Categories: ಲೇಖನ

ನಮ್ಮ ನಿಷ್ಠೆ ಪ್ರಕೃತಿಯೆಡೆಗೆ ಇರಲಿ……..

ನಮ್ಮ ನಿಷ್ಠೆ ಪ್ರಕೃತಿಗೆ…….

ಹರಕೆ ಮತ್ತು ಶಾಪ,
ಜೊತೆಗೆ ನಿನ್ನೆಯ ನಾಗರ ಪಂಚಮಿ……

ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು…….

ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು…….

ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು……

ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು……..

ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು……

ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ ಆಘಾತ ಸಂಭವಿಸಿರಬಹುದು……..

ಹರಕೆಗಳು ಸಂಭವಿಸಲು ಅವು ನಮ್ಮ ಮಿತಿಯಲ್ಲಿರಬೇಕು.
ಮದುವೆ, ಮಕ್ಕಳು, ಪರೀಕ್ಷೆ, ಉದ್ಯೋಗ, ಆರೋಗ್ಯ, ಆಸ್ತಿ, ಅಧಿಕಾರ ಎಲ್ಲವೂ ಕನಿಷ್ಟ ನಾವು ಸ್ಪರ್ಧೆಯಲ್ಲಿ ಇದ್ದಾಗ ಮಾತ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಪರ್ಧೆಯಲ್ಲಿ ಇಲ್ಲದೆ ಕೇವಲ ಪ್ರೇಕ್ಷಕರೋ, ವೀಕ್ಷಕರೋ ಆಗಿದ್ದರೆ ಹರಕೆ ಪೂರೈಕೆಯಾಗುವುದಿಲ್ಲ.

ಉದಾಹರಣೆಗೆ……

ನೀವು ಮದುವೆ ವಯಸ್ಸಿನವರಾಗಿದ್ದು, ವಧು ವರರ ಹುಡುಕಾಟದಲ್ಲಿ ಇದ್ದಾಗ, ಉದ್ಯೋಗದ ಹುಡುಕಾಟದಲ್ಲಿ ಇದ್ದಾಗ, ವೈದ್ಯಕೀಯ ಭಾಷೆಯಲ್ಲಿ ಮಕ್ಕಳಾಗುವ ಸಾಧ್ಯತೆ ಇದ್ದಾಗ, ಸಾವಿನ ಖಚಿತತೆ ಇಲ್ಲದಿದ್ದಾಗ, ರಾಜಕೀಯ ಕ್ಷೇತ್ರದಲ್ಲಿ ಅಥವಾ ಬೇರಾವುದೇ ಕ್ಷೇತ್ರದಲ್ಲಿ ಇದ್ದಾಗ ನಿಮ್ಮ ಹರಕೆಗಳು ಪರಿಸ್ಥಿತಿಗೆ ಅನುಗುಣವಾಗಿ ಯಶಸ್ಸಾಗುವ ಶೇಕಡಾವಾರು ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಹೊರತುಪಡಿಸಿ ಕೈಗೆಟುಕದ ಏನೇನೋ ಹರಕೆ ಹೊತ್ತುಕೊಂಡರೆ ಅದು‌ ಸಿದ್ದಿಸುವುದಿಲ್ಲ. ಏಕೆಂದರೆ ಹರಕೆ ಒಂದು ನಂಬಿಕೆ. ಅದನ್ನು ಪೂರೈಸಲು ಯಾರು ಇಲ್ಲ. ಅದು ನಿರ್ಜೀವ ಅಥವಾ ಭ್ರಮೆ. ನಾನು ಪ್ರಧಾನಿಯಾಗಬೇಕು, ನಾನು ಸಿನಿಮಾ ಸೂಪರ್ ಸ್ಟಾರ್ ಆಗಬೇಕು, ನಾನು ಸಾವಿರ ವರ್ಷ ಬದುಕಬೇಕು ಎಂದು ಸಾಮಾನ್ಯ ಪರಿಸ್ಥಿತಿಯಲ್ಲಿ ಹರಕೆ ಹೊತ್ತರೆ ಅದು ಹುಚ್ಚುತನದ ಪರಮಾವಧಿ.

ಯಾರಿಗಾದರೂ ಏನಾದರೂ ಹರಕೆ ಹೊತ್ತ ತಕ್ಷಣ ಎಲ್ಲವೂ ಸಿಗುತ್ತದೆ ಎಂಬುದು ನಿಜವೇ ಆಗಿದ್ದರೆ ಸಾವು ನೋವು ಸಂಕಷ್ಟಗಳು ಇರುತ್ತಿರಲಿಲ್ಲ. ಅದು ಯಾವುದೇ ಧರ್ಮದ ದೇವರೇ ಆಗಿರಬಹುದು, ಅಥವಾ ಅತಿಮಾನುಷ ಶಕ್ತಿ ಆಗಿರಬಹುದು ಅಥವಾ ಮೂರ್ತಿ ವಿಗ್ರಹಗಳೇ ಆಗಿರಬಹುದು. ಎಷ್ಟೇ ಬೆಲೆಬಾಳುವ ಅಥವಾ ಭಕ್ತಿ ಪೂರ್ವಕ ಹರಕೆ ಕೊಟ್ಟರೂ ಅದು ಖಚಿತವಾಗಿ ಈಡೇರುವ ವಾಸ್ತವ ಅಲ್ಲವೇ ಅಲ್ಲ. ಕೇವಲ ಒಂದು ಭರವಸೆ ಮಾತ್ರ.

ಸಾಮಾನ್ಯ ವ್ಯಕ್ತಿಯೊಬ್ಬ ದೇವರಿಗೆ ” ನಾನು ಸಾವಿರ ಕೋಟಿಯ ಒಡೆಯನಾದರೆ ನೂರು ಕೋಟಿ ವಜ್ರ ಖಚಿತ ಕಿರೀಟ ಮಾಡಿಸುತ್ತೇನೆ ” ಎಂದು ಹರಕೆ ಹೊತ್ತರೆ ಆ ರೀತಿಯ ಯಾವುದೋ ಅಪರೂಪದ ಯಶಸ್ಸನ್ನು ಹರಕೆಯ ಫಲಿತಾಂಶ ಸಮರ್ಥಿಸಲು ಉದಾಹರಣೆ ಕೊಡುವುದು ಮೂರ್ಖತನ. ಎಲ್ಲಾ ಘಟನೆಗಳು ಸಾರ್ವತ್ರಿಕವಾಗಿ ಸಹಜ ಫಲಿತಾಂಶ ನೀಡುವಂತಿರಬೇಕು.

ಹಾಗೆಯೇ ಶಾಪಗಳು ಸಹ ಕಾಕತಾಳೀಯವಾಗಿ ಯಶಸ್ಸು ಗಳಿಸಬಹುದೇ ಹೊರತು ಅದು ಖಚಿತ ವಾಸ್ತವವಲ್ಲ. ಈಗಿನ ಆಧುನಿಕ ಸ್ಪರ್ಧಾ ಪ್ರಪಂಚದಲ್ಲಿ ಎಲ್ಲರೂ ತಮ್ಮ ವಿರೋಧಿಗಳಿಗೆ ಮನಸ್ಸಿನಲ್ಲಿ ಶಾಪ ಹಾಕಲು ಹಿಂಜರಿಯುವುದಿಲ್ಲ. ಕೆಲವರು ಬಹಿರಂಗವಾಗಿ ಸಹ ಹಾಕುತ್ತಾರೆ. ಆದರೆ ಎಂದೋ, ಯಾವುದೋ ಅವಘಡ ಸಂಭವಿಸಿದಾಗ ನಮ್ಮ ಶಾಪ ಕಾರಣ ಎಂದು ಸಮಾಧಾನ ಮಾಡಿಕೊಳ್ಳಬಹುದಷ್ಟೆ.

ಶಾಪಗಳು ಫಲಿಸುವಂತಿದ್ದರೆ ಬಹುಶಃ ಸಮಾಜವೇ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಮನುಷ್ಯರಲ್ಲಿ ಅಷ್ಟರ ಮಟ್ಟಿಗೆ ದ್ವೇಷ ಅಸೂಯೆಗಳು ತುಂಬಿದೆ.

ಹರಕೆಗಳು – ಶಾಪಗಳು – ದೇವರುಗಳು ಈ ಸಮಾಜದ ಬಹುದೊಡ್ಡ ನಂಬಿಕೆಯಾಗಿ ಈಗಲೂ ಉಳಿದಿದೆ. ಯಾರೋ ಹೇಳಿದರು ಹಿಂದೂ ದೇವಸ್ಥಾನಗಳು ತುಂಬಾ ಶಕ್ತಿಶಾಲಿ, ಮತ್ತೊಬ್ಬರು ಇಲ್ಲಾ ದರ್ಗಾಗಳಲ್ಲಿ ಬೇಡಿಕೆ ಇಟ್ಟರೆ ಎಲ್ಲವೂ ಈಡೇರುತ್ತದೆ, ಇನ್ಯಾರೋ ಸಲಹೆ ಕೊಟ್ಟರು ಚರ್ಚುಗಳಲ್ಲಿ ಪ್ರಾರ್ಥಿಸಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಈ ಬೇರೆ ಬೇರೆ ಧರ್ಮಗಳ ಜನರ ನಂಬಿಕೆಯೇ ಈ ಹರಕೆ ಶಾಪಗಳು ಕೃತಕ ಸೃಷ್ಟಿ ಮತ್ತು ವ್ಯಾಪಾರಿಕರಣದ ಒಂದು ತಂತ್ರ ಎಂದು ಸ್ಪಷ್ಟವಾಗಿ ಹೇಳಬಹುದು.

ಅದು ಅವರವರ ನಂಬಿಕೆಗಳು ಅದನ್ನು ಪ್ರಶ್ನಿಸಲು ನೀವು ಯಾರು ? ಹೌದು ನಾವು ಯಾರೂ ಅಲ್ಲ. ಆದರೆ ಸುಳ್ಳು ಭ್ರಮೆಗಳನ್ನು ಶತಮಾನಗಳಿಂದ ಸಮಾಜದಲ್ಲಿ ಸೃಷ್ಟಿಮಾಡಿ ಜನರನ್ನು ಶೋಷಿಸುತ್ತಾ, ದೇಶದ ಜನರ ಮಾನಸಿಕ ವ್ಯಕ್ತಿತ್ವವನ್ನು ಜ್ಞಾನಕ್ಕೆ ಬದಲು ನಂಬಿಕೆ, ವಾಸ್ತವಕ್ಕೆ ಬದಲು ಭ್ರಮೆಯಲ್ಲಿ ಇರಿಸಿ ಇಡೀ ಸಮಾಜ ಅಭಿವೃದ್ಧಿಯ, ನೆಮ್ಮದಿಯ ಪಥದಲ್ಲಿ ‌ಸಾಗಲು ಅಡ್ಡಿಯಾಗಿರುವ ಸತ್ಯವನ್ನು ಹೇಳುವ ಪ್ರಯತ್ನ ಮಾಡಲೇಬೇಕಾಗಿದೆ.

ಈ ನಂಬಿಕೆಗಳು ಜನರಲ್ಲಿ ಒಂದಷ್ಟು ಆತ್ಮವಿಶ್ವಾಸ ಮತ್ತು ಸಮಾಧಾನದ ಭಾವ ಮೂಡಿಸಬಹುದೇ ಹೊರತು ದೀರ್ಘಕಾಲದ ಸತ್ವಯುತ ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆ ಸೃಷ್ಟಿಯಾಗಲು ಸಾಧ್ಯವಿಲ್ಲ. ಇಷ್ಟೊಂದು ಸರಳ ವಿಷಯಗಳು ಇನ್ನೂ ನಮ್ಮ ಮನಸ್ಸುಗಳಲ್ಲಿ ಜೀವಂತವಿರುವುದು – ಆಚರಣೆಯಲ್ಲಿರುವುದು ಸೋಜಿಗವೆನಿಸುತ್ತದೆ.

ಇನ್ನು ಮುಂದಾದರು ಈ ಬಗ್ಗೆ ಮತ್ತೊಮ್ಮೆ ಯೋಚಿಸಿ ಎಂಬ ಕಳಕಳಿಯ ಮನವಿಯೊಂದಿಗೆ…..

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ……”

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ…

ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ.

ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ ಭಕ್ತಿಗೂ, ಮಾನವೀಯತೆಗೂ ಇದರಿಂದ ಒಂದು ಅರ್ಥ ಬರುತ್ತದೆಯಲ್ಲವೇ…..

ಯೋಚಿಸುವ ಸರದಿ ನಮ್ಮದು……

ಒಂದು ಸಾಂಸ್ಕೃತಿಕ ಹಬ್ಬವಾಗಿ ನಾಗರ ಪಂಚಮಿಗೆ ಯಾವುದೇ ವಿರೋಧವಿಲ್ಲ. ಹಬ್ಬಗಳು ನಮ್ಮ ಸಂಸ್ಕೃತಿಯ ಮತ್ತು ಬದುಕಿನ ಭಾಗಗಳು. ಅದನ್ನು ಆಚರಿಸುವುದು ಸಂಭ್ರಮಿಸುವುದು ಉತ್ತಮ ನಡವಳಿಕೆ. ಆದರೆ ಹಬ್ಬದ ಹೆಸರಿನಲ್ಲಿ ಮೌಡ್ಯ ಮತ್ತು ಆಹಾರ ವಸ್ತುಗಳ ವ್ಯರ್ಥವಾಗುವುದನ್ನು ತಡೆಯಬೇಕು ಮತ್ತು ಪರಿವರ್ತನೆ ಹೊಂದಬೇಕು. ಬದಲಾವಣೆ ಜಗದ ನಿಯಮ‌. ಅದೇ ಅರಿವು ಅದೇ ಶಿಕ್ಷಣ ಅದೇ ನಾಗರಿಕತೆ……..

ಭಾರತದಲ್ಲಿ ಲಕ್ಷಾಂತರ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂಬ ವರದಿಯಿದೆ. ಅಂತಹವರಿಗೆ ಹಾಲು ಎಷ್ಟು ಮುಖ್ಯ ಎಂಬುದನ್ನು ಒಮ್ಮೆ ಯೋಚಿಸಿ.

ಹೊಸ ಬಟ್ಟೆ, ಆರೋಗ್ಯಯುತ ಒಳ್ಳೆಯ ಊಟ, ಕುಟುಂಬವರು ಮತ್ತು ಗೆಳೆಯರೊಂದಿಗೆ ಮಾತುಕತೆ, ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಒಂದಷ್ಟು ಒಳ್ಳೆಯ ಚಿಂತನೆ, ಸ್ವಲ್ಪ ವಿಶ್ರಾಂತಿ, ಮಕ್ಕಳಿಗೆ ಹಬ್ಬಗಳ ಹಿನ್ನೆಲೆ ಮತ್ತು ಪರಿಚಯ ಎಲ್ಲವೂ ಸಹನೀಯ ಮತ್ತು ಅನುಕರಣೀಯ.

ಆದರೆ ಅತ್ಯುಪಯುಕ್ತ ಆಹಾರ ಪದಾರ್ಥಗಳ ದುರುಪಯೋಗ ಅಕ್ಷಮ್ಯ. ಒಬ್ಬರನ್ನು ನೋಡಿ ಇನ್ನೊಬ್ಬರು, ಮಾಧ್ಯಮಗಳ ಮೂರ್ಖತನ ಮತ್ತು ಬೇಜವಾಬ್ದಾರಿ ಕಾರ್ಯಕ್ರಮಗಳಿಂದ ಮತ್ತೊಬ್ಬರು, ಯಾರೋ ಜ್ಯೋತಿಷಿಗಳಿಂದ ಮಗದೊಬ್ಬರು ಹೀಗೆ ಇದು ನಡೆಯುತ್ತಲೇ ಇರುತ್ತದೆ. ಪ್ರಜ್ಞಾವಂತ ನಾಗರಿಕರು ಇದಕ್ಕೆ ಒಂದು ಮಿತಿ ಹೇರಲೇಬೇಕಿದೆ.

ಸಿನಿಮಾ ನಟರ ಕಟೌಟುಗಳಿಗೆ‌ ಹಾಲಿನ ಅಭಿಷೇಕ, ಇನ್ಯಾರಿಗೋ ಸೇಬಿನ ಹಾರ, ಸಿನಿಮಾ – ಧಾರವಾಹಿಗಳಲ್ಲಿ ಆಹಾರ ಪದಾರ್ಥಗಳನ್ನು ಚೆಲ್ಲುವ ಅಥವಾ ನಾಶಪಡಿಸುವ ದೃಶ್ಯಗಳು ಎಲ್ಲವನ್ನೂ ನಿಲ್ಲಿಸಬೇಕು. ಅದು ರಾಷ್ಟ್ರೀಯ ಸಂಪನ್ಮೂಲಗಳ ನೇರ ದುರುಪಯೋಗ ಎಂದು ಪರಿಗಣಿಸಬೇಕು.

ಹಾಲೇ ಇರಲಿ, ಹಣ್ಣು ತರಕಾರಿಗಳೇ ಇರಲಿ, ಬೇಳೆ ಕಾಳುಗಳೇ ಇರಲಿ ರೈತರು ಬಹಳ ಕಷ್ಟಪಟ್ಟು ಪ್ರಕೃತಿಯನ್ನು ಉಪಯೋಗಿಸಿಕೊಂಡು ಬೆಳೆಯುತ್ತಾರೆ. ಅದಕ್ಕೆ ಗೌರವ ಕೊಡಬೇಕಾದದ್ದು ಮತ್ತು ಸದುಪಯೋಗ ಪಡಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ.

ನಾಗರ ಪಂಚಮಿ ಒಂದು ಹಬ್ಬವಾಗಿ ಆಚರಿಸಿ. ಆದರೆ ಹಾವು ಅಥವಾ ಹುತ್ತಕ್ಕೆ ಹಾಲೆರೆಯದೇ ಅದೇ ಹಾಲು ಹಣ್ಣುಗಳನ್ನು ದಯವಿಟ್ಟು ಆಹಾರವಾಗಿ ಉಪಯೋಗಿಸಿಕೊಳ್ಳಿ ಅಥವಾ ಇತರರಿಗೆ ದಾನ ಮಾಡಿ. ಇದರಿಂದ ನಾಗರ ಪಂಚಮಿ ಒಂದು ಹಸಿವು ನಿವಾರಣೆಯ ಹಬ್ಬವಾಗಲಿ, ನಾಗರ ಪಂಚಮಿ ಬಸವ ಪಂಚಮಿಯಾಗಲಿ………..

ಇದನ್ನು ಧಾರ್ಮಿಕ ನಾಯಕರುಗಳು, ಮಾಧ್ಯಮಗಳವರು, ಶಿಕ್ಷಕರು, ವಿಜ್ಞಾನಿಗಳು, ರಾಜಕಾರಣಿಗಳು, ಪ್ರಗತಿಪರರು ಎಲ್ಲರೂ ಹೇಳಬೇಕು.
ಒಂದು ಸಮಾಜದ ನಿಜವಾದ ಆತ್ಮ ಅಡಗಿರುವುದು ಧರ್ಮದಿಂದಲ್ಲ, ವಿಜ್ಞಾನದಿಂದಲ್ಲ ಪ್ರಕೃತಿಯ ಸಹಜ ನಿಯಮದಿಂದ ಮಾತ್ರ. ಅದಕ್ಕಾಗಿ ನಮ್ಮ ನಿಷ್ಠೆ ಪ್ರಕೃತಿಯೆಡೆಗೆ ಇರಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾಗಿ ನಟ ಪ್ರಥಮ್ ವ್ಯಂಗ್ಯ ಆರೋಪ: ದಲಿತ ಸಂಘಟನೆ ಆಕ್ರೋಶ: ಠಾಣೆ ಮುಂದೆ ಪ್ರಥಮ್ ಗೆ ಮಸಿ ಬಳಿಯುವ ಯತ್ನ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಥಮ್ ಗೆ ಅಂಬೇಡ್ಕರ್ ಸೇನೆ ಹೋರಾಟಗಾರರು ದೊಡ್ಡಬಳ್ಳಾಪುರ…

5 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಸ್ಥಳ ಮಹಜರಿನಲ್ಲಿ ಘಟನೆ ಬಗ್ಗೆ ಪೊಲೀಸರಿಗೆ ಇಂಚಿಂಚು ಮಾಹಿತಿ ನೀಡಿದ ಪ್ರಥಮ್

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ರೇಣುಕಾ ಯಲ್ಲಮ್ಮ ದೇವಾಲಯದ…

8 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಟ ಪ್ರಥಮ್

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ನಟ ಪ್ರಥಮ್…

10 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ ಜಾಮೀನು ಮಂಜೂರು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ, ದೊಡ್ಡಬಳ್ಳಾಪುರ ಪ್ರಧಾನ ಸಿವಿಲ್ ನ್ಯಾಯಾಲಯದ ವತಿಯಿಂದ ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ…

10 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಆರೋಪಿಗಳಾದ ಯಶಸ್ವಿನಿ, ಬೇಕರಿ ರಘು ದೊಡ್ಡಬಳ್ಳಾಪುರ ಕೋರ್ಟ್ ಗೆ ಶರಣು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು…

15 hours ago

ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ಸಿಎಂ ಸಭೆ: ಸಭೆಯ ಪ್ರಮುಖಾಂಶಗಳು ಇಲ್ಲಿವೆ ಓದಿ…

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ನಡೆಸಿದ ಸಭೆಯಲ್ಲಿ…

1 day ago