Categories: ಲೇಖನ

“ಯಾವ ಭಾಷೆಯೂ ಸಂಪೂರ್ಣ ಸ್ವತಂತ್ರವಲ್ಲ”….

ಭಾಷೆ ಎಂಬ……..,

ಭಾಷೆ ಎಂಬ ಭಾವ,
ಭಾಷೆ ಎಂಬ ಸಂವಹನ ಮಾಧ್ಯಮ,
ಭಾಷೆ ಎಂಬ ಸಂಸ್ಕೃತಿ,
ಭಾಷೆ ಎಂಬ ಬದುಕು,
ಭಾಷೆ ಎಂಬ ಅಭಿಮಾನ,
ಭಾಷಾವಾರು ಪ್ರಾಂತ್ಯಗಳು,
ಭಾಷೆ ಎಂಬ ಶ್ರೇಷ್ಠತೆಯ ವ್ಯಸನ,
ಭಾಷೆ ಎಂಬ ಸಂಕುಚಿತತೆ,
ಭಾಷೆ ಎಂಬ ಅನಾವಶ್ಯಕ ವಿವಾದಗಳು……..

ಯಾವ ಭಾಷೆ ಎಷ್ಟು ಹಳೆಯದು ?
ಯಾವ ಭಾಷೆಯಿಂದ ಇನ್ಯಾವ ಭಾಷೆ ಹುಟ್ಟಿದೆ ?
ಯಾವ ಭಾಷೆಯಿಂದ ಮತ್ಯಾವ ಭಾಷೆ ಸತ್ತಿದೆ ?
ಯಾವ ಭಾಷೆ ಶ್ರೇಷ್ಠ ?
ಯಾವ ಭಾಷೆ ಕನಿಷ್ಠ ?
ಹೀಗೆ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.

ನಿನ್ನೆ ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ಹೇಳಿರುವುದು ಕೆಲವು ಕನ್ನಡಿಗರಿಗೆ ಬೇಸರವಾಗಿದೆ. ಕನ್ನಡ ಸ್ವತಂತ್ರ ಭಾಷೆ. ಅದಕ್ಕೆ ತಮಿಳಿಗಿಂತ ಹೆಚ್ಚಿನ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ .

ಹಾಗಾದರೆ ಸತ್ಯ ಏನಿರಬಹುದು ?

ಈ ಜಗತ್ತಿನ ಮಾನವ ಸಮಾಜದ ಹುಟ್ಟನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ. ಈ ಬೃಹತ್ ಭೂಮಂಡಲದಲ್ಲಿ ಎಷ್ಟೋ ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳು, ಜಲಚರಗಳು, ಸಸ್ಯ ರಾಶಿಗಳ ಜೊತೆ ಮನುಷ್ಯನು ಸಹ ಎಲ್ಲೋ ಹುಟ್ಟಿದ್ದಾನೆ, ಹೇಗೋ ಬೆಳೆದಿದ್ದಾನೆ. ಆ ಪ್ರಕ್ರಿಯೆಯಲ್ಲಿ ಏನೋ ಒಂದು ಧ್ವನಿ ಹೊರಡಿಸಿದ್ದಾನೆ. ಅದು ಇನ್ನೇನೋ ಆಗಿ ಒಂದು ಸಂವಹನ ಮಾಧ್ಯಮವಾಗಿ ಬೆಳವಣಿಗೆ ಹೊಂದಿದೆ. ಆ ಅನಿವಾರ್ಯ ಮಾಧ್ಯಮ ಒಂದು ನಿರ್ದಿಷ್ಟ ರೂಪ ಪಡೆದು ಒಂದು ಭಾಷೆಯಾಗಿದೆ. ಆ ಭಾಷೆ ಲಿಪಿಯಾಗಿ ಅಭಿವೃದ್ಧಿ ಹೊಂದಿ ಹೇಗೋ ಏನೋ ಒಂದು ರೂಪ ಪಡೆದು ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಲ್ಯಾಟಿನ್, ಸ್ಪ್ಯಾನಿಶ್, ಪ್ರಾಕೃತ, ಪಾಲಿ, ಇಂಗ್ಲಿಷ್ ಹೀಗೆ ನಾನಾ ರೂಪಗಳನ್ನು ಪಡೆದಿದೆ. ಹಾಗೆಯೇ ಎಷ್ಟೋ ಸಂವಹನ ಕಲೆ ಭಾಷಾ ರೂಪವಾಗಿ ಬೆಳೆದರೂ ಕಾಲಾಂತರದಲ್ಲಿ ಸರ್ವನಾಶವನ್ನು ಹೊಂದಿದೆ.

ಆಗಿನ ಅತ್ಯಂತ ವಿರಳ ಜನಸಂಖ್ಯೆ, ಕನಿಷ್ಠ ವ್ಯಾವಹಾರಿಕತೆ, ಪ್ರಾದೇಶಿಕತೆ ಎಲ್ಲವನ್ನು ನೋಡಿದರೆ ಯಾವ ಭಾಷೆ ಯಾವಾಗ ಹುಟ್ಟಿದೆಯೋ, ಅದನ್ನು ಇನ್ಯಾರೋ ಕಲಿತುಕೊಂಡು ಹೇಗೆ ಉಪಯೋಗಿಸಿದರೋ, ಅದನ್ನು ಮತ್ಯಾರು ಮುಂದುವರಿಸಿದರೋ, ಅದು ಮತ್ತೊಂದು ರೂಪವಾಗಿ ಇನ್ಯಾವ ಭಾಷೆಯಾಗಿತ್ತೋ, ಖಂಡಿತವಾಗಲೂ ತುಂಬಾ ನಿರ್ದಿಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಸಂಶೋಧಕರು ಇರುವ ದಾಖಲೆಗಳ ಆಧಾರದಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನಮಗೆ ಸಿಕ್ಕಿರುವ ಅಧಿಕೃತ ಮಾಹಿತಿಗಳ ಪ್ರಕಾರ ಒಂದಷ್ಟು ಇತಿಹಾಸದ ಕಾಲಘಟ್ಟ, ಸಾಧ್ಯತೆಗಳನ್ನು ಮಾತ್ರ ಆಧರಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳಬೇಕೆ ಹೊರತು ಈ ಭಾಷೆಯೇ ಪ್ರಥಮ, ಈ ಭಾಷೆಯೇ ಪುರಾತನವಾದದ್ದು, ಇದರಿಂದಾಗಿಯೇ ಇನ್ನೊಂದಷ್ಟು ಭಾಷೆಗಳು ಹುಟ್ಟಿದೆ, ಈ ಭಾಷೆಯಿಂದ ಮತ್ತಷ್ಟು ಭಾಷೆ ಸತ್ತಿದೆ ಹೀಗೆ ಹೇಳುವುದೇ ಅವೈಜ್ಞಾನಿಕ.

ದೀರ್ಘವಾಗಿ ಯೋಚಿಸಿ ನೋಡಿ. ಜೀವಂತವಾಗಿ ಬದುಕುವುದೇ ಒಂದು ಸಾಧನೆಯಾಗಿದ್ದ ಆ ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿ, ಕಾಡು ಮೇಡು, ಪರಿಸರ ವಿಕೋಪಗಳು, ಆಹಾರದ ಸಮಸ್ಯೆ, ರೋಗ ರುಜಿನಗಳು ಹೀಗೆ ಮನುಷ್ಯ ಜೀವಿಸುವುದೇ ಒಂದು ದೊಡ್ಡ ಸಾಧನೆ ಆಗಿದ್ದಾಗ ಯಾವ ಭಾಷೆ ಹೇಗೆ ಹುಟ್ಟಿತೋ, ಯಾವ ಭಾಷೆ ಯಾವ ಯಾವ ರೂಪ ಪಡೆಯಿತೋ ಯಾರಿಗೆ ಗೊತ್ತು.

ದಾಖಲೆಗಳು ಕೇವಲ ಸದ್ಯದ ವಾಸ್ತವವನ್ನು ಬಿಚ್ಚಿಡುತ್ತವೆಯೇ ಹೊರತು ಅದೇ ಅಂತಿಮ ಸತ್ಯವಾಗುವುದಿಲ್ಲ ಮತ್ತು ಅದು ಎಂದೆಂದಿಗೂ ಮುಗಿಯದ ಚರ್ಚೆಯಾಗುತ್ತದೆ. ಏಕೆಂದರೆ ಮನುಷ್ಯ ಹುಟ್ಟಿ, ಭಾಷೆ ಹುಟ್ಟಿ, ಎಷ್ಟೋ ಶತಮಾನಗಳ ನಂತರ ಆ ಬಗ್ಗೆ ಅಧ್ಯಯನಗಳು ನಡೆದಿರುವುದರಿಂದ ಖಚಿತವಾಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ.

ಇತಿಹಾಸದ ವಿದ್ಯಾರ್ಥಿಯಾಗಿ ಖಂಡಿತವಾಗಲೂ ಯಾವುದೋ ಒಂದು ಭಾಷೆ ಅತ್ಯಂತ ಪ್ರಾಚೀನವಾದದ್ದು ಎನ್ನುವ ಮಾನ್ಯತೆ ನೀಡಲು ಮನಸ್ಸು ಒಪ್ಪುವುದಿಲ್ಲ. ಅದು ಅಧಿಕೃತವೂ ಆಗಿರುವುದಿಲ್ಲ. ಇರಬಹುದೇನೋ ಅಷ್ಟೇ.

ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ಮನಸ್ಸಿನಲ್ಲಿ ಮೂಡಿದ ಭಾವನೆ, ಗಂಟಲಿನಲ್ಲಿ ಹಾದು, ನಾಲಿಗೆಯ ಕದಲುವಿಕೆ ಅಥವಾ ಚಲನೆಯಿಂದ ತುಟಿಗಳ ಮುಖಾಂತರ ಹೊರ ಬರುವ ಧ್ವನಿ ತರಂಗ ಮತ್ತು ಅದು ಬರಹದ ರೂಪದಲ್ಲಿ ಗೆರೆಗಳ ಮೂಲಕ ಮೂಡುವ ಕಣ್ಣಿಗೆ ಕಾಣುವ ಅಕ್ಷರಗಳು. ಇದು ಸರಳ ನಿರೂಪಣೆ. ಆಳದಲ್ಲಿ ಮತ್ತಷ್ಟು ಅರ್ಥ ಹೊಂದಿದೆ.

ವಿಶ್ವದಲ್ಲಿ ಲಕ್ಷಾಂತರ ಭಾಷೆಗಳಿವೆ. ಭಾಷೆಯಲ್ಲಿ ಶ್ರೇಷ್ಠತೆಯಿಲ್ಲ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ವ್ಯತ್ಯಾಸ ಇರಬಹುದು. ಉಚ್ಚಾರಣೆಯಲ್ಲಿ ಬೇರೆ ರೀತಿಯಲ್ಲಿ ಇರಬಹುದಷ್ಟೇ.
ಜೊತೆಗೆ ಯಾವ ಭಾಷೆಯೂ ಸಂಪೂರ್ಣ ಸ್ವತಂತ್ರವಲ್ಲ. ಎಲ್ಲಾ ಭಾಷೆಗಳೂ ಇತರ ಭಾಷೆಗಳನ್ನು ಅವಲಂಬಿಸಿಯೇ ಇರುತ್ತವೆ.

ಆದ್ದರಿಂದ ಕಮಲ್ ಹಾಸನ್ ಆಗಲಿ, ಇನ್ಯಾರೇ ಆಗಲಿ, ಸುಮ್ಮನೆ ಈ ಕ್ಷಣದ ಸಮಾಧಾನಕ್ಕಾಗಿ, ಸ್ವಾರ್ಥಕ್ಕಾಗಿ, ಲಾಭಕ್ಕಾಗಿ, ಒಂದಷ್ಟು ಹೇಳಿಕೆಗಳನ್ನು ನೀಡಬಹುದಷ್ಟೇ ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಸಮಸ್ಯೆ ಉಂಟಾದಲ್ಲಿ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ- ಡಿಸಿ ಡಾ. ಕೆ.ಎನ್ ಅನುರಾಧ

ಜಿಲ್ಲೆಯಾದ್ಯಂತ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ತಾಲ್ಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ…

9 hours ago

ಶೀಘ್ರದಲ್ಲೇ ಹೋಟೆಲ್ ಗಳಿಗೂ ಅಡಿಗೆ ಅನಿಲ ಪೂರೈಕೆ – ಆಹಾರ ಸಚಿವ ಕೆ ಎಚ್ ಮುನಿಯಪ್ಪ‌

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್‌ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ…

14 hours ago

‘ಪ್ರಸಾದ್ 2.0’ (PRASHAD 2.0) ಯೋಜನೆಯಡಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿ ವಿಚಾರ: ಶ್ರೀ ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್.ವಿ ಮಹೇಶ್ ಕುಮಾರ್ ಸಂತಸ

ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಡಾ.ಕೆ.ಸುಧಾಕರ್ ಭೇಟಿ ಮಾಡಿ, 'ಪ್ರಸಾದ್ 2.0'…

14 hours ago

ರೀಲ್ಸ್ ಮಾಡುವ ಮಹಿಳೆಯರ ಜೊತೆ ರೀಲ್ಸ್ ಮಂಜಣ್ಣ ಹೆಲ್ಮೆಟ್ ಇಲ್ಲದೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್: ಸಾಮಾಜಿಕ‌ ಜಾಲತಣದಲ್ಲಿ ವಿಡಿಯೋ ಪೋಸ್ಟ್: ಪೊಲೀಸರಿಂದ ಬಿತ್ತು ಫೈನ್: ಕೊನೆಗೆ ಫೈನ್ ಕಟ್ಟಿ ಕ್ಷಮೆಯಾಚನೆ

ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ, ವಿಕಾರವಾಗಿ ರೀಲ್ಸ್ ಮಾಡುತ್ತಿದ್ದ ರೀಲ್ಸ್ ಮಂಜಣ್ಣ ಅಂತಾನೇ ಕರೆಸಿಕೊಳ್ಳುವ ಮಂಜ ಬೈಕ್ ನಲ್ಲಿ ತ್ರಿಬಲ್ ರೈಡ್…

22 hours ago

ಆನ್ ಲೈನ್ ನಲ್ಲಿ ಒಂದು ರೂ. ಗೆ ಹಾಲು ಮಾರಾಟ: ಪ್ರಾಂತ ರೈತ ಸಂಘ ಆಕ್ರೋಶ: ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕೋಲಾರ: ಅಮೆಜಾನ್‌ ಸಹಭಾಗಿತ್ವದ ಫ್ಲಿಪ್ ಕಾರ್ಟ್ ನಲ್ಲಿ ಲೀಟರ್ ಹಾಲನ್ನು ಒಂದು ರೂ. ಗೆ ಮಾರಾಟದ ಅವಕಾಶ ಕಲ್ಪಿಸಿರುವುದು ಅತ್ಯಂತ…

1 day ago