Categories: Crime

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿ ಮಾರಾಟ ಮಾಡುತ್ತಿದ್ದ ದಂಪತಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ.!

ಉತ್ತರಪ್ರದೇಶ : ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಉತ್ತರ ಪ್ರದೇಶದ ಜಲ ಮಂಡಳಿಯ ಮಾಜಿ ಜೂನಿಯರ್ ಇಂಜಿನಿಯರ್ ರಾಮ್ ಭವನ್ (50) ಮತ್ತು ಆತನ ಪತ್ನಿ ದುರ್ಗಾವತಿ (47) ಶಿಕ್ಷೆಗೆ ಒಳಗಾದ ಅಪರಾಧಿಗಳು.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ದಂಪತಿ ಅಪರಾಧಿಗಳೆಂದು ನ್ಯಾಯಾಲಯವು ತೀರ್ಪು ನೀಡಿದೆ.

ಅಪರಾಧದ ಪ್ರಮಾಣ, ಅವಧಿ ಮತ್ತು ವ್ಯವಸ್ಥಿತ ಸ್ವರೂಪವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಈ ಪ್ರಕರಣವು ‘ಅಪರೂಪದಲ್ಲಿ ಅಪರೂಪ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಅಪರಾಧಿಗಳಲ್ಲಿ ಸುಧಾರಣೆಗೆ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಾಸಿಕ್ಯೂಷನ್ ಪ್ರಕಾರ, 2010 ರಿಂದ 2020ರ ನಡುವೆ ಬಾಲಕರ ಮೇಲೆ ದೌರ್ಜನ್ಯಗಳು ನಡೆದಿವೆ. ಸಂತ್ರಸ್ತರ ಪೈಕಿ ಕೇವಲ ಮೂರು ವರ್ಷದ ಚಿಕ್ಕ ಬಾಲಕರು ಕೂಡ ಸೇರಿದ್ದಾರೆ ಎಂಬುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ.

ದಂಪತಿ ತಮ್ಮ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಪ್ರಾಪ್ತ ಬಾಲಕರನ್ನೇ ಗುರಿಯಾಗಿಸಿಕೊಂಡಿದ್ದರು. ಮಕ್ಕಳಿಗೆ ಹಣ, ಆಹಾರ, ಮೊಬೈಲ್ ಫೋನ್‌ಗಳು, ಇಂಟರ್ನೆಟ್ ಸೌಲಭ್ಯ ಮತ್ತು ಆನ್‌ಲೈನ್ ವಿಡಿಯೋ ಗೇಮ್‌ಗಳ ಆಮಿಷವೊಡ್ಡುತ್ತಿದ್ದರು.

ಒಮ್ಮೆ ಮಕ್ಕಳ ವಿಶ್ವಾಸ ಗಳಿಸಿದ ನಂತರ, ದಂಪತಿ ತಮ್ಮ ಮನೆಯಲ್ಲೇ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಈ ಘೋರ ಕೃತ್ಯಗಳನ್ನು ಡಿಜಿಟಲ್ ಸಾಧನಗಳ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.

ವಿಡಿಯೋಗಳನ್ನು ಎನ್‌ಕ್ರಿಪ್ಟ್ ಮಾಡಿದ ಪ್ಲಾಟ್‌ಫಾರ್ಮ್‌ಗಳು ಮತ್ತು ಡಾರ್ಕ್ ವೆಬ್ ಸೇರಿದಂತೆ ವಿವಿಧ ಆನ್‌ಲೈನ್ ಮಾಧ್ಯಮಗಳಲ್ಲಿ ಹಂಚಿಕೆ ಮತ್ತು ಮಾರಾಟ ಮಾಡುತ್ತಿದ್ದರು. ಈ ವಿಡಿಯೋಗಳನ್ನು ಸುಮಾರು 47 ದೇಶಗಳ ಗ್ರಾಹಕರು ವೀಕ್ಷಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಪ್ರಕರಣ ಬಯಲಾದದ್ದು ಹೇಗೆ?

2020ರಲ್ಲಿ ಇಂಟರ್‌ಪೋಲ್ ನೀಡಿದ ಮಾಹಿತಿಯ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ಸಿಬಿಐ ಅಂತರ್ಜಾಲದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು (ಸಿಎಸ್‌ಎಎಂ) ಮೇಲ್ವಿಚಾರಣೆ ಮಾಡುವಾಗ ಆರೋಪಿ ರಾಮ್ ಭವನ್ ಸಿಕ್ಕಿ ಬಿದ್ದಿದ್ದ.

ಈತ ಮತ್ತು ಈತನ ಪತ್ನಿ ದುರ್ಗಾವತಿ ಸೇರಿ ಬಾಲಕರ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಡಾರ್ಕ್ ವೆಬ್ ಮೂಲಕ ಸುಮಾರು 47 ದೇಶಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.

ತನಿಖೆ ವೇಳೆ ಅಪರಾಧಿಗಳ ಮನೆಯಿಂದ ₹8 ಲಕ್ಷ ನಗದು, 12 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ಸಾವಿರಾರು ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿದ್ದವು. ತನಿಖಾಧಿಕಾರಿಗಳು ಸಂತ್ರಸ್ತ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು ಮತ್ತು ಹೇಳಿಕೆಗಳನ್ನು ದಾಖಲಿಸಿದ್ದರು.

ತನಿಖೆ ಪೂರ್ಣಗೊಳಿಸಿ ಫೆಬ್ರವರಿ 10, 2021ರಂದು ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಷನ್ ಸಂತ್ರಸ್ತರ ಸಾಕ್ಷ್ಯಗಳು, ವೈದ್ಯಕೀಯ ವರದಿಗಳು ಮತ್ತು ಮೊಬೈಲ್ ಫೋನ್‌ ಹಾಗೂ ಪೆನ್‌ಡ್ರೈವ್‌ಗಳಿಂದ ವಶಪಡಿಸಿಕೊಂಡ ಡಿಜಿಟಲ್ ಪುರಾವೆಗಳು ಸೇರಿದಂತೆ ಅನೇಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಟ್ಟಿತ್ತು.

ದೌರ್ಜನ್ಯದಿಂದ ಬಾಲಕರಿಗೆ ತೀವ್ರ ದೈಹಿಕ ಮತ್ತು ಮಾನಸಿಕ ಹಾನಿಯಾಗಿದೆ. ಕೆಲವು ಸಂತ್ರಸ್ತರ ಗಾಯಗಳಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿದೆ. ಇನ್ನು ಕೆಲವರಿಗೆ ಕಣ್ಣುಗಳು ಕೆಂಪಾಗುವುದು ಸೇರಿದಂತೆ ತೊಂದರೆಗಳು ಉಂಟಾಗಿವೆ ಎಂಬುವುದನ್ನು ನ್ಯಾಯಾಲಯ ಗಮನಿಸಿತ್ತು.

ಸುಮಾರು 10 ವರ್ಷಗಳ ಕಾಲ ದೌರ್ಜನ್ಯ ಮುಂದುವರೆದಿತ್ತು. ಹೆಚ್ಚಿನ ಸಂಖ್ಯೆಯ ಮಕ್ಕಳು ಇದಕ್ಕೆ ಬಲಿಯಾಗಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, “ಇದು ವ್ಯವಸ್ಥಿತ ಮತ್ತು ಶೋಷಣೆಯ ಕೃತ್ಯ” ಎಂದು ಹೇಳಿದ್ದಾರೆ.

2026ರ ಫೆ. 20ರಂದು ನ್ಯಾಯಾಲಯವು ದಂಪತಿಯು ಬಹು ಅಪರಾಧಗಳಲ್ಲಿ ದೋಷಿಗಳು ಎಂದು ಘೋಷಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದೇ ವೇಳೆ 33 ಸಂತ್ರಸ್ತರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Ramesh Babu

Journalist

Recent Posts

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರ ಸಾವು ಪ್ರಕರಣ: ಕತ್ತಲಲ್ಲಿ ಪ್ರಯಾಣಿಸುತ್ತಿದ್ದವರ ಬದುಕಲ್ಲಿ ಶಾಶ್ವತ ಕತ್ತಲು ಮೂಡಿಸಿದ ಜವರಾಯ: ಎಚ್ಚೆತ್ತ ನಗರಸಭೆ ಬೀದಿ ದೀಪ ಅಳವಡಿಕೆ

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು. ರಸ್ತೆ ಇಕ್ಕೆಲಗಳಲ್ಲಿ ಬೀದಿ ದೀಪಗಳು ಬೆಳಗದ…

4 minutes ago

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ…….

ದೇಶಭಕ್ತಿ ಮತ್ತು ದೇಶದ್ರೋಹ...... ಇದು ಬ್ರಿಟಿಷರ ಕಾಲದ್ದೇ ಅಥವಾ ಈ ಕಾಲಕ್ಕೂ ಅನ್ವಯಿಸುತ್ತದೆಯೇ..... ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ....... ರಾಷ್ಟ್ರ…

4 hours ago

ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…

1 day ago

ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

1 day ago

ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ ಪ್ರಕಟ: ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಗೆ 625ಕ್ಕೆ 622 ಅಂಕ: ನಮ್ಮ ತಪಸ್ಸಿಗೆ ಸಿಕ್ಕ ಯಶಸ್ಸು- ಶಾಲಾ ಸಂಸ್ಥಾಪಕ ಶ್ರೀನಿವಾಸ್ ಮೂರ್ತಿ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು…

2 days ago

ಬಡಪಾಯಿ ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಆರೋಪ

ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಮೆರೆದಿರುವ ಘಟನೆ ದೇವನಹಳ್ಳಿಯ ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ…

2 days ago