ಬಮೂಲ್ ರೈತಾಪಿ ವರ್ಗದ್ದು: ಬಮೂಲ್ ಯಾವ ಪಕ್ಷದಲ್ಲ: ಇದಕ್ಕೆ ರಾಜಕೀಯ ಏಕೆ…?: ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ- ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್

ವಯಸ್ಸಿನಲ್ಲಿ ಕಿರಿಯರಾದ ಶಾಸಕ ಧೀರಜ್ ಮುನಿರಾಜ್ ಅವರಿಗೆ ನನ್ನ ಕಿವಿ ಮಾತು, ಬಮೂಲ್ ಚುನಾವಣೆಗೆ ರಾಜಕೀಯ ಬೇಡ. ಬಮೂಲ್ ರೈತಾಪಿ ವರ್ಗದ್ದು, ಯಾವ ರಾಜಕೀಯ ಪಕ್ಷದಲ್ಲ. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋದರೆ ನಿನ್ನ ಹಣೆಬರಹ ಮುಂದೆ ಚೆನ್ನಾಗಿರುತ್ತದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ಹೇಳಿದರು.

ಕೇಂದ್ರದಲ್ಲಿ ಎಚ್.ಡಿ‌.ಕುಮಾರಸ್ವಾಮಿ ಅವರು ಸಚಿವ ಸ್ಥಾನದಲ್ಲಿ ಇಲ್ಲ ಎಂದು ಶಾಸಕ ಧೀರಜ್ ಮುನಿರಜ್ ತಿಳಿದುಕೊಂಡಿರಬಹುದು. ನಾನು ಶಾಸಕರಿಗೆ ಮನವರಿಕೆ ಮಾಡಿಕೊಡುತ್ತೇನೆ ಏನೆಂದರೆ… ಕೇಂದ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದಾರೆ. ದೊಡ್ಡಬಳ್ಳಾಪುರದ ಜನತೆ ಎಲ್ಲರು ಸೇರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಶಾಸಕ ಧೀರಜ್ ಮುನಿರಾಜ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಧಕ್ಕೆ ಬರುವ ಹಾಗೆ ಮಾತನಾಡುತ್ತಿದ್ದಾರೆ ಎಂದರು.

ಬಮೂಲ್ ರೈತಾಪಿ ವರ್ಗದ ಸಂಸ್ಥೆ. ಬಮೂಲ್ ಚುನಾವಣೆ ಪಕ್ಷದಡಿಯಲ್ಲಿ ನಡೆಯುವಂತದ್ದಲ್ಲ. ಯಾವ‌ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಬಿ ಫಾರಂ ಕೊಟ್ಟು ಚುನಾವಣೆ ನಡೆಸುವುದಿಲ್ಲ. ರೈತರು ಪರಸ್ಪರ ಒಮ್ಮತದ ತೀರ್ಮಾನದಿಂದ ಚುನಾವಣೆ ನಡೆಸಲಾಗುವುದು. ಬಿಜೆಪಿ ಅವರ ಬಳಿ ದುಡ್ಡಿರಬಹುದು, ಹಾಲಿ ನಿರ್ದೇಶಕ ಬಿ.ಸಿ.ಆನಂದ್ ಅವರನ್ನ ಹೊಗಳಿರಬಹುದು, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದರು.

ಹುಸ್ಕೂರ್ ಆನಂದ್ ಯಾರು ಅಂತಾ ಗೊತ್ತಿಲ್ಲ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದ್ದಾರೆ. ಈ ಬಗ್ಗೆ ಶಾಸಕರನ್ನ ಆಯ್ಕೆ ಮಾಡಿದ ಜನಗಳನ್ನು ಕೇಳಬೇಕು. ಇದಕ್ಕೆ ಉತ್ತರ ಜನಗಳೇ ಕೊಡುತ್ತಾರೆ. ಬಿ.ಸಿ.ಆನಂದ್ ಪರ ಮಾತನಾಡಿರುವುದಕ್ಕೆ ನಾವೇನು ವಿರೋಧ ವ್ಯಕ್ತಪಡಿಸುವುದಿಲ್ಲ. ಅವರ ಪಕ್ಷ ಅವರಿಗೆ ದೊಡ್ಡದು, ನಮ್ಮ ಪಕ್ಷ ನಮಗೆ ದೊಡ್ಡದು ಎಂದರು.

ಬಮೂಲ್ ಚುನಾವಣೆಗೆ ಫೈಟ್ ಮಾಡುತ್ತಿರುವುದು ಅಣ್ಣ ತಮ್ಮಂದಿರ ಕುಟುಂಬ. ಈ ಕುಟುಂಬದಲ್ಲಿ ಒಡಕು ಉಂಟಾದರೆ, ಶಾಸಕರಾಗಿ ಅವರು ಆ ಒಡಕನ್ನು‌ ಸರಿಪಡಿಸಬೇಕು. ಅದನ್ನ ಬಿಟ್ಟು ಬೇರೆ ಏನೋ ಮಾಡೊದಕ್ಕೆ ಹೋದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಬಮೂಲ್ ಚುನಾವಣೆಗೆ ಒಬ್ಬರನ್ನೇ ಆಯ್ಕೆ ಮಾಡಬೇಕು ಎಂಬ ಮನೋಭಾವನೆ ನನ್ನಲ್ಲಿದೆ. ಈ ನಿಟ್ಟಿನಲ್ಲಿ ಕಡೆವರೆಗೂ ಶತಾಯಗತಾಯ ಪ್ರಯತ್ನ ಮಾಡುತ್ತೇನೆ ಎಂದರು‌.

ನಾನು ಹುಸ್ಕೂರು ಹಾಲಿನ ಡೈರಿ ಅಧ್ಯಕ್ಷನೂ ಆಗಿಲ್ಲ, ಸದಸ್ಯನೂ ಆಗಿಲ್ಲ. ಅವರಿಗೆ ಯಾರೋ ತಪ್ಪು‌ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಹಾಲಿನ ಡೈರಿ ಅಧ್ಯಕ್ಷನಾಗಿದ್ದರೆ ನಾನೇ ಶಾಸಕರಿಗೆ ಹೂಗುಚ್ಛ ನೀಡಿ ಬರುತ್ತಿದೆ. ಸುಖಾ ಸುಮ್ಮನ್ನೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದರೆ ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು.

ನಾನು ಚಿಕ್ಕೋನು, ನಾನು ಸಾಮಾನ್ಯ ಶಾಸಕ, ನಾನು ತೆರೆಯ ಹಿಂದೆ ಇರುತ್ತೇನೆ ಎಂದು ಹೇಳುವುದು ಎಲ್ಲಾ ನಾಟಕದ ಮಾತು ಎಂದು ಹೇಳಿದರು.

ನನಗೆ ಬಿ.ಸಿ ಆನಂದ್ ಬೇರೆ ಅಲ್ಲ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಬೇರೆ ಅಲ್ಲ. ನಾವೆಲ್ಲಾ ಒಂದು ಕುಟುಂಬದ ಅಣ್ಣತಮ್ಮಂದಿರಾಗಿ ಇದ್ದೇವೆ. ಅಣ್ಣತಮ್ಮಂದಿರನ್ನು ಒಗ್ಗೂಡಿಸಿ ಒಬ್ಬ ಅಭರ್ಥಿಯನ್ನು ನಿಲ್ಲಿಸಬೇಕೆನ್ನುವುದು ನನ್ನ ಬಯಕೆ. ನಾನು ನಮ್ಮ ಕುಟುಂಬ ಚದರುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು.

ಬಿ.ಸಿ ಆನಂದ್ ಅವರು ಎಂಎಲ್ಎ ಎಲೆಕ್ಷನ್ ಪೂರ್ವದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡರು, ನಾವು ಎಂಪಿ ಎಲೆಕ್ಷನ್ ಸಮಯದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿ ಡಾ.ಸುಧಾಕರ್ ಗೆಲುವಿಗೆ ದುಡಿದಿದ್ದೇವೆ. ನಮ್ಮ ಕೆಲಸ ಕಾರ್ಯವನ್ನೂ ಗುರುತಿಸಬೇಕು ಎಂದರು.

ಶಾಸಕರಾದವರು ಎಲ್ಲಾ ರೈತರನ್ನು‌ ಒಗ್ಗೂಡಿಸಿ ಸಭೆ ಕರೆದು ಚರ್ಚೆ ಮಾಡಿ ಒಬ್ಬರನ್ನು ಆಯ್ಕೆ ಮಾಡಿದರೆ ಶಾಸಕರ ಸ್ಥಾನಕ್ಕೆ ಗೌರವ ಬರುತ್ತದೆ. ನಮ್ಮನ್ನು ಸಭೆಗೆ ಕರೆದರೆ ಹೋಗೋದಿಲ್ಲ ಅಂತೀವಾ, ಅವರು ಕರೆದಿಲ್ಲ, ನಾವು ಹೋಗಿಲ್ಲ. ಅವರಾಗೇ ಅವರೆ ನಮ್ಮನ್ನ ಶತ್ರುಗಳನ್ನಾಗಿ ನೋಡುತ್ತಿದ್ದಾರೆ ಎಂದರು.

ಬಮೂಲ್ ನಿರ್ದೇಶಕರ ಸ್ಥಾನಕ್ಕೆ ದೊಡ್ಡಬಳ್ಳಾಪುರದಲ್ಲಿ ಸುಮಾರು ಎಂಟು ಮಂದಿ ಅಭ್ಯರ್ಥಿ ಆಕಾಂಕ್ಷಿಗಳು‌ ಇದ್ದಾರೆ. ಇವರೆಲ್ಲಾರನ್ನು ಪಕ್ಷಾತೀತವಾಗಿ ಪರಿಗಣನೆಗೆ ತೆಗೆದುಕೊಂಡು ಅಂತಿಮ ತೀರ್ಮಾನಕ್ಕೆ ಬಂದು ಒಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಒಳಿತು. ಅವರು ಮಾಡುವ ಕೆಲಸ ನಾನು ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಒಂದು ವೇಳೆ ವರಿಷ್ಠರು ಬಿ.ಸಿ ಆನಂದ್ ಅವರನ್ನು ಅಂತಿಮ‌ ಮಾಡಿದರೆ ನಾನು ಯಾವ ವಿರೋಧ ವ್ಯಕ್ತಪಡಿಸುವುದಿಲ್ಲ. ವರಿಷ್ಠರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಹೇಳಿದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

9 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

14 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

14 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

19 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago