಗಿ ಮಾನವೀಯತೆ, ಸಹೃದಯ, ಸುಸಂಸ್ಕೃತ ಗುಣಗಳನ್ನು ಹೊಂದಿರುವ ಯುವಕರ ಬೇಕಾಗಿದ್ದು, ಇಂತಹ ಯುವಕರಿಂದ ಮಾತ್ರವೇ ಸಂವಿಧಾನವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೇರಿದವರಲ್ಲ!
ಬಹುತೇಕರಲ್ಲಿ ಅಂಬೇಡ್ಕರ್ ಎಂದರೆ ದಲಿತರು, ಅಂಬೇಡ್ಕರ್ ಎಂದರೆ ಮೀಸಲಾತಿಯೆಂಬ ತಪ್ಪು ಕಲ್ಪನೆಯಿದ್ದು, ಅಂಬೇಡ್ಕರ್ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೇರಿದವರಲ್ಲ. ಅವರು ಇಡೀ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದವರು ಎಂಬುದನ್ನು ತಿಳಿಯಬೇಕಿದೆ ಎಂದರು.

ವೈಸ್‌ರಾಯ್ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದಂತಹ ಅಂಬೇಡ್ಕರ್ ಅವರು ಕಾರ್ಮಿಕರ ಕೆಲಸದ ಅವಯನ್ನು 14 ರಿಂದ 8 ಗಂಟೆಗೆ ತಿಳಿಸಿದರು. ವೇತನ ಸಹಿತ ರಜೆ ನೀಡಿದರು. ಮಹಿಳೆಯರಿಗೆ ಹೆರಿಗೆ ರಜೆ ನೀಡಿದರು. ಅಂಬೇಡ್ಕರ್ ಅಂದು ಫ್ಯಾಕ್ಟರಿ ಕಾನೂನು ತರದಿದ್ದರೆ ಇಂದು ಕಾರ್ಮಿಕರಿಗೆ ಯಾವುದೇ ಹಕ್ಕುಗಳು ದೊರೆಯುತ್ತಿರಲಿಲ್ಲ ಎಂದರು.

ಕಾನೂನು ಸಚಿವರಾಗಿದ್ದಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಮಹಿಳೆಯರ ರಕ್ಷಣೆಗಾಗಿ ಹಿಂದೂ ಕೋಡ್ ಬಿಲ್ ತಂದರು. ಅದನ್ನು ಅವರದೇ ಪಕ್ಷದವರು ಅಂಗೀಕರಿಸದ ಹಿನ್ನೆಲೆಯಲ್ಲಿ ತಮ್ಮ ಕಾನೂನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದರು.

ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ, ಅತ್ಯಾಚಾರ ಪ್ರಕರಣಗಳಿಗೆ ರಾಜೀನಾಮೆ ನೀಡಿದ ಸಚಿವರಿದ್ದಾರೆಯೇ ಹೊರತು, ಮಹಿಳೆಯರ ಹಕ್ಕುಗಳಿಗಾಗಿ ರಾಜೀನಾಮೆ ನೀಡಿದ ಒಬ್ಬರೇ ವ್ಯಕ್ತಿ ಎಂದರೆ ಅದು ಅಂಬೇಡ್ಕರ್ ಮಾತ್ರ. ಅಂತಹ ವ್ಯಕ್ತಿಯನ್ನು ಒಂದು ಜಾತಿ, ವರ್ಗಕ್ಕೆ ಸೀಮಿತಗೊಳಿಸುವುದು ಸರಿಯೇ ಎಂದು ಪ್ರಶ್ನಿಸಿದರು.

ದೇಶ ತಿಳಿದರೆ ಮಾತ್ರವೇ ಸಂವಿಧಾನ ಅರ್ಥವಾಗುತ್ತದೆ
ದೇಶದ ಎಂದರೆ ಕೇವಲ ಅದು ಮಣ್ಣಲ್ಲ, ಜನರು. ದೇಶದ ಎಲ್ಲ ಭಾಗಗಳಲ್ಲಿನ ಜನರು, ಆಚರಣೆಗಳು, ಆಹಾರ ಪದ್ಧತಿ, ಭಾಷೆ, ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ತಿಳಿಸಿದಾಗ ಮಾತ್ರವೇ ನಮಗೆ ಸಂವಿಧಾನ ಅರ್ಥವಾಗುತ್ತದೆ. ಅನ್ಯಾಯ, ಅಸಮಾನತೆಯ ಕಲ್ಪನೆ ಇಲ್ಲದವರಿಗೆ ಸಾಮಾಜಿಕ ನ್ಯಾಯ ಎಂದರೆ ಏನು ತಿಳಿಯುತ್ತದೆ ಎಂದು ನಾಗಮೋಹನ್‌ದಾಸ್ ಅವರು ಪ್ರತಿಪಾದಿಸಿದರು.

ಸಂವಿಧಾನಕ್ಕೆ ಪರ್ಯಾಯವೇನು?
ಕೆಲವು ಅಜ್ಞಾನಿಗಳು ಸಂವಿಧಾನದಲ್ಲಿರುವ ಅಂಶಗಳು ಸರಿಯಿಲ್ಲ, ದೋಷದಿಂದ ಕೂಡಿದೆ ಎಂದು ಹೇಳಿಕೆಗಳನ್ನು ನೀಡುತ್ತಾರೆ. ಸರಿ ಆಯ್ತು , ಸಂವಿಧಾನ ಸರಿಯಿಲ್ಲ. ಸಂವಿಧಾನಕ್ಕೆ ಪರ್ಯಾಯವೇನು ಎನ್ನುವುದಕ್ಕೆ ಅವರ ಬಳಿ ಉತ್ತರವಿರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯವಾಗಿ ಯಾವ ವ್ಯವಸ್ಥೆಯನ್ನು ನೀವು ತರುತ್ತೀರಿ ಎಂದು ಪ್ರಶ್ನಿಸಿದರು.

ಯುವಕರು ಅಂಬೇಡ್ಕರ್ ಅವರನ್ನು ಏಪ್ರಿಲ್ 14ರ ಆಚರಣೆಗೆ ಸೀಮಿತಗೊಳಿಸದೆ, ಪ್ರತಿದಿನ ಪ್ರತಿ ಕ್ಷಣ ಅವರ ತತ್ವಗಳನ್ನು ಅನುಸರಿಸಿಕೊಂಡು ಹೋದಾಗ ಸಂವಿಧಾನದ ಮಹತ್ವ ಏನು ಎಂಬುದು ಎಲ್ಲರಿಗೂ ತಿಳಿಯಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿಗಳು ಯುವಕರಿಗೆ ಕಿವಿಮಾತು ಹೇಳಿದರು.

ಅಮ್ಮನ ಕಣ್ಣಿನಿಂದ ಅಂಬೇಡ್ಕರ್ ನೋಡಿ: ಗೊಲ್ಲಹಳ್ಳಿ ಶಿವಪ್ರಸಾದ್

ಬಹುತ್ವ ಭಾರತದ ಭವಿಷ್ಯ ಎಂದರೆ ಅದು ಸಂವಿಧಾನ ಮಾತ್ರö. ಅಂಬೇಡ್ಕರ್ ಅವರನ್ನು ಅಮ್ಮನ ಕಣ್ಣಿನಿಂದ ನೋಡಿದಾಗ ಮಾತ್ರವೇ ಸಂವಿಧಾನದ ಮಹತ್ವ ನಮಗೆ ತಿಳಿಯುತ್ತದೆ. ಜಾತಿ, ಧರ್ಮ, ವರ್ಗ, ಭಾಷೆಯ ಕಣ್ಣಿನಿಂದ ನೋಡಿದರೆ ಅಂಬೇಡ್ಕರ್ ಅರ್ಥವಾಗುವುದಿಲ್ಲ ಎಂದು ಜನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಸಮಾಜದ ಒಳಿತಿಗಾಗಿ ದುಡಿದ ಹಾಗೂ ದಾರಿ ತೋರಿದಂತಹ ದಾರ್ಶನಿಕರನ್ನು ನಾವೆಲ್ಲರೂ ಜಾತಿಗಳಿಗೆ ಸೀಮತಿಗೊಳಿಸುತ್ತಿರುವುದು ಖೇಧಕರ ಸಂಗತಿಯಾಗಿದೆ. ಪ್ರಾಣಿಗಳು, ಕೆರೆ-ಕುಂಟೆಗಳು, ಸರಕಾರಿ ಜಮೀನುಗಳು, ಅರಣ್ಯ ಉಳಿದಿದೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.

ದೇಶದಲ್ಲಿ 144ಕೋಟಿ ಜನಸಂಖ್ಯೆಯಿದ್ದರೆ 400 ಕೋಟಿಗೂ ಹೆಚ್ಚಿನ ಮೊಬೈಲ್‌ಗಳಿವೆ. ಯುವಕರು ಮೊಬೈಲ್ ಗೀಳಿಗೆ ಬಿದ್ದು ಯಾವುದಕ್ಕೂ ಪ್ರತಿಕ್ರಿಯಿಸಿದಂತಹ ಪರಿಸ್ಥಿತಿಗೆ ಹೋಗಿದ್ದು, ಯಾವುದನ್ನು ಎಷ್ಟು ಬಳಸಬೇಕು, ಯಾವ ಉದ್ದೇಶಕ್ಕಾಗಿ ಬಳಸಬೇಕೆಂಬುದನ್ನು ತಿಳಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ (ಮೌಲ್ಯಮಾಪನ) ಡಾ.ಕೆ.ತಿಪ್ಪೇಸ್ವಾಮಿ, ಹಣಕಾಸು ಅಕಾರಿ ಬಿ.ವಿ.ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಡಿ.ಕುಮುದ, ಸಿಂಡಿಕೇಟ್ ಸದಸ್ಯ ವೆಂಕಟೇಶಪ್ಪ, ಕಾರ್ಯಕ್ರಮ ಸಂಯೋಜಕ ಡಾ.ಆರ್.ಮಂಜುನಾಥ್, ಉಪನ್ಯಾಸಕರಾದ ಡಾ.ಗುಂಡಪ್ಪ, ಡಾ.ಸತೀಶ್, ಶಿವರಾಜ್, ಡಾ.ರೂಪಾ, ಲೋಕೇಶ್, ಮಮತಾ, ಮೈತ್ರಿ, ಶ್ರೀಲತಾ, ಸುಷ್ಮಾ, ಡಾ.ಶಿಲ್ಪಾ ಸೇರಿದಂತೆ ಪ್ರಮುಖರಿದ್ದರು.

Ramesh Babu

Journalist

Recent Posts

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

7 hours ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

11 hours ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

11 hours ago

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರೋಗ್ಯ ಕಾಳಜಿ; ಹೀಲಿನ್ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…

14 hours ago

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

1 day ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

1 day ago