9 ತಿಂಗಳಲ್ಲಿ ಬಮೂಲ್ ಒಕ್ಕೂಟಕ್ಕೆ 60 ಕೋಟಿ ಲಾಭ: ಸಂಪೂರ್ಣ ರೈತರ ಖಾತೆಗೆ ಲಾಭಾಂಶ ಹಣ

ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ ಪರದಾಟ.. ಹೀಗೆ ಸಾಲು ಸಾಲು ಸಮಸ್ಯೆಗಳಿಂದಲೇ ಬಸವಳಿದಿದ್ದ ರೈತರಿಗೆ ಬಮುಲ್ ಒಕ್ಕೂಟ ಬಂಪರ್ ಖುಷಿ ಸುದ್ದಿ ನೀಡಿದೆ.

ಮಾಜಿ ಸಂಸದ ಡಿ.ಕೆ. ಸುರೇಶ್ ಬಮುಲ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ 9 ತಿಂಗಳಲ್ಲಿ ಬರೊಬ್ಬರಿ 60 ಕೋಟಿ ರೂ. ಲಾಭಾಂಶವನ್ನು ಬೆಂಗಳೂರು ಹಾಲು ಒಕ್ಕೂಟ ಗಳಿಸಿದೆ. ಅಲ್ಲದೆ ಹಿಂದಿನ ಆಡಳಿತ ಮಂಡಳಿಗಳಲ್ಲಿ ದಾಖಲಾಗಿದ್ದ 14 ಕೋಟಿ ರೂ. ಸಾಲವನ್ನ ಮನ್ನ ಮಾಡಿ, ಬಮುಲ್ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ಪ್ರತಿರೈತನಿಗೂ ಪ್ರತಿ ಲೀಟರ್ ಹಾಲಿಗೆ 1 ರೂ.ನೀಡಲು ಆಡಳಿತ ಮಂಡಳಿ ತೀರ್ಮಾನ ಮಾಡಿ ರೈತರಿಗೆ ಯುಗಾದಿ ಹಬ್ಬದ ಬೋನಸ್ ಘೋಷಿಸಿದೆ. ಈ ಮೂಲಕ ರೈತರ ಮೊಗದಲ್ಲಿ ನಗುವನ್ನು ಮೂಡಿಸಿದೆ.

ಪ್ರತಿ ಲೀ. ಹಾಲಿಗೆ ಒಂದು ರೂ. ಪ್ರೋತ್ಸಾಹ ಧನ ಹೆಚ್ಚಳ:

60 ಕೋಟಿ ರೂ. ಲಾಭ ಗಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ಲಾಭದ ಸಂಪೂರ್ಣ ಹಣವನ್ನು ರೈತರಿಗೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷ ಡಿ.ಕೆ ಸುರೇಶ್ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಳೆದ 2025 ಏಪ್ರಿಲ್ 1 ರಿಂದ 2026ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಒಕ್ಕೂಟದ ವ್ಯಾಪ್ತಿಯ ರೈತರು ಡೇರಿಗಳಿಗೆ ಹಾಕಿರುವ ಪ್ರತಿ ಲೀಟರ್ ಹಾಲಿಗೆ ತಲಾ ಒಂದು ರೂಪಾಯಿಯಂತೆ ಪ್ರೋತ್ಸಾಹ ಧನ ವಿತರಿಸಲು ತೀರ್ಮಾನ ಮಾಡಿದೆ.

 14 ಕೋಟಿ ಸಾಲ ಚುಪ್ತಾ:

ಡಿ.ಕೆ ಸುರೇಶ್ ಬಮುಲ್ ಒಕ್ಕೂಟದ ಅಧ್ಯಕ್ಷರಾದ 9 ತಿಂಗಳ ಅವಧಿಯಲ್ಲಿ ಬೆಂಗಳೂರ ಹಾಲು ಒಕ್ಕೂಟದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪಾರದರ್ಶಕತೆ ಆಡಳಿತದ ಫಲವಾಗಿ 60 ಕೋಟಿ ಲಾಭಂಶವನ್ನು ಬಮುಲ್ ಸಾಧಿಸಿದೆ. ಅಲ್ಲದೆ ಈ ಹಿಂದಿನಿಂದ ಬಮುಲ್ ಒಕ್ಕೂಟದ ಹೆಸರಿನಲ್ಲಿದ್ದ 14 ಕೋಟಿ ರೂ. ಸಾಲವನ್ನ ಕಟ್ಟಿ ಚುಪ್ತಾ ಮಾಡಲಾಗಿದೆ. ಮುಂದೆ ಹಾಲಿ ಬಮುಲ್ ಒಕ್ಕೂಟದಲ್ಲಿರುವ ವಿವಿಧ ಪದಾರ್ಥಗಳಿಂದ 131 ಕೋಟಿ ಮೌಲ್ಯದ ದಾಸ್ತಾನಿಂದ 60 ಕೋಟಿ ಲಾಭದ ನಿರೀಕ್ಷೆ ಹೊಂದಿದ್ದು, ಇದೀಗ ರೈತರ ಪ್ರಾತಿನಿಧಿಕ ಸಂಸ್ಥೆಯಾದ ಬಮುಲ್ ಲಾಭದತ್ತ ಮುಖಮಾಡಿರುವುದು ರೈತರಿಗೆ ಖುಷಿ ನೀಡಿದೆ.

ಪ್ರತಿ ಡೇರಿಗೆ 15 ಸಾವಿರ ಹಣ:

ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡೇರಿಗಳ ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಮತ್ತು ಅಲ್ಲಿನ ಸಿಬ್ಬಂದಿಗೂ ಆದ್ಯತೆ ನೀಡಿರುವ ಬಮುಲ್ ತಲಾ ಒಂದು ಡೇರಿಗೆ 15 ಸಾವಿರ ಸಹಾಯ ಧನ ಘೋಷಣೆ ಮಾಡಿದೆ. ಅಲ್ಲದೆ ಟಿಎಡಿಎ ಸೇರಿದಂತೆ ಬಾಕಿ ಇದ್ದಂತಹ ಎಲ್ಲಾ ಬಾಕಿ/ಖರ್ಚುಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ. ಈ ಮೂಲಕ ಸಿಬ್ಬಂದಿ ನೆರವಿಗೂ ಧಾವಿಸಿದೆ.

ಪಶು ಆಹಾರದತ್ತ ಚಿತ್ತ:

ರೈತರ ಪ್ರಮುಖ ಬೇಡಿಕೆಯಾಗಿರುವ ಪಶು ಆಹಾರದ ಬೆಲೆ ಕಡಿವಾಣಕ್ಕೆ ಬೇಕಾದ ಕ್ರಮಗಳನ್ನು ಜರುಗಿಸಲು ಒಕ್ಕೂಟ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಪಶು ಆಹಾರ ಬೆಲೆಗಳು ರೈತರಿಗೆ ಕೈಗೆಡುಕುವ ರೀತಿಯಲ್ಲಿ ಜಾರಿ ಮಾಡಲು ಶ್ರಮಿಸಲಾಗುವುದು ಎಂದು ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ತಿಳಿಸಿದ್ದಾರೆ.

ಹಸುಗಳಿಗಾಗಿ ಸಾಲದ ಮೇಳ:

ಗ್ರಾಮೀಣ ಭಾಗದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವ ಸಲುವಾಗಿ ರೈತರಿಗೆ ನೆರವಾಗಿ ಸಾಲ ನೀಡಲು ಮುಂದಾಗಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಮೂಲಕ ಹೊಸ ಹಸು ಖರೀದಿಗೆ ವಿಶೇಷ ಸಾಲ ಯೋಜನೆ ನೀಡಲಾಗುವುದು. ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ 25 ಜನ ರೈತರಿಗೆ ವಾರ್ಷಿಕ ಶೇ. 3ರ ಬಡ್ಡಿ ದರದಲ್ಲಿ ರೂ. 1.60 ಲಕ್ಷದಿಂದ ರ. 15 ಲಕ್ಷ ವರೆಗೆ ಸಾಲ ನೀಡಲಾಗುವುದು. ಇದಕ್ಕಾಗಿ ಸಾಲದ ಮೇಳವನ್ನು ಆಯೋಜಿಸಲಾಗುವುದು . ಹೆಣ್ಣು ಕರು ಜನನವನ್ನು ಪ್ರೋತ್ಸಾಹಿಸಲು ತಳಿ ಸುಧಾರಣಾ ಕಾರ್ಯಕ್ರಮ ಇದೆ. ರೈತರಿಗೆ ಹಸಿ ಮೇವು, 1ಲಕ್ಷ ಮೇವು ಚೀಲಗಳು (ಕೌಮ್ಯಾಟ್) ಮತ್ತು ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಶೀಘ್ರವಾಗಿ ಒದಗಿಸಲಾಗುವುದು ಎಂದರು.

Ramesh Babu

Journalist

Recent Posts

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

19 hours ago

ಬೆಂಗಳೂರು ಗ್ರಾಮಾಂತರದಲ್ಲಿ ಕ್ಷಯರೋಗದ ಆತಂಕ: ಏಳು ತಿಂಗಳಲ್ಲಿ 26,531 ಮಂದಿಗೆ ಕಫ ಪರೀಕ್ಷೆ; 434 ಪ್ರಕರಣಗಳು ಪತ್ತೆ, 530 ಸಕ್ರಿಯ ರೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…

1 day ago

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

3 days ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

3 days ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

4 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

4 days ago