ದೊಡ್ಡಬಳ್ಳಾಪುರ ತಾಲೂಕು ಯಾದವ ಯುವ ವೇದಿಕೆಗೆ ನೂತನ ಪದಾಧಿಕಾರಿಗಳ ನೇಮಕ

ದೊಡ್ಡಬಳ್ಳಾಪುರ: ದೇವನಹಳ್ಳಿಯಲ್ಲಿರುವ ಕರ್ನಾಟಕ ಯಾದವ ಯುವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಯಾದವ ಯುವ ವೇದಿಕೆ ದೊಡ್ಡಬಳ್ಳಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ಈ ವೇಳೆ ಸಾಸಲು ಹೋಬಳಿಯ ಕರೆಕಲ್ಲಹಳ್ಲಿ ಗ್ರಾಮದ  ಮನೀಶ್ ಯಾದವ್ ಎಂ ಅವರನ್ನು ತಾಲೂಕು ಅಧ್ಯಕ್ಷರಾಗಿ, ರಾಕೇಶ್ ಎನ್. ಅವರನ್ನು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಶಶಿಕುಮಾರ್ ಎಂ ಅವರನ್ನು ತಾಲೂಕು ಉಪಾಧ್ಯಕ್ಷರಾಗಿ ಹಾಗೂ ಗೋಪಾಲ್ ಆರ್ ಅವರನ್ನು ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯಾಧ್ಯಕ್ಷ ಸುನಿಲ್ ಯಾದವ್ ಕೆ.ಸಿ, ಕಳೆದ 12 ವರ್ಷಗಳಿಂದ ಯಾದವ ಸಮುದಾಯದ ಸಂಘಟನೆ ಮತ್ತು ಸೇವಾ ಕಾರ್ಯದಲ್ಲಿ ವೇದಿಕೆ ತೊಡಗಿಸಿಕೊಂಡಿದ್ದು, ಯುವಕರನ್ನು ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲಗೊಳಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ಮನೆಬಾಗಿಲಿಗೆ ತಲುಪುವಂತೆ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕಿದ್ದು, ದೊಡ್ಡಬಳ್ಳಾಪುರದ ಹಿರಿಯರು ಹಾಗೂ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಯುವಶಕ್ತಿಯನ್ನು ಸಂಘಟಿಸುವಂತೆ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

ಕರ್ನಾಟಕ ಯಾದವ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಯಾದವ್ ಮಾತನಾಡಿ, ದೊಡ್ಡಬಳ್ಳಾಪುರದ ಯಾದವ ಸಮುದಾಯವು ಪ್ರೀತಿ ಮತ್ತು ವಿಶ್ವಾಸಕ್ಕೆ ಹೆಸರುವಾಸಿಯಾಗಿದೆ. ಸಮುದಾಯದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬೇಕು. ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಯಾದವ ಯುವ ವೇದಿಕೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಅನಿಲ್ ಯಾದವ್, ರಾಜ್ಯ ಉಪಾಧ್ಯಕ್ಷರಾದ ಉಮೇಶ್ ಯಾದವ್, ಮಂಜುನಾಥ್ ಯಾದವ್, ಚಿಕ್ಕಬಳ್ಳಾಪುರ ಯಾದವ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.

Leave a Reply

Your email address will not be published. Required fields are marked *

error: Content is protected !!