Categories: ಲೇಖನ

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು…

ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ.

ಕೊಲೆ ಆರೋಪಿ ಯಾವ ರೀತಿ ಕೊಲೆ ಮಾಡಿದ ಎಂಬುದನ್ನು ಬಹುತೇಕ ಮಾಧ್ಯಮಗಳು ತಮಗೆ ತೋಚಿದಂತೆ ಹೇಳುತ್ತವೆ. ಪೋಲಿಸ್ ತನಿಖಾ ವರದಿ ತುಂಬಾ ಸ್ಪಷ್ಟವಾಗಿ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಆದರೂ ಆರೋಪಿಯ ಪರ ವಕೀಲರ ಚಾಣಾಕ್ಷತೆಯಿಂದ ಕಾನೂನಿನ ಇತಿಮಿತಿಗಳನ್ನು ಮೀರಿ ಸುಮಾರು ಆರು ತಿಂಗಳು ಮುಗಿಯುವ ಮೊದಲೇ ಆರೋಪಿಯು ಬೆನ್ನು ನೋವಿನ ಸಮಸ್ಯೆ, ಅದರಿಂದ ಅವರ ಆರೋಗ್ಯದ ಮೇಲೆ ತುಂಬಾ ಗಂಭೀರ ಮಾರಣಾಂತಿಕ ಪರಿಣಾಮ ಬೀರುತ್ತದೆ ಎಂಬ ಕಲ್ಪಿತ ವೈದ್ಯಕೀಯ ಆಧಾರದ ಮೇಲೆ ನಿಜಕ್ಕೂ ಸಾಮಾನ್ಯ ಜನರಿಗೆ ಸಿಗದಂತಹ ವಿಶೇಷ ಸವಲತ್ತು ಸಿಕ್ಕಿ ಶಸ್ತ್ರ ಚಿಕಿತ್ಸೆಗೆಂದು ಆರೋಪಿಗೆ ಜಾಮೀನು ಸಿಗುತ್ತದೆ.

ಆದರೆ ಆ ಆರೋಪಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದೇ ಇಲ್ಲ. ಹಾಗೆಯೇ ಸಾಮಾನ್ಯ ಜಾಮೀನು ಮಂಜೂರಾಗುತ್ತದೆ. ವೈಧ್ಯಕೀಯ ಸರ್ಟಿಫಿಕೇಟ್ ಸುಳ್ಳಾಗುತ್ತದೆ. ಸ್ವಲ್ಪ ದಿನದ ನಂತರ ಇಡೀ ರಾಜ್ಯದಲ್ಲಿ ಓಡಾಡುವ ಸೌಕರ್ಯ ಪಡೆಯುತ್ತಾರೆ. ತದನಂತರ ಆರೋಪಿ ಸಿನಿಮಾ ಶೂಟಿಂಗ್ನಲ್ಲೂ ಭಾಗವಹಿಸುತ್ತಾರೆ, ಪಾರ್ಟಿಗಳಲ್ಲೂ ನೃತ್ಯ ಮಾಡುತ್ತಾರೆ. ಇದೀಗ ವಿದೇಶದಲ್ಲಿ ಚಿತ್ರೀಕರಣಕ್ಕೆಂದು ಅನುಮತಿ ಕೇಳಿದಾಗ ಅಂತಹ ಕೊಲೆ ಆರೋಪಿಗೆ ಘನ ನ್ಯಾಯ ಧಾರಾಳವಾಗಿ ಅನುಮತಿಯನ್ನೂ ನೀಡುತ್ತದೆ.

ಒಂದು ವರ್ಷ ಕಳೆಯುವುದರೊಳಗೆ ಆರೋಪಿ ಕೇಳಿದ ಎಲ್ಲಾ ಸೌಕರ್ಯಗಳನ್ನು, ಮನವಿಗಳನ್ನು ನ್ಯಾಯಾಲಯ ಒಪ್ಪುತ್ತದೆ ಮತ್ತು ಅನುಮತಿ ನೀಡುತ್ತದೆ. ಇದೊಂದು ವಿಷಾದನೀಯ ಸಂಗತಿಯಲ್ಲವೇ. ಒಬ್ಬ ಜನಪ್ರಿಯ ವ್ಯಕ್ತಿ ಕೊಲೆ ಆರೋಪಿ ಮತ್ತು ಇಡೀ ಕರ್ನಾಟಕದ ಜನತೆ ಇದನ್ನು ವಿಶೇಷವಾಗಿ ಗಮನಿಸುತ್ತಿರುವಾಗ ಕೊಲೆ ಆರೋಪಿಯ ಪರವಾಗಿ ನ್ಯಾಯಾಲಯವೇ ಇಷ್ಟೊಂದು ಉದಾರತೆಯನ್ನು ತೋರಿದರೆ ಸಾಮಾನ್ಯ ಜನ ಇದನ್ನು ಹೇಗೆ ಗ್ರಹಿಸಬಹುದು. ತಾವು ಮಾಡಬಹುದಾದ ಅಪರಾಧಗಳ ವಿಷಯದಲ್ಲಿ ಅವರ ವರ್ತನೆ ಹೇಗಿರಬಹುದು. ಇದು ಎಚ್ಚರಿಕೆಯೋ, ಪ್ರೇರಣೆಯೋ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ನ್ಯಾಯಾಲಯಕ್ಕೆ ಸ್ವಲ್ಪಮಟ್ಟಿಗೆ ವಿವೇಚನಾ ಅಧಿಕಾರವಿರುತ್ತದೆ. ಎಲ್ಲಾ ದಾಖಲೆಗಳನ್ನು, ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೂ ನ್ಯಾಯಾಧೀಶರು ತೀರ್ಮಾನ ನೀಡುವಾಗ ಸಾಮಾಜಿಕ ವ್ಯವಸ್ಥೆಯ ಜವಾಬ್ದಾರಿ ಅವರ ಮನಸ್ಸಿನಲ್ಲಿ ಇರಬೇಕಲ್ಲವೇ. ಒಬ್ಬ ವ್ಯಕ್ತಿಯ ಜೀವ ತೆಗೆದ ಆರೋಪಿಗೆ ಇಷ್ಟೊಂದು ಉದಾರತೆಯಿಂದ ಕೇಳಿದ್ದನ್ನೆಲ್ಲಾ ವರ ನೀಡುವಂತೆ ನೀಡಿದರೆ ಕ್ರಿಮಿನಲ್ ಅಪರಾಧಗಳಿಗೆ ಕೊನೆ ಎಂದು.

ಹಣ, ಅಧಿಕಾರ, ವಕೀಲಿಕೆಯ ಚಾಣಾಕ್ಷತನದಿಂದ ಕೊಲೆಯಂತ ಅಪರಾಧವನ್ನೇ ಕಾನೂನಿನ ನೆರಳಿನಿಂದ ಸುಲಭವಾಗಿ ದಕ್ಕಿಸಿಕೊಳ್ಳುವ ಸಾಧ್ಯತೆ ಸಮಾಜಕ್ಕೆ ಮನವರಿಕೆಯಾದರೆ ಮುಂದಿನ ಗತಿಯೇನು. ನ್ಯಾಯಾಲಯಗಳಿಗೂ ಸಹ ಈ ದೇಶದ ಸಾಂವಿಧಾನಿಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಇರುತ್ತದೆ.

ಇದು ಕೇವಲ ಆ ಸಿನಿಮಾ ನಟನ ವಿಷಯಕ್ಕೆ ಮಾತ್ರವಲ್ಲ. ಇದು ಸಾಂಕೇತಿಕ. ಇಲ್ಲಿ ನಮ್ಮ ಆರೋಪಗಳು ಆ ಆರೋಪಿಯ ವಿರುದ್ಧವೂ ಅಲ್ಲ. ಏಕೆಂದರೆ ಸಹಜವಾಗಿಯೇ ಆರೋಪಿ ತಾನು ನಿರಪರಾಧಿ ಎಂದು ನಿರೂಪಿಸಲು, ತನಗೆ ಅನುಕೂಲ ಮಾಡಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾನೆ. ಅದು ಆತನ ಸ್ವಾತಂತ್ರ್ಯ ಮತ್ತು ಅನಿವಾರ್ಯತೆ. ಆದರೆ ನಮ್ಮ ಆರೋಪ ಖಂಡಿತವಾಗಲೂ ನ್ಯಾಯಾಂಗ ವ್ಯವಸ್ಥೆಯ ಹುಳುಕುಗಳ ಬಗ್ಗೆ ಮಾತ್ರ.

ಈ ಅಭಿಪ್ರಾಯ ಏಕೆಂದರೆ ಆ ನಟನಿಗಿಂತ ಇನ್ನೂ ವೇಗವಾಗಿಯೇ ಎಷ್ಟೋ ಕೊಲೆ ಆರೋಪಿಗಳು ಬಿಡುಗಡೆಯಾಗುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ. ಹಾಗಾದರೆ ದೋಷವಿರುವುದು ತನಿಖೆಯಲ್ಲೋ, ನ್ಯಾಯಾಂಗ ವ್ಯವಸ್ಥೆಯೆಲ್ಲೋ ಯೋಚಿಸಬೇಕಾಗಿದೆ.

ಇನ್ನೊಂದು ಮುಖ್ಯ ವಿಷಯವೆಂದರೆ, ಇತ್ತೀಚೆಗೆ ಕಮಲ್ ಹಾಸನ್ ನೀಡಿದ ಹೇಳಿಕೆಯ ವಿರುದ್ಧ ಕನ್ನಡ ಮಾಧ್ಯಮ ಲೋಕ, ಸಾಮಾಜಿಕ ಜಾಲತಾಣಗಳು ಮತ್ತು ಕನ್ನಡ ಹೋರಾಟಗಾರರು ಹಾಗೂ ಸಾಮಾನ್ಯ ಜನರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆತನ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ಆಗುತ್ತಿವೆ. ಕಮಲ್ ಹಾಸನ್ ಕ್ಷಮೆ ಕೇಳದೆ ಉದ್ಧಟತನ ತೋರಿಸುತ್ತಿದ್ದಾರೆ.

ಅದೆಲ್ಲವೂ ನಿಜ, ಅವರ ಕೆಲವು ಮಾತುಗಳು ಕನ್ನಡಿಗರ ಟೀಕೆಗೆ ಅರ್ಹ. ಆದರೆ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕರಾದ
ಶ್ರೀ ಎಚ್. ಆರ್. ರಂಗನಾಥ್ ಅವರು ಕಮಲ್ ಹಾಸನ್ ಆವರನ್ನು ನಿಂದಿಸಿದ ರೀತಿ ಮಾತ್ರ ಅತ್ಯಂತ ನೀಚವಾಗಿತ್ತು. ಒಬ್ಬ ಪ್ರಬುದ್ಧ ಪತ್ರಕರ್ತ, ಜನಪ್ರಿಯ ಪತ್ರಕರ್ತ ತನ್ನ ಮನಸ್ಸು, ಮಾತು, ಭಾಷೆಯ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಏಕವಚನದಲ್ಲಿ ಕಮಲ್ ಹಾಸನ್ ಅವರ ಕೌಟುಂಬಿಕ ವಿಷಯವನ್ನು ಪ್ರ‌ಸ್ತಾಪಿಸಿ ನಿಂದಿಸಿದರು. ಆತನಿಗೆ ಸಂಸಾರ ಮಾಡುವ ಯೋಗ್ಯತೆಯೇ ಇಲ್ಲ, ಆದ್ದರಿಂದ ಬೇರೆ ವಿಷಯದಲ್ಲಿ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಮೂದಲಿಸಿ, ನೀಚತನ ಮೆರೆದರು.

ಇಲ್ಲಿ ಸಮಸ್ಯೆ ಬಗ್ಗೆ ಮಾತನಾಡಬೇಕಾಗಿರುವುದು ಕನ್ನಡ ಭಾಷೆಯ ಗೌರವಕ್ಕೆ ಧಕ್ಕೆಯಾಗಿರುವ ವಿಷಯವೇ ಹೊರತು ಅದಕ್ಕೂ ಕಮಲ್ ಹಾಸನ್ ಅವರ ಕೌಟುಂಬಿಕ ಸಮಸ್ಯೆಗೂ ಸಂಬಂಧವೇ ಇಲ್ಲ. ಕುಟುಂಬವೆಂದರೆ ಗಂಡ ಹೆಂಡತಿಯ ನಡುವಿನ ಸಂಬಂಧ. ಒಂದು ವೇಳೆ ಕಮಲ್ ಹಾಸನ್ ಕುಟುಂಬದಲ್ಲಿ ಬಿರುಕುಂಟಾಗಿದ್ದರೆ ಸಹಜವಾಗಿಯೇ ಕಾನೂನಾತ್ಮಕವಾಗಿ ಬೇರ್ಪಟ್ಟಿರುತ್ತಾರೆ. ಇನ್ನೊಂದು ಮದುವೆಯಾಗಬಹುದು ಅಥವಾ ಮತ್ತೊಂದು ಮದುವೆಯೂ ಆಗಬಹುದು. ಅದು ಅವರವರ ಇಚ್ಚೆಗೆ ಬಿಟ್ಟದ್ದು.

ಸಂಸಾರದ ವಿಫಲತೆಗೆ ಕೇವಲ ಗಂಡು ಅಥವಾ ಕೇವಲ ಹೆಣ್ಣು ಮಾತ್ರ ಕಾರಣವಲ್ಲ. ಒಟ್ಟಾರೆ ಅವರಿಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ವಿಚ್ಛೇದನವೇ ಒಂದು ಪ್ರಮುಖ ಮಾರ್ಗ. ಅದು ಅವರವರ ಸ್ವಾತಂತ್ರ್ಯ. ಅದನ್ನು ಕೇಳುವ ಹಕ್ಕು ಮತ್ತು ನೈತಿಕತೆಯೂ ನಮಗಿಲ್ಲ. ಇದೇ ರಂಗನಾಥ್ ಅವರ ಕುಟುಂಬದ ಬಗ್ಗೆಯೋ, ಅವರ ಕಚೇರಿಯ ಹೆಣ್ಣು ಮಕ್ಕಳ ಬಗ್ಗೆಯೂ ಮತ್ತೇನೋ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಅದು ನೀಚತನವಲ್ಲವೇ. ಹಾಗೆಯೇ ಇನ್ನೊಬ್ಬರ ಬಗ್ಗೆ, ಅವರ ಕುಟುಂಬದ ಬಗ್ಗೆ ಮಾತನಾಡುವ ಅರ್ಹತೆ ಇನ್ಯಾರಿಗೂ ಇಲ್ಲ.

ಸಾರ್ವಜನಿಕವಾಗಿ ಕಮಲ್ ಹಾಸನ್ ಅವರನ್ನು ಟೀಕಿಸಲಿ, ಅವರ ಭಾಷಾ ದುರಭಿಮಾನವನ್ನು ಖಂಡಿಸಲಿ, ಅವರ ವಿರುದ್ಧ ಶಿಕ್ಷೆಗೆ, ಬಹಿಷ್ಕಾರಕ್ಕೆ ಆಗ್ರಹಿಸಲಿ. ಆದರೆ ಅವರ ಕೌಟುಂಬಿಕ ವಿಷಯವನ್ನು ಪತ್ರಕರ್ತರೊಬ್ಬರು ಬೀದಿಯಲ್ಲಿ ಹರಾಜು ಹಾಕುವುದು ಖಂಡಿತ ಒಪ್ಪೋ ವಿಷಯವಲ್ಲ.

ಸಂಸಾರದ ವೈಫಲ್ಯವೇ ಬದುಕಿನ ವೈಫಲ್ಯ ಎಂದು ನಿರ್ಧರಿಸಿದರೆ ಅದು ಒಳ್ಳೆಯ ಬೆಳವಣಿಗೆಯಲ್ಲ. ಹಾಗೆಲ್ಲಾ ಮಾತನಾಡಬಾರದು. ಬದುಕೆಂಬುದು ಕುಟುಂಬ ವ್ಯವಸ್ಥೆಯ ಒಂದು ಭಾಗವೇ ಹೊರತು ಬದುಕಿರುವುದೇ ಕುಟುಂಬಕ್ಕಾಗಿ ಅಲ್ಲ. ಎಲ್ಲಿಯವರೆಗೆ ಕುಟುಂಬದ ಗಂಡ ಹೆಂಡತಿ ಸಂಬಂಧ ಸರಿ ಇರುತ್ತದೆಯೋ ಅಲ್ಲಿಯವರೆಗೂ ಅದು ಉತ್ತಮ ನಿರ್ಧಾರ. ಒಂದು ವೇಳೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ಕಾನೂನಾತ್ಮಕವಾಗಿ ಬೇರ್ಪಡುವುದು ಕೂಡ ಅಷ್ಟೇ ಉತ್ತಮ ನಿರ್ಧಾರ. ಅದು ಅವರವರ ಖಾಸಗಿ ವಿಷಯಕ್ಕೆ ಸಂಬಂಧಪಟ್ಟ ವಿಚಾರ.
ಜೀವನಪೂರ್ತಿ ಇಬ್ಬರೂ ಒಟ್ಟಿಗೆ ಇದ್ದರೆ ಅದು ಅತ್ಯುತ್ತಮ.

ಏನೇ ಆಗಲಿ ರಂಗನಾಥ್ ಅವರಂತ ಪತ್ರಕರ್ತರು ಈ ರೀತಿ ನೀಚತನದಿಂದ ಇನ್ನೊಬ್ಬ ವ್ಯಕ್ತಿಯನ್ನು ನಿಂದಿಸುವುದು ಖಂಡಿತ ತಪ್ಪು. ಮಾಧ್ಯಮ ಧರ್ಮಕ್ಕೆ ವಿರುದ್ಧ. ಅವರು ಈ ವಿಷಯದಲ್ಲಿ ಕ್ಷಮೆ ಕೇಳಿ ಮನಃಪರಿವರ್ತನೆ ಮಾಡಿಕೊಂಡು ಪತ್ರಿಕಾ ಧರ್ಮವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಅದರ ಘನತೆಯನ್ನು ಎತ್ತಿ ಹಿಡಿಯಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಲಾರಿ ಚಾಲಕನ ಅಜಾಗರೂಕತೆಯಿಂದ ಅನಾಹುತ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ–648ರಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ…

4 hours ago

ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ: ಎಕರೆಗೆ ತಿಂಗಳಿಗೆ ಒಂದು ಬ್ಯಾಗ್ ವಿತರಣೆ

ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ…

13 hours ago

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

23 hours ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

1 day ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

1 day ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

1 day ago