ಪಿ. ಲಂಕೇಶ್……..
ಮಾರ್ಚ್ 8, 1935,
ಜನವರಿ 25, 2000….
ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ – ದ್ವೇಷ ಸಮ ಪ್ರಮಾಣದಲ್ಲಿ ಸೃಷ್ಟಿಸುವ ಒಂದು ವರ್ಣಮಯ ವ್ಯಕ್ತಿತ್ವ……
70/80/90 ರ ದಶಕದಲ್ಲಿ ಕರ್ನಾಟಕ ರಾಜಕೀಯ ಮತ್ತು ಸಾಂಸ್ಕೃತಿಕ ಜನಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ ಕೆಲವೇ ಪ್ರಮುಖರಲ್ಲಿ ಲಂಕೇಶ್ ಒಬ್ಬರು.
ಒಬ್ಬ ಸಾಧಾರಣ ಕುಟುಂಬದ ಶಿಕ್ಷಕ ತನ್ನ ಚಿಂತನೆಗಳಿಂದಲೇ ಸಾಹಿತ್ಯ, ಸಿನಿಮಾ, ನಾಟಕ, ಪತ್ರಿಕೋದ್ಯಮ, ಸಂಘಟನೆ, ರಾಜಕೀಯ, ಹೋರಾಟಗಳಲ್ಲಿ ಒಂದು ಕ್ರಿಯಾತ್ಮಕ ಮತ್ತು ಚಲನಾತ್ಮಕ ಚಳವಳಿ ರೂಪಿಸಿರುವುದು ಒಂದು ಅಧ್ಯಯನ ಯೋಗ್ಯ ವಿಷಯ.
ಹೌದು, ಅವರನ್ನು ತೀವ್ರವಾಗಿ ಪ್ರೀತಿಸುವ ಮತ್ತು ಅಭಿಮಾನಿಸುವ ಒಂದು ವರ್ಗವಿದೆ, ಹಾಗೆಯೇ ತೀಕ್ಷ್ಣವಾಗಿ ವಿರೋಧಿಸುವ – ದ್ವೇಷಿಸುವ ವರ್ಗವೂ ಇದೆ.
ಸ್ವಾತಂತ್ರ್ಯ ನಂತರ ಸುಮಾರು 25/30 ವರ್ಷಗಳು ಭಾರತದಲ್ಲಿ ಗಾಂಧಿ ಪ್ರಭಾವದ ನೆಹರು ಮತ್ತು ಇಂದಿರಾ ಆಡಳಿತ ಆಕ್ರಮಿಸಿಕೊಂಡಿತ್ತು. ಅವರ ಬಹುತೇಕ ಆಡಳಿತ ಬಡವರ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಸುತ್ತವೇ ಇರುತ್ತಿತ್ತು. ಚೀನಾ, ಪಾಕಿಸ್ತಾನದ ಜೊತೆ ಒಂದೆರಡು ಯುದ್ಧ ಹೊರತುಪಡಿಸಿದರೆ ಬಹುತೇಕ ಕೃಷಿ, ಕೈಗಾರಿಕೆ, ಸ್ವಾವಲಂಬನೆಯೇ ಅವರ ಆಧ್ಯತೆಯಾಗಿತ್ತು.
ಆದರೆ 1977 ರ ತುರ್ತು ಪರಿಸ್ಥಿತಿಯ ನಂತರ ಭಾರತದ ಸಾಮಾನ್ಯ ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ಜಯಪ್ರಕಾಶ್ ನಾರಾಯಣ್ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ, ರೈತ ಚಳವಳಿ, ದಲಿತ – ಬಂಡಾಯ ಚಳವಳಿ, ಭಾಷೆ ಮತ್ತು ದ್ರಾವಿಡ ಚಳವಳಿ, ಪ್ರಗತಿಪರ ಚಳವಳಿ ಎಲ್ಲವೂ ಅಂದಿನ ಕಾಲಘಟ್ಟದಲ್ಲಿ ಟಿಸಿಲೊಡೆದವು ಮತ್ತು ಮುನ್ನಲೆಗೆ ಬಂದವು. ಆಗ ರಾಮ್ ಮನೋಹರ್ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದ ಲಂಕೇಶ್ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡರು.
ಅವರ ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮದ ಭಾಷೆಯೇ ಒಂದು ಹೊಸ ತಿರುವಿಗೆ ಕಾರಣವಾಯಿತು. ಮುಂದೆ ಅದರ ಪರಿಣಾಮ ಬಹಳಷ್ಟು ಒಳ್ಳೆಯ, ಒಂದಷ್ಟು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಯಿತು. ಅದು ಈಗಲೂ ಮುಂದುವರಿದಿದೆ.
ಲಂಕೇಶ್ ಅವರ ಬಹುದೊಡ್ಡ ಸಾಮರ್ಥ್ಯ ಅವರ ಚಿಂತನೆಯಲ್ಲ, ಹೋರಾಟವಲ್ಲ, ಸಾಹಿತ್ಯವಲ್ಲ ಅದೆಲ್ಲವನ್ನೂ ಮೀರಿದ ಗ್ರಹಿಕೆ.
ಖುರಾನ್ ಇರಬಹುದು, ಭಗವದ್ಗೀತೆ, ಬೈಬಲ್, ಸಂವಿಧಾನ ಅಥವಾ ಯಾವುದೇ ಧರ್ಮಶಾಸ್ತ್ರವಿರಬಹುದು ಅನೇಕರು ಅನೇಕ ಬಾರಿ ಓದುತ್ತಾರೆ. ಕೆಲವರು ಕಂಠಪಾಠ ಮಾಡಬಹುದು ಎಲ್ಲವನ್ನೂ ನೆನಪಿಟ್ಟುಕೊಳ್ಳಬಹುದು. ಆದರೆ ಅವುಗಳ ವಾಸ್ತವತೆ ಅರಿಯುವಲ್ಲಿ ವಿಫಲರಾಗುತ್ತಾರೆ.
ಯಾವುದೇ ಪರೀಕ್ಷೆಗಳಲ್ಲಿ 100/100 ಅಂಕಗಳನ್ನು ಪಡೆಯಬಹುದು. ಆದರೆ ಅದು ಜ್ಞಾನದ ಆಳವನ್ನು ಅರಿಯುವ ಸಾಧನವಾಗುವುದಿಲ್ಲ. ಒಟ್ಟು ಗ್ರಹಿಕೆ ಮುಖ್ಯ.
ಸಮಾಜವನ್ನು ಗ್ರಹಿಸುವಲ್ಲಿ ಲಂಕೇಶರು ಬಹು ಸೂಕ್ಷ್ಮತೆಯನ್ನು ಹೊಂದಿದ್ದರು. ಮನುವಾದ, ಬಸವ ಧರ್ಮ, ಗಾಂಧಿವಾದ, ಅಂಬೇಡ್ಕರ್ ಚಿಂತನೆಗಳು, ಪ್ರಜಾಪ್ರಭುತ್ವ, ಇಂದಿರಾಗಾಂಧಿಯ ಧೋರಣೆ, ಮಾರ್ಕ್ಸ್ ಮತ್ತು ವಿಶ್ವದ ಇನ್ನಿತರ ವಿಚಾರಗಳ ಜೊತೆಗೆ ಮಣ್ಣಿನ ಸೊಗಡಿನ ಸ್ಥಳೀಯತೆಯನ್ನು ಸಮೀಕರಿಸಿ ಅಭಿಪ್ರಾಯ ರೂಪಿಸಿಕೊಳ್ಳುವ ಅರಿವನ್ನು ಹೊಂದಿದ್ದರು.
ಅಮ್ಮನ ಶ್ರೇಷ್ಠತೆಯನ್ನು ಬಣ್ಣಿಸುತ್ತಾ ಅಮ್ಮನ ಸ್ವಾರ್ಥ ಮತ್ತು ನೀಚತನವನ್ನು ಗುರುತಿಸಬಲ್ಲವರಾಗಿದ್ದರು. ವಿಶ್ವಮಾನವ ಪ್ರಜ್ಞೆಯ ಜೊತೆ ಗೆಳೆತನದ ಅಸೂಯೆಗಳನ್ನು ಅರ್ಥಮಾಡಿಕೊಂಡಿದ್ದರು. ಆದರ್ಶ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ ಅವರಿಗೆ ತಿಳಿದಿತ್ತು. ತಮ್ಮ ತಪ್ಪುಗಳು, ಅದನ್ನು ಮರೆಮಾಚುವ ವಿಧಾನ, ವ್ಯಕ್ತಿ ಸ್ವಾತಂತ್ರ್ಯ, ಆತ್ಮಾವಲೋಕನ, ಇದರ ನೆರಳಲ್ಲಿ ಮತ್ತೊಬ್ಬರಿಗೆ ವಂಚಿಸುವ ನೋಯಿಸುವ ಕಲೆಗಾರಿಕೆ ಅವರಿಗೆ ಗೊತ್ತಿತ್ತು.
ಜೀವನೊತ್ಸಾಹದ ಕುರುಹಾಗಿ ಬೇರೆಯವರನ್ನು ಅನವಶ್ಯಕವಾಗಿ ಮೇಲೆತ್ತುವ, ಕಾಲೆಳೆಯುವ, ಶಾಂತಿಯ ಸಮಯದಲ್ಲಿ ಸಂಘರ್ಷ ಉಂಟುಮಾಡುವ, ಅದನ್ನು ತಮ್ಮ ವಿಚಾರಗಳ ಅಡಿಯಲ್ಲಿ ಸಮರ್ಥಿಸಿಕೊಳ್ಳುವ ಉದ್ದೇಶ ಪೂರ್ವಕ ತುಂಟತನವೂ ಇತ್ತು.
ಈ ಎಲ್ಲದರ ಪ್ರಭಾವದಿಂದಾಗಿ ಭಿಕ್ಷುಕನ್ನು, ಸಾಮಾನ್ಯನನ್ನು, ಅಸಾಮಾನ್ಯನನ್ನು, ಅದ್ಭುತನನ್ನು ಒಂದು ಜೀವಿಯಂತೆ ಗ್ರಹಿಸಿ ಅವರನ್ನು ವಿಮರ್ಶಿಸಬಲ್ಲ ಪಾಂಡಿತ್ಯ ಅವರಿಗಿತ್ತು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅಥವಾ ಯಾರೇ ಇರಲಿ ಅವರ ಶ್ರೇಷ್ಠತೆಯ ಜೊತೆಗೆ ಮನುಷ್ಯ ಸಹಜ ದೌರ್ಬಲ್ಯಗಳನ್ನು ಗುರುತಿಸಿ ಹೇಳಬಲ್ಲವರಾಗಿದ್ದರು.
ಸಾಹಿತ್ಯಕವಾಗಿಯೂ ಜಗತ್ತಿನ ಅದ್ಭುತ ಸಾಹಿತ್ಯವನ್ನು, ವಿಚಾರಗಳನ್ನು ಪತ್ರಿಕೆಯ ಮೂಲಕ ಸಾಮಾನ್ಯ ಜನರಿಗೆ ತಲುಪಿಸಿದರು. ಕಾಮು, ಕಾಪ್ಕ, ಎಲಿಯಟ್, ವರ್ಡ್ಸ್ ವರ್ಥ್, ಶೇಕ್ಸ್ಪಿಯರ್, ಗಾರ್ಸಿಯಾ ಮಾರ್ಕ್ವೆಜ್, ಪ್ಲಾಬೋ ನರೋಡ,, ರೂಮಿ ಮುಂತಾದ ಅದ್ಭುತ ವ್ಯಕ್ತಿಗಳನ್ನು, ಅವರ ಸಾಹಿತ್ಯಕ ಚಿಂತನೆಯನ್ನು ತುಂಬಾ ನಿಷ್ಟರವಾಗಿ ವಿಮರ್ಶಿಸ ಬಲ್ಲವರಾಗಿದ್ದರು.
ದೇಹ ಬಯಲು, ಭಾವ ಬಯಲಿನ, ಮುಕ್ತ ಚಿಂತನೆಯ, ಅತ್ಯಂತ ಸೂಕ್ಷ್ಮ ವಿಮರ್ಶಾತ್ಮಕ ಮನಸ್ಥಿತಿ, ವಾಸ್ತವ ಪರಿಸ್ಥಿತಿ ಅರಿತವರಾಗಿದ್ದರು.
ನಮ್ಮ ಆಧುನಿಕ ಸಮಾಜದ, ಮಾಧ್ಯಮ ಕ್ರಾಂತಿಯ ಒಂದು ಸಮಸ್ಯೆಯೆಂದರೆ, ಜಾಗೃತವಾಗಿರುವ ಬಲ ಮತ್ತು ಎಡ ಪಂಥಗಳ ಮನಸ್ಥಿತಿ ಮತ್ತು ವಿವೇಚನೆಯನ್ನು ನುಂಗಿ ಹಾಕಿದ ಭಾವೋದ್ವೇಗ ಮತ್ತು ಅತಿರೇಕಗಳು.
ಒಬ್ಬ ಜನಪ್ರಿಯ ವ್ಯಕ್ತಿಯನ್ನು ಎಡಕ್ಕೋ ಬಲಕ್ಕೋ ವಾಲಿಸಲಾಗುತ್ತದೆ. ತದನಂತರ ಆತನ ಬಗೆಗಿನ ಅಧ್ಯಯನವನ್ನೇ ಮರೆಯಲಾಗುತ್ತದೆ. ಕೇವಲ ಪರ ವಿರೋಧದ ಚರ್ಚೆ ಮಾತ್ರ ನಡೆಯುತ್ತದೆ.
ಸ್ವತಃ ಲಂಕೇಶರೇ ಹೇಳಿರುವಂತೆ ಆರಾಧನಾ ಭಾವ ಅಥವಾ ದ್ವೇಷ ಅಸೂಯೆಯ ಭಾವ ಎರಡೂ ಸಹ ವಿಮರ್ಶಕರಲ್ಲಿ ಕುರುಡುತನ ಸೃಷ್ಟಿಸುತ್ತದೆ.
ಸತ್ಯವನ್ನು ವಾಸ್ತವವನ್ನು ಗ್ರಹಿಸುವ ಮತ್ತು ಎದುರಿಸುವ ಮಾನಸಿಕತೆಯೇ ಕಡಿಮೆಯಾಗಿದೆ.
ಆ ದೃಷ್ಟಿಯಿಂದ ಲಂಕೇಶ್ ನಿಜಕ್ಕೂ ವಿಚಾರ ಪ್ರಚೋದಕ ನಿಷ್ಠುರವಾದಿ. ಕೆಲವೇ ಅಪರೂಪದ ವ್ಯಕ್ತಿಗಳಿಗೆ ಮಾತ್ರ ಸಾಧ್ಯವಾಗಬಹುದಾದ ನೇರವಂತಿಕೆ ಅವರಲ್ಲಿತ್ತು.
ಅವರ ಚಿಂತನೆಗಳನ್ನು ಒಪ್ಪುವ, ನಿರ್ಲಕ್ಷಿಸುವ, ತಿರಸ್ಕರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವರ ಗ್ರಹಿಕೆಯ ಶಕ್ತಿ ಒಂದು ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ, ಸ್ಪೂರ್ತಿದಾಯಕವಾಗಿದೆ ಎಂದು ಹೇಳಬಹುದು.
ಅವರ ಜನುಮ ದಿನದ ನೆನಪಿನಲ್ಲಿ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…
When it involves on-line gambling enterpris padişahbet günceles, among one of the most tempting deals…
Instant play casinos allow you to play casino games online without installing any software. These…
2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು…
ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಮೆರೆದಿರುವ ಘಟನೆ ದೇವನಹಳ್ಳಿಯ ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ…
Das Schreiben einer Facharbeit ist ein wichtiger Bestandteil des akademischen Lebens und erfordert sowohl Planung…