Categories: ಲೇಖನ

ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ…….

ಹೀಗೆ ಬಹಳ ಹಿಂದಿನಿಂದಲೂ ಮತ್ತು ಈಗಲೂ ಸಹ ಅನೇಕ ತತ್ವಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರು, ವಿರಹಿಗಳು, ಭಾವನಾ ಜೀವಿಗಳು, ಮುಂತಾದವರು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬದುಕಿನ ಮುಂದಿನ ಉಳಿದ ದಿನಗಳು ಎಷ್ಟಿವೆಯೋ ಯಾರಿಗೂ ತಿಳಿದಿಲ್ಲ. ಆ ಉಳಿದ ಸಮಯವನ್ನು ತೀವ್ರವಾಗಿ ಬದುಕಬೇಕೆಂಬ ಉತ್ಕಟ, ಅದಮ್ಯ ಭಾವನೆ ಜಾಗೃತವಾದಾಗ ಈ ರೀತಿಯ ಮಾತುಗಳು ಹೊರಡುತ್ತವೆ……

ಕೊಲ್ಕತ್ತಾದ ರವೀಂದ್ರನಾಥ್ ಟ್ಯಾಗೋರ್ ಅವರ ಸಮಾಧಿ ಬಳಿ ಹೋಗುವ ದಾರಿಯಲ್ಲಿ ರೈಲು ಕಂಬಿಗಳ ಪಕ್ಕದಲ್ಲಿ ವಾಸಿಸುತ್ತಿದ್ದ ಸಾವಿರಾರು ಕುಟುಂಬಗಳ ಬದುಕನ್ನು ನೋಡಿದಾಗ ಯಾರಿಗಾದರೂ ಹೀಗೆ ಅನಿಸುತ್ತದೆ. ಆ ದೃಶ್ಯಗಳು ಒಂದು ರೀತಿಯಲ್ಲಿ ಮನಕಲಕುವಂತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಹ ಈ ರೀತಿಯ ದೃಶ್ಯಗಳು ಕೆಲವು ಕಡೆ ಇದೆ. ಮೋರಿ, ಚರಂಡಿ, ಕೊಳಚೆ ನೀರು ಹರಿಯುವ ಜಾಗದ ಪಕ್ಕ, ಕೆಲವು ಸಿಮೆಂಟ್ ಪೈಪುಗಳ ಒಳಗಡೆ, ಅಲ್ಲೇ ಹುಟ್ಟಿ ಅಲ್ಲೇ ಬೆಳೆದ ಲಕ್ಷಾಂತರ ಜನ ಬದುಕುತ್ತಿದ್ದಾರೆ…..

ಮುಂಬೈಯ ಅಂಧೇರಿಯ ಕೊಳಗೇರಿ ಭಾರತದಲ್ಲಿ ಅತ್ಯಂತ ಕುಖ್ಯಾತ ಬೃಹತ್ ಕೊಳಗೇರಿ ಎಂದು ಹೆಸರುವಾಸಿಯಾಗಿದೆ. ಬಹುತೇಕ ದೇಶದ ದೊಡ್ಡ ಪಟ್ಟಣಗಳಲ್ಲಿ ಈ ರೀತಿಯ ಕೊಳಗೇರಿಗಳು ಸಾಕಷ್ಟು ಅಸ್ತಿತ್ವದಲ್ಲಿದೆ……

ಅಲ್ಲಿ ವಾಸಿಸುತ್ತಿರುವವರು ಬೇರೆ ಯಾರು ಅಲ್ಲ. ನಮ್ಮದೇ ದೇಶದ ಪ್ರಜೆಗಳು, ನಮ್ಮದೇ ಸಂಬಂಧಿಗಳು, ನಮ್ಮದೇ ಸಮಾಜದ ಸಹೋದರ ಸಹೋದರಿಯರು. ಅಲ್ಲಿ ಒಂದು ಸರಿಯಾದ ಸ್ನಾನಗೃಹ, ಶೌಚಗೃಹ, ಮಲಗುವ ಕೋಣೆ ಇರಲಿ ಕಾಲು ಸಂಪೂರ್ಣ ಚಾಚಿ ಮಲಗುವುದು ಸಹ ಸಾಧ್ಯವಿಲ್ಲದಷ್ಟು ಚಿಕ್ಕ ಪ್ಲಾಸ್ಟಿಕ್ ಗುಡಿಸಲುಗಳು. ಕುಡಿಯುವುದು ಅತ್ಯಂತ ಕಲುಷಿತವಾದ ನೀರು, ಉಸಿರಾಡುವುದು ಅತ್ಯಂತ ಮಲಿನವಾದ ಗಾಳಿ, ಆಹಾರ ಅತ್ಯಂತ ಅನಾರೋಗ್ಯಕರ ಗುಣಮಟ್ಟವನ್ನು ಹೊಂದಿರುತ್ತದೆ. ಆ ಮೂಲಭೂತ ಅವಶ್ಯಕತೆಗಳ ವಿಷಯದಲ್ಲಿ ಅವರಿಗೆ ಆಯ್ಕೆಗಳೇ ಇಲ್ಲ…..

ಇನ್ನು ಬಟ್ಟೆ ಯಾರೋ ದಾನ ನೀಡಿದ್ದು ಆಗಿರಬೇಕು, ಶಾಲೆ ಕಾಲೇಜು ದೂರದ ಮಾತು, ಆರೋಗ್ಯ ತಪಾಸಣಾ ಶಿಬಿರಗಳು ಅಥವಾ ಆಗಾಗ ಒಂದಷ್ಟು ದಾನಿಗಳು ನೀಡುವ ಹಣ್ಣು ಹಂಪಲುಗಳು ಮತ್ತು ಉಳಿದ ಆಹಾರವೇ ಅವರಿಗೆ ಮೃಷ್ಠಾನ್ನ ಭೋಜನ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಂತರ ಜನ ವಾಸಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲು, ಚಳಿ ಈ ಎಲ್ಲವನ್ನು ಅದು ಹೇಗೋ ಸಹಿಸಿಕೊಂಡು ಎದುರಿಸಿ ಇನ್ನೂ ಜೀವಂತ ಇದ್ದಾರೆ…..

ಬಹುಶಃ ಕರೋನಗಿಂತ ಭೀಕರ ವೈರಸ್ ಗಳು ಸಹ ಇವರ ಆ ಪರಿಸ್ಥಿತಿಯನ್ನು ನೋಡಿ ಸ್ವತಃ ಆ ವೈರಸ್ ಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತವೋ ಏನೋ, ಅಷ್ಟೊಂದು ಮಲಿನ ಪರಿಸ್ಥಿತಿಯ ವಾತಾವರಣವಿದೆ……

ಅಲ್ಲಿ ವಾಸಿಸುವ ಜನ ಮೂಲ ನಿವಾಸಿಗಳೋ, ಅಕ್ರಮ ವಲಸಿಗರೋ, ದಾಖಲೆಗಳಿಲ್ಲದ ಮತ್ಯಾರೋ ಏನೇ ಆಗಿರಲಿ ಆದರೆ ಅವರೆಲ್ಲರೂ ಮನುಷ್ಯರೆಂಬುದು ಮಾತ್ರ ಸತ್ಯ ಮತ್ತು ಬದುಕು ಅವರಿಗೆ ಅನಿವಾರ್ಯವಾಗಿದೆ ಎಂಬುದು ಅಷ್ಟೇ ವಾಸ್ತವ. ಯಾರೇ ಆಗಿರಲಿ ಅಲ್ಲಿನ ವಾಸ ಅವರ ಆಯ್ಕೆಯಾಗಿರುವುದು ಸಾಧ್ಯವೇ ಇಲ್ಲ. ಏಕೆಂದರೆ ಆ ಅವಕಾಶವೇ ಅವರಿಗೆ ಇಲ್ಲ……..

ಆದ್ದರಿಂದ ಆ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ. ಶ್ರೀಮಂತರ ಸರಳತೆಯ ಬಗ್ಗೆ ಸಾಕಷ್ಟು ಮಾತನಾಡುವ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಮೂಲಭೂತ ಸೌಕರ್ಯಗಳಿಂದಲೇ ವಂಚಿತವಾಗಿರುವ ಇವರ ಬಗ್ಗೆ ದಿವ್ಯ ನಿರ್ಲಕ್ಷ ಅಥವಾ ತಿರಸ್ಕಾರವನ್ನು ಹೊಂದಿದ್ದಾರೆ. ಹಾಗೆಯೇ ಎಲ್ಲಾ ಧರ್ಮದ ಧಾರ್ಮಿಕ ನಾಯಕರುಗಳು ಕರ್ಮ ಸಿದ್ದಾಂತಕ್ಕೆ ಶರಣಾಗಿ ಅದು ಅವರವರ ಕರ್ಮಫಲ ಎಂದು ಇದನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ರಾಜಕಾರಣಿಗಳು ಇವರನ್ನು ಚುನಾವಣಾ ರಾಜಕೀಯದ ಭಾಗವಾಗಿ ವೋಟಿನ ಗುಲಾಮರಾಗಿ ಬಳಸಿಕೊಳ್ಳುತ್ತಾರೆ. ಅಧಿಕಾರಿಗಳು ಇವರನ್ನು ತಮ್ಮ ಭ್ರಷ್ಟ ಹಣ ಸಂಪಾದನೆಯ ಮಾರ್ಗಗಳ ರೂಪದಲ್ಲಿ ನೋಡುತ್ತಾರೆ. ಇನ್ನು ಕೆಲವು ಹೋರಾಟಗಾರರು ಒಂದಷ್ಟು ಇವರ ಪರವಾಗಿ ಹೋರಾಡಿ ಹೆಸರು ಗಳಿಸುತ್ತಾರೆ. ಬರಹಗಾರರು ನನ್ನಂತೆ ಬರೆದು ತಮ್ಮ ತೆವಲು ತೀರಿಸಿಕೊಳ್ಳುತ್ತಾರೆ. ಆದರೆ ಅವರ ಬದುಕು ಮಾತ್ರ ಎಷ್ಟೋ ವರ್ಷಗಳಿಂದ ಹೀಗೆಯೇ ಮುಂದುವರಿಯುತ್ತಲೇ ಇದೆ…….

ಈ ನೆಲದ, ಈ ದೇಶದ, ಈ ಸಮಾಜದ ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಹಂಚಿಕೆ ಮಾಡಿದ್ದೇ ಆದರೆ ಈ ಜನರು ಇದಕ್ಕಿಂತ ಉತ್ತಮ ಜೀವನವನ್ನು ನಡೆಸುವಂತ ವಾತಾವರಣ ಸೃಷ್ಟಿಸಬಹುದು. ಕೇವಲ ಒಂದು ಬೃಹತ್ ಸಂಕಲ್ಪ ಮಾತ್ರ ಇದಕ್ಕೆ ಸಾಕಾಗುತ್ತದೆ. ಅಷ್ಟನ್ನೂ ಮಾಡುವ ಸ್ಥಿತಿಯಲ್ಲಿ ನಾವುಗಳು ಇಲ್ಲ………

ನಾವು ಬದುಕುತ್ತಿರುವ ಮಧ್ಯಮ ವರ್ಗದ ಜೀವನಶೈಲಿಯನ್ನು ಈ ಕೊಳಗೇರಿ ನಿವಾಸದ ಜೀವನ ಶೈಲಿಗೆ ಹೋಲಿಕೆ ಮಾಡಿದಾಗ ಬದುಕಿ
ಬಿಡಬೇಕು ತೀವ್ರವಾಗಿ ಸಾಯುವ ಮುನ್ನ ಎಂಬುದು ಅಕ್ಷರಶಃ ಕಾಡುತ್ತದೆ. ಆ ಪುಟ್ಟ ಪುಟ್ಟ ಮಕ್ಕಳು, ತಾಯಂದಿರು ಭವಿಷ್ಯದ ಯಾವುದೇ ಆಸೆ, ಕನಸು, ಭರವಸೆಗಳಿಲ್ಲದೆ ನಿರ್ಜೀವವಾಗಿ ಜೀವನವನ್ನು ಕಳೆಯುವ ಪರಿಸ್ಥಿತಿ ಊಹಿಸಲಸಾಧ್ಯ……

ಅನಾದಿಕಾಲದಲ್ಲಿ ಕನಿಷ್ಠ ಕಾಡು ಮೇಡುಗಳಲ್ಲಿ, ಬೆಟ್ಟ ಗುಡ್ಡ ಕಣಿವೆಗಳಲ್ಲಿ, ಹೇಗೋ ಹಣ್ಣು, ತರಕಾರಿ, ಸೊಪ್ಪನ್ನು ತಿನ್ನುತ್ತಾ ಬದುಕಬಹುದಾಗಿತ್ತು. ಈಗ ಆ ಅವಕಾಶವೂ ಇಲ್ಲ, ಛೇ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

3 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

3 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

4 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

9 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

15 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago