ದಶಕಗಳ ಹುಣಸೆ ಮರಗಳಿಗೆ ಬಿತ್ತು ಶಾಸಕರ ಕೊಡಲಿ ಪೆಟ್ಟು..?: ಲೇಔಟ್ ಅಂದ ಹೆಚ್ಚಿಸಲು ಹುಣಸೆ ಮರಗಳ ರೆಂಬೆ-ಕೊಂಬೆಗಳ ಕಟಾವ್: ಶಾಸಕ ಧೀರಜ್ ಮುನಿರಾಜುರವರ ವಿರುದ್ಧ ಪರಿಸರ ಪ್ರೇಮಿಗಳ ಅಕ್ರೋಶ

ನಗರದ ಬಸವ ಭವನದ ಸಮೀಪ ಹಾದು ಹೋಗಿರುವ ದಾಬಸ್ ಪೇಟೆ ಹಾಗೂ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಬೃಹದಾಕಾರವಾದ ಹುಣಸೆ ಮರಗಳು ಇವೆ. ಲಾವಣ್ಯ ಶಾಲೆ ಸಮೀಪ ಶಾಸಕ ಧೀರಜ್ ಮುನಿರಾಜು ಅವರಿಗೆ ಸಂಬಂಧಿಸಿದೆ ಎನ್ನಲಾದ ಲೇಔಟ್ ಮುಂದೆ ಇದ್ದ ಹುಣಸೆ ಮರಗಳ ರೆಂಬೆ ಕೊಂಬೆಗಳ ಕಡಿದು ಮರಗಳ ಅಂದ ಚೆಂದ ಕೆಡಿಸಿದಲ್ಲದೇ ನಗರದ ಸೌಂದರ್ಯವನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಣಸೆ ಮರಗಳ ಇರುವದರಿಂದ ಹೆದ್ದಾರಿಯಲ್ಲಿ ಒಂದು ರೀತಿಯ ಸೌಂದರ್ಯ ಎದ್ದು ಕಾಣುತ್ತಿತ್ತು. ಬಹಳ ವರ್ಷಗಳಿಂದ ಈ ಮರಗಳು ಯಾರಿಗೂ ಎನೂ ತೊಂದರೆ ಮಾಡಿಲ್ಲ. ಈಗ ತೊಂದರೆ ಮಾಡುತ್ತವೆ ಎಂದು ರೆಂಬೆ ಕೊಂಬೆಗಳಿಗೆ ಕೊಡಲಿ ಹಾಕಿದ್ದಾರೆ ಎಂದು ಪರಿಸರ ಪ್ರೇಮಿ ಚಿದಾನಂದ ಅವರು ಆರೋಪಿಸಿದ್ದಾರೆ.

ಒಳನೋಟಕ್ಕೆ ಶಾಸಕರ ಲೇಔಟ್ ಗೆ ಈ ಹುಣಸೆ ಮರಗಳು ತೊಂದರೆ ಕೊಡುತ್ತವೆ.‌ ಮರಗಳಿಂದ ಲೇಔಟ್ ನ ಅಂದ ಚೆಂದ ಹಾಳಾಗುತ್ತೆ, ಈ ಮರಗಳು ಅಡ್ಡಿ ಇರುವುದರಿಂದ ಲೇಔಟ್ ಯಾರಿಗೂ ಕಾಣುವುದಿಲ್ಲ ಎಂದು ಈ ಕೃತ್ಯ ಎಸಗಿರಬಹುದು ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ವಿದ್ಯುತ್ ಲೈನ್ ಗೆ ರೆಂಬೆ ಕೊಂಬೆಗಳು ತಾಕುತ್ತವೆ. ಇದರಿಂದ ಅವಘಡ ಸಂಭವಿಸುತ್ತದೆ ಎಂದು ಹೇಳಿ ಅರ್ಧ ಮರವನ್ನೆ ಕತ್ತರಿಸಲಾಗಿದೆ. ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರೆ ಹೀಗೆ ಮಾಡಿದರೆ ಸಾಮಾನ್ಯರ ನಡೆ ಯಾವ ರೀತಿ ಇರುತ್ತದೆ‌. ಈ ನಡೆ ಶಾಸಕರಿಗೆ ಗೌರವ ತರುವಂತಹದಲ್ಲ. ತಾಲೂಕಿನಾದ್ಯಂತ ಪರಿಸರ ಪ್ರೇಮಿಗಳ ನಿರಂತರ ಹೋರಾಟದಿಂದ ನೂರಾರು ವರ್ಷಗಳ ಮರಗಿಡಗಳನ್ನು ಉಳಿಸಿ ಬೆಳೆಸಲಾಗಿದೆ. ಅಂತಹ ಮರಗಳಿಗೆ ಈಗ ಶಾಸಕ ಧೀರಜ್ ಮುನಿರಾಜ್ ಅಧಿಕಾರಾವಧಿಯಲ್ಲಿ ಕೊಡಲಿ ಪೆಟ್ಟು ಬೀಳುತ್ತಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಅಧಿಕಾರ ದುರುಪಯೋಗದಿಂದ ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಅವೈಜ್ಞಾನಿಕವಾಗಿ, ಸೂಕ್ತ ಕಾರಣವಿಲ್ಲದೇ ಮರಗಿಡಗಳನ್ನು ಕಡಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಇಲಾಖೆಯಿಂದ ಲೇಔಟ್ ಮುಂದಿರುವ ನಾಲ್ಕು ಮರಗಳ ಹತ್ತು ಕೊಂಬೆಗಳನ್ನು ಕಡಿಯಲು ಹಾಗೂ ಎರಡು ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಅನುಮತಿ ಪಡೆದಿದ್ದಾರೆ. ಇದಕ್ಕೂ ಅರಣ್ಯ ಇಲಾಖೆ ಅನುಮತಿ ನೀಡಬಾರದಿತ್ತು. ಅನುಮತಿ ನೀಡಿದ್ದಾರೆಂದರೆ ಅದು ರಾಜಕೀಯ ಪ್ರಭಾವ ಎಂದೇ ಭಾವಿಸಬೇಕಾಗಿದೆ. ತಮ್ಮ ಅಧಿಕಾರ ಬಳಸಿ ಅವೈಜ್ಞಾನಿಕವಾದ ಕೆಲಸವನ್ನು ಕಾನೂನಾತ್ಮಕವಾಗಿ ಮಾಡಲು ಶಾಸಕರು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಹಾಗೂ ಶಾಸಕರು ತಾಲೂಕಿನಲ್ಲಿ ಪರಿಸರ ನಾಶ ಮಾಡಿ ನಗರದ ಸೌಂದರ್ಯ ಹಾಳು ಮಾಡುತ್ತಿದ್ದಾರೆ. ಪರಿಸರ ನಾಶದಿಂದ ಅನೇಕ ಕಾಯಿಲೆಗಳಿಂದ ಸಾಕಷ್ಟು ಸಾವುನೋವುಗಳನ್ನ ಈಗಾಗಲೇ ಅನುಭವಿಸುತ್ತಿದ್ದೇವೆ. ಈ ಹಿರಿಯ ಮರಗಳು ದೊಡ್ಡಬಳ್ಳಾಪುರದ ಚರಿತ್ರೆಯನ್ನು ಬಿಚ್ಚಿಡುತ್ತವೆ. ಅಂತಹ ಮರಗಳನ್ನು ಕಡಿಯುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಇನ್ನೂ ಬೇಕಾದಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಮಾನ್ಯ ಶಾಸಕರೇ ನಿಮ್ಮ ಅಧಿಕಾರ ಬಳಸಿ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡಿ, ಪರಿಸರ ನಾಶ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

Ramesh Babu

Journalist

Recent Posts

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

4 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

5 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

6 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

7 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

14 hours ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

2 days ago