
ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಪೊಲೀಸ್ ಠಾಣೆಯ ಜೀಪ್ ಗೂ ಶಾಸಕರ ಅನುದಾನ ಕೊಡಬೇಕಿರುವುದು ಸರ್ಕಾರದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನ ತೋರಿಸುತ್ತಿದೆ ಎಂದು ಶಾಸಕ ಧೀರಜ್ ಮುನಿರಾಜು ಕಿಡಿಕಾರಿದರು.
ನಗರದಲ್ಲಿ ಗ್ರಾಮಾಂತರ ಠಾಣೆಗೆ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ಅದಕ್ಕಾಗಿ ಸಾರ್ವಜನಿಕರ ಸೇವೆಗಾಗಿ ಪ್ರತಿ ಠಾಣೆಗೊಂದು ವಾಹನ ಅವಶ್ಯವಾಗಿದೆ ಎಂದು ಹಿಂದಿನ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದರು. ಹೀಗಾಗಿ ಶಾಸಕರ ಪ್ರದೇಶಾಭಿವೃದ್ಧ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ವಾಹನ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಗೆ ವಾಹನಗಳು ಅವಶ್ಯ, ಇದನ್ನರಿತು ವಾಹನವನ್ನು ಒದಗಿಸಲಾಗಿದೆ. ಪೊಲೀಸರಿಗೆ ನೈತಿಕ ಬೆಂಬಲ ನೀಡಬೇಕು, ನೆಮ್ಮದಿ ಯಿಂದ ನಾವು ನಿದ್ರಿಸಲು ಪೊಲೀಸರು ಕಾರಣ, ಅವರು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ, ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಬೆಂಬಲ ನೀಡಬೇಕು ಎಂದರು.
ಈ ವೇಳೆ ಡಿವೈಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಎಂ.ಬಿ ನವೀನ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ್, ನಗರಸಭಾ ಸದಸ್ಯರಾದ ಪದ್ಮನಾಭ, ಬಂತಿ ವೆಂಕಟೇಶ್, ಹಂಸಪ್ರಿಯಾ ಮತ್ತಿತ್ತರರು ಇದ್ದರು.