
ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ ಎನ್ ಅನುರಾಧ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡೆಂಗಿ ಜ್ವರ, ಚಿಕನ್ ಗುನ್ಯಾ ಹಾಗೂ ಜಿಕಾ ಸೋಂಕು ಹರಡುವ ಈಡೀಸ್ ಜಾತಿಯ ಸೊಳ್ಳೆಗಳು ಪೂರ್ವ ಮುಂಗಾರು ಹಾಗೂ ಮುಂಗಾರು ನಂತರದ ದಿನಗಳಲ್ಲಿ ಹೆಚ್ಚಾಗಿ ಉತ್ಪತ್ತಿಯಾಗುತ್ತವೆ, ಇದರಿಂದ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹವಾಮಾನ ಬದಲಾವಣೆ ಪರಿಣಾಮ, ತ್ವರಿತ ನಗರೀಕರಣ, ನೀರಿನ ಕೊರತೆ, ವ್ಯವಸ್ಥಿತವಲ್ಲದ ಕಟ್ಟಡ ಕಾಮಗಾರಿ, ಹೆಚ್ಚುತ್ತಿರುವ ಜನರ ಚಲನವಲದ ಜೊತೆಗೆ ಘನ ತ್ಯಾಜ್ಯ ವಸ್ತುಗಳ ಅಸಮರ್ಪಕ ವಿಲೇವಾರಿಯಿಂದ ಈಡಿಸ್ ಸೊಳ್ಳೆಗಳ ಉತ್ಪತ್ತಿ ಕಾರಣವಾಗುತ್ತಿದೆ.
ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಮೆದುಳು ಜ್ವರ, ಡೆಂಗಿ ಜ್ವರ, ಚಿಕ್ಕನ್ ಗುನ್ಯಾ ಹಾಗೂ ಆನೇಕಾಲು ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಂಬಂಧಪಟ್ಟ ಇಲಾಖೆಗಳ ಸಹಕಾರವು ಮುಖ್ಯ ಜೊತೆಗೆ ಸಾರ್ವಜನಿಕರು ಕೂಡ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸೊಳ್ಳೆ ಉತ್ಪತ್ತಿ ತಾಣಗಳಾದ ತೆರೆದ ತೊಟ್ಟಿ, ಸಿಮೆಂಟ್ ತೊಟ್ಟಿ, ಪ್ಲಾಸ್ಟಿಕ್ ಡ್ರಂಗಳು, ಮೇಲ್ಚಾವಣಿ ಇಲ್ಲದ ತೊಟ್ಟಿಗಳು, ಕಿರು ನೀರು ಸರಬರಾಜು ಮಾಡುವಂತಹ ತೊಟ್ಟಿಗಳು ಹೀಗೆ ಎಲ್ಲೆಲ್ಲಿ ಸ್ವಚ್ಛ ನೀರು ನಿಲ್ಲಬಹುದು ಅಲ್ಲೆಲ್ಲ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ. ಹಾಗಾಗಿ ಸಾರ್ವಜನಿಕರು ಎಲ್ಲಾ ನೀರಿನ ತೊಟ್ಟಿಗಳು, ಡ್ರಮ್ ಬ್ಯಾರೆಲ್ ಗಳು ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಪಡಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು. ಜೊತೆಗೆ ಭದ್ರವಾದ ಮುಚ್ಚಳ ಅಥವಾ ಬಟ್ಟೆಯನ್ನು ಮುಚ್ಚಬೇಕು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡುವುದು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವುದು. ಮನೆ ಕಿಟಕಿಗಳಿಗೆ ಮೆಶ್ ಅಳವಡಿಸುವುದು ಮೈತುಂಬ ಬಟ್ಟೆ ಧರಿಸುವುದು. ಜೊತೆಗೆ ಹಗಲಿನಲ್ಲಿ ಸೊಳ್ಳೆಗಳ ಕಚ್ಚುವಿಕೆಯಿಂದ ಸಾಧ್ಯವಾದಷ್ಟು ದೂರ ಇರಬೇಕು.
*ಸೊಳ್ಳೆ ಉತ್ಪತ್ತಿ ತಾಣಗಳು*
ಒಡೆದ ಟೈರ್ ಗಳು, ತೆಂಗಿನ ಚಿಪ್ಪುಗಳು, ಸಿಮೆಂಟ್ ತೊಟ್ಟಿಗಳು, ತೆರೆದ ಪ್ಲಾಸ್ಟಿಕ್ ಪರಿಕರಗಳು, ಪ್ಲಾಸ್ಟಿಕ್ ಡ್ರಮ್ ಗಳು, ಬಕೆಟ್ಗಳು, ನೀರಿನ ತೊಟ್ಟಿಗಳು, ಅನುಪಯುಕ್ತ ಒರಳು ಕಲ್ಲುಗಳು, ಬಿಸಾಡಿದ ಪ್ಲಾಸ್ಟಿಕ್ ಲೋಟಗಳು, ಬಾಟಲ್ ಗಳು, ಮಡಕೆಗಳು, ಹೊಡೆದ ಪಿಂಗಾಣಿ ಪಾತ್ರೆಗಳು, ಹೂವಿನ ಕುಂಡಗಳ ತಟ್ಟೆಗಳು ಇತ್ಯಾದಿ.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಕಾರಿ ಲಕ್ಕ ಕೃಷ್ಣ ರೆಡ್ಡಿ, ಅರೋಗ್ಯಾಧಿಕಾರಿಗಳಾದ ಡಾ.ಹೇಮಾವತಿ, ಡಾ.ಕೋಮಲ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.